ದೇವಸ್ಥಾನದ ಒಳಗೆ ಚಪ್ಪಲಿ ಹಾಕಬಾರದೇಕೆ?

By Kannadaprabha NewsFirst Published Jan 8, 2019, 6:13 PM IST
Highlights

ಹಳೆಯ ಆಚಾರಗಳಿಗೆ ವೈಜ್ಞಾನಿಕ ಕಾರಣ ಇರುತ್ತದೆ. ನಮ್ಮ ಅಹಂಕಾರ ಬಿಡಬೇಕೆಂದು ಹಲವು ರೀತಿಯಲ್ಲಿ ಹಿರಿಯರು ಹೇಳಲು ಯತ್ನಿಸಿದ್ದು, ಅದನ್ನು ಅರ್ಥ ಮಾಡಿಸಲು ಹಲವು ಪದ್ಧತಿಗಳನ್ನು ಆಚರಣೆಗೆ ತಂದಿದ್ದಾರೆ. ಅದರಲ್ಲಿ ದೇವಸ್ಥಾನದ ಹೊರಗೆ ಚಪ್ಪಲಿ ಬಿಡುವುದೂ ಒಂದು....

ದೇವಸ್ಥಾನದೊಳಗೆ ಹೋಗುವಾಗ ಕಡ್ಡಾಯವಾಗಿ ಎಲ್ಲರೂ ಚಪ್ಪಲಿಯನ್ನು ಹೊರಗೇ ಬಿಟ್ಟು ಹೋಗುತ್ತಾರೆ. ಇದಕ್ಕೆ ಪ್ರಮುಖ ಕಾರಣ ಭಕ್ತಿ. ಚಪ್ಪಲಿ ನಮಗೂ ಭೂಮಿಗೂ ಸಂಪರ್ಕ ತಪ್ಪಿಸುತ್ತದೆ. ಇವನು ಭೂಮಿ ಮೇಲಿಲ್ಲ ಎಂಬುದಕ್ಕೆ ಅರ್ಥವೇನು ಹೇಳಿ? ಮಹಾನ್ ಗರ್ವಿಷ್ಠ ಎಂದಲ್ಲವೇ? ದೇವರನ್ನು ದರ್ಶಿಸುವಾಗ ನಾವು ನಮ್ಮೊಳಗಿನ ಎಲ್ಲಾ ಅಹಂಕಾರವನ್ನೂ ದೊಡ್ಡತನದ ಬಿಗುಮಾನವನ್ನೂ ಬಿಟ್ಟಿರಬೇಕು. ಕಾಲಿಗೆ ಚಪ್ಪಲಿ ಇಲ್ಲದೆ ಇರುವುದು ಒಂದು ರೀತಿಯ ವಿನೀತ ನಡೆ.

ಬೆಳಗ್ಗೆ ಎದ್ದು ಸೂರ್ಯನಿಗೇಕೆ ನಮಸ್ಕರಿಸಬೇಕು?

ಕೆಲವು ದೇವಾಲಯಗಳಲ್ಲಿ ಬೇಕಂತಲೇ ದೊರಗು ಕಲ್ಲುಗಳನ್ನು ಹಾಕಿರುತ್ತಾರೆ. ಅವು ಆಕ್ಯುಪಂಕ್ಚರ್ ರೀತಿ ಕೆಲಸ ಮಾಡುತ್ತವೆ. ಚಪ್ಪಲಿಯಿಲ್ಲದೆ ರಸ್ತೆ ಹಾಗೂ ಮಣ್ಣಿನ ನೆಲದಲ್ಲಿ ಒಂದಷ್ಟು ನಡೆಯಿರಿ ಎಂದು ವೈದ್ಯರೂ ಹೇಳುತ್ತಾರೆ. ಹಾಗೆ ಮಾಡಿದಾಗ ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. 

ಹಿಂದೆ ಗಂಡಸರು ಜುಟ್ಟು ಬಿಡುತ್ತಿದ್ದೇಕೆ?

ಪಾದಗಳನ್ನು ರಕ್ಷಿಸಲು ಚಪ್ಪಲಿ ಅಗತ್ಯವಿದ್ದರೂ, ದೇಹದೊಳಗಿನ ಅಂಗಗಳ ಒಳಿತಿಗೆ ಆಗಾಗ ಚಪ್ಪಲಿ ಬಿಡುವುದು ಒಳಿತು. ದೇವಾಲಯಗಳ ಒಳಗೆ ಪಾದರಕ್ಷೆಗಳನ್ನು ಧರಿಸದಿರುವುದಕ್ಕೆ ಬಹುಶಃ ಎರಡು ಕಾರಣಗಳಿವೆ. ಮೊದಲನೆಯದು, ದೇವರ ಮುಂದೆ ಎಲ್ಲರೂ ಸರಿ ಸಮಾನರು. ಪಾದರಕ್ಷೆಗಳನ್ನು ನೋಡಿ ವ್ಯಕ್ತಿಗಳ ಸ್ಥಾನಮಾನ ನಿರ್ಧರಿಸುವ ಸಮಾಜದಲ್ಲಿ, ಪಾದರಕ್ಷೆಗಳನ್ನು ಧರಿಸಿ ಒಳಗೆ ಹೋಗುವುದೆಂದರೆ ಅದು ಅವರ ಅಹಂಕಾರ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸಿದಂತಾಗುತ್ತದೆ. 

ಓಂಕಾರ ಪಠಣದ ಹಿಂದಿನ ಸತ್ಯ

ಎರಡನೆಯದು ದೇವಾಲಯವೆಂದರೆ ಅಲ್ಲಿ ಹೂವು, ಪತ್ರೆ, ಗಂಧ, ಕರ್ಪೂರಾದಿಗಳ ಸುಗಂಧ ಹರಡಿರುವ ಪ್ರದೇಶ. ಅಲ್ಲಿ ಚಪ್ಪಲಿ ಇಲ್ಲವೇ ಬೂಟುಗಳ ವಾಸನೆ ಅನಪೇಕ್ಷಣೀಯ. ಜೊತೆಗೆ ಇಡೀ ಊರನ್ನು ಸುತ್ತು ಬಂದಿರುವ ನಮ್ಮ ಪಾದರಕ್ಷೆಗಳಲ್ಲಿ ಎಲ್ಲ ರೀತಿಯ ಧೂಳು, ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರಗಳಿರುತ್ತವೆ. ಇವೆಲ್ಲವನ್ನೂ ತಂದು ಆಲಯದೊಳಗೆ ಹರಡುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಅದಕ್ಕಾಗಿಯೇ ಪಾದರಕ್ಷೆಗಳನ್ನು ಹೊರಗಡೆ ಬಿಟ್ಟು, ಕೈಕಾಲು ಮುಖ ತೊಳೆದ ನಂತರವೇ ಆಲಯದೊಳಗೆ ಪ್ರವೇಶಿಸಬೇಕು ಎಂದು ಹಿರಿಯರು ನಿಯಮ ಮಾಡಿಟ್ಟಿದ್ದಾರೆ.

ಹಳೆ ಆಚಾರ, ಹೊಸ ವಿಚಾರ

- ಮಹಾಬಲ ಸೀತಾಳಬಾವಿ

 

click me!