Jail Tourism: ತಪ್ಪು ಮಾಡ್ಬೇಕಿಲ್ಲ..ಹಣ ಪಾವತಿಸಿ, ಜೈಲುವಾಸ ಹೇಗಿರುತ್ತೆ ನೋಡಿ !

By Suvarna NewsFirst Published Sep 29, 2022, 12:28 PM IST
Highlights

ಜೈಲುಗಳು ಹೇಗಿರುತ್ತವೆ ಅನ್ನೋ ಬಗ್ಗೆ ಎಲ್ಲರಿಗೂ ಕುತೂಹಲವಿರುತ್ತದೆ. ಅಲ್ಲಿ ಅಪರಾಧಿಗಳು ಯಾವ ರೀತಿ ಬದುಕುತ್ತಾರೆ ? ಅಲ್ಲಿಯ ಊಟ, ವಸತಿ ವ್ಯವಸ್ಥೆ ಹೇಗಿರುತ್ತೆ ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಆದ್ರೆ ಇನ್ಮುಂದೆ ಇಷ್ಟೆಲ್ಲಾ ಕುತೂಹಲವನ್ನಿಟ್ಟುಕೊಂಡು ಸುಮ್ಮನಿರಬೇಕಾಗಿಲ್ಲ. ನೀವು ಸಹ ಯಾವುದೇ ತಪ್ಪನ್ನು ಮಾಡದೇ ಜೈಲು ವಾಸದ ಅನುಭವ ಪಡೀಬಹುದು. ಅದ್ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಅಪರಾಧ ಮಾಡದೇ ಜೈಲುವಾಸ ಅನುಭವಿಸಬೇಕೆಂಬ ಉತ್ಸುಕತೆ ಇರುವ ಉತ್ಸಾಹಿಗಳಿಗೆ ಅವಕಾಶ ನೀಡಲು ಉತ್ತರಾಖಂಡ್‌ ಸರ್ಕಾರ ಮುಂದಾಗಿದೆ. ಹಲ್ದ್ವಾನಿ ಸರ್ಕಾರವು ಜೈಲಿನ ಅನುಭವವನ್ನು ಅರ್ಥಮಾಡಿಕೊಳ್ಳಲು ಬಯಸುವ ಪ್ರಯಾಣಿಕರಿಗಾಗಿ ಒಂದು ವಿಶಿಷ್ಟ ಯೋಜನೆಯನ್ನು ರೂಪಿಸಿದೆ. ಜೈಲು ಇಲಾಖೆ, ಜೈಲು ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಚಿಂತನೆ ನಡೆಸಿದೆ. ಈ ಯೋಜನೆಯ ಪ್ರಕಾರ ಹಣತೆತ್ತು ಯಾರು ಬೇಕಾದರೂ ಒಂದು ದಿನದ ಮಟ್ಟಿಗೆ ಜೈಲು ವಾಸದ ಅನುಭವ ಪಡೆಯಬಹುದಾಗಿದೆ. 

ಹಣ ಪಾವತಿಸಿ, ಜೈಲಿನೊಳಗೆ ಒಂದು ದಿನ ಕಳೆಯಿರಿ
ಜೈಲು ಹೇಗಿದೆ, ಜೈಲಿನೊಳಗೆ ಹೇಗಿರುತ್ತದೆ, ಜೈಲಿನೊಳಗಿದ್ದರೆ ಅನುಭವ (Jail Experience) ಹೇಗಿರಬಹುದು ಎಂಬ ಕುತೂಹಲವಿರುವವರು ಹಣ ಪಾವತಿಸಿ ಕೆಲವು ದಿನಗಳ ಕಾಲ ಜೈಲಿನೊಳಗಿದ್ದ ಸಮಯ ಕಳೆಯಬಹುದು. ಜೈಲಿನಲ್ಲಿ ಕೈದಿಗಳಂತೆ ಬಟ್ಟೆ ಧರಿಸಿ, ಜೈಲಿನ ಕಠಿಣ ಕಾನೂನುಗಳನ್ನು ಪಾಲಿಸಿ, ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುವ ಆಹಾರ (Food) ಸೇವಿಸಿ ಜೈಲಿನಲ್ಲಿ ಒಂದು ದಿನ ಮಟ್ಟಿಗೆ ಉಳಿದುಕೊಳ್ಳುವ ಯೋಜನೆ ಇದಾಗಿದೆ. 

