ಗೌರಿ ಖಾನ್ ನಿರ್ಮಿಸಿರುವ ಈ ಶೋ ಹಾಸ್ಯ, ವ್ಯಂಗ್ಯ ಮತ್ತು ತೀವ್ರ ಸಮಾಜ ಸಂಬಂಧಿತ ಅಂಶಗಳ ಸಂಯೋಜನೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಆದರೆ ಸಮೀರ್ ವಾಂಖಡೆ ಅವರ ಅಸಮಾಧಾನದಿಂದ ಕಾನೂನು ಹೋರಾಟಕ್ಕೂ ದಾರಿ ಮಾಡಿಕೊಟ್ಟಿದೆ.

ಶಾರುಖ್ ಖಾನ್ (Shah Rulh Khan) ಮಗ ಆರ್ಯನ್ ಖಾನ್ (Aryan Khan) ನಿರ್ದೇಶನದಲ್ಲಿ ಬಿಡುಗಡೆಯಾದ ಮೊದಲ ವೆಬ್‌ಶೋ “ದಿ ಬ್ಯಾಡ್ಸ್ ಆಫ್ ಬಾಲಿವುಡ್” ಈಗ ಎಲ್ಲೆಡೆ ಸುದ್ದಿಯಾಗಿದೆ. ಈ (Bads of Bollywood) ಧಾರಾವಾಹಿ ಸೆಪ್ಟೆಂಬರ್ 18, 2025ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನಸೂರೆಗೊಂಡಿದೆ. ಕಥೆಯಲ್ಲಿರುವ ಹಲವು ದೃಶ್ಯಗಳು ವಾಸ್ತವ ಜೀವನ ಘಟನೆಯ ಜೊತೆ ಸಂಬಂಧ ಹೊಂದಿರುವಂತಿವೆ ಎಂಬ ಅಭಿಪ್ರಾಯ ಪ್ರೇಕ್ಷಕರಲ್ಲಿ ಮೂಡಿದೆ. ಅದರಲ್ಲಿಯೂ ವಿಶೇಷವಾಗಿ ಒಂದು ದೃಶ್ಯ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಈ ಶೋದಲ್ಲಿ ಒಂದು ಪಾರ್ಟಿ ಸನ್ನಿವೇಶದಲ್ಲಿ ಎನ್‌ಸಿಬಿ (ಮಾದಕ ವಸ್ತು ನಿಯಂತ್ರಣ ಇಲಾಖೆ) ಅಧಿಕಾರಿಯ ಪಾತ್ರವನ್ನು ತೋರಿಸಲಾಗುತ್ತದೆ. ಈ ಪಾತ್ರ ಜನಸಾಮಾನ್ಯರಿಗೆ ಆರ್ಯನ್ ಖಾನ್ ಅವರನ್ನು 2021ರಲ್ಲಿ ಮಾದಕ ವಸ್ತು ಪ್ರಕರಣದಲ್ಲಿ ಬಂಧಿಸಿದ್ದ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖಡೆ ಅವರನ್ನು ನೆನಪಿಸಿತು. ಪರಿಣಾಮವಾಗಿ, ಈ ದೃಶ್ಯವು ಪರೋಕ್ಷವಾಗಿ ವಾಂಖಡೆ ವಿರುದ್ಧ ವ್ಯಂಗ್ಯವಾಯಿತೇ ಎಂಬ ಅನುಮಾನ ವ್ಯಕ್ತವಾಯಿತು. ವಿಷಯ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದ್ದಂತೆಯೇ ಸಮೀರ್ ವಾಂಖಡೆ ಸ್ವತಃ ಶೋ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ಈ ಪಾತ್ರದಲ್ಲಿ ನಟಿಸಿರುವವರು ಆಶಿಷ್ ಕುಮಾರ್. ಅವರಿಗೆ ಈಗ ಅನಿರೀಕ್ಷಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ಲಭಿಸುತ್ತಿದೆ. ಇತ್ತೀಚೆಗೆ ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದ ಆಶಿಷ್ ಅವರ ಪೋಸ್ಟ್‌ಗೆ ಪ್ರೇಕ್ಷಕರು ಹಾಸ್ಯಾಸ್ಪದ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಬ್ಬ ಅಭಿಮಾನಿ “ಭಾಯಿ, ವೋ ದೂಂಢ್ ರಹಾ ಹೈ (ಅವನು ನಿನ್ನನ್ನು ಹುಡುಕುತ್ತಿದ್ದಾನೆ)” ಎಂದು ಬರೆದಿದ್ದಕ್ಕೆ ಆಶಿಷ್, “ಕೌನ್?” ಎಂದು ಉತ್ತರಿಸಿದರು. ಆಗ ಆ ಅಭಿಮಾನಿ “ಸಮೀರ್, ಜಿಸ್ಕಾ ರೋಲ್ ಕಿಯಾ (ಸಮೀರ್, ಯಾರ ಪಾತ್ರ ಮಾಡಿದ್ದೆ)” ಎಂದು ಹೇಳಿದರು. ಆಶಿಷ್ ಅದಕ್ಕೆ ನಗುಮೊಕದ ಚಿಹ್ನೆಯನ್ನು ಹಾಕಿ ಪ್ರತಿಕ್ರಿಯಿಸಿದರು.

