ಕೇರಳದ ಮೊದಲ ವಂದೇಭಾರತ್‌ ರೈಲು ಕಾಸರಗೋಡಿಗೂ ವಿಸ್ತರಣೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ

By Kannadaprabha NewsFirst Published Apr 19, 2023, 10:28 AM IST
Highlights

ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಕೇರಳದ ಕಾಸರಗೋಡಿಗೆ ವಿಸ್ತರಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಆರಂಭದಲ್ಲಿ ಈ ಸೇವೆಯನ್ನು ಕಣ್ಣೂರಿನಲ್ಲಿ ಕೊನೆಗೊಳಿಸಲು ನಿರ್ಧರಿಸಲಾಗಿತ್ತು. ಕೇಂದ್ರ ಸಚಿವ ವಿ ಮುರಳೀಧರನ್ ಅವರ ಮನವಿಯ ಮೇರೆಗೆ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೇ ಸಚಿವರು ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ: ತಿರುವನಂತಪುರ ಮತ್ತು ಕಣ್ಣೂರು ನಡುವೆ ಸಂಚರಿಸಲಿರುವ ಕೇರಳದ ಮೊದಲ ವಂದೇ ಭಾರತ್‌ ರೈಲನ್ನು ಕಾಸರಗೋಡಿನವರೆಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಮಂಗಳವಾರ ಹೇಳಿದ್ದಾರೆ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಏ.25ರಂದು ಚಾಲನೆ ನೀಡಲಿದ್ದು, ಕೇಂದ್ರ ಸಚಿವ ವಿ.ಮುರಳೀಧರನ್‌ ಅವರ ಮನವಿಯನ್ನು ಪುರಸ್ಕರಿಸಿ ಈ ರೈಲು ಸಂಚಾರವನ್ನು ವಿಸ್ತರಿಸಲಾಗಿದೆ ಎಂದು ಪತ್ರಕರ್ತರನ್ನುದ್ದೇಶಿಸಿ ಮಾತನಾಡುವಾಗ ಅವರು ಹೇಳಿದರು.

ಅಲ್ಲದೇ ಕೇಂದ್ರ ಸರ್ಕಾರ ರಾಜ್ಯದಲ್ಲಿ ರೈಲ್ವೇ ಮಾರ್ಗವನ್ನು 2 ಹಂತಗಳಲ್ಲಿ ಮೇಲ್ದರ್ಜೆಗೇರಿಸಲಿದೆ. ಮೊದಲ ಹಂತದಲ್ಲಿ ಕಾಸರಗೋಡಿನಿಂದ ತಿರುವನಂತಪುರದವರೆಗಿನ ಮಾರ್ಗದಲ್ಲಿ ರೈಲು ವೇಗವನ್ನು (Train speed) ಹೆಚ್ಚಿಸಲು 381 ಕೋಟಿ ರು. ಬಿಡುಗಡೆ ಮಾಡಲಾಗಿದೆ. 2ನೇ ಹಂತದಲ್ಲಿ ಅತಿ ಹೆಚ್ಚು ತಿರುವುಗಳನ್ನು (Turn) ನೇರಗೊಳಿಸಲು ಮತ್ತು ಅಗತ್ಯವಿರುವೆಡೆ ಹೊಂದಾಣಿಕೆಗಳನ್ನು ನಡೆಸಲಾಗುವುದು. ಇದಕ್ಕಾಗಿ ಮೂರುವರೆ ವರ್ಷ ಸಮಯ (Time) ಬೇಕಾಗುತ್ತದೆ ಎಂದು ಅವರು ಹೇಳಿದರು.