World Tourism Day 2022: ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ ಮತ್ತು ಮಹತ್ವವೇನು ?

ಹಲ್ದ್ವಾನಿ ಕಾರಾಗೃಹವನ್ನು 1903ರಲ್ಲಿ ನಿರ್ಮಿಸಲಾಯಿತು ಮತ್ತು ಇಂದು ಹಿಂದಿನ ಶಸ್ತ್ರಾಗಾರ ಮತ್ತು ಆರು ಸಿಬ್ಬಂದಿ ಕ್ವಾರ್ಟರ್‌ಗಳನ್ನು ಒಳಗೊಂಡಿರುವ ವಿಭಾಗದಲ್ಲಿ ಜೈಲು ಅತಿಥಿಗಳನ್ನು ಇರಿಸಲು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಹಣ ಪಾವತಿಸಿದ ವ್ಯಕ್ತಿಗಳಿಗೆ ಜೈಲು ಬ್ಯಾರಕ್‌ಗಳಲ್ಲಿ ಕೆಲವು ಗಂಟೆಗಳ ಕಾಲ ಕಳೆಯಲು ಅವಕಾಶ ನೀಡಲಾಗುತ್ತದೆ. ಈ ಪ್ರವಾಸಿ ಕೈದಿಗಳಿಗೆ ಜೈಲು ಸಮವಸ್ತ್ರ (Uniform) ಮತ್ತು ಜೈಲಿನ ಅಡುಗೆಮನೆಯಲ್ಲಿ ಮಾಡಿದ ಆಹಾರವನ್ನು ನೀಡಲಾಗುತ್ತದೆ ಎಂದು ಜೈಲು ಅಧಿಕಾರಿ (Jail officer) ಸತೀಶ್ ಸುಖಿಜಾ ಹೇಳಿದ್ದಾರೆ.

ಜಾತಕಗಳ ದೋಷ ಪರಿಹಾರಕ್ಕಾಗಿಯೂ ಜೈಲುವಾಸ ಮಾಡ್ಬೋದು
ಮಾತ್ರವಲ್ಲ ಕೆಲ ಜ್ಯೋತಿಷಿಗಳು (Astrologer) ಸಲಹೆ ನೀಡುವಂತೆ ಜೈಲುವಾಸ ಮಾಡಬೇಕಾದವರು ಸಹ ನಿರ್ಧಿಷ್ಟ ಹಣ ಪಾವತಿಸಿ ಒಂದು ದಿನ ಜೈಲಿನಲ್ಲಿ ಸಮಯ ಕಳೆಯಬಹುದಾಗಿದೆ. ಜ್ಯೋತಿಷಿಗಳು ಸಲಹೆ ನೀಡಿದಂತೆ ಜೈಲಿನಲ್ಲಿ ಸಮಯ ಕಳೆಯಬೇಕಾದವರು ಜಾತಕಗಳಲ್ಲಿ ಬಂಧನ್ ಯೋಗವನ್ನು ತಪ್ಪಿಸಲು ಇಂಥಾ ಜೈಲಿನ ಮೊರೆ ಹೋಗಬಹುದಾಗಿದೆ. ಕೆಲವೊಮ್ಮೆ ಮುಖ್ಯವಾಗಿ ವ್ಯಕ್ತಿಯ ಜಾತಕದಲ್ಲಿನ ಗ್ರಹಗಳ ಸ್ಥಾನಗಳ ಪ್ರಕಾರ ಜೈಲು ಶಿಕ್ಷೆ (Punishment) ಅನಿವಾರ್ಯ ಎಂದು ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಾರೆ. ಅಂಥಾ ವ್ಯಕ್ತಿಗಳಿಗೆ ಅನುಕೂಲವಾಗಲು ನಕಲಿ ಜೈಲಿನ ವ್ಯವಸ್ಥೆಯನ್ನು ರೂಪಿಸಲಾಗಿದೆ. ಮಾತ್ರವಲ್ಲ ಪ್ರವಾಸಿಗರು ಸಹ ಹಣ ಪಾವತಿಸಿ ಜೈಲಿನ ಅನುಭವವನ್ನು ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಳ್ಳಯನಗಿರಿ ಸೌಂದರ್ಯ ಹೆಚ್ಚಿಸಿದ ನೀಲಿಕುರವಂಜಿ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಚಿಕ್ಕಮಗಳೂರು

