ಮಗು ಸದಾ ಡಲ್ ಇರುತ್ತಾ? ಮೂಡ್ ಆಫ್ ಆಗುತ್ತಿದ್ದರೆ ಈ ಸಮಸ್ಯೆ ಇರ್ಬಹುದು

By Suvarna NewsFirst Published Jan 21, 2023, 1:03 PM IST
Highlights

ಒತ್ತಡ ದೊಡ್ಡವರನ್ನು ಮಾತ್ರವಲ್ಲ ಮಕ್ಕಳನ್ನು ಕೂಡ ಬಿಟ್ಟಿಲ್ಲ. ಅದು, ಇದು ಅಂತಾ ಒಂದಾದ್ಮೇಲೆ ಒಂದು ಕೆಲಸ ಮಾಡುವ ಮಕ್ಕಳು ಓದಿ ಓದಿ ಬೇಸತ್ತಿರುತ್ತಾರೆ. ಇದು ಅವರ ಖಿನ್ನತೆಗೆ ಕಾರಣವಾಗುತ್ತದೆ. ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡ ತಕ್ಷಣ ಪಾಲಕರು ಎಚ್ಚೆತ್ರೆ ಒಳ್ಳೆಯದು.
 

ಮಕ್ಕಳ ಸಂತೋಷವೇ ಪಾಲಕರ ಗುರಿಯಾಗಿರುತ್ತದೆ. ಸದಾ ಮಕ್ಕಳು ಸಂತೋಷದಿಂದಿರಬೇಕೆಂದು ಬಯಸುವ ಪಾಲಕರು ಅವರ ಭವಿಷ್ಯಕ್ಕಾಗಿ ಸಾಕಷ್ಟು ಶ್ರಮಿಸ್ತಾರೆ. ಇದು ಸ್ಪರ್ಧಾತ್ಮಕ ಯುಗವಾಗಿರುವ ಕಾರಣ ನಮ್ಮ ಮಕ್ಕಳೂ ಎಲ್ಲರಂತೆ ಮುಂದಿರಲಿ ಎಂದು ಪಾಲಕರು ಬಯಸೋದು ಸಹಜ. ಮಕ್ಕಳಿಂದ ಸ್ಪರ್ಧೆಯನ್ನು ಪಾಲಕರು ನಿರೀಕ್ಷಿಸ್ತಾರೆ ಕೂಡ. ಆದ್ರೆ ಅಧ್ಯಯನವೊಂದು ಪಾಲಕರನ್ನು ಅಚ್ಚರಿಗೊಳಿಸುವ ವಿಷ್ಯ ಹೇಳಿದೆ. ಇತ್ತೀಚಿನದ ದಿನಗಳಲ್ಲಿ ಮಕ್ಕಳ ಮೇಲಾಗ್ತಿರುವ ಒತ್ತಡ ಅವರನ್ನು ಖಿನ್ನತೆಗೆ ನೂಕಿದೆಯಂತೆ.  ನಾವಿಂದು ಮಕ್ಕಳಲ್ಲಿ ಕಾಡುವ ಖಿನ್ನತೆ ಹಾಗೂ ಅದ್ರ ಲಕ್ಷಣ ಮತ್ತು ಅದ್ರಿಂದ ಹೊರಗೆ ಬರುವುದು ಹೇಗೆ ಎಂಬುದನ್ನು ವಿವರಿಸುತ್ತೇವೆ.

ಮಕ್ಕಳ (Child) ಲ್ಲಿ ಕಾಡುವ ಖಿನ್ನತೆ (Depression) ಯ ಲಕ್ಷಣ : ಖಿನ್ನತೆಯಿಂದ ಬಳಲುವ ಮಗು ಇತರ ಮಕ್ಕಳಿಗೆ ಹೋಲಿಸಿದರೆ ಹೆಚ್ಚು ಆಲಸಿಯಾಗಿರುತ್ತದೆ.  ಯಾವುದೇ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ. ಕುಟುಂಬದೊಂದಿಗೆ ಬೆರೆಯುವ ಮನಸ್ಸು (Mind) ಮಾಡೋದಿಲ್ಲ. ಸದಾ ಒಂಟಿಯಾಗಿರಲು ಬಯಸುತ್ತದೆ. ಸ್ನೇಹಿತರೊಂದಿಗೂ ಹೆಚ್ಚು ಬೆರೆಯದ ಮಗು, ಆಟವಾಡಲು ಮನಸ್ಸು ಮಾಡೋದಿಲ್ಲ. ಇಷ್ಟೇ ಅಲ್ಲ ನಿಮ್ಮ ಮಗು ಖಿನ್ನತೆಗೊಳಗಾಗಿದ್ದರೆ ಅದಕ್ಕೆ ಭಯ ಕಾಡುತ್ತದೆ.  ಖಿನ್ನತೆಯಿಂದಾಗಿ  ಮಗುವಿನ ಸ್ವಭಾವದಲ್ಲಿ ಬದಲಾವಣೆಯಾಗುತ್ತದೆ. ಮಾತು ಮಾತಿಗೂ ಕೂಗಾಡುವುದು, ಜಗಳಕ್ಕೆ ಬರುವ ವರ್ತನೆ ಕಾಣಿಸುತ್ತದೆ. ಕೆಲಸವನ್ನು ನಿರಾಕರಿಸುವ ಮಕ್ಕಳು ಒಂಟಿಯಾಗಿ, ರೂಮಿನಲ್ಲಿ ಕಾಲ ಕಳೆಯಲು ಇಷ್ಟಪಡ್ತಾರೆ.  

