Pradeep Eshwar Fires Back at Chalavadi: 'Law is Equal for Everyone'; Defends DK Shivakumar ಶಾಸಕ ಪ್ರದೀಪ್ ಈಶ್ವರ್ ಅವರು, ನಟ ಸುದೀಪ್ ಅವರನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿಲ್ಲ, ಇದು ಕೇವಲ ಸಂವಹನದ ಕೊರತೆಯಿಂದಾದ ಗೊಂದಲ ಎಂದು ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು (ಅ.9): ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪ್ರದೀಪ್ ಈಶ್ವರ್, ನಟ ಕಿಚ್ಚ ಸುದೀಪ್ ಅವರನ್ನು ಟಾರ್ಗೆಟ್ ಮಾಡುವ ಪ್ರಶ್ನೆಯೇ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. "ನಮಗೂ ಸುದೀಪ್ ಸರ್ ಅಂದರೆ ನಿಮ್ಮಗಿಂತ ಹೆಚ್ಚು ಗೌರವ ಮತ್ತು ಪ್ರೀತಿ ಇದೆ. ಇತ್ತೀಚೆಗೆ ನಡೆದ ಘಟನೆ ಕೇವಲ ಮಿಸ್‌ಕಮ್ಯುನಿಕೇಷನ್ (ಸಂವಹನದ ಕೊರತೆ) ಆಗಿತ್ತು. ನಮ್ಮ ನಾಯಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಗೊಂದಲವನ್ನು ತಕ್ಷಣವೇ ಸರಿಪಡಿಸಿದ್ದಾರೆ" ಎಂದು ತಿಳಿಸಿದರು.

ಅದೇ ಸಮಯದಲ್ಲಿ, ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ ಅವರು 'ಕಾನೂನು ಎಲ್ಲರಿಗೂ ಒಂದೇ ಅಲ್ವಾ ಸಾರ್, ನಿಮ್ಮಪ್ಪನಿಗೆ ಆಗಲಿ ನಿಮಗೆ ಆಗಲಿ ಕಾನೂನು ಎಲ್ಲರಿಗೂ ಒಂದೇ' ಎಂದಿದ್ದಾರೆ. ರಾಜಕೀಯ ವಿವಾದಗಳ ಕುರಿತು ಬಿಜೆಪಿ ವಿರುದ್ಧ ಕೂಡ ಹರಿಹಾಯ್ದರು. "ನಿಜ ಹೇಳಬೇಕೆಂದರೆ, ಲಿಂಗಾಯತ ಸಮುದಾಯವನ್ನು ಟಾರ್ಗೆಟ್ ಮಾಡಿದ್ದು ಬಿಜೆಪಿಯವರೇ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಈ ವಿರೋಧ ಪಕ್ಷದ ನಾಯಕರು ಎಲ್ಲಿ ಹೋಗಿದ್ದರು?" ಎಂದು ಅವರು ಪ್ರಶ್ನಿಸಿದರು.

ಇದಲ್ಲದೆ, "ನಮ್ಮ ಡಿಕೆಶಿ ಅವರಿಗೆ ಚಿತ್ರರಂಗದ ಮೇಲೆ ಅಪಾರ ಪ್ರೀತಿ ಇದೆ. ನಮ್ಮ ಸರ್ಕಾರದ ಗಮನಕ್ಕೆ ಈ ವಿವಾದ ಬಂದ ತಕ್ಷಣ ಅದನ್ನು ತಕ್ಷಣವೇ ಬಗೆಹರಿಸಲಾಗಿದೆ" ಎಂದು ಅವರು ಸಮರ್ಥಿಸಿಕೊಂಡರು.

ನೋಟಿಸ್‌ ಕೊಟ್ಟ ಬಳಿಕ ಅವಕಾಶ ನೀಡಬಾರದಿತ್ತು ಎಂದ ರಾಮಲಿಂಗಾ ರೆಡ್ಡಿ

ಬಿಗ್‌ಬಾಸ್‌ಗೆ ಮತ್ತೆ ಅನುಮತಿ ಕೊಟ್ಟಿರುವ ವಿಚಾರದಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, 'ಬಿಗ್ ಬಾಸ್ ಗೆ ಮತ್ತೆ ಪರ್ಮಿಷನ್ ಕೊಟ್ಟಿರುವ ವಿಚಾರ, ಮಾಧ್ಯಮದ ಮುಖಾಂತರ ನೋಡಿದ್ದೇನೆ. ಅದು ನರೇಂದ್ರ ಸ್ವಾಮಿ ಅವರ ಇಲಾಖೆಗೆ ಬರುತ್ತೆ. ಪರಿಸರಕ್ಕೆ ಹಾನಿ ಆಗ್ತಿದೆ ನೋಟಿಸ್ ಕೊಟ್ಟಿದ್ದರು. ಡಿಸಿಎಂ ಮತ್ತೆ ಅನುಮತಿ ಕೊಡಿ ಎಂದಿದ್ದಾರೆ ನಾನು ಊರಲ್ಲಿ ಇರಲಿಲ್ಲ. ನಮಗೆ ಮಾಹಿತಿ ಇರಲಿಲ್ಲ. ಒಂದು ಸಾರಿ ನೋಟಿಸ್ ಕೊಟ್ಟ ಮೇಲೆ ಅದನ್ನ ಸರಿ‌ಮಾಡಿಕೊಳ್ಳವರೆಗೆ ಅವಕಾಶ ಕೊಡಬಾರದಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ ಸ್ವಾಯತ್ತ ಸಂಸ್ಥೆ ಅದಕ್ಕೆ ನಾವು ಅಡ್ಡಿಪಡಿಸೋಕೆ ಆಗಲ್ಲ' ಎಂದರು. ಸುದೀಪ್ ಕಾಲ್ ಮಾಡಿದಕ್ಕೆ ಸಮಸ್ಯೆ ಬಗೆಹರಿಯಿತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಡಿಸಿಎಂ ಬರ್ತಾರೆ ಅವರನ್ನೇ ಕೇಳಿ ಎಂದರು.