ರೇಖಾ ಸಾಗರ್ ಹೊಟ್ಟೆ ಪಾಡಿಗಾಗಿ ಚಿಂದಿ ಆಯುತ್ತಿದ್ದು, ನಿರ್ಗತಿಕ ಮಹಿಳೆಯ ಜೀವನದ ಕಥೆಯಾಗಿ ಬದಲಾಗಿದೆ. ರಸ್ತೆ ಬದಿಯಲ್ಲಿ ಚಿಂದಿ ಆಯುತ್ತ ಜೀವನ ಸಾಗಿಸುವ ಮಹಿಳೆಯೊಬ್ಬಳ ಜೀವನ, ತನ್ನ ಪುಟ್ಟ ಮಗನಿಗಾಗಿ ಆಕೆ ಪಡುವ ಕಷ್ಟ ಅಷ್ಟಿಷ್ಟಲ್ಲ. ದೇವರೇ, ನನಗೆ ಎಂಥಾ ಬದುಕು ಕೊಟ್ಟೆಬಿಟ್ಟೆ ಅಂತ ಗೋಳಾಡುತ್ತಿದ್ದಾರೆ.

ಕೆ.ಜಿ.ಎಫ್. ಚಿತ್ರದ ಹಪ್ಪಳದ ಮಲ್ಲಮ್ಮನಾಗಿ ರೇಖಾಸಾಗರ್ ಕಥೆ

Add Asianetnews Kannada as a Preferred SourcegooglePreferred

ರಾಕಿಂಗ್ ಸ್ಟಾರ್ ಯಶ್-ಪ್ರಶಾಂತ್ ನೀಲ್ ಜೋಡಿಯ 'KGF 2' ಸಿನಿಮಾದಲ್ಲಿ ನಾಯಕಿ ಸೆಕೆ ಆಗ್ತಿದೆ ಅಂದಾಗ, ರಾಕಿಭಾಯ್ ಗಾಳಿ ಬಿಸೋಕೆ ಹೆಲಿಕಾಪ್ಟರ್ ತರಿಸೋ ಸೂಪರ್ ಸೀನ್ ನೆನಪಿದೆ ಅಲ್ವಾ..? ಅದ್ರಲ್ಲಿ ಹಪ್ಪಳದ ಮಲ್ಲಮ್ಮನಾಗಿ ಮಿಂಚಿದ್ದು ನಟಿ ರೇಖಾ ಸಾಗರ್. ಪುಟ್ಟ ಸೀನ್ ಆದ್ರೂ ಎಲ್ಲರ ನೆನಪಿನಲ್ಲಿ ಉಳಿದಿದ್ದಾರೆ ಹಪ್ಪಳದ ಮಲ್ಲಮ್ಮ . ಆದ್ರೆ ಈ ಹಪ್ಪಳದ ಮಲ್ಲಮ್ಮ ಈಗ ಚಿಂದಿ ಆಯ್ತಾ ಇದ್ದಾರೆ. ಪಾಪ, ಅವರ ಕಥೆ ನೋಡಿ ಏನಾಗಿದೆ ಅಂತ.. ಅರೇ ಚಿಂದಿ ಆಯುವಂಥದ್ದು ಏನಾಯ್ತು ಅಂತೀರಾ..? ಈ ಸ್ಟೋರಿ ನೋಡಿ..

ಹೌದು ರೇಖಾ ಸಾಗರ್ ಹೊಟ್ಟೆ ಪಾಡಿಗಾಗಿ ಚಿಂದಿ ಆಯುತ್ತಿದ್ದಾರೆ. ಒಂದು ನಿರ್ಗತಿಕ ಮಹಿಳೆಯ ಜೀವನದ ಕಥೆ ವ್ಯಥೆಯಾಗಿ ಬದಲಾಗಿದೆ. ರಸ್ತೆ ಬದಿಯಲ್ಲಿ ಚಿಂದಿ ಆಯುತ್ತ ಜೀವನ ಸಾಗಿಸುವ ಮಹಿಳೆಯೊಬ್ಬಳ ಜೀವನ, ತನ್ನ ಪುಟ್ಟ ಮಗನಿಗಾಗಿ ಆಕೆ ಪಡುವ ಕಷ್ಟ ಇದನ್ನೆಲ್ಲ ನೋಡಿದರೆ ಎಂಥವರಿಗೂ ಕರುಳು ಕಿತ್ತು ಬರುತ್ತೆ. ಇದು ಬರೀ ಅವರೊಬ್ಬರ ಬದುಕಲ್ಲ, ಹೊಟ್ಟೆ ಪಾಡಿಗಾಗಿ ಅವರನ್ನು ನಂಬಿರುವವರ ಬದುಕು, ಅವರ ಅಕ್ಕಪಕ್ಕದಲ್ಲಿರುವ ಕೆಲವರ ಬದುಕು ಕೂಡ. ಹಾಗಿದೆ ಅವರ ಬದುಕಿನ ಬವಣೆ!

ಈ ಕಥೆ ರಿಯಲ್ ಅಲ್ಲ, ರೀಲ್ ಸ್ಟೋರಿಯಾ?

ಆದರೆ ನಟಿ ರೇಖಾ ಅವರು ಈ ಕಥೆ ರಿಯಲ್ ಅಲ್ಲ, ರೀಲ್ ಸ್ಟೋರಿ.. ಈ ಸಿನಿಮಾದ ಹೆಸರು 'ಬೀದಿ ಬದುಕು'. ನಟಿ ರೇಖಾ ಸಾಗರ್ ಚಿತ್ರದ ನಾಯಕಿಯಾಗಿದ್ದು, ಜತೆಗೆ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕಿಯೂ ಆಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆದಿದೆ. ವೇದಿಕೆಯಲ್ಲಿ ನಟಿ ರೇಖಾಸಾಗರ್, ನಿರ್ದೇಶಕ ಪುರುಷೋತ್ತಮ್, ಗಣೇಶರಾವ್ ಕೇಸರಕರ್, ರಾಜ್ ಭಾಸ್ಕರ್, ಸಂಕಲನಕಾರ ಅನಿಲ್ , ಮಾ.ಸಾಕೇತ್, ಡಾ.ರೂಪೇಶ್ ಹಾಜರಿದ್ದರು.

ಸಾಕಷ್ಟು ಸೀರಿಯಲ್ ಅಲ್ಲದೆ ಕೆ.ಜಿ.ಎಫ್. ಚಿತ್ರದ ಹಪ್ಪಳದ ಮಲ್ಲಮ್ಮನಾಗಿ ರೇಖಾಸಾಗರ್ ಜನಪ್ರಿಯರಾದವರು. ಕುಡುಕ ಗಂಡನ ಉಪಟಳದ ಮಧ್ಯೆ ತನ್ನ ಮಗನಿಗಾಗಿ ಆಕೆ ಏನೆಲ್ಲ ಕಷ್ಟಪಡುತ್ತಾಳೆ ಎಂಬುದೇ ಈ ಚಿತ್ರದ ಕಥಾಹಂದರವಂತೆ. ನಿಜವಾದ ಸ್ಲಂ, ಗುಡಿಸಲುಗಳು, ಸ್ಮಶಾನ ಹಾಗೂ ಆಸ್ಪತ್ರೆಯಲ್ಲಿ ಹೀಗೆ ಎಲ್ಲಾ ರಿಯಲ್ ಲೊಕೇಶನ್ ಗಳಲ್ಲೇ‌ 25 ದಿನಗಳ ಕಾಲ ಚಿತ್ರೀಕರಿಸಲಾಗಿದೆ, ಅಲ್ಲದೆ ಇಡೀ ಚಿತ್ರವನ್ನು ಸಿಂಕ್ ಸೌಂಡ್ ನಲ್ಲಿ ಮಾಡಲಾಗಿದೆ.

ನಾಯಕಿ, ನಿರ್ಮಾಪಕಿ ರೇಖಾ ರಾಣಿ

ನಾಯಕಿ, ನಿರ್ಮಾಪಕಿ ರೇಖಾ ರಾಣಿ ಮಾತನಾಡುತ್ತ ಇಂಥ ಪಾತ್ರವನ್ನು ನಾನೇ ಮಾಡಬೇಕೆಂದು ಚಾಲೆಂಜ್ ಆಗಿ ತೆಗೆದುಕೊಂಡೆ‌. ಸ್ಲಂಗಳಿಗೆ ಹೋಗಿ ಅವರು ಹೇಗಿರುತ್ತಾರೆ ಎಂದು ತಿಳಿದುಕೊಂಡೆ. ಇರುವವರು ಇಲ್ಲವರಿಗೆ ಸಹಾಯ ಮಾಡಬೇಕು ಅನ್ನೋದೇ ನಮ್ಮ ಚಿತ್ರದ ಉದ್ದೇಶ. ಚಿತ್ರವೀಗ ಬಿಡುಗಡೆಗೆ ಸಿದ್ದವಿದ್ದು ಸದ್ಯದಲ್ಲೇ ರಿಲೀಸ್ ಮಾಡುತ್ತಿದ್ದೇವೆ ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ವಿವರಿಸಿದರು.

ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ರಾಜ್ ಭಾಸ್ಕರ್ ಅವರ ಸಂಗೀತ ಸಂಯೋಜನೆ, ಮುತ್ತುರಾಜ್ ಅವರ ಛಾಯಾಗ್ರಹಣ, ಅನಿಲ್ ಅವರ ವಿ.ಎಫ್.ಎಕ್ಸ್. ಹಾಗೂ ಸಂಕಲನವಿದೆ.