ಚಾಲಕ ಹತ್ಯೆ ಕೇಸ್‌ : ಎಚ್‌ಡಿಕೆ ಆಕ್ರೋಶ

By Kannadaprabha NewsFirst Published Apr 18, 2021, 8:51 AM IST
Highlights

 ಸಾರಿಗೆ ನೌಕರರ ಮಷ್ಕರ ಹಿಂಸಾರೂಪಕ್ಕೆ ತಿರುಗಲು ಸರ್ಕಾರದ ನಡೆಯಲ್ಲಿ ನಿರ್ಲಕ್ಷ್ಯತೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ವಾಯುವ್ಯ ಸಾರಿಗೆ ಸಂಸ್ಥೆ ಬಸ್‌ ಚಾಲಕ ನಬಿ ರಸೂಲ್‌ ಆವಟಿ ಅವರನ್ನು ಜಮಖಂಡಿ ಕಲ್ಲಿನಿಂದ ಹೊಡೆದು ಕೊಂದ ಘಟನೆಗೆ ಸರ್ಕಾರವೇ ಹೊಣೆ ಎಂದರು. 

ಬೆಂಗಳೂರು(ಏ.18):  ಶಾಂತಿಯುತವಾಗಿ ನಡೆಯುತ್ತಿದ್ದ ಸಾರಿಗೆ ನೌಕರರ ಮಷ್ಕರ ಹಿಂಸಾರೂಪಕ್ಕೆ ತಿರುಗಲು ಸರ್ಕಾರದ ನಡೆಯಲ್ಲಿ ನಿರ್ಲಕ್ಷ್ಯತೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶನಿವಾರ ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಮುಷ್ಕರ ಲೆಕ್ಕಿಸದೇ ಜನರ ಸೇವೆಗಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ವಾಯುವ್ಯ ಸಾರಿಗೆ ಸಂಸ್ಥೆ ಬಸ್‌ ಚಾಲಕ ನಬಿ ರಸೂಲ್‌ ಆವಟಿ ಅವರನ್ನು ಜಮಖಂಡಿ ಕಲ್ಲಿನಿಂದ ಹೊಡೆದು ಕೊಂದ ಘಟನೆ ನನ್ನನ್ನು ದಿಗ್ಭ್ರಾಂತನನ್ನಾಗಿಸಿದೆ. ಪ್ರತಿಭಟನೆ ಎತ್ತ ಸಾಗುತ್ತಿದೆ? ಸರ್ಕಾರ ಏನು ಮಾಡುತ್ತಿದೆ? ಎಂಬ ಪ್ರಶ್ನೆಗಳು ನನ್ನನ್ನು ತೀವ್ರವಾಗಿ ಕಾಡಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

 

ಮುಷ್ಕರ ಲೆಕ್ಕಿಸದೇ, ಜನರ ಸೇವೆಗಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ವಾಯವ್ಯ ಸಾರಿಗೆ ಸಂಸ್ಥೆ ಬಸ್ ಚಾಲಕ ನಬಿ ರಸೂಲ್ ಆವಟಿ ಅವರನ್ನು ಜಮಖಂಡಿಯಲ್ಲಿ ಕಲ್ಲಿನಿಂದ ಹೊಡೆದು ಕೊಂದ ಘಟನೆ ನನ್ನನು ದಿಗ್ಭ್ರಾಂತನನ್ನಾಗಿಸಿದೆ. ಪ್ರತಿಭಟನೆ ಎತ್ತ ಸಾಗುತ್ತಿದೆ? ಸರ್ಕಾರ ಏನು ಮಾಡುತ್ತಿದೆ ? ಎಂಬ ಪ್ರಶ್ನೆಗಳು ನನ್ನನ್ನು ತೀವ್ರವಾಗಿ ಕಾಡಿವೆ.
1/4

— H D Kumaraswamy (@hd_kumaraswamy)

‘ಜಮಖಂಡಿಯ ಈ ದುರ್ಘಟನೆ ಯಾವ ಸಂದೇಶ ನೀಡುತ್ತಿದೆ ಎಂಬುದರತ್ತ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಜನರಿಗೆ ಸೇವೆ ನೀಡಲು ಇನ್ನು ಮುಂದೆ ಯಾವ ನೌಕರ ಮುಂದೆ ಬರುತ್ತಾನೆ ಎಂಬುದರ ಚಿಂತನೆ ಮಾಡಬೇಕು.

ಜಮಖಂಡಿ: ಮುಷ್ಕರದ ಮಧ್ಯೆ ಬಸ್‌ ಚಾಲನೆ, ಕಲ್ಲೇಟಿಗೆ ಚಾಲಕ ಬಲಿ .

 ಮುಷ್ಕರವನ್ನು ಹಿಂಸಾತ್ಮಕ ಹಂತಕ್ಕೆ ಬೆಳೆಯಲು ಬಿಟ್ಟಸರ್ಕಾರದ ನಡೆಯಲ್ಲಿ ಬೇಜವಾಬ್ದಾರಿತನ ಸ್ಪಷ್ಟವಾಗಿ ಕಾಣುತ್ತಿದೆ. ಜಮಖಂಡಿ ದುರ್ಘಟನೆಯಲ್ಲಿ ಮೃತಪಟ್ಟಚಾಲಕ ನಬಿ ರಸೂಲ್‌ ಸರ್ಕಾರದ ಕರೆಗೆ ಓಗೊಟ್ಟು ಕರ್ತವ್ಯಕ್ಕೆ ಬಂದಿದ್ದವರು. ಹೀಗಾಗಿ ಅವರ ಕುಟುಂಬಕ್ಕೆ ಸರ್ಕಾರ ಗರಿಷ್ಠ ಪರಿಹಾರ ಒದಗಿಸಬೇಕು. ಕೃತ್ಯ ಎಸಗಿದವರಿಗೆ ಶಿಕ್ಷೆ ಕೊಡಿಸಬೇಕು. ನೌಕರರ ಬೇಡಿಕೆ ಒಂದು ಕಡೆ ಇರಲಿ, ಅದಕ್ಕೂ ಮೊದಲು ನೌಕರರಲ್ಲೂ ಈಗ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿಸುವ ಅಗತ್ಯ ಇದೆ’ ಎಂದು ಹೇಳಿದ್ದಾರೆ.

‘ಬಸ್‌ಗಳ ಮೇಲೆ ದಾಳಿ ನಡೆಯುತ್ತಿರುವ ಪ್ರಸಂಗಗಳನ್ನು ಗಮನಿಸಿದ್ದೇನೆ. ಅಂತಹವರನ್ನು ಕೂಡಲೇ ಬಂಧಿಸಬೇಕು. ನೌಕರರು ಈ ಕೃತ್ಯ ಮಾಡಿರಲಾರರು. ನೌಕರರ ಹೋರಾಟ ಸರ್ಕಾರದ ವಿರುದ್ಧವೇ ಹೊರತು, ಅನ್ನ ನೀಡುವ ಬಸ್‌ಗಳ ವಿರುದ್ಧ ಅಲ್ಲ ಎಂಬ ನಂಬಿಕೆ ನನಗಿದೆ. ಮುಷ್ಕರ ಹಿಂಸೆ ರೂಪ ಪಡೆಯಬಾರದು. ಇಲ್ಲಿ ಯಾರ ಹಟವೂ ಗೆಲ್ಲದಿರಲಿ. ನಾಗರಿಕರಿಗೆ ಹಿತವಾಗಲಿ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

click me!