ಸೀಮಾ, ಅಂಜು ಆಯ್ತು, ಪ್ರಿಯಕರನಿಗಾಗಿ ಗಂಡ, ಮಕ್ಕಳನ್ನು ಬಿಟ್ಟು ಕುವೈತ್‌ಗೆ ಪರಾರಿಯಾದ ರಾಜಸ್ಥಾನದ ಮಹಿಳೆ!

By Vinutha PerlaFirst Published Aug 16, 2023, 10:44 AM IST
Highlights

ಇತ್ತೀಚಗೆ ಗಡಿಯಾಚೆಗಿನ ಪ್ರೀತಿ ಟ್ರೆಂಡ್ ಆಗ್ತಿದೆ. ಒಂದರ ಮೇಲೊಂದರಂತೆ ಲವ್ ಸ್ಟೋರಿ, ಮದುವೆ ಬಹಿರಂಗವಾಗುತ್ತಿದೆ. ಸೀಮಾ ಹೈದರ್, ಅಂಜು ಬಳಿಕ ಇದೀಗ ರಾಜಸ್ಥಾನದ ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಪ್ರಿಯಕರನಿಗಾಗಿ ಕುವೈತ್‌ಗೆ ಪರಾರಿಯಾಗಿದ್ದಾಳೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
 

ಪಾಕಿಸ್ತಾನದ ಸೀಮಾ ಹೈದರ್ ಭಾರತಕ್ಕೆ ಬಂದು ಸಚಿನ್ ಮೀನಾ ಜೊತೆ ಮದುವೆ, ಭಾರತದ ಅಂಜು ಪಾಕಿಸ್ತಾನಕ್ಕೆ ತೆರಳಿ ನಸ್ರುಲ್ಲಾ ಜೊತೆ ಮದುವೆ ಭಾರಿ ಸಂಚಲನ ಸೃಷ್ಟಿಸಿದೆ. ಪಬ್‌ಜಿ ಲವ್, ಫೇಸ್‌ಬುಕ್ ಲವ್ ಗಡಿಗಳನ್ನು ಮೀರಿ ಸಂಬಂಧವನ್ನು ಗಟ್ಟಿಗೊಳಿಸಿದೆ. ಆದರೆ ಈ ಪ್ರಕರಣಗಳ ಬಳಿಕ ಗಡಿಯಾಚಗಿನ ಲವ್ ಇದೀಗ ಟ್ರೆಂಡ್ ಆಗಿದೆ. ಇದೇ ರೀತಿಯ ಹಲವು ಪ್ರಕರಣಗಳು, ಪ್ರಯತ್ನಗಳು ವರದಿಯಾಗಿದೆ. ಇದರ ಬೆನ್ನಲ್ಲೇ, ರಾಜಸ್ಥಾನದ ಅಂಜು ಎಂಬ ಮಹಿಳೆ ತನ್ನ ಕುಟುಂಬವನ್ನು ತೊರೆದು ಪ್ರಿಯಕರನಿಗಾಗಿ ಪಾಕಿಸ್ತಾನಕ್ಕೆ ತೆರಳಿದ ಘಟನೆ ನಡೆದಿದೆ. 35 ವರ್ಷದ ರಾಜಸ್ಥಾನದ ಮಹಿಳೆ ತನ್ನ ಇಬ್ಬರು ಮಕ್ಕಳು ಮತ್ತು ಪತಿಯನ್ನು ಬಿಟ್ಟು ಕುವೈತ್‌ಗೆ ಓಡಿಹೋಗಿದ್ದಾಳೆ.

ಗಂಡ, ಮಕ್ಕಳನ್ನು ಬಿಟ್ಟು ಪರಾರಿಯಾದ ವಿವಾಹಿತ ಮಹಿಳೆ
ರಾಜಸ್ಥಾನದ ಡುಂಗಾರ್ಪುರ ಜಿಲ್ಲೆಯ ದೀಪಿಕಾ ಪಾಟಿದಾರ್ ಎಂಬ ಮಹಿಳೆ (Woman) ಕುವೈತ್‌ನಲ್ಲಿರುವ ತನ್ನ ಪ್ರಿಯಕರ ಇರ್ಫಾನ್ ಹೈದರ್‌ನ್ನು ಭೇಟಿಯಾಗಲು ಗಂಡ (Husband), ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ. ಪತಿ ಮನೆಯಿಂದ ನಗದು ಮತ್ತು ಚಿನ್ನಾಭರಣ (Jewellery)ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ. ಮುಂಬೈನಲ್ಲಿ ಉದ್ಯೋಗದಲ್ಲಿದ್ದ ದೀಪಿಕಾ ಪತಿ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಪತ್ನಿ ದೀಪಿಕಾ ಜುಲೈ 15ರಂದು ಮಕ್ಕಳನ್ನು ತೊರೆದು ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಪುರುಷನ ಜೊತೆ ಓಡಿಹೋಗಿರುವುದಾಗಿ ತಿಳಿಸಿದ್ದಾರೆ.

