ಸಂಗೀತ ಮಾಂತ್ರಿಕ ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕಾ ದೇವಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಖಚಿತ ಕಿರೀಟ ಮತ್ತು ಆಭರಣಗಳನ್ನು ಸಮರ್ಪಿಸಿದ್ದಾರೆ. ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗವನ್ನೂ ಅರ್ಪಿಸಿ, ದೇವಿಯ ಅನುಗ್ರಹದಿಂದ ತಮ್ಮ ಜೀವನದಲ್ಲಿ ನಡೆದ ಪವಾಡಗಳನ್ನು ಸ್ಮರಿಸಿಕೊಂಡರು.
ಉಡುಪಿ (ಸೆ.10): ಸಂಗೀತ ಲೋಕದ ದಿಗ್ಗಜ, ಸ್ವರ ಮಾಂತ್ರಿಕ ಇಳಯರಾಜ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಮೇಲಿನ ತಮ್ಮ ಭಕ್ತಿಯನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದಾರೆ. ತಮ್ಮ ಆರಾಧ್ಯ ದೇವಿಯಾದ ಮೂಕಾಂಬಿಕೆಗೆ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಖಚಿತ ಕಿರೀಟ ಮತ್ತು ವಿವಿಧ ಆಭರಣಗಳನ್ನು ಸಮರ್ಪಿಸಿ ಭಕ್ತಿ ಸಮರ್ಪಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತರಾಗಿರುವ ಇಳಯರಾಜ, ಈ ಹಿಂದೆಯೂ ದೇಗುಲಕ್ಕೆ ಹಲವು ಬಗೆಯ ಆಭರಣಗಳನ್ನು ಅರ್ಪಿಸಿ ತಮ್ಮ ಭಕ್ತಿಭಾವವನ್ನು ತೋರಿದ್ದಾರೆ. ಈ ಬಾರಿ ಅವರು ದೇವಿಗೆ ವಜ್ರದ ಕಿರೀಟದ ಜೊತೆಗೆ ಇತರ ಆಭರಣಗಳನ್ನು ಸಮರ್ಪಿಸಿದ್ದಾರೆ. ಇದರ ಜೊತೆಗೆ, ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗವನ್ನೂ ಅರ್ಪಿಸಿದ್ದಾರೆ.
ಆಭರಣಗಳನ್ನು ದೇಗುಲಕ್ಕೆ ಅರ್ಪಿಸುವ ಮುನ್ನ ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರು ಇಳಯರಾಜ ಅವರೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಇಳಯರಾಜ ಅವರು ಭಕ್ತಿಪರವಶರಾಗಿ ತಮ್ಮ ಜೀವನದಲ್ಲಿ ದೇವಿಯ ಅನುಗ್ರಹದಿಂದ ನಡೆದ ಪವಾಡಗಳನ್ನು ನೆನಪಿಸಿಕೊಂಡು ಭಾವುಕರಾದರು. ಮೂಕಾಂಬಿಕೆ ದೇವಿಯಿಂದ ತಮ್ಮ ಜೀವನದಲ್ಲಿ ಅಸಾಮಾನ್ಯ ಬೆಳವಣಿಗೆಗಳು ನಡೆದಿವೆ ಎಂದು ಅವರು ಹೇಳಿಕೊಂಡಿದ್ದಾರೆ.
ಒಂದೇ ಮ್ಯೂಸಿಕ್ ಇಬ್ಬರು ಸ್ಟಾರ್ಗಳಿಗೆ ನೀಡಿದ ಇಳಯರಾಜ; ಒಂದು ಕೆಲಸಕ್ಕೆ ಡಬಲ್ ಪೇಮೆಂಟ್ ಎಂದ ನೆಟ್ಟಿಗರು
ದೇವಾಲಯಕ್ಕೆ ಈ ಮಹಾನ್ ಕೊಡುಗೆಗಳನ್ನು ನೀಡಿದ ಇಳಯರಾಜ ಅವರಿಗೆ, ದೇಗುಲದ ವತಿಯಿಂದ ಗೌರವಾರ್ಪಣೆ ಮಾಡಿ ಕೃತಜ್ಞತೆ ಸಲ್ಲಿಸಲಾಯಿತು. ದೇಶದ ಖ್ಯಾತ ಸಂಗೀತ ನಿರ್ದೇಶಕರಿಂದ ದೇಗುಲಕ್ಕೆ ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ಬಂದಿರುವುದು ಭಕ್ತರಲ್ಲಿ ಸಂತೋಷ ಮೂಡಿಸಿದೆ. ಇದು ಕೇವಲ ಒಂದು ಆಭರಣ ಸಮರ್ಪಣೆಯಲ್ಲದೆ, ಒಬ್ಬ ಮಹಾನ್ ಕಲಾವಿದ ತನ್ನ ಆರಾಧ್ಯ ದೇವಿಯ ಮೇಲಿಟ್ಟಿರುವ ಅಪಾರ ನಂಬಿಕೆ ಮತ್ತು ಶ್ರದ್ಧೆಗೆ ಸಾಕ್ಷಿಯಾಗಿದೆ.
