ಹಾಸನ ಜಿಲ್ಲೆಗೆ ಕೃಷ್ಣಭೈರೇಗೌಡರನ್ನು ನೂತನ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಕೆ.ಎನ್.ರಾಜಣ್ಣ ಅವರ ಬದಲಿಗೆ ಕೃಷ್ಣಭೈರೇಗೌಡರು ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಬದಲಾವಣೆಯನ್ನು ಜೆಡಿಎಸ್ ಶಾಸಕ ಹೆಚ್‌ಪಿ ಸ್ವರೂಪ್ ಸ್ವಾಗತಿಸಿದ್ದಾರೆ.

ಹಾಸನ, (ಆಗಸ್ಟ್ 08): ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಕುರಿತ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಕಂದಾಯ ಸಚಿವ ಕೃಷ್ಣಭೈರೇಗೌಡರನ್ನು ಹಾಸನ ಜಿಲ್ಲೆಯ ನೂತನ ಉಸ್ತುವಾರಿ ಸಚಿವರನ್ನಾಗಿ ಸರ್ಕಾರ ನೇಮಕ ಮಾಡಿದೆ.

ಸ್ವತಃ ಮುಖ್ಯಮಂತ್ರಿಗಳು ಈ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಈ ಜವಾಬ್ದಾರಿಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ನಿರ್ವಹಿಸುತ್ತಿದ್ದರು. ರಾಜಣ್ಣ ಅವರು ತಮ್ಮನ್ನು ಈ ಹುದ್ದೆಯಿಂದ ಮುಕ್ತಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಇತ್ತೀಚೆಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನೇಮಕ ವಿಚಾರದಲ್ಲಿ ರಾಜಣ್ಣ ಮತ್ತು ಸಿಎಂ ನಡುವೆ ಮನಸ್ತಾಪ ಉಂಟಾಗಿತ್ತು. ರಾಜಣ್ಣ, ತಾವು ಸೂಚಿಸಿದವರನ್ನೇ ನೇಮಕ ಮಾಡಬೇಕು ಎಂದು ಪಟ್ಟುಹಿಡಿದಿದ್ದರು. ಒಪ್ಪಿಗೆ ಸಿಗದಿದ್ದಾಗ, ಧ್ವಜಾರೋಹಣಕ್ಕೂ ಹಾಸನಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ:'ಅಫಡವಿಟ್‌ಗೆ ಸಹಿ ಮಾಡಿ ಎಂದ್ರೆ ಏನರ್ಥ?..' ಚುನಾವಣಾ ಆಯೋಗದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ, ಬಿಜೆಪಿಗೆ ಹಾಕಿದ ಸವಾಲೇನು?

ಕೃಷ್ಣಭೈರೇಗೌಡರ ನೇಮಕವನ್ನು ಜೆಡಿಎಸ್ ಶಾಸಕ ಹೆಚ್‌ಪಿ ಸ್ವರೂಪ್‍ಪ್ರಕಾಶ್ ಸ್ವಾಗತಿಸಿದ್ದಾರೆ. ಕೃಷ್ಣಭೈರೇಗೌಡರು ಕಂದಾಯ ಇಲಾಖೆಯಲ್ಲಿ ಗಣನೀಯ ಸುಧಾರಣೆಗಳನ್ನು ತಂದಿದ್ದಾರೆ. ಅವರಿಂದ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರಿಗೆ ಉತ್ತಮ ಕೆಲಸಗಳಾಗುವ ನಿರೀಕ್ಷೆಯಿದೆ, ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.