
ನವದೆಹಲಿ(ಫೆ.02): ಕಿರಿಯ ವಯಸ್ಸಿನಲ್ಲೇ ಮಹಿಳೆಯರ ವಿವಾಹ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಮಹಿಳೆಯರ ವಿವಾಹಕ್ಕೆ ಇರುವ ವಯೋಮಿತಿ ಹೆಚ್ಚಿಸಬೇಕೆಂಬ ಬೇಡಿಕೆಗಳ ನಡುವೆಯೇ, ಈ ಕುರಿತು ಶಿಫಾರಸು ಮಾಡಲು ಕಾರ್ಯ ಪಡೆಯೊಂದನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಬಜೆಟ್ನಲ್ಲಿ ಮಾಹಿತಿ ನೀಡಿರುವ ಸಚಿವೆ ನಿರ್ಮಲಾ ಸೀತಾರಾಮನ್, ಮಹಿಳೆಯರ ವಿವಾಹ ವಯೋಮಿತಿ ಕುರಿತು ಶಿಫಾರಸು ಮಾಡಲು ಕಾರ್ಯಪಡೆ ರಚಿಸಲಾಗುವುದು. ಕಾರ್ಯಪಡೆಗೆ ತನ್ನ ವರದಿ ನೀಡಲು 6 ತಿಂಗಳ ಕಾಲಮಿತಿ ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. 1929ರ ಶಾರದಾ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ, 1978ರಲ್ಲಿ ಮಹಿಳೆಯರ ವಿವಾಹಕ್ಕೆ ಇದ್ದ ವಯೋಮಿತಿಯನ್ನು 15ರಿಂದ 18ಕ್ಕೆ ಹೆಚ್ಚಿಸಲಾಗಿತ್ತು.
ಕೇಂದ್ರದಿಂದ ಕರ್ನಾಟಕಕ್ಕೆ 30 ಸಾವಿರ ಕೋಟಿ ಬಾಕಿ: ಬಾಯ್ಬಿಡದ ಸರ್ಕಾರ!
ಪ್ರಸಕ್ತ ಭಾರತ ಮತ್ತಷ್ಟು ಅಭ್ಯುದಯದತ್ತ ಸಾಗುತ್ತಿದ್ದು, ಮಹಿಳೆಯರಿಗೂ ಹೆಚ್ಚಿನ ಶಿಕ್ಷಣ ಮತ್ತು ಉದ್ಯೋಗದ ಅವಕಾಶವನ್ನು ಹೆಚ್ಚಿಸಿದೆ. ಹೆರಿಗೆ ವೇಳೆ ಸಂಭವಿಸುವ ತಾಯಿ ಮತ್ತು ಮಕ್ಕಳ ಸಾವಿನ ಪ್ರಮಾಣ ಇಳಿಕೆ ಮತ್ತು ಪ್ರೋಟೀನ್ ಭರಿತ ಆಹಾರ ಪೂರೈಕೆಯ ಹೆಚ್ಚಳದ ಅವಶ್ಯಕತೆಯ ಜೊತೆಜೊತೆಗೆ, ಬಾಲಕಿಯೊಬ್ಬಳು ತಾಯ್ತನ ಪ್ರವೇಶ ಮಾಡುವ ವಿಷಯವನ್ನು ವಿಶಾಲ ದೃಷ್ಟಿಕೋನದಲ್ಲಿ ನೋಡಬೇಕಿದೆ. ಹೀಗಾ ಗಿಯೇ ಮಹಿಳೆಯರ ವಿವಾಹ ವಯೋಮಾನ ಮಿತಿ ಕುರಿತು ಶಿಫಾರಸು ಮಾಡಲು ಕಾರ್ಯಪಡೆ ರಚನೆಗೆ ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಪ್ರಸಕ್ತ ಭಾರತದಲ್ಲಿ ಪುರುಷರಿಗೆ ವಿವಾಹವಾಗಲು 21 ವರ್ಷ ಮತ್ತು ಮಹಿಳೆಯರಿಗೆ 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಕ್ರೀಡಾಭಿವೃದ್ಧಿಗೆ ಕೇಂದ್ರ ಬಜೆಟ್ನಲ್ಲಿ 2826 ಕೋಟಿ
ಬೇಟಿ ಪಢಾವೋ ಫಲಪ್ರದ ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ಜಾರಿಗೆ ತರಲಾದ ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ ಅತ್ಯುತ್ತಮ ರೀತಿಯಲ್ಲಿ ಫಲ ಕೊಟ್ಟಿದೆ. ಯೋಜನೆ ಜಾರಿ ಬಳಿಕ ಶಿಕ್ಷಣದ ಎಲ್ಲಾ ಹಂತಗಳಲ್ಲೂ ಬಾಲಕರಿಗಿಂತ, ಬಾಲಕಿಯರ ಸೇರ್ಪಡೆ ಪ್ರಮಾಣ ಹೆಚ್ಚಿದೆ. ಪ್ರಾಥಮಿಕ ಹಂತದಲ್ಲಿ ಬಾಲಕರ ಸೇರ್ಪಡೆ ಪ್ರಮಾಣ ಶೇ.89.28 ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇ.94.32ರಷ್ಟಿದೆ. ಕಾಲೇಜು ಶಿಕ್ಷಣ ಹಂತದಲ್ಲಿ ಬಾಲಕರ ಸೇರ್ಪಡೆ ಸೇ.78ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇ.81.32 ರಷ್ಟಿದೆ. ಇನ್ನು ಉನ್ನತ ಶಿಕ್ಷಣ ವಲಯದಲ್ಲಿ ಬಾಲಕರ ಪ್ರಮಾಣ ಶೇ.57.54 ಇದ್ದರೆ, ಬಾಲಕಿಯರ ಪ್ರಮಾಣ ಶೆ.59.70ಕ್ಕೆ ಏರಿದೆ ಎಂದು ಸರ್ಕಾರ ಹೇಳಿದೆ.
