ದ್ರೌಪದಿ ವಸ್ತ್ರಾಪಹರಣ ವಿರೋಧಿಸಿದ ಒಬ್ಬನೇ ಒಬ್ಬ ಕೌರವ ಯಾರು ಗೊತ್ತೆ?

By Suvarna NewsFirst Published Jun 30, 2021, 5:28 PM IST
Highlights

ಕುರುಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವನ್ನು ವಿರೋಧಿಸಿದವರು ಇಬ್ಬರೇ. ಒಬ್ಬನು ವಿದುರ. ಇನ್ನೊಬ್ಬನ್ಯಾರು ತಿಳಿಯೋಣ ಬನ್ನಿ.

ಮಹಾಭಾರತದಲ್ಲಿ ನಡೆದ ದ್ರೌಪದಿ ವಸ್ತ್ರಾಪಹರಣ ಬಗ್ಗೆ ನಿಮಗೆ ಗೊತ್ತು ತಾನೆ. ದುಶ್ಶಾಸನ ಆಕೆಯನ್ನು ಕುರುಸಭೆಗೆ ಎಳೆದು ತಂದದ್ದು, ಆಕೆಯ ಸೀರೆಯನ್ನು ಎಳೆದುಹಾಕಲು ಪ್ರಯತ್ನಿಸಿದ್ದು, ಆಗ ದ್ರೌಪದಿಯು ಶ್ರೀಕೃಷ್ಣನನ್ನು ಪ್ರಾರ್ಥಿಸಿದ್ದು, ಶ್ರೀಕೃಷ್ಣ ಆಕೆಗೆ ಅಕ್ಷಯ ವಸ್ತ್ರದ ವರವನ್ನು ದಯಪಾಲಿಸಿದ್ದು- ಇವು ನಿಮಗೆ ಗೊತ್ತಿರುವ ಕತೆಯೇ.

ಈ ಸಭೆಯಲ್ಲಿ ದ್ರೌಫದಿಯ ವಸ್ತ್ರಾಪಹರಣವನ್ನು ವಿರೋಧಿಸಿದವರು ಇಬ್ಬರು ಮಾತ್ರ ಒಬ್ಬಾತ ಧೃತರಾಷ್ಟ್ರನ ಮಂತ್ರಿ ವಿದುರ. ಇನ್ನೊಬ್ಬಾತ ಕೌರವರಲ್ಲೇ ಒಬ್ಬನಾದ ವಿಕರ್ಣ. ನಿಮಗೆ ಆಶ್ಚರ್ಯವಾಗಬಹುದು. ಇದು ನಿಜ. ವೇದವ್ಯಾಸರು ಇದನ್ನು ಬರೆದಿದ್ದಾರೆ. 
ಬಾಲ್ಯದಿಂದಲೂ ದುರ್ಯೋಧನ ಪಾಂಡವರ ಮೇಲೆ ದ್ವೇಷವನ್ನು ಕಾರುತ್ತಲೇ ಇರುತ್ತಾನೆ. ತನ್ನ ಎಲ್ಲಾ ತಮ್ಮಂದಿರೂ ಇದಕ್ಕೆ ಬದ್ಧರಾಗಬೇಕೆಂದೂ ಬಯಸುತ್ತಾನೆ. ತನ್ನ ಎಲ್ಲಾ ೯೮ ಮಂದಿ ಸಹೋದರರಿಗೆ ಪಾಂಡವರ ಮೇಲೆ ದ್ವೇಷ ಬರುವಂತೆ ಮಾಡುತ್ತಾನೆ.

ಆದರೆ ಅವರಲ್ಲಿ ಒಬ್ಬನಾದ ವಿಕರ್ಣ ಮಾತ್ರ ಧರ್ಮದ ಪರವಾಗಿದ್ದ. ಅವನಿಗೆ ತನ್ನ ಅಣ್ಣ ಮಾಡುತ್ತಿರುವುದು ಅಧರ್ಮ ಎಂದು ಗೊತ್ತಿರುತ್ತದೆ. ದುರ್ಯೋಧನನ ತಪ್ಪುಗಳನ್ನು ಅವನ ಗಮನಕ್ಕೆ ತರುತ್ತ ಇರುತ್ತಾನೆ. ಆದರೆ ದುರ್ಯೋಧನ ಈತನನ್ನು ಲೆಕ್ಕಿಸುವುದಿಲ್ಲ. ಅಂದ ಹಾಗೆ ಇವನು ದುರ್ಯೋಧನನ ಎರಡನೇ ತಮ್ಮ, ದುಶ್ಶಾಸನನ ನಂತರದವನು. ಉಳಿದವರೆಲ್ಲಾ ನಂತರ ಹುಟ್ಟಿದವರು.