ಜೈಲು ಪ್ರವಾಸೋದ್ಯಮ ಆರಂಭಿಸಿದ್ದ ಕೇರಳ ರಾಜ್ಯ 
ಈ ಹಿಂದೆ ಕೇರಳ ಸರ್ಕಾರವೂ ಇಂಥಹದ್ದೇ ಯೋಜನೆ (Project) ಜಾರಿಗೊಳಿಸಿತ್ತು. ಕೇರಳದ ತ್ರಿಶ್ಯೂರಿನ ವಿಯ್ಯೂರ್ ಕೇಂದ್ರ ಕಾರಾಗೃಹ ಪರಿಸರದಲ್ಲಿ ಸಜ್ಜುಗೊಳ್ಳುತ್ತಿರುವ ಜೈಲು ಮ್ಯೂಸಿಯಂನೊಂದಿಗೆ ಹೊಂದಿಕೊಂಡು ಈ ನೂತನ ಯೋಜನೆ ಜಾರಿಗೊಳಿಸಲಾಗಿತ್ತು. ಇದಕ್ಕಾಗಿ ಜೈಲು ಇಲಾಖೆ ಪುರುಷರಿಗೆ ಹಾಗು ಮಹಿಳೆಯರಿಗೆ ಪ್ರತ್ಯೇಕ ಬ್ಯಾರೆಕ್ ಗಳನ್ನು ಸಜ್ಜುಗೊಳಿಸಿತ್ತಯ. ಜೈಲುವಾಸದ ಅನುಭವಿಸ ಪಡುವ ಉತ್ಸಾಹಿಗಳು ಜೈಲುವಾಸಕ್ಕಾಗಿ ಆನ್ ಲೈನ್ ಮೂಲಕ ನೋಂದಾವಣಿ ಮಾಡಿಸಿ ಹಣ ಪಾವತಿಸಿದರೆ 24 ಗಂಟೆಗಳ ಕಾಲ ಜೈಲು ಶಿಕ್ಷೆ ಇಲ್ಲದೇ ಜೈಲುವಾಸ ಅನುಭವಿಸಲು ಅವಕಾಶ ನೀಡಲಾಗುತ್ತಿತ್ತು.

ಕೇರಳ ಸರ್ಕಾರ ಜೈಲು ಮ್ಯೂಸಿಯಂ ಮತ್ತು ಈ ಯೋಜನೆಗಾಗಿ 6 ಕೋಟಿ ರೂಪಾಯಿ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಿತ್ತು. ಜೈಲು ಮ್ಯೂಸಿಯಂನ ರೂಪುರೇಷೆ ಅಂತಿಮ ಗೊಳಿಸಿ, ಇದರೊಂದಿಗೆ ಈ ಜೈಲ್ ಟೂರಿಸಂ ಕೂಡ ಜಾರಿಗೆ ಬರುವಂತೆ ಪ್ಲಾನ್ ಮಾಡಲಾಗಿತ್ತು. ಜೈಲನ್ನು ಸಾಮಾನ್ಯ ಜನರಿಗೆ ಪರಿಚಯಿಸುವ ಹಾಗು ಅರ್ಥಮಾಡಿಸಿ ಕೊಡುವ ರೀತಿಯಲ್ಲಿ ಅವಕಾಶ ಕಲ್ಪಿಸಿಕೊಡುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಇಲ್ಲಿ ಜೈಲಿನ ಖಾಯಂ ಕೈದಿಗಳೊಂದಿಗೆ ಉಳಿದುಕೊಳ್ಳಲು ಸಾಧ್ಯವಿಲ್ಲ.

click me!