ಘಟಪ್ರಭಾ ರೈಲ್ವೇ ನಿಲ್ದಾಣದಿಂದ ಮಂತ್ರಾಲಯದವರೆಗೆ ರೈಲು ಮಾರ್ಗ ನಿರ್ಮಾಣಕ್ಕೆ ಬಂಡಾಯ

By Suvarna NewsFirst Published Jul 2, 2024, 3:58 PM IST
Highlights

ಘಟಪ್ರಭಾದಿಂದ ಮಂತ್ರಾಲಯದ ವರೆಗೆ ನರಗುಂದ ಮಾರ್ಗವಾಗಿ ರೈಲು ಮಾರ್ಗ ನಿರ್ಮಿಸಬೇಕು ಎಂಬ ಬೇಡಿಕೆ ಇಟ್ಟು ಹೋರಾಟಕ್ಕೆ ಬಂಡಾಯ ನೆಲದ ಹೋರಾಟಗಾರರು ಸಜ್ಜಾಗುತ್ತಿದ್ದಾರೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಘಟಪ್ರಭಾದಿಂದ ಮಂತ್ರಾಲಯದ ವರೆಗೆ ನರಗುಂದ ಮಾರ್ಗವಾಗಿ ರೈಲು ಮಾರ್ಗ ನಿರ್ಮಿಸಬೇಕು ಎಂಬ ಬೇಡಿಕೆ ಇಟ್ಟು ಹೋರಾಟಕ್ಕೆ ಬಂಡಾಯ ನೆಲದ ಹೋರಾಟಗಾರರು ಸಜ್ಜಾಗುತ್ತಿದ್ದಾರೆ.

ಜು. 2ರಂದು ಪಟ್ಟಣದ ಪಂಚಗೃಹ ಹಿರೇಮಠದಲ್ಲಿ ಸಭೆ ಕರೆಯಲಾಗಿದೆ. ಈ ಭಾಗದ ಮಠಾಧೀಶರು, ರೈತರು, ಕನ್ನಡಪರ ಹೋರಾಟಗಾರರು, ವ್ಯಾಪಾರಸ್ಥರ, ಸಾಹಿತಿಗಳು ಭಾಗವಹಿಸಲಿದ್ದು, ಹೋರಾಟಕ್ಕೆ ನಾಂದಿ ಹಾಡಲಿದ್ದಾರೆ.

ನರಗುಂದ ತಾಲೂಕವು ಆರ್ಥಿಕ, ಶೈಕ್ಷಣಿಕವಾಗಿ ಅತಿ ವೇಗದಲ್ಲಿ ಬೆಳೆಯುತ್ತಿದೆ. ಈ ರೈಲು ಮಾರ್ಗ ನಿರ್ಮಾಣವಾದರೆ ಇನ್ನೂ ವೇಗವಾಗಿ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂಬುದು ಈ ಭಾಗದ ಜನರ ಆಶಯ.

ಮಾಜಿ ಸಂಸದೆ ಸುಮಲತಾ ವಿರೋಧಿಸಿದ್ದ ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಡಳಿತ ಸಿದ್ಧತೆ!

ಮಾರ್ಗದ ವಿವರ: ಘಟಪ್ರಭಾದಿಂದ ಮಂತ್ರಾಲಯ ವರೆಗೆ 350 ಕಿಮೀ ಹೊಸ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎಂಬುದು ಹೋರಾಟಗಾರರ ಬೇಡಿಕೆ. ಈ ಮಾರ್ಗದಲ್ಲಿ ಬರುವ ನರಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ, ರಾಯಚೂರು, ಮುನವಳ್ಳಿ, ಸವದತ್ತಿ, ಗೊಡಚಿ, ಗೋಕಾಕ ಈ ಪ್ರದೇಶಗಳಿಗೆ ಅನುಕೂಲವಾಗಲಿದೆ.

600 ಎಕರೆ ಜಮೀನು: 1 ಕಿಮೀ ರೈಲ್ವೆ ಹಳಿ ಸ್ಥಾಪನೆ ಆಗಬೇಕಾದರೆ 10 ಎಕರೆ ಜಮೀನು ಬೇಕಾಗುತ್ತದೆ. ಈ ಮಾರ್ಗದಲ್ಲಿ ಒಂದು ರೈಲ್ವೆ ನಿಲ್ದಾಣ ಸ್ಥಾಪನೆಗೆ 20 ಎಕರೆ ಜಮೀನು ಮೀಸಲಿಡಬೇಕು. ಘಟಪ್ರಭಾದಿಂದ ಮಂತ್ರಾಲಯದ ವರೆಗೆ ಈ ಮಾರ್ಗ ನಿರ್ಮಾಣ ಆಗಬೇಕೆಂದರೆ 500ರಿಂದ 600 ಎಕರೆ ಜಮೀನು ಬೇಕು. ಅದೇ ರೀತಿ 1 ಕಿಮೀ ರೈಲ್ವೆ ಹಳಿ ಹಾಕಲು ₹15 ಕೋಟಿ ಬೇಕು. ಒಟ್ಟು 350 ಕಿಮೀ ಮಾರ್ಗದ ಯೋಜನೆಗೆ ₹5250 ಕೋಟಿ ವೆಚ್ಚವಾಗುತ್ತದೆ.

ವಿಜಯಪುರದಲ್ಲಿ ಒಂಟಿ ಎತ್ತು ದಾಖಲೆಯ ಮಾರಾಟ, 18 ಲಕ್ಷ 1 ಸಾವಿರಕ್ಕೆ ಸೋಲ್ಡ್‌!

ಹೊಸ ರೈಲ್ವೆ ಮಾರ್ಗ ಮಾಡಿದರೆ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಅನುಕೂಲವಾಗುವುದು. ಈ ಭಾಗದಲ್ಲಿ ಬರುವ ಎಲ್ಲ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಈ ಯೋಜನೆ ಜಾರಿ ಮಾಡಿಸಬೇಕು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳುತ್ತಾರೆ.

ಈ ಭಾಗದಲ್ಲಿ ಸುಪ್ರಸಿದ್ಧ ದೇವಸ್ಥಾನಗಳಾದ ಯಲ್ಲಯ್ಮನಗುಡ್ಡ, ಗೊಡಚಿ ಶ್ರೀ ವೀರಭದ್ರೇಶ್ವರ, ರೋಣ ತಾಲೂಕಿನ ಇಟಗಿ ಶ್ರೀ ಭೀಮಾಂಬಿಕಾ ದೇವಸ್ಥಾನಗಳಿಗೆ ಹೋಗಲು ಭಕ್ತರಿಗೆ ಈ ರೈಲು ಮಾರ್ಗದಿಂದ ಅನುಕೂಲವಾಗಲಿದೆ. ಸದ್ಯ ಈ ಭಾಗ ಹಿಂದುಳಿದ ಪ್ರದೇಶವಾಗಿದೆ. ರೈಲ್ವೆ ಮಾರ್ಗವಾದರೆ ಸಾಕಷ್ಟು ಅಭಿವೃದ್ಧಿಯಾಗಲು ಸಾಧ್ಯ. ಆದ್ದರಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿ ಮಾಡಬೇಕು ಎಂದು ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ ಹೇಳುತ್ತಾರೆ.

click me!