16 ವರ್ಷದ ಬಾಲಕನಿಂದ 13 ವರ್ಷದ ಬಾಲಕನ ಹತ್ಯೆ: ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ?

By Suvarna NewsFirst Published Aug 23, 2022, 3:10 PM IST
Highlights

16 ವರ್ಷದ ಬಾಲಕ ತನ್ನ 13 ವರ್ಷದ ಗೆಳೆಯನನ್ನು ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ದೆಹಲಿ ಮೀರತ್ ಎಕ್ಸ್‌ಪ್ರೆಸ್ ವೇಯಲ್ಲಿ ಬರುವ ಮಸುರಿಯಲ್ಲಿ ಈ ಘಟನೆ ನಡೆದಿದೆ.

16 ವರ್ಷದ ಬಾಲಕ ತನ್ನ 13 ವರ್ಷದ ಗೆಳೆಯನನ್ನು ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ದೆಹಲಿ ಮೀರತ್ ಎಕ್ಸ್‌ಪ್ರೆಸ್ ವೇಯಲ್ಲಿ ಬರುವ ಮಸುರಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ 16 ವರ್ಷದ ಬಾಲಕ ಈ ಕೃತ್ಯವೆಸಗಿದ್ದಾನೆ. ಹೀಗೆ ಕೊಲೆ ಮಾಡಿದರೆ ಶಾಲೆಗೆ ಹೋಗಿ ಅಧ್ಯಯನ ನಡೆಸುವುದರಿಂದ ಪಾರಾಗಿ, ಜೈಲಿನಲ್ಲಿ ಆರಾಮವಾಗಿ ಕುಳಿತು ತಿನ್ನಬಹುದೆಂದು ಭಾವಿಸಿ ಈ ಬಾಲಕ ಸುಮಾರು ಕಳೆದ ಐದು ತಿಂಗಳಿನಿಂದ ಕೊಲೆಗೆ ಸಂಚು ರೂಪಿಸಿದ್ದ. 

ಮಂಗಳವಾರ ಈತ ತನ್ನ 13 ವರ್ಷದ ಸ್ನೇಹಿತನನ್ನು ಕಾರು ನೋಡುವ ನೆಪದಲ್ಲಿ ಕರೆದುಕೊಂಡು ದೆಹಲಿ ಮೀರತ್ ಎಕ್ಸ್‌ಪ್ರೆಸ್‌ ವೇಯ ಕೆಳಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಆತ ರಸ್ತೆಯಲ್ಲಿ ಬಿದ್ದಿದ್ದ ಗಾಜಿನ ತುಂಡೊಂದನ್ನು ಕೈಗೆತ್ತಿಕೊಂಡು ಸ್ನೇಹಿತನ ಕುತ್ತಿಗೆಯನ್ನು ಸೀಳಿದ್ದಾನೆ. ನಂತರ ಆತ ಬಾಲಕನ ದೇಹವನ್ನು ಎಳೆದುಕೊಂಡು ಹೋಗಿ  ದೆಹಲಿ ಮೀರತ್ ಎಕ್ಸ್‌ಪ್ರೆಸ್‌ ವೇಯ ಸಮೀಪದ ಪೊದೆಯಲ್ಲಿ ಎಸೆದಿದ್ದಾನೆ. 

ನಿರುದ್ಯೋಗ: 11 ತಿಂಗಳ ಮಗುವನ್ನೇ ಕೊಂದು ಕಾಲುವೆಗೆ ಎಸೆದ ಅಪ್ಪ!

ಹೀಗೆ ಕೊಲೆಯಾದ ಅಮಾಯಕ ಸ್ನೇಹಿತ ಮಸುರಿ ನಿವಾಸಿಯಾಗಿದ್ದು, ಖಾಸಗಿ ಶಾಲೆಯೊಂದರಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ. ಆತನ ತಂದೆ ಸಮೀಪದ ಫ್ಯಾಕ್ಟರಿಯೊಂದರಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಇನ್ನು ಕೊಲೆ ಮಾಡಿದ ಬಾಲ ರಿಯಲ್‌ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಯೊಬ್ಬರ ಪುತ್ರನಾಗಿದ್ದು, ಬೇರೆಯೇ ಖಾಸಗಿ ಶಾಲೆಯೊಂದರಲ್ಲಿ ಅಧ್ಯಯನ ನಡೆಸುತ್ತಿದ್ದ. ಇಬ್ಬರೂ ಬಾಲಕರು ಒಂದೇ ಪ್ರದೇಶದಲ್ಲಿ ವಾಸವಿದ್ದರು. 

