ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿಗಾಗಿ ಹಂಬಲಿಸಿದ್ದು ಇದಕ್ಕಾ?

By Suvarna NewsFirst Published Mar 7, 2020, 3:24 PM IST
Highlights

ಇತ್ತೀಚೆಗೆ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಕುಂದ್ರಾ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಗಂಡು ಮಗುವಿದ್ದರೂ ಅನೇಕ ವರ್ಷಗಳಿಂದ ಹೆಣ್ಣು ಮಗುವಿಗಾಗಿ ಹಂಬಲಿಸುತ್ತಿದ್ದೆ ಎಂಬ ಶಿಲ್ಪಾ ಶೆಟ್ಟಿ ಹೇಳಿಕೆ ಹಿಂದೆ ಕರಾವಳಿಯ ಅಳಿಯಕಟ್ಟು ಸಂಸ್ಕøತಿಯ ಛಾಯೆ ಎದ್ದು ಕಾಣುತ್ತಿದೆ. 

ಬಾಲಿವುಡ್ ನಟಿ, ಕರಾವಳಿ ಬಂಟರ ಸಮುದಾಯಕ್ಕೆ ಸೇರಿದ ಶಿಲ್ಪಾ ಶೆಟ್ಟಿ ಕುಂದ್ರಾ ಇತ್ತೀಚೆಗೆ ಬಾಡಿಗೆ ತಾಯಿ ಮೂಲಕ ಹೆಣ್ಣುಮಗುವಿಗೆ ಅಮ್ಮನಾಗಿದ್ದಾರೆ. ಒಂದು ಗಂಡು ಮಗುವಿದ್ದರೂ ಅನೇಕ ವರ್ಷಗಳಿಂದ ಹೆಣ್ಣು ಮಗುವಿಗಾಗಿ ಹಂಬಲಿಸುತ್ತಿದ್ದೆ ಎಂದು ಶಿಲ್ಪಾ ಶೆಟ್ಟಿ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅವರ ಈ ಮಾತಿನ ಹಿಂದೆ ಅಳಿಯಕಟ್ಟು ಸಂತಾನದ ಛಾಯೆ ಕಾಣಿಸುತ್ತಿದೆ. ಕರ್ನಾಟಕ ಕರಾವಳಿಯ ಅನೇಕ ಸಮುದಾಯಗಳು ಅಳಿಯಕಟ್ಟು ಸಂಸ್ಕøತಿಯನ್ನು ಅನುಸರಿಸುತ್ತಿದ್ದು, ಇಲ್ಲಿ ಹೆಣ್ಣೇ ವಂಶ ಉದ್ಧರಿಸುವ ಕುಡಿ ಎಂಬುದು ವಿಶೇಷ. 

ಮಹಿಳಾ ದಿನ: ನನ್ನ ದಿನ ನನ್ನ ಹೆಮ್ಮೆ ಎಂದು ಬೀಗುತ್ತಿದ್ದಾರೆ ನಟಿಮಣಿಯರು!

ಹೆಣ್ಣು ಮಗುವಿಗಾಗಿ ಹರಕೆ ಕಟ್ಟಿಕೊಳ್ಳುತ್ತಾರೆ
ಮದುವೆಯಾದ ಹೊಸತರಲ್ಲಿ ಕಾಲಿಗೆರಗುವ ಹೆಣ್ಣಿಗೆ ‘ಪುತ್ರ ಪ್ರಾಪ್ತಿ ರಸ್ತು’ ಎಂದು ಹಿರಿಯರು ಆಶೀರ್ವಾದ ಮಾಡೋದು ಕಾಮನ್. ಅಂದ್ರೆ ಗಂಡು ಹುಟ್ಟಿದ್ರೆ ಮಾತ್ರ ವಂಶ ಬೆಳೆಯುತ್ತೆ ಎನ್ನುವುದು ಬಹುತೇಕ ಎಲ್ಲ ಸಮುದಾಯಗಳ ಜನರು ನಂಬಿಕೊಂಡು, ಆಚರಿಸಿಕೊಂಡು ಬಂದಿರುವ ಪದ್ಧತಿ. ಗರ್ಭಿಣಿ ಎನ್ನುವುದು ತಿಳಿಯುತ್ತಿದ್ದಂತೆಯೇ ಗಂಡು ಮಗುವೇ ಹುಟ್ಟಲಿ ಎಂದು ಧರ್ಮಸ್ಥಳದ ಮಂಜುನಾಥನಿಂದ ಹಿಡಿದು ತಿರುಪತಿ ತಿಮ್ಮಪ್ಪನ ತನಕ ಹರಕೆ ಕಟ್ಟಿಕೊಳ್ಳುವ ಕಾರ್ಯವನ್ನು ಮನೆಯ ಹಿರಿಯರು ಮಾಡುತ್ತಾರೆ. ಆದ್ರೆ ಹೆಣ್ಣುಮಗುವಿಗಾಗಿ ಹರಕೆ ಕಟ್ಟಿಕೊಳ್ಳುವುದನ್ನು ಎಲ್ಲಾದ್ರು ಕೇಳಿದ್ದೀರಾ? ಇಂಥ ಪದ್ಧತಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಇಲ್ಲಿನ ಕೆಲವು ಸಮುದಾಯಗಳಲ್ಲಿ ಹೆಣ್ಣು ಮಗುವಿಗಾಗಿ ದೇವರಿಗೆ ನಾನಾ ರೀತಿಯ ಹರಕೆ ಕಟ್ಟಿಕೊಳ್ಳುತ್ತಾರೆ. 