ನಿಮ್ಮ ಜನ್ಮರಾಶಿಯ ಪ್ರಕಾರ ನೀವು ಯಾವ ಪೌರಾಣಿಕ ಪ್ರಾಣಿ ಗೊತ್ತೆ? ...

ಪಗಡೆಯಾಟದಲ್ಲಿ ಧರ್ಮರಾಯ ಸೋತಾಗ ದ್ರೌಪದಿಯ ಸೀರೆಯನ್ನು ಎಳೆದು ವಿವಸ್ತ್ರರನ್ನಾಗಿಸಬೇಕೆಂದು ದುಶ್ಯಾಸನನಿಗೆ ಕರ್ಣ ಹೇಳುತ್ತಾನೆ. ದುರ್ಯೋಧನ ಅದನ್ನು ಅನುಮೋದಿಸುತ್ತಾನೆ. ಆದರೆ ವಿಕರ್ಣ ಅದನ್ನು ತುಂಬಿ ಸಭೆಯಲ್ಲಿ ವಿರೋಧಿಸುತ್ತಾನೆ. ಅವನು ಹೇಳುತ್ತಾನೆ: ''ಈ ಸಭೆಯಲ್ಲಿ ಬಂದು ನಿಂತಿರುವ ದ್ರೌಪದಿ ಒಂದು ಪ್ರಶ್ನೆಯನ್ನು ಕೇಳಿದ್ದಾಳೆ.

ಧರ್ಮರಾಯನು ಮೊದಲು ತನ್ನನ್ನು ಪಣವಿಟ್ಟು ಸೋತು, ನಂತರ ನನ್ನನ್ನು ಸೋತನೇ? ಅಥವಾ ಮೊದಲು ನನ್ನನ್ನು ಪಣವಿಟ್ಟು ಸೋತು, ನಂತರ ತನ್ನನ್ನು ಪಣವಿಟ್ಟುಕೊಂಡನೇ? ಮೊದಲು ತನ್ನನ್ನು ಪಣವಿಟ್ಟುಕೊಂಡರೆ ನನ್ನನ್ನು ಆಮೇಲೆ ಪಣವಿಡುವ ಅಧಿಕಾರ ಅವನಿಗೆ ಹೇಗೆ ಬರುತ್ತದೆ? ನಾನು ದಾಸಿ ಹೇಗಾಗುತ್ತೇನೆ? ಉತ್ತರ ಹೇಳಿ. ಈ ಸಭೆಯಲ್ಲಿರುವ ಯಾರಾದರೂ ಇದಕ್ಕೆ ಉತ್ತರ ಹೇಳಿ. ಇದಕ್ಕೆ ಸಮರ್ಪಕವಾದ ಉತ್ತರವನ್ನು ನೀಡದೆ ಆಕೆಯನ್ನು ದಾಸಿ ಎಂದು ನಡೆಸಿಕೊಳ್ಳುವುದು ನ್ಯಾಯವಲ್ಲ...'' ಎಂದು ಹೇಳುತ್ತಾನೆ.
ಆದರೆ ಕರ್ಣನು ಮೇಲೆದ್ದು ಗದರಿಸಿ, ವಿಕರ್ಣನನ್ನು ಸುಮ್ಮನಾಗಿಸುತ್ತಾನೆ. "ವಿಕರ್ಣ, ನೀನು ದುರ್ಯೋಧನನ ತಮ್ಮ ಎಂಬ ಏಕೈಕ ಕಾರಣದಿಂದ ನಿನ್ನನ್ನು ಸುಮ್ಮನೆ ಬಿಡುತ್ತಿದ್ದೇನೆ. ಬೇರೆ ಯಾರಾದರೂ ಆಗಿದ್ದರೆ ಅವರ ತಲೆ ಕತ್ತರಿಸುತ್ತಿದ್ದೆ'' ಎನ್ನುತ್ತಾನೆ. ದುರ್ಯೋಧನನೂ ಗದರಿಸುತ್ತಾನೆ. ಆದ್ದರಿಂದ ವಿಕರ್ಣ ಸುಮ್ಮನಾಗುತ್ತಾನೆ. 

ಈ ಜನ್ಮರಾಶಿಯವರಿಗೆ ವಿಪರೀತ ಕಾಟ ಕೊಡುತ್ತೆ ಭೂತ ಪ್ರೇತ ...

ಕುರುಕ್ಷೇತ್ರ ಯುದ್ಧವಾದಾಗ ವಿಕರ್ಣ ತನ್ನ ಅಣ್ಣನ ಪರವಾಗಿಯೇ ಯುದ್ಧಕ್ಕೆ ನಿಲ್ಲುತ್ತಾನೆ. ಸುಮಾರು ೧೪ ದಿನಗಳ ಕಾಲ ಪಾಂಡವರ ವಿರುದ್ಧ ವೀರೋಚಿತವಾಗಿ ಯುದ್ಧ ಮಾಡುತ್ತಾನೆ. ಅವನ ಯುಧ್ಧ ಸಾಮರ್ಥ್ಯವನ್ನು ಭೀಷ್ಮ, ದ್ರೋಣರು ತುಂಬಾ ಮೆಚ್ಚುತ್ತಾರೆ. ಹದಿನಾಲ್ಕನೇ ದಿನ ಭೀಮ ವಿಕರ್ಣನಿಗೆ ಎದುರಾಗುತ್ತಾನೆ. ವಿಕರ್ಣ ಧರ್ಮವಂತ ಎಂದು ತಿಳಿದಿದ್ದ ಭೀಮ ಅವನಿಗೆ ''ಯುದ್ಧ ಬಿಟ್ಟು ಹೋಗು, ನಿನಗೆ ಜೀವದಾನ ನೀಡುತ್ತೇನೆ'' ಎಂದು ತಿಳಿಸುತ್ತಾನೆ.

ಆದರೆ ''ನಾನು ನನ್ನ ಅಣ್ಣನಾದ ದುರ್ಯೋಧನನನ್ನು ಬಿಡಲು ತಯಾರಿಲ್ಲ'' ಎನ್ನುತ್ತಾನೆ ವಿಕರ್ಣ. ಆಗ ಭೀಮ ''ನೀನು ಧರ್ಮದ ಪರವಾಗಿದ್ದಿ. ಅವನು ಅಧರ್ಮಿ. ಆದರೂ ನೀನು ಯಾಕೆ ಅವನನ್ನು ಬೆಂಬಲಿಸುತ್ತಿ?'' ಎಂದಾಗ ವಿಕರ್ಣ ಹೇಳುತ್ತಾನೆ ''ಅವನು ನನ್ನ ಅಣ್ಣ.  ಅಣ್ಣ ಎಂಥವನೇ ಆಗಲಿ ಧರ್ಮ ನನಗೆ ನನ್ನ ಅಣ್ಣನಿಗೆ ಸಹಾಯ ಮಾಡಲು ಹೇಳುತ್ತದೆ.

ಈ ರಾಶಿಯವರ ಕೈಯಲ್ಲಿ ಹಣ ನಿಲ್ಲುವುದಿಲ್ಲ, ಕಾಸು ಉಳಿಸಲು ಏನು ಮಾಡಬೇಕು? ...

ಆದುದರಿಂದ ನನ್ನ ಕೊನೆಯುಸಿರು ಇರುವವರೆಗೆ ನಾನು ನಿನ್ನ ಎದುರು ಕಾದಾಡುವೆ. ಎಲ್ಲಿಯವರೆಗೆ ಶ್ರೀಕೃಷ್ಣ ನಿಮ್ಮ ಪಕ್ಷದಲ್ಲಿದ್ದಾನೋ ಅಲ್ಲಿಯವರೆಗೆ ನಿಮಗೆ ಜಯ ಶತಸಿದ್ಧ. ಆದರೂ ನಿನ್ನನ್ನು ಎದುರಿಸುತ್ತೇನೆ'' ಎಂದು ಭೀಮನ ಮೇಲೆ ಗಧಾಪ್ರಹಾರ ಮಾಡುತ್ತಾನೆ. ವಿಕರ್ಣ ಹಾಗೂ ಭೀಮನ ನಡುವೆ ಗದಾಯುದ್ಧ ನಡೆದು ಭೀಮ ವಿಕರ್ಣನನ್ನು ಕೊಲ್ಲುತ್ತಾನೆ. ವಿಕರ್ಣನ ಸಾವು ಭೀಮನಲ್ಲೂ ಪಾಂಡವರಲ್ಲೂ ತುಂಬಾ ವೇದನೆ ಉಂಟುಮಾಡುತ್ತದೆ.

click me!