ಶ್ರೀನಿವಾಸ್‌ ಪೂಜಾರಿಗೆ ಕೈ ಕಾರ್ಯಕರ್ತರಿಂದ ಶುಭಾಶಯ! ಬ್ಯಾನರ್ ಫೋಟೋ ವೈರಲ್

Aug 5, 2021, 6:23 PM IST

ಉಡುಪಿ (ಆ.05):  ಪ್ರಸಕ್ತ ರಾಜಕಾರಣದಲ್ಲಿ ಇಂತಹ ವಿದ್ಯಮಾನಗಳು ಅಪರೂಪ ಎನ್ನಬಹುದು. ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೋಟ ಶ್ರೀನಿವಾಸ ಪೂಜಾರಿಗೆ ಸ್ವಂತ ಪಕ್ಷ ಮಾತ್ರವಲ್ಲ, ವಿರೋಧ ಪಕ್ಷಗಳಲ್ಲೂ ಅಭಿಮಾನಿಗಳಿದ್ದಾರೆ ಅನ್ನೋದಕ್ಕೆ ಈ ಫೊಟೋ ಸಾಕ್ಷಿ. 

ಕುಂದಾಪುರ ತಾಲೂಕಿನ ಶೇಡಿಮನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಕೋಟ ಶ್ರೀನಿವಾಸ ಪೂಜಾರಿಗೆ ಶುಭಾಶಯ ಕೋರಿ ಬ್ಯಾನರ್ ಹಾಕಿದ್ದಾನೆ. ಅದರಲ್ಲೂ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಕಾರ್ಯಕರ್ತ ಎಂದು ಈ ಬ್ಯಾನರ್ ನಲ್ಲಿ ನಮೂದಿಸಲಾಗಿದೆ. ಸದ್ಯ ಈ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಇತ್ತ ಕೋಟ ಶ್ರೀನಿವಾಸ್ ಪೂಜಾರಿ ಪ್ರಮಾಣವಚನ, ಅತ್ತ ಮನೆಯಲ್ಲಿ ಪತ್ನಿ ಭಾವುಕ

ಎಷ್ಟೇ ಕಚ್ಚಾಡಿದರೂ ರಾಜಕೀಯ ನಾಯಕರೆಲ್ಲಾ ಮುಖಾಮುಖಿಯಾದರೆ ಉಭಯ ಕುಶಲೋಪರಿ ಮಾತನಾಡಿಕೊಂಡು ಖುಷಿ ಪಡೋದನ್ನು ನೋಡಿದ್ದೇವೆ, ಆದರೆ ಕಾರ್ಯಕರ್ತರು ಮಾತ್ರ ಕಚ್ಚಾಡಿಕೊಂಡೇ ಇರ್ತಾರೆ. ಕೋಟ ಶ್ರೀನಿವಾಸರ ವಿಚಾರದಲ್ಲಿ ಮಾತ್ರ ಹಾಗಲ್ಲ, ಅನ್ಯ ಪಕ್ಷಗಳ ಕಾರ್ಯಕರ್ತರೂ ಬಹಿರಂಗವಾಗಿ ಅಭಿಮಾನ ತೋರಿಸುತ್ತಿರುವುದು ಎಲ್ಲರ ಗಮನಸೆಳೆದಿದೆ.