ಬಿಜೆಪಿ ಮಹತ್ವದ ಸಭೆಗೆ ಚಕ್ಕರ್‌: ಕಾಂಗ್ರೆಸ್‌ ಸಚಿವರ ಜೊತೆ ರೇಣುಕಾಚಾರ್ಯ ಹಾಜರ್!

Aug 31, 2023, 8:43 PM IST

ಬೆಂಗಳೂರು (ಆ.31): ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸ್ವಪಕ್ಷದ ವಿರುದ್ಧ ಕಿಡಿಕಾರುತ್ತಿರುವ ಮಾಜಿ ಶಾಸಕ ರೇಣುಕಾಚಾರ್ಯ ಅವರು ಬೆಂಗಳೂರಿನಲ್ಲಿ ಇದ್ದರೂ ಸಹ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪಕ್ಷದ ಸಭೆಗೆ ಗೈರು ಹಾಜರಿ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಚುನಾವಣೆಯಲ್ಲಿ ಸೋಲುಂಡ ಬಳಿಕ ನಿರಂತರವಾಗಿ ಪಕ್ಷದ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರೇಣುಕಾಚಾರ್ಯ ಅವರು ಬಿಜೆಪಿ ಸಭೆಗೆ ಗೈರಾಗಿ, ಇದೇ ಸಮಯದಲ್ಲಿ ಕಾಂಗ್ರೆಸ್​ ಸಚಿವರನ್ನು ಭೇಟಿ ಮಾಡಿ ಸಭೆ ನಡೆಸಿದ್ದಾರೆ. ಇಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಈ ವೇಳೆ ನ್ಯಾಮತಿಯನ್ನು ಬರಗಾಲ ಪೀಡಿತ ತಾಲೂಕಿಗೆ ಸೇರಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ತಮ್ಮ ಕ್ಷೇತ್ರದ ಕಡೆ ಗಮನ ಕೊಟ್ಟ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸಭೆಗೆ ಗೈರಾಗಿರುವುದು ಭಾರೀ ಕುತೂಹಲ ಮೂಡಿಸಿದೆ. ಇಂದು ಬಿಜೆಪಿ ಕಚೇರಿಯಲ್ಲಿ ಬಿಎಲ್​ ಸಂತೋಷ್ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿತ್ತು. ಆದರೆ ಈ ಸಭೆಗೆ ರೇಣುಕಾಚಾರ್ಯ, ಶಾಸಕ ಎಸ್​ಟಿ ಸೋಮಶೇಖರ್​, ಶಿವರಾಮ್ ಹೆಬ್ಬಾರ್, ವಿ ಸೋಮಣ್ಣ, ಶಂಕರ್ ಪಾಟೀಲ್ ಮುನೇನಕೊಪ್ಪ ಗೈರು ಹಾಜರಾಗಿದ್ದರು.