Latest Videos

ಇಸ್ಲಾಂಗೆ ಮತಾಂತರವಾದ ಅಂಜುಗೆ ಜಾಗ, ಹಣ ಹಾಗೂ ಉಡುಗೊರೆ ನೀಡಿದ ಪಾಕ್‌ ಉದ್ಯಮಿ!

ದೀಪಿಕಾ ಪಾಟಿದಾರ್ ತನ್ನ ಸ್ನೇಹಿತ ಇರ್ಫಾನ್ ಹೈದರ್ ಜೊತೆ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಮಹಿಳೆ ಬುರ್ಖಾ ಧರಿಸಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.  ಈ ಪ್ರಕರಣವು ತನ್ನ ಸ್ನೇಹಿತನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಪ್ರಯಾಣಿಸಿದ ಭಾರತೀಯ ಮಹಿಳೆ ಅಂಜು ಅವರ ಪ್ರಕರಣಕ್ಕೆ ಹೋಲಿಕೆಯನ್ನು ಹೊಂದಿದೆ. 

ರಾಜಸ್ಥಾನದ ಭಿವಾಡಿ ಜಿಲ್ಲೆಯ ಅಂಜು ಜುಲೈನಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ 29 ವರ್ಷದ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾ ಅವರನ್ನು ಭೇಟಿಯಾಗಲು ಹೋಗಿದ್ದರು. ಆಕೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದು, ಜುಲೈ 21 ರಂದು ರಾಜಸ್ಥಾನದಲ್ಲಿ ತನ್ನ ಕುಟುಂಬವನ್ನು ತೊರೆದು ಗಡಿ ದಾಟಿದ್ದಳು. ಆಕೆ ತನ್ನ ಸ್ನೇಹಿತನನ್ನು ಭೇಟಿಯಾಗಲು ಜೈಪುರಕ್ಕೆ ಹೋಗುವುದಾಗಿ ಪತಿಗೆ ತಿಳಿಸಿದ್ದಳು ಮತ್ತು ತನ್ನ ಸಹೋದರಿಯನ್ನು ಭೇಟಿ ಮಾಡಲು ಗೋವಾಗೆ ಹೋಗುವುದಾಗಿ ತನ್ನ ಕಂಪನಿಗೆ ತಿಳಿಸಿದ್ದಳು.

ಸೀಮಾ, ಅಂಜು ಬಳಿಕ ಭಾರತ-ಬಾಂಗ್ಲಾ ಲವ್ ಸ್ಟೋರಿ, ಆದ್ರೆ ಕಹಾನಿಯಲ್ಲಿ ಹಲವು ಟ್ವಿಸ್ಟ್!

ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ದೀಪಿಕಾ ಪತಿಯಿಂದ ದೂರು
ಇತ್ತೀಚಿನ ಪ್ರಕರಣದಲ್ಲಿ, ಮುಖೇಶ್ ಪಾಟಿದಾರ್ ಅವರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಪತ್ನಿ ದೀಪಿಕಾ ರಾಜಸ್ಥಾನದಲ್ಲಿ11 ಮತ್ತು 7 ವರ್ಷ ವಯಸ್ಸಿನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ಆಕೆ ಆಗಾಗ್ಗೆ ಗುಜರಾತ್ ಅಥವಾ ಉದಯಪುರಕ್ಕೆ ಹೋಗುತ್ತಿದ್ದಳು ಎಂದು ಮುಖೇಶ್ ಹೇಳಿದ್ದಾರೆ.

ಜುಲೈ 10 ರಂದು, ದೀಪಿಕಾ, ಅನಾರೋಗ್ಯ ