ಕಾರ್ಡಿಯೋವಿಯೋಪತಿ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ನಿರೂಪಕ, ನಟ ಸಂಜೀವ್ ಕುಲಕರ್ಣಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ತಂದೆಯ ಚಿಕಿತ್ಸೆಗೆ ಹರಿದು ಬಂದ ನೆರವಿನ ಹಣವನ್ನು ಇದೀಗ ಅವಶ್ಯಕತೆ ಇರುವವರಿಗೆ ದಾನ ಮಾಡಲು ಮಗ ಸೌರಭ್ ಕುಲಕರ್ಣಿ ಮುಂದಾಗಿದ್ದಾರೆ.
ಖ್ಯಾತ ನಿರೂಪಕ, ಕಿರುತೆರೆ ನಟ ಸಂಜೀವ್ ಕುಲಕರ್ಣಿ ಬಾಯಲ್ಲಿ ಕನ್ನಡ ಕೇಳುವುದೇ ಚಂದ. ಅಸ್ಖಲಿತ ಉಚ್ಛಾರಣೆ, ಮಾತಿನ ಏರಿಳಿತ, ಶುದ್ಧ ಕನ್ನಡ ಎಂಥವರೂ ಒಂದು ನಿಮಿಷ ನಿಂತು ಕೇಳುವಂತೆ ಮಾಡುತ್ತಿತ್ತು. ಕನ್ನಡ ನಿರೂಪಕರ ಸಾಲಿನಲ್ಲಿ ಮೊದಲು ಕೇಳಿ ಬರುವ ಹೆಸರು ಸಂಜೀವ್ ಕುಲಕರ್ಣಿ. ಕೆಲವು ದಿನಗಳ ಹಿಂದೆ ಇವರು ಅನಾರೋಗ್ಯದಿಂದ ವಿಧಿವಶರಾಗಿದ್ದು ದುರ್ದೈವ.
ಸಂಜೀವ್ ಕುಲಕರ್ಣಿ ಕಾರ್ಡಿಯೋವಿಯೋಪತಿ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸಾ ವೆಚ್ಚ ಬಹಳವಾಗಿದ್ದರಿಂದ ಪುತ್ರ ಸೌರಭ್ ಕುಲಕರ್ಣಿ ಸಾರ್ವಜನಿಕರಿಂದ ನೆರವಿನ ಹಸ್ತ ಚಾಚಿದ್ದರು. ಸೌರಭ್ ಮನವಿಗೆ ಸಾರ್ವಜನಿಕರಿಂದ ಭಾರೀ ನೆರವು ಹರಿದು ಬಂದಿತ್ತು. ಚಿಕಿತ್ಸೆ ಕೊಡಿಸಿದರೂ ಫಲಕಾರಿಗದೇ ಸಂಜೀವ್ ಕುಲಕರ್ಣಿ ಕೊನೆಯುಸಿರೆಳೆದಿದ್ದಾರೆ. ಇದೀಗ ಸಾರ್ವಜನಿಕರಿಂದ ಬಂದ ನೆರವಿನ ಹಣವನ್ನು ಕಷ್ಟದಲ್ಲಿರುವವರಿಗೆ ನೀಡಲು ಮುಂದಾಗಿದ್ದಾರೆ ಮಗ ಸೌರಭ್. ಮಗನ ಈ ಒಳ್ಳೆಯ ಕೆಲಸಕ್ಕೆ ಸಾರ್ವಜನಿಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಈ ವೇಳೆ ಸಂಗ್ರಹವಾದ ಹಣದಲ್ಲಿ ಎಷ್ಟು ಖರ್ಚಾಗಿದೆ, ಎಷ್ಟು ಉಳಿದಿದೆ? ಎಂಬ ಲೆಕ್ಕವನ್ನೂ ಕೊಟ್ಟಿದ್ದಾರೆ. ಒಟ್ಟು ಸಂಗ್ರಹವಾದ ಹಣ 38,95,281 ರೂ. ಎಲ್ಲಾ ರೀತಿಯ ಟ್ಯಾಕ್ಸ್ ಡಿಡಕ್ಟ್ ಆಗಿ ಅವರ ಕೈ ಸೇರಿದ್ದು 35,98,611 ರೂ. ನಾರಾಯಣ ಹೃದಯಾಲಾಯದಲ್ಲಿ 26,63,425 ಲಕ್ಷ ರೂ. ಬಿಲ್ ಆಗಿತ್ತು. ಆಸ್ಪತ್ರೆ ಅವರು 5,53,590 ರೂ. ಕಡಿತಗೊಳ್ಳಿಸಿದ್ದರಿಂದ ಆಸ್ಪತ್ರೆ ವೆಚ್ಚ 21,09,835 ರೂ. ಕಟ್ಟಿದ್ದಾರೆ. ಇನ್ನುಳಿದ ಮೊತ್ತ 14,88,776 ರೂ. ಲಕ್ಷವನ್ನು ಅವಶ್ಯಕತೆ ಇರುವವರಿಗೆ ನೀಡುವುದಾಗಿ ಅನೌನ್ಸ್ ಮಾಡಿದ್ದಾರೆ. ಆ ಮೂಲಕ ತಮ್ಮ ಹೃದಯ ವೈಶಾಲತೆ ಮೆರೆದಿದ್ದಾರೆ ಪಾಪ ಪಾಂಡುವಿನ ನಟ.
ಒಟ್ಟು ಸಂಗ್ರಹವಾದ ಹಣ, ಚಿಕಿತ್ಸಾ ವೆಚ್ಚ ಎಲ್ಲದರ ಸಂಪೂರ್ಣ ಲೆಕ್ಕವನ್ನು ಸೌರಭ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಷ್ಟದಲ್ಲಿರುವವರು ಸೂಕ್ತ ಕಾರಣ ಕೊಟ್ಟು ಈ ಹಣವನ್ನು ಬಳಸಿಕೊಳ್ಳಬಹುದು ಎಂದು ಮಾನವೀಯತೆ ಮೆರೆದಿದ್ದಾರೆ.