ಇಲ್ಲಿನ ಗ್ರಾಮೀಣ ಭಾಗದ ಎಸ್‌ಪಿ ಇರಾಜ್‌ ರಾಜ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸೋಮವಾರ ಸಂಜೆ ಐದು ಗಂಟೆಗೆ ಯಾರೋ ದಾರಿಯಲ್ಲಿ ಹೋಗುವವರು ಕರೆ ಮಾಡಿ ದೆಹಲಿ ಮೀರತ್‌ ಎಕ್ಸ್‌ಪ್ರೆಸ್ ವೇ ಸಮೀಪದಲ್ಲಿ ಬಾಲಕನ ಮೃತದೇಹ ಇರುವುದಾಗಿ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರಿಗೆ ಸುಮಾರು ಒಂದು ಗಂಟೆ ಬಳಿಕ ಬಾಲಕ ಯಾರು ಎಂದು ತಿಳಿದು ಬಂದಿದ್ದು, ಆತನ ಪೋಷಕರಿಗೆ ಮಾಹಿತಿ ನೀಡಲಾಯ್ತು. 

ಬೆಂಗಳೂರು: ಹಣಕ್ಕಾಗಿ ಪ್ರಯಾಣಿಕಳನ್ನೇ ಕೊಂದ ಚಾಲಕನ ಸುಳಿವು ನೀಡಿದ ಚಪ್ಪಲಿ!

ಈ ವೇಳೆ ಪೋಷಕರು ಸಂಜೆ ಮೂರು ಗಂಟೆ ಸುಮಾರಿಗೆ ಬಾಲಕನೋರ್ವ ಬಂದು ತಮ್ಮ ಮಗನನ್ನು ಜೊತೆಯಲ್ಲಿ ಕರೆದೊಯ್ದಿದ್ದಾಗಿ ಹೇಳಿದ್ದಾರೆ. ಇದಾದ ಬಳಿಕ ನಾವು ಅಪ್ರಾಪ್ತ ಬಾಲಕ ಯಾರು ಎಂಬುದನ್ನು ಪತ್ತೆ ಮಾಡಿ ಆತನ ಮನೆಗೆ ಪೊಲೀಸರನ್ನು ಕಳುಹಿಸಿದೆವು. ಆದರೆ ಬಾಲಕ ಅಲ್ಲಿರಲಿಲ್ಲ. ಆತನ ಪೋಷಕರಿಗೂ ತಮ್ಮ ಮಗ ಎಲ್ಲಿದ್ದಾನೆ ಎಂಬುದಾಗಲಿ ಹಾಗೂ ಏನು ಘಟನೆ ನಡೆದಿದೆ ಎಂಬುದರ ಬಗೆಯಾಗಲಿ ಯಾವುದೇ ಅರಿವಿರಲಿಲ್ಲ. ನಂತರ ಸಂಜೆ 7 ಗಂಟೆ ಸುಮಾರಿಗೆ ಮಸುರಿ ಹೊರವಲಯದ ಟೀ ಸ್ಟಾಲ್ ಒಂದರ ಬಳಿ ಆತ ಇರುವುದು ಪತ್ತೆಯಾಯ್ತು. ಅಲ್ಲದೇ ಈ ಬಾಲಕ ಒಂದು ವೇಳೆ ಪೊಲೀಸರು ಹುಡುಕುತ್ತಾ ತನ್ನ ಬಳಿ ಬರದೇ ಇದ್ದಲ್ಲಿ ತಾನೇ ಬಂದು ಪೊಲೀಸರಿಗೆ ಶರಣಾಗುವ ಬಗ್ಗೆ ಯೋಚಿಸುತ್ತಿದ್ದ. 

ಇದಾದ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಾನು ಏನು ಮಾಡಿದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ್ದಾನೆ. ಅಲ್ಲದೇ ತನ್ನ ಪೋಷಕರು ಶಿಕ್ಷಣ ಪಡೆಯಲು ಓದುವಂತೆ ನನ್ನನ್ನು ಒತ್ತಾಯಿಸುತ್ತಿದ್ದು, ತನಗೆ ಶಿಕ್ಷಣ ಮುಂದುವರಿಸಲು ಇಷ್ಟವಿಲ್ಲ. ಹೀಗಾಗಿ ಹಲವು ಅಪರಾಧ ಆಧರಿತ ಸಿನಿಮಾ ನೋಡಿದ ಬಾಲಕ ಕಳೆದ ಐದು ತಿಂಗಳಿಂದ ಕೊಲೆಗೆ ಸಂಚು ರೂಪಿಸಿದ್ದ. ಅಲ್ಲದೇ ಈತನ ಪೋಷಕರು ಮಗ ಪರೀಕ್ಷೆಯಲ್ಲಿ ಪಾಸಾಗಿಲ್ಲ ಎಂದು ಮೂರು ಮೂರು ಬಾರಿ ಶಾಲೆ ಬದಲಾಯಿಸಿದ್ದರು ಎಂದು ಎಸ್‌ಪಿ ಇರಾಜ್‌ ರಾಜ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ತನ್ನ ಈ ಸಂಚಿಗೆ ದುರ್ಬಲ ಬಾಲಕನನ್ನು ಬಲಿಪಶು ಮಾಡಿದ್ದಾನೆ. ಇದಕ್ಕಾಗಿ ಆತ ತನಗಿಂತ ಪುಟ್ಟ ಬಾಲಕನ್ನು ಮತ್ತೆ ಮತ್ತೆ ಭೇಟಿ ಮಾಡಿ ಆತ್ಮೀಯತೆ ಬೆಳೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

click me!