ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದ 5 ಶಟ್ಲರ್ಸ್‌ಗೆ ಒಟ್ಟು ₹50 ಲಕ್ಷ ಬಹುಮಾನ!

By Kannadaprabha NewsFirst Published Sep 25, 2024, 12:21 PM IST
Highlights

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಸಾಧಕರಿಗೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಬಂಪರ್ ಬಹುಮಾನ ಘೋಷಿಸಿದೆ. ಈ ಕುರಿತಾದ ರಿಪೋರ್ಟ್‌ ಇಲ್ಲಿದೆ ನೋಡಿ

ನವದೆಹಲಿ: ಪ್ಯಾರಿಸ್‌ ಪ್ಯಾರಾಲಿಂಪಿಕಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಶಟ್ಲರ್‌ಗಳಿಗೆ ಮಂಗಳವಾರ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ(ಬಿಎಐ) ಒಟ್ಟು 50 ಲಕ್ಷ ರು. ನಗದು ಬಹುಮಾನ ಘೋಷಿಸಿದೆ. ಗೇಮ್ಸ್‌ನಲ್ಲಿ ಭಾರತದ ಶಟ್ಲರ್‌ಗಳು 1 ಚಿನ್ನ, 2 ಬೆಳ್ಳಿ, 2 ಕಂಚು ಗೆದ್ದಿದ್ದರು. 

ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದ ನಿತೇಶ್‌ ಕುಮಾರ್‌ಗೆ ₹15 ಲಕ್ಷ, ಬೆಳ್ಳಿ ಗೆದ್ದ ಸುಹಾಸ್‌ ಯತಿರಾಜ್‌, ಮಹಿಳಾ ಸಿಂಗಲ್ಸ್‌ನಲ್ಲಿ ಬೆಳ್ಳಿ ವಿಜೇತ ತುಳಸಿಮತಿ ಮುರುಗೇಶನ್‌ಗೆ ತಲಾ ₹10 ಲಕ್ಷ ಘೋಷಿಸಲಾಗಿದೆ. ಮಹಿಳಾ ಸಿಂಗಲ್ಸ್‌ನಲ್ಲಿ ಕಂಚು ವಿಜೇತ ಮನೀಶಾ ರಾಮದಾಸ್‌ ಹಾಗೂ ನಿತ್ಯಾಶ್ರಿ ಶಿವನ್‌ಗೆ ತಲಾ ₹7.5 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಬಿಎಐ ಪ್ರಕಟಿಸಿದೆ.

Latest Videos

ಮಕಾವು ಬ್ಯಾಡ್ಮಿಂಟನ್‌: ತ್ರೀಸಾ-ಗಾಯತ್ರಿಗೆ ಜಯ

ಮಕಾವು(ಚೀನಾ): ಮಕಾವು ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಶುಭಾರಂಭ ಮಾಡಿದ್ದಾರೆ. ಮಂಗಳವಾರ ನಡೆದ ಮಹಿಳಾ ಡಬಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತೀಯ ಜೋಡಿಗೆ, ಜಪಾನ್‌ನ ಅಕಾರಿ ಸಾಟೊ-ಮಯಾ ಟಗುಚಿ ವಿರುದ್ಧ 15-21, 21-16, 21-14 ಗೇಮ್‌ಗಳಲ್ಲಿ ಗೆಲುವು ಲಭಿಸಿತು. ಬುಧವಾರ ಮಹಿಳಾ ಸಿಂಗಲ್ಸ್‌ನಲ್ಲಿ ತಾನ್ಯಾ ಹೇಮಂತ್‌, ಅನುಪಮಾ ಉಪಾಧ್ಯಾಯ, ಇಶಾರಾಣಿ, ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌, ಚಿರಾಗ್‌ ಸೆನ್‌, ಸಮೀರ್‌ ವರ್ಮಾ, ಮಿಥುನ್‌ ಮಂಜುನಾಥ್‌ ಸ್ಪರ್ಧಿಸಲಿದ್ದಾರೆ.

