ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಹ ಸಂಚಾಲಕಿಯಾಗಿದ್ದ ಭವ್ಯಾ ನರಸಿಂಹಮೂರ್ತಿ, ಡೆಹ್ರಾಡೂನ್‌ನಲ್ಲಿ ಮಿಲಿಟರಿ ತರಬೇತಿ ಮುಗಿಸಿ ಲೆಫ್ಟಿನೆಂಟ್ ಆಗಿ ಭಾರತೀಯ ಪ್ರಾದೇಶಿಕ ಸೇನೆಗೆ ಸೇರ್ಪಡೆಗೊಂಡಿದ್ದಾರೆ. 2022ರ ಸಾಲಿನಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಮಹಿಳಾ ಅಧಿಕಾರಿ ಇವರಾಗಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಸಹ ಸಂಚಾಲಕಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಭವ್ಯಾ ನರಸಿಂಹಮೂರ್ತಿ ಅವರು ಕಳೆದ ಮೂರು ತಿಂಗಳು ಡೆಹ್ರಾಡೂನ್ ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿ ಕರ್ನಾಟಕಕ್ಕೆ ಹಿಂತಿರುಗಿದ್ದಾರೆ. ಭಾರತೀಯ ಸೇನೆಯ ಪ್ರಾದೇಶಿಕ ಸೇನಾಧಿಕಾರಿಯಾಗಿ ಆಯ್ಕೆಗೊಂಡು, ಲೆಫ್ಟಿನೆಂಟ್ ಶ್ರೇಣಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭವ್ಯಾ, ಅವರು ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

'ತರಬೇತಿ ಅತ್ಯಂತ ಕ್ಲಿಷ್ಟ ಹಾಗೂ ಕಠಿಣ ಎನಿಸಿದರೂ ಅವು ನನ್ನ ಜೀವನದ ಅಪೂರ್ವ ಕ್ಷಣಗಳೂ ಆಗಿದ್ದವು. ಈ ತರಬೇತಿ ನನ್ನ ದೈಹಿಕ ಸದೃಢತೆ ಹಾಗೂ ಮಾನಸಿಕ ನಿಶ್ಚಲತೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಭಾರತೀಯ ಸೇನಾಧಿಕಾರಿಯಾಗಿ ದೇಶ ಸೇವೆ ಮಾಡಲು ಹಾಗೂ ರಾಜಕಾರಣಿಯಾಗಿ ನನ್ನ ತಾಯ್ನಾಡಿನ ಸೇವೆ ಮಾಡಲು ಅಮೋಘ ಅವಕಾಶ ಕಲ್ಪಿಸಿದ ದೇವರಿಗೆ ನಾನು ಎಂದೆಂದಿಗೂ ಆಭಾರಿ' ಎಂದು ಭವ್ಯಾ ಹೇಳಿದ್ದಾರೆ. ಈ ಕುರಿತು ಅವರು ಕೆಲವೊಂದು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಅವರ ಕಠಿಣ ತರಬೇತಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. 

ದೇಶಸೇವೆ ಮಾಡಲು ಅವಕಾಶ

ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಪ್ರಾದೇಶಿಕ ಸೇನೆ ಆಸಕ್ತರಿಗೆ ಅವಕಾಶ ಮಾಡಿಕೊಡುತ್ತದೆ. ಅಂಥವರಲ್ಲಿ ಒಬ್ಬರು ಭವ್ಯಾ. 2022ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಎನ್ನುವ ಹೆಗ್ಗಳಿಕೆ ಇವರದ್ದು. ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್​ ಆಫೀಸರ್ ಆಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿಯೇ ಭವ್ಯಾ ನರಸಿಂಹಮೂರ್ತಿ ಅವರನ್ನು ಭಾರತ ಪಾಕಿಸ್ತಾನ ಗಡಿ (LOC) ಪ್ರದೇಶದಲ್ಲಿರುವ ಭಾರತೀಯ ಸೇನೆಯ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನೆಂಟ್ ಆಗಿ ನಿಯೋಜನೆ ಮಾಡಲಾಗಿದೆ ಕೂಡ.

ಹಲವು ಸೆಲೆಬ್ರಿಟಿಗಳಿಂದ ಕರ್ತವ್ಯ

ಇದಾಗಲೇ ಸಿನಿಮಾ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳು ಕೂಡ ಇದೇ ರೀತಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್​ ಅಗಿ, ಲೆಫ್ಟಿನೆಂಟ್​ ಕರ್ನಲ್​ ಆಗಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ನಟ ಮೋಹನ್‌ಲಾಲ್, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಕ್ರೀಡಾಪಟು ನೀರಜ್ ಚೋಪ್ರಾ, ಅಭಿನವ್ ಬಿಂದ್ರಾ, ಮಿಲ್ಖಾ ಸಿಂಗ್, ಕ್ರಿಕೆಟಿಗರಾದ ಎಂ.ಎಸ್ ಧೋನಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಮೋಹನ್ ಲಾಲ್ ವಿಶ್ವನಾಥ್ ನಾಯರ್, ರಾಜ್ಯವರ್ಧನ್ ಸಿಂಗ್ ರಾಥೋಡ್, ದೀಪಕ್ ರಾವ್ ಸೇರಿದಂತೆ ವಿವಿಧ ಗಣ್ಯರು ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬ್ರಾಹ್ಮಣಳಲ್ಲ ಎಂದಾಗ ಖುಷಿಪಟ್ರು, ದಲಿತಳಲ್ಲ ಎಂದಾಗ 'ಸಾರಿ' ಎಂದ್ರು: ಏನಾಗ್ತಿದೆ ಇಲ್ಲಿ? ಪ್ರಾದೇಶಿಕ ಸೇನಾಧಿಕಾರಿ ಭವ್ಯಾ ಮಾತು