ಮಕ್ಕಳ ಮನಸ್ಸಲ್ಲಿ ಧನಾತ್ಮಕ ಚಿಂತನೆ ಬೆಳೆಸುವುದು ಹೀಗೆ

ಖಿನ್ನತೆಗೊಳಗಾದ ಮಗುವಿನಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತದೆ. ಸಾಮಾನ್ಯವಾಗಿ ಮಕ್ಕಳು 8 -9 ಗಂಟೆ ನಿದ್ರೆ ಮಾಡ್ಬೇಕು. ಆದ್ರೆ ಖಿನ್ನತೆಗೊಳಗಾದ ಮಗು ನಿದ್ರೆ ಮಾಡಲು ಕಷ್ಟಪಡುತ್ತದೆ. ಮಧ್ಯ ಮಧ್ಯ ಭಯಗೊಂಡು ಎಚ್ಚರಗೊಳ್ಳುತ್ತಿರುತ್ತದೆ. ವಿಪರೀತ ಸುಸ್ತು ಕೂಡ ಮಗುವನ್ನು ಕಾಡುತ್ತದೆ.  

ಖಿನ್ನತೆಗೊಳಗಾದ ಮಕ್ಕಳು ಯಾವಾಗಲೂ ನಿರಾಶೆಯಲ್ಲಿರುತ್ತಾರೆ. ಉತ್ಸಾಹದಿಂದ ಕೆಲಸ ಮಾಡುವ ಬದಲು, ನಿರಾಸೆಯಿಂದ, ಆಸಕ್ತಿಯಿಲ್ಲ ಮನಸ್ಸಿನಿಂದ, ನಿಧಾನವಾಗಿ ಕೆಲಸ ಮಾಡ್ತಾರೆ. ಮೊದಲಿನಂತೆ ಎಲ್ಲ ಕೆಲಸದಲ್ಲಿ, ಎಲ್ಲ ವಿಷ್ಯದಲ್ಲಿ ಮುಂದೆ ಬರುವುದು ಕಡಿಮೆಯಾಗಿರುತ್ತದೆ. ಖಿನ್ನತೆಯ ಕಾರಣದಿಂದಾಗಿ  ಮಗುವಿನ ದಿನನಿತ್ಯದ ಅಭ್ಯಾಸಗಳಲ್ಲಿಯೂ ನೀವು ಬದಲಾವಣೆಯನ್ನು ಕಾಣಬಹುದು.  ಮಕ್ಕಳು ಆಹಾರ ಸೇವನೆಯಲ್ಲಿ ಆಸಕ್ತಿ ಕಳೆದುಕೊಂಡಿರುತ್ತಾರೆ. ಅವರಿಷ್ಟದ ಆಹಾರ ನೀಡಿದ್ರೂ ಅದನ್ನು ತಿನ್ನಲು ನಿರಾಕರಿಸುತ್ತಾರೆ.

ಮಕ್ಕಳನ್ನು ಖಿನ್ನತೆಯಿಂದ ರಕ್ಷಿಸುವುದು ಹೇಗೆ? : ಮಕ್ಕಳನ್ನು ಖಿನ್ನತೆಯಿಂದ ಹೊರತರುವುದು ಪಾಲಕರ ಜವಾಬ್ದಾರಿ. ಮಕ್ಕಳ ವರ್ತನೆಯಲ್ಲಿ ಸ್ವಲ್ಪ ಬದಲಾವಣೆಯಾಗ್ತಿದೆ ಎಂದಾಗ್ಲೇ ನೀವು ಎಚ್ಚೆತ್ತುಕೊಳ್ಳಬೇಕು. 