ಚೆನ್ನೈ-ಮೈಸೂರು ಮಧ್ಯೆ ಪ್ರಾಯೋಗಿಕ ಸಂಚಾರ ಆರಂಭಿಸಿದ ವಂದೇ ಭಾರತ್

ರೈಲು ಮಾರ್ಗ ನೇರಗೊಳಿಸಲು ಭೂಸ್ವಾಧೀನ ಅಗತ್ಯವಿದೆ ಎಂದ ಸಚಿವರು
ನಂತರ, ರೈಲಿನ ವೇಗವನ್ನು ಗಂಟೆಗೆ 130 ಕಿಮೀಗೆ ಹೆಚ್ಚಿಸಲಾಗುತ್ತದೆ. ತಿರುವುಗಳಿರುವ ರೈಲು ಮಾರ್ಗವನ್ನು ನೇರಗೊಳಿಸಲು ಭೂಸ್ವಾಧೀನ ಅಗತ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ. ಸೋಮವಾರದ ಪ್ರಾಯೋಗಿಕ ಚಾಲನೆಯಲ್ಲಿ ರೈಲಿನ ವೇಗ ಸರಾಸರಿ ವೇಗ ಗಂಟೆಗೆ 70 ಕಿ.ಮೀ.ಗಿಂತ ಕಡಿಮೆ ಇತ್ತು. ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ರೈಲು ಗಂಟೆಗೆ 110 ಕಿಮೀ ತಲುಪಿದೆ ಎಂದು ಲೋಕೋ ಪೈಲಟ್ ಹೇಳಿದ್ದಾರೆ. ಭಾರತದ ಅತ್ಯಂತ ವೇಗವಾಗಿ ಓಡುತ್ತಿರುವ ರೈಲು, ವಂದೇ ಭಾರತ್ ಎಕ್ಸ್‌ಪ್ರೆಸ್, ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಸರಾಸರಿ 83 ಕಿಮೀ ವೇಗದಲ್ಲಿ ಚಲಿಸುತ್ತಿದೆ.

ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ರೈಲ್ವೆ ಹಳಿಯಲ್ಲಿ 600ಕ್ಕೂ ಹೆಚ್ಚು ತಿರುವುಗಳು ಇವೆ. ಮೊದಲ ಹಂತದ ಹಳಿಗಳ ನವೀಕರಣದ ನಂತರ  ರೈಲು ಗಂಟೆಗೆ 110 ಕಿಮೀ ವೇಗವನ್ನು ಕ್ರಮಿಸುವ ಸಾಧ್ಯತೆಯಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಏಪ್ರಿಲ್ 25 ರಂದು ಮೋದಿ ಚಾಲನೆ ನೀಡಲಿದ್ದಾರೆ. ಆರಂಭಿಕ ಹಂತದಲ್ಲಿ, ವಂದೇ ಭಾರತ್ ಗಂಟೆಗೆ ಕೇವಲ 100 ಕಿಮೀ ವೇಗದಲ್ಲಿ ಪ್ರಯಾಣಿಸಲಿದೆ. ಒಂದು ವರ್ಷದ ಅವಧಿಯಲ್ಲಿ ವಂದೇ ಭಾರತ್ 130 ಕಿಮೀ ವೇಗದಲ್ಲಿ ಓಡಲಿದೆ ಎಂದು ಸಚಿವರು ಮಾಹಿತಿ ನೀಡಿದರು. ವೇಗದ ಗುರಿಗಳನ್ನು ತಲುಪಲು ರೈಲುಗೆ ಅನುಕೂಲವಾಗುವಂತೆ ಟ್ರ್ಯಾಕ್ ಜೋಡಣೆ ಸಮೀಕ್ಷೆಯು ಸಮಾನಾಂತರವಾಗಿ ನಡೆಯುತ್ತದೆ. ಈ ರೈಲಿನಲ್ಲಿ ಆರಂಭಿಕ ಸವಾರಿಗಾಗಿ 25 ಪ್ರಯಾಣಿಕರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಧಾನಿ ಮೋದಿ ಅವರು ತಿರುವನಂತಪುರದಿಂದ ರೈಲಿಗೆ ಫ್ಲ್ಯಾಗ್‌ಆಫ್ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. .

ದೇಶದ 13 ರಾಜ್ಯಗಳಲ್ಲೀಗ ವಂದೇ ಭಾರತ್‌ ರೈಲು ಸೇವೆ

ಇದೇ ಸಂದರ್ಭದಲ್ಲಿ ಕೇರಳ ಸರಕಾರದ ಮಹತ್ವಾಕಾಂಕ್ಷೆಯ ಸಿಲ್ವರ್‌ಲೈನ್ ಸೆಮಿ ಹೈಸ್ಪೀಡ್ ರೈಲು ಯೋಜನೆಯು ಮುಗಿದ ಅಧ್ಯಾಯವಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಆದರೆ, ಯೋಜನೆಯ ಸ್ಥಿತಿಗತಿ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ. ಇನ್ನು ರಾಜ್ಯದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿಗಳೊಂದಿಗೆ ಭರವಸೆ ನೀಡಿದ ಚರ್ಚೆ ಇನ್ನೂ ನಡೆಯಬೇಕಿದೆ. ಆ ಬಗ್ಗೆ ಮಾತುಕತೆ ನೀಡುವುದಾಗಿ ಭರವಸೆ ನೀಡಿದರು.

click me!