ಭರ್ಜರಿ ಹಣ
ಪ್ರಸಕ್ತ ಬಜೆಟ್ನಲ್ಲಿ ಮಹಿಳೆಯರ ಗುರಿಯಾಗಿಸಿಕೊಂಡ ಯೋಜನೆಗಳಿಗೆ 26800 ಕೋಟಿ ರು. ಮತ್ತು ಪೋಷಕಾಂಶ ಸಂಬಂಧಿ ಯೋಜನೆ ಗಳಿಗೆ 35600 ಕೋಟಿ ರು. ಹಣ ನಿಗದಿ ಮಾಡಲಾಗಿದೆ. ಎಸ್ಸಿ/ ಎಸ್ಟಿ ಪ್ರಸಕ್ತ ಬಜೆಟ್ನಲ್ಲಿ ಪರಿಶಿಷ್ಟ ಜಾತಿ ಮತ್ತು ಇತರೆ ಹಿಂದುಳಿದ ಸಮು ದಾಯ ಅಭ್ಯದಯಕ್ಕೆ 85000 ಕೋಟಿ ರು. ಮತ್ತು ಪರಿಶಿಷ್ಟ ಪಂಗಡಗಳ ಅಭ್ಯುದಯಕ್ಕೆ 53700 ಕೋಟಿ ರು. ವಿನಿಯೋಗಿಸುವುದಾಗಿ ಹೇಳಿದೆ. ಹಿರಿಯ ನಾಗರಿಕರು ಹಿರಿಯ ನಾಗರಿಕರು ಮತ್ತು ದಿವ್ಯಾಂಗರ ಕಲ್ಯಾಣಕ್ಕಾಗಿ ಬಜೆಟ್ನಲ್ಲಿ 9500 ಕೋಟಿ ರು.ಹಣ ವಿನಿಯೋಗಿಸಲು ನಿರ್ಧರಿಸಲಾಗಿದೆ.
ವಿನಯ್ ಕ್ಷಮಾದಾನ ಅರ್ಜಿ ವಜಾ, ಆಟ ಮುಂದುವರೆಸಿದ ಮತ್ತೊಬ್ಬ ದೋಷಿ!
ಮಲಹೊರುವ ಪದ್ಧತಿ ನಿರ್ಮೂಲನೆ ಮಲಹೊರುವ ಪದ್ಧತಿಯ ಸಂಪೂರ್ಣ ನಿವಾರಣೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಇದಕ್ಕೆ ಸೂಕ್ತ ತಂತ್ರಜ್ಞಾನಗಳನ್ನು ಬಳಸಲು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಯೋಜನೆಗಳನ್ನು ರೂಪಿಸುತ್ತಿದೆ. ಸ್ಥಳೀಯ ನಗರಾಭಿವೃದ್ಧಿ ಸಂಸ್ಥೆಗಳು ಇಂಥ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಈ ವಿಷಯದಲ್ಲಿ ಇನ್ನೊಂದು ಹೆಜ್ಜೆ ಮುಂದಡಿ ಇಡಲಿರುವ ಸರ್ಕಾರ ಶಾಸನಾತ್ಮಕ ಮತ್ತು ಸಾಂಸ್ಥಿಕ ಬದಲಾವಣೆಗಳ ಮೂಲಕ ಮಲ ಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಕ್ರಮ ಕೈಗೊಳ್ಳಲಿದೆ. ಇದು ಫಲಪ್ರದವಾಗಲು ತಂತ್ರಜ್ಞಾನ ಅಳವಡಿಕೆಗೆ ಅಗತ್ಯವಾದ ಹಣಕಾಸು ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.