ಇನ್ನೊಬ್ಬ ಅಭಿಮಾನಿ “ಸಮೀರ್ ವಾಂಖಡೆ ಕೀ ಫೀಲ್ಡಿಂಗ್ ಸೆಟ್ ಕರ್ದೀ (ಸಮೀರ್ ವಾಂಖಡೆಗೆ ನೀನು ಚೆನ್ನಾಗಿ ಹೊಡೆದೆಯಲ್ಲಾ)” ಎಂದು ಬರೆದಿದ್ದಕ್ಕೆ ಆಶಿಷ್ ವಿನಯದಿಂದ “ಗಾಡ್ ಬ್ಲೆಸ್ ಎವ್ರಿವನ್ ಬ್ರೋ, ಐ ಜಸ್ಟ್ ಡಿಡ್ ಮೈ ಜಾಬ್” ಎಂದರು. ಅವರ ಈ ಸರಳ ಉತ್ತರ ಅಭಿಮಾನಿಗಳನ್ನು ಇನ್ನಷ್ಟು ಮೆಚ್ಚಿಸಿತು.

ದಿಗ್ಗಜರು ವಿಶೇಷ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ!

ಧಾರಾವಾಹಿಯ ಹಿರಿಯ ಕಲಾವಿದರ ಪೈಕಿ ಬಾಬಿ ದಿಯೋಲ್, ಸಹರ್ ಬಂಬಾ, ಲಕ್ಷ್ಯ, ರಾಘವ ಜುವಾಲ್, ಅನ್ಯಾ ಸಿಂಗ್, ಮನೋಜ್ ಪಾಹವಾ, ಮೋನಾ ಸಿಂಗ್, ರಾಜತ್ ಬೇಡಿ ಮತ್ತು ಮನೀಶ್ ಚೌಧರಿ ಮೊದಲಾದವರು ನಟಿಸಿದ್ದಾರೆ. ಜೊತೆಗೆ ಸಲ್ಮಾನ್ ಖಾನ್, ಆಮಿರ್ ಖಾನ್, ರಣಬೀರ್ ಕಪೂರ್, ರಣವೀರ್ ಸಿಂಗ್, ಇಮ್ರಾನ್ ಹಶ್ಮಿ ಮುಂತಾದ ದಿಗ್ಗಜರು ವಿಶೇಷ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಗೌರಿ ಖಾನ್ ನಿರ್ಮಿಸಿರುವ ಈ ಶೋ ಹಾಸ್ಯ, ವ್ಯಂಗ್ಯದ ಹೂರಣ!

ಗೌರಿ ಖಾನ್ ನಿರ್ಮಿಸಿರುವ ಈ ಶೋ ಹಾಸ್ಯ, ವ್ಯಂಗ್ಯ ಮತ್ತು ತೀವ್ರ ಸಮಾಜ ಸಂಬಂಧಿತ ಅಂಶಗಳ ಸಂಯೋಜನೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಆದರೆ ಸಮೀರ್ ವಾಂಖಡೆ ಅವರ ಅಸಮಾಧಾನದಿಂದ ಕಾನೂನು ಹೋರಾಟಕ್ಕೂ ದಾರಿ ಮಾಡಿಕೊಟ್ಟಿದೆ. ನಟ ಆಶಿಷ್ ಕುಮಾರ್ ತಮ್ಮ ಪಾತ್ರವನ್ನು ಕೇವಲ ನಟನೆಯೆಂದು ವಿವರಿಸಿದರೂ, ಜನತೆ ಅವರ ಅಭಿನಯವನ್ನು ವಾಸ್ತವ ಘಟನೆಗಳ ಪಾರ್ಶ್ವದಲ್ಲಿ ಕಟ್ಟಿಕೊಂಡು ಚರ್ಚಿಸುತ್ತಿದ್ದಾರೆ.