ಹೆಣ್ಣು ಹುಟ್ಟಿದರೆ ಹಬ್ಬ 
ಹೆಣ್ಣು ಮಗು ಹುಟ್ಟಿದ ತಕ್ಷಣ ಮುಖ ಸೊಟ್ಟಗೆ ಮಾಡಿಕೊಳ್ಳುವ, ಹೊಟ್ಟೆಯಲ್ಲಿರುವ ಮಗು ಯಾವುದೆಂದು ತಿಳಿದು, ಹೆಣ್ಣಾಗಿದ್ರೆ ಭೂಮಿಗೆ ಬರುವ ಮುನ್ನವೇ ಕತ್ತು ಹಿಸುಕಲು ಯೋಚಿಸುವ ಜನರು ಸಮಾಜದಲ್ಲಿ ಇಂದಿಗೂ ಇದ್ದಾರೆ. ಆದ್ರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಬಂಟ್ಸ್, ಬಿಲ್ಲವ, ಮೊಗವೀರ ಸೇರಿದಂತೆ ಕೆಲವು ಸಮುದಾಯಗಳಲ್ಲಿ ಹೆಣ್ಣು ಮಗು ಹುಟ್ಟಿದ್ರೆ ಮನೆಮಂದಿಯೆಲ್ಲ ಸಂಭ್ರಮಿಸುತ್ತಾರೆ. ವಂಶ ಬೆಳಗುವ ದೇವತೆ ಬಂದಳೆಂದು ಹಿರಿ ಹಿರಿ ಹಿಗ್ಗುತ್ತಾರೆ.

ಫಸ್ಟ್ ಕಾಂಡೋಮ್ ಧರಿಸಿದ್ದು ಹೆಣ್ಣು! ಆಕೆ ಧರಿಸಿದ ಕಾಂಡೋಮ್ ಹೇಗಿತ್ತು ಗೊತ್ತಾ?

ವಂಶೋದ್ಧಾರಕನ್ನಲ್ಲ, ವಂಶೋದ್ಧಾರಕಿ
ಈ ಸಮುದಾಯಗಳಲ್ಲಿ ವಂಶವನ್ನು ಮುಂದುವರಿಸಿಕೊಂಡು ಹೋಗೋದು ಮಗನಲ್ಲ, ಮಗಳು. ಇದೇನಿದು ಎಂದು ಕನ್‍ಫ್ಯೂಸ್ ಆಗ್ಬೇಡಿ. ಸಿಂಪಲಾಗಿ ಹೇಳೋದಾದ್ರೆ ಮಗ ಮನೆಯ ವಾರಸುದಾರ. ಆತನಿಗೆ ಹುಟ್ಟುವ ಮಕ್ಕಳೇ ಆ ಮನೆಯ ಹಕ್ಕುದಾರರು ಎಂಬುದು ಎಲ್ಲೆಡೆ ಇರುವ ವಾಡಿಕೆ. ಆದ್ರೆ ಇಲ್ಲಿ ಹಾಗಲ್ಲ, ಮಗಳೇ ಮನೆಯ ಸಂಪೂರ್ಣ ಹಕ್ಕುದಾರಳು. ಆಕೆಗೆ ಹುಟ್ಟುವ ಮಕ್ಕಳೇ ಆ ವಂಶದ ಕುಡಿಗಳು. ಮಗನ ಮಕ್ಕಳು ಈ ಮನೆಯ ವಾರಸುದಾರರಲ್ಲ. ಇದಕ್ಕೆ ಅಳಿಯಕಟ್ಟು ಸಂಪ್ರದಾಯ ಎನ್ನುತ್ತಾರೆ. ಮನೆಯ ಮಗ ಕೂಡ ತನ್ನ ಮಕ್ಕಳಿಗಿಂತ ತನ್ನ ಸಹೋದರಿಯರ ಮಕ್ಕಳಿಗೆ ಹೆಚ್ಚಿನ ಮಹತ್ವ ನೀಡುತ್ತಾನೆ. 

