ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ತುಮಕೂರು: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಉದ್ಘಾಟನೆಗೆ ಆಯ್ಕೆ ಮಾಡಿದ ವಿಚಾರದ ಕುರಿತು ತುಮಕೂರಿನಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ (Praveen Shetty) ಪ್ರತಿಕ್ರಿಯಿಸಿದ್ದಾರೆ. ಲೇಖಕಿ ಬಾನು ಮುಷ್ತಾಕ್ (Banu Musthtaq) ದಸರಾ ಉದ್ಘಾಟನೆ ಮಾಡುವುದರಲ್ಲಿ ನಮ್ಮದೇನು ಅಭ್ಯಂತರವಿಲ್ಲ. ದಸರಾ ನಮ್ಮ ನಾಡಿನ ಹಬ್ಬವಾಗಿದೆ. ಚಾಮುಂಡೇಶ್ವರಿ ಮುಖಾಂತರ ಮೈಸೂರು ದಸರಾವನ್ನ ನಾವೆಲ್ಲರೂ ಆಚರಣೆ ಮಾಡುತ್ತೇವೆ. ಬಾನು ಮುಷ್ತಾಕ್ ಅವರು ಸಹ ಕನ್ನಡಿಗರೇ ಅಲ್ವಾ‌? ಅವರಿಗೂ ಅಭಿಮಾನವಿದೆ. ನಾವು ಯಾವ ದೇವರನ್ನು ವಿರೋಧ ಮಾಡಲ್ಲ. ಎಲ್ಲಾ ದೇವರನ್ನು ನಮ್ಮ ನಮ್ಮ ದೇವರೆಂದು ಮನಗಂಡು ದಸರಾ ಉದ್ಘಾಟನೆ ಮಾಡುವುದರಲ್ಲಿ ನಮ್ಮದೇನು ಅಭ್ಯಂತರವಿಲ್ಲ. ಅವರು ಪ್ರೀತಿಯಿಂದ ಎಲ್ಲಾ ದೇವರ ಮೇಲೆ ನಂಬಿಕೆ ಇಡಬೇಕಾಗುತ್ತದೆ ಎಂದು ಪ್ರವೀಣ್ ಶೆಟ್ಟಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಪ್ರವೀಣ್ ಶೆಟ್ರು, ನಾವು ಭಾರತ ದೇಶದಲ್ಲಿರುವುದು. ಒಟ್ಟಿಗೆ ಬದುಕುವ ಮೂಲಕ ಜಾತ್ಯಾತೀತ ರಾಷ್ಟ್ರವಾಗಿ ನಾವು ಒಟ್ಟಿಗೆ ಹೋಗಬೇಕಾಗುತ್ತದೆ.ಅವರ ಕಾರ್ಯಕ್ರಮಗಳನ್ನು ನಮ್ಮ ಹಿಂದೂಗಳು ಹೋಗಿ ಉದ್ಘಾಟನೆ ಮಾಡಬಹುದು. ಕೆಲವು ಕಡೆ ಬಾಂಧವ್ಯದಲ್ಲಿ ಒಂದೇ ದರ್ಗಾದಲ್ಲಿ ಎರಡು ದೇವರಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ಇಲ್ಲಿ ಅವರು ಬೇಡ, ಇವರು ಬೇಡ ಅನ್ನೋದು ಬೇಕಾಗಿಲ್ಲ. ಅದರ ಜೊತೆಯಲ್ಲಿ ಅವರಿಗೂ ಸಹ ಎಲ್ಲಾ ದೇವರ ಮೇಲೆ ಅಭಿಮಾನ ಇದ್ದರಾಯಿತು ಎಂದು ಹೇಳಿದರು.

ಬಾನು ಮುಷ್ಯಾಕ್ ಹಿಂದಿನ ಹೇಳಿಕೆಗೆ ಪ್ರತಿಕ್ರಿಯೆ

ಬಾನು ಮುಷ್ತಾಕ್ ಅವರ ಹಿಂದಿನ ಹೇಳಿಕೆ ಕುರಿತು ಪ್ರತಿಕ್ರಿಯಿಸಿದು ಪ್ರವೀಣ್ ಶೆಟ್ಟಿ, ಕನ್ನಡೀಕರಣವನ್ನು ಬರೀ ಭುವನೇಶ್ವರಿ ಮೇಲೆ ಮಾತನಾಡಿದ್ದಾರೆ. ಅದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಹಿರಿಯರಾದವರು, ಸಾಹಿತಿಗಳು, ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ತೆಗೆದುಕೊಂಡವರು ದೇವರ ಮತ್ತು ಬಣ್ಣದ ಬಗ್ಗೆ ಮಾತನಾಡಬಾರದು ಎಂದು ಸಲಹೆಯನ್ನು ನೀಡಿದರು.

ಎಲ್ಲಾ ಧರ್ಮ ಮತ್ತು ದೇವರನ್ನು ಪ್ರೀತಿ ಮಾಡಬೇಕು

ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ಬಗ್ಗೆ ನಮಗೆ ಯಾವುದೇ ಅಭ್ಯಂತರವಿಲ್ಲ ಎಂದ ಪ್ರವೀಣ್ ಶೆಟ್ಟಿ, ಅವರು ಎಲ್ಲಾ ಧರ್ಮವನ್ನು ಪ್ರೀತಿ ಮಾಡಬೇಕು.

ಎಲ್ಲಾ ದೇವರನ್ನು ಪ್ರೀತಿ ಮಾಡಬೇಕು. ಅವಾಗ ತಾನೇ ವಿಶ್ವಮಾನವ ಆಗೊದಕ್ಕೆ ಸಾಧ್ಯ ಎಂದರು. ಕುವೆಂಪು ಅವರು ಹೇಗೆ ವಿಶ್ವಮಾನವರಾದರು? ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಹೊರ ಬನ್ನಿ ಅನ್ನೊ ಮಾತು ಹೇಳಿದರು. ಅವರು ಉದ್ಘಾಟನೆ ಮಾಡಬೇಕಾದರೇ ಚಾಮುಂಡಿ ತಾಯಿ ಮೇಲೆ ಅಭಿಮಾನ ಮತ್ತು ಕನ್ನಡಾಂಬೆ ಮೇಲೆ ಅಭಿಮಾನ ಇಟ್ಕೊಂಡೆ ಮಾಡಲಿ ಅನ್ನೊದು ನನ್ನ ಮನೋಭಾವ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಹೆಚ್‌ಸಿ ಮಹದೇವಪ್ಪ

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಬಾನು ಮುಷ್ತಾಕ್‌ ಅವರಿಂದ ದಸರಾ ಉದ್ಘಾಟನೆಯನ್ನು ವಿರೋಧಿಸುವವರಿಗೆ ಏನು ಹೇಳಬೇಕು? ಇದು ಧಾರ್ಮಿಕತೆಯ ಅತಿರೇಕ. ಧರ್ಮಾಂಧತೆ ಸಂವಿಧಾನಕ್ಕೆ ಆಘಾತಕಾರಿ. ಬಹುತ್ವದ ವಿಚಾರಕ್ಕೂ ಇದು ಆಘಾತ ತರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರ್ಮಿಕ, ಸಾಮಾಜಿಕವಾಗಿ ಎಲ್ಲರೂ ಒಂದೇ ಎಂದು ನಮ್ಮ ಸಂವಿಧಾನದ ಪೀಠಿಕೆಯಲ್ಲಿಯೇ ಇದೆ.

ದಸರಾ ಸಾಂಸ್ಕೃತಿಕ ಜೀವನ ಅಭಿವ್ಯಕ್ತಿಗೊಳಿಸುವ ಹಬ್ಬ. ದಸರಾ ಎನ್ನುವುದು ಧರ್ಮದ ಆಚರಣೆಯಲ್ಲ. ಧರ್ಮದ ವಿಚಾರದ ಚರ್ಚೆ ಜನರಿಗೆ ಬಿಟ್ಟಿದ್ದು. ಆದರೆ, ಬಾನು ಮುಷ್ತಾಕ್ ಅವರು ಇಡೀ ದೇಶಕ್ಕೆ ಕಿರೀಟ ಅಲ್ಲವೇ? ನೀವು ಅವರನ್ನು ಯಾವ ರೀತಿ ನೋಡುತ್ತೀರಾ? ಯಾಕೆ ಅವರನ್ನು ಪ್ರತ್ಯೇಕ ಮಾಡುತ್ತೀರಾ? ಸಾಂಸ್ಕೃತಿಕವಾಗಿ ಆಚರಿಸುವ ನಾಡಹಬ್ಬಕ್ಕೆ ಸಾಂವಿಧಾನಾತ್ಮಕವಾಗಿ ಆಯ್ಕೆ ಮಾಡಿದ್ದೇವೆ. ಇದರ ಬಗ್ಗೆ ಯಾಕೆ ಅಪಸ್ವರ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.