ಮಗುವಿಗೆ ಸಮಯ ನೀಡಿ : ಪಾಲಕರು ಮಗುವಿಗೆ ಗರಿಷ್ಠ ಸಮಯ ನೀಡ್ಬೇಕು. ತಂದೆ – ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣ ಮಗು ಮನೆಯಲ್ಲಿ ಒಂಟಿಯಾಗುತ್ತದೆ. ಆಗ ಅದು ಮತ್ತಷ್ಟು ಖಿನ್ನತೆಗೊಳಗಾಗುತ್ತದೆ. ಪಾಲಕರಾದವರು ಮಗುವಿಗೆ ಒಂದಿಷ್ಟು ಸಮಯ ಮೀಸಲಿಡುವುದು ಬಹಳ ಮುಖ್ಯ.

ಮಕ್ಕಳನ್ನು ಹೀಗೆ ನೋಡ್ಕೊಳ್ಳಿ :  ಮಗುವಿನ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಬೈಯುವುದು, ಹೊಡೆಯುವುದ್ರಿಂದ ಮಗು ಮತ್ತಷ್ಟು ಖಿನ್ನತೆಗೊಳಗಾಗುತ್ತದೆ. ಅದರ ಬದಲು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಪ್ರೀತಿಯಿಂದ ಮಗು ಏನು ತಪ್ಪು ಮಾಡ್ತಿದೆ ಎಂಬುದನ್ನು ಅದಕ್ಕೆ ತಿಳಿಸುವ ಪ್ರಯತ್ನ ನಡೆಸಿ. 

ಮಕ್ಕಳ ಜೊತೆ ಮಾತನಾಡಿ : ಮಗುವಿನ ಜೊತೆ ಮಾತನಾಡ್ಬೇಕು. ಅವರನ್ನು ಒಂಟಿಯಾಗಿ ಬಿಡಬಾರದು. ಅವರ ಜೊತೆ ಆಟವಾಡಿ, ಚರ್ಚೆ ನಡೆಸಿ, ಅವರ ಮನಸ್ಸಿನಲ್ಲಿ ಏನು ಗೊಂದಲವಿದೆ ಎಂಬುದನ್ನು ತಿಳಿಯಿರಿ.

ಈ ತಪ್ಪು ಮಾಡ್ಬೇಡಿ : ಪಾಲಕರು ತಮ್ಮ ಬಗ್ಗೆ ಮಾತ್ರ ಆಲೋಚನೆ ಮಾಡ್ತಾರೆ. ಮಕ್ಕಳನ್ನು ಚುರುಕು ಮಾಡ್ಬೇಕು ಎನ್ನುವ ಕಾರಣಕ್ಕೆ ಅಥವಾ ಬೇರೆ ಇನ್ನಾವುದೋ ಕಾರಣಕ್ಕೆ ಅವರ ಶಾಲೆಯನ್ನು ಆಗಾಗ ಬದಲಿಸುತ್ತಿರುತ್ತಾರೆ. ಇದ್ರಿಂದ ಅವರ ವಿದ್ಯಾಭ್ಯಾಸದ ಜೊತೆ ಸ್ನೇಹಿತರು ಬದಲಾಗ್ತಾರೆ. ಅದಕ್ಕೆ ಹೊಂದಿಕೊಳ್ಳುವುದು ಮಕ್ಕಳಿಗೆ ಕಷ್ಟವಾಗುತ್ತದೆ. ಇದು ಅವರನ್ನು ಮತ್ತಷ್ಟು ನೋವಿನಲ್ಲಿಡುತ್ತದೆ. 

ಮಕ್ಕಳ ಮುಂದೆ ಜಗಳ ಬೇಡ : ಪಾಲಕರು ಮಕ್ಕಳ ಮುಂದೆ ಸಭ್ಯವಾಗಿರಬೇಕು. ದಂಪತಿ ಮಧ್ಯೆ ಏನೇ ಜಗಳವಿದ್ರೂ ಅದು ಮಕ್ಕಳಿಗೆ ಗೊತ್ತಾಗಬಾರದು. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮದುವೆಯಾದ್ಮೇಲೂ ಹಳೇ ಸ್ನೇಹ ಕಾಪಾಡಿಕೊಳ್ಳೋದು ಹೇಗೆ?

ತಜ್ಞರ ಭೇಟಿ : ಮಗುವಿನ ಮನಸ್ಥಿತಿ ತುಂಬಾ ಹದಗೆಟ್ಟಿದೆ ಎನ್ನುವ ಸಂದರ್ಭದಲ್ಲಿ ತಡ ಮಾಡದೆ ಮಗುವನ್ನು ತಜ್ಞರ ಬಳಿ ಕರೆದುಕೊಂಡು ಹೋಗಿ. 

click me!