ಕೊಟ್ಟ ಹೆಣ್ಣು ಕುಲಕ್ಕೆ ಹೊರಗಲ್ಲ
ಮದುವೆ ಮಾಡಿಕೊಟ್ಟ ಬಳಿಕ ಹೆಣ್ಣಿಗೆ ತವರುಮನೆಯಲ್ಲಿ ಯಾವುದೇ ಅಧಿಕಾರವಿರುವುದಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಮಾತೇ ಇದೆ. ಅಂದ್ರೆ ಮದುವೆ ಬಳಿಕ ಹೆಣ್ಣಿಗೆ ಗಂಡನ ಮನೆಯೇ ತನ್ನ ಮನೆ. ಆದ್ರೆ ಈ ಸಮುದಾಯಗಳಲ್ಲಿ ಬೇರೆಯದೇ ಕಥೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗಲ್ಲ, ಮದುವೆಯಾದ ಬಳಿಕವೂ ಹೆಣ್ಣಿಗೆ ತವರುಮನೆ ಮೇಲೆ ಸಂಪೂರ್ಣ ಅಧಿಕಾರವಿದೆ. ಆಕೆಯೇ ತವರುಮನೆಯ ಯಜಮಾನಿ.

ಸುಧಾಮೂರ್ತಿ ಸೊಸೆ ಬಗ್ಗೆ ಹೇಳೋ ಮಾತು ಏನ್‌ ಗೊತ್ತಾ?

ಗಂಡೇ ಹೆಂಡ್ತಿ ಮನೆಗೆ ಬರ್ತಾನೆ
ಈ ಸಮುದಾಯಗಳಲ್ಲಿ ಮದುವೆಯಾದ ಬಳಿಕ ಹೆಣ್ಣು ತವರುಮನೆಯಲ್ಲೇ ನೆಲೆಸಬಹುದು. ವಿಶೇಷ ಅಂದ್ರೆ ಬೇರೆಲ್ಲ ಸಮುದಾಯಗಳಲ್ಲಿ ಹೆಣ್ಣು ಗಂಡನ ಮನೆಗೆ ಹೋದ್ರೆ ಇಲ್ಲಿ ಅದರ ಉಲ್ಟಾ. ಅಂದ್ರೆ ಗಂಡನೇ ಹೆಂಡ್ತಿ ಮನೆಗೆ ಬರುತ್ತಾನೆ. ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ರೂ ಸಂಪೂರ್ಣ ಬದಲಾಗಿಲ್ಲ.ಈ ಸಮುದಾಯಗಳಲ್ಲಿ ಮನೆಯಲ್ಲಿ ನಡೆಯುವ ಪೂಜೆ, ಪುನಸ್ಕಾರ, ಭೂತಾರಾಧನೆ ಮುಂತಾದ ಕಾರ್ಯಕ್ರಮಗಳಿಗೆ ಹೆಣ್ಣುಮಕ್ಕಳು ಕಡ್ಡಾಯವಾಗಿ ಇರಲೇಬೇಕು.ಇಂದಿಗೂ ಈ ಭಾಗದಲ್ಲಿ ಪುರುಷರು ಹೆಂಡತಿ ಮನೆಯಲ್ಲೇ ನೆಲೆಸಿ, ಅಲ್ಲಿನ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ನೋಡ್ಬಹುದು.

ಹೆಣ್ಣು ಹುಟ್ಟದಿದ್ರೆ ಸಂತತಿ ಅಳಿವು
ಹೆಣ್ಣು ಹುಟ್ಟದಿದ್ರೆ ಆ ವಂಶ ಅಥವಾ ಸಂತತಿ ಅಲ್ಲಿಗೆ ಕೊನೆಯಾಗುತ್ತದೆ ಎಂಬ ನಂಬಿಕೆಯಿರುವ ಹಿನ್ನೆಲೆಯಲ್ಲಿ ಈ ಸಮುದಾಯಗಳಲ್ಲಿ ಪ್ರತಿಯೊಬ್ಬರೂ ಹೆಣ್ಣುಮಗುವಿಗಾಗಿ ಹಂಬಲಿಸುತ್ತಾರೆ. ಅದರಲ್ಲೂ ಮೊದಲ ಮಗು ಹೆಣ್ಣೇ ಆಗಿರಲಿ ಎಂದು ಬಯಸುತ್ತಾರೆ. ಒಂದು ವೇಳೆ ಮೊದಲ ಮಗು ಗಂಡಾದ್ರೆ ಬಹುತೇಕರು ಎರಡನೆಯ ಮಗುವಿಗೆ ಪ್ರಯತ್ನಿಸದೆ ಇರುವುದಿಲ್ಲ. ಅಷ್ಟೇ ಅಲ್ಲ, ಎರಡನೇ ಮಗು ಹೆಣ್ಣೇ ಆಗಲಿ ಎಂದು ಕಂಡ ಕಂಡ ದೇವರಿಗೆ ಮೊರೆಯಿಡುತ್ತಾರೆ. ಬಹುಶಃ ಶಿಲ್ಪಾ ಶೆಟ್ಟಿ ಕೂಡ ತನ್ನ ವಂಶ ಬೆಳಗುವ ವಂಶೋದ್ಧಾರಕಿಗಾಗಿ ಕನವರಿಸುತ್ತಿದ್ದರೇನು, ಅದಕ್ಕಾಗಿಯೇ ಸರೋಗಸಿ ಮೊರೆ ಹೋಗುವ ಮೂಲಕ ಈಗ ವಂಶ ಬೆಳಗುವ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.

click me!