ಈ ಸಲ ವಿಶ್ವಕಪ್‌ ಗೆದ್ದೇ ಗೆಲ್ತೇವೆ: ಹರ್ಮನ್‌ಪ್ರೀತ್‌ ಕೌರ್ ವಿಶ್ವಾಸ

ಕಿರಿಯ ಸ್ಯಾಫ್‌ ಫುಟ್ಬಾಲ್‌: ಭಾರತಕ್ಕೆ 3-0 ಗೆಲುವು

ಥಿಂಫು(ಭೂತಾನ್‌): ಈ ಬಾರಿ ಅಂಡರ್‌-17 ಸ್ಯಾಫ್‌ ಚಾಂಪಿಯನ್‌ಶಿಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಭಾರತ ಸತತ 2ನೇ ಗೆಲುವಿನೊಂದಿಗೆ ಸೆಮಿಫೈನಲ್‌ ಪ್ರವೇಶಿಸಿದೆ. ಮೊದಲ ಪಂದ್ಯದ ಗೆಲುವಿನ ಬಳಿಕ ಸೆಮೀಸ್‌ ಸ್ಥಾನ ಖಚಿತಪಡಿಸಿಕೊಂಡಿದ್ದ 5 ಬಾರಿ ಚಾಂಪಿಯನ್‌ ಭಾರತ ತಂಡ, ಗುಂಪು ಹಂತದ 2ನೇ ಪಂದ್ಯದಲ್ಲಿ ಮಂಗಳವಾರ ಮಾಲ್ಡೀವ್ಸ್‌ ವಿರುದ್ಧ 3-0 ಗೋಲುಗಳಲ್ಲಿ ಗೆಲುವು ಸಾಧಿಸಿತು. 14ನೇ ನಿಮಿಷದಲ್ಲಿ ಸ್ಯಾಮ್ಸನ್‌ ಭಾರತಕ್ಕೆ ಮುನ್ನಡೆ ಒದಗಿಸಿದರು. ಬಳಿಕ ಲುಂಕಿಮ್‌ 2 ಗೋಲು ದಾಖಲಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಇದರೊಂದಿಗೆ ಭಾರತ ‘ಎ’ ಗುಂಪಿನಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತು. ಸೆ.28ಕ್ಕೆ ಸೆಮಿಫೈನಲ್‌ ನಡೆಯಲಿದೆ.

ವಲಯ ಖೋ ಖೋ ಪಂದ್ಯಾವಳಿಗೆ ಚಾಲನೆ

ಬೆಂಗಳೂರು: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾಪೀಠ ಟ್ರಸ್ಟ್‌ನ ಸಹಯೋಗದಲ್ಲಿ ಬೆಂಗಳೂರಿನ ಚಂದ್ರ ಬಡಾವಣೆಯ ಶ್ರೀ ಸಿದ್ದಗಂಗಾ ಹೈಯರ್ ಪ್ರೈಮರಿ ಶಾಲೆಯ ಆವರಣದಲ್ಲಿ ಸಿಬಿಎಸ್‌ಇ ವಲಯ VIII ಖೋ ಖೋ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಲಾಯಿತು. ರಾಮನಗರ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಉದ್ಘಾಟನೆ ಮಾಡಿದರು. 

ಸಿಬಿಎಸ್‌ಸಿ ಪ್ರಾದೇಶಿಕ ಕಚೇರಿ ಅಧೀನ ಕಾರ್ಯದರ್ಶಿ ಅನಿತಾ ಜೆ ಸಸ್ವನ್, ಅಂತಾರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ಆಕ್ಕುಂಜಿ, ವಿದ್ಯಾಪೀಠ ಟ್ರಸ್ಟ್‌ ಅಧ್ಯಕ್ಷಎಲ್‌.ರೇವಣಸಿದ್ಧಯ್ಯ, ಕಾರ್ಯದರ್ಶಿಗ ಬಿ.ಎನ್‌.ಚೆನ್ನಪ್ಪ, ಜಂಟಿ ಕಾರ್ಯದರ್ಶಿ ಎಸ್.ಮೃತ್ಯುಂಜಯ, ಖಜಾಂಚಿ ಡಾ.ಆರ್‌.ಲೋಕಪ್ರಕಾಶ್‌, ಶೈಕ್ಷಣಿಕ ಸಲಹೆಗಾರ ಶ್ರೀ ಟಿ.ಎಸ್‌.ತುಳಸಿಕುಮಾರ್‌ ಮತ್ತು ಪ್ರಾಂಶುಪಾಲ ಹಂಸ ಟಿ.ಎಮ್.‌ ಉಪಸ್ಥಿತರಿದ್ದರು. ಕ್ರೀಡಾಕೂಟ ಬುಧವಾರ ಮುಕ್ತಾಯಗೊಳ್ಳಲಿದೆ. 136 ಶಾಲೆಗಳ 290 ತಂಡಗಳ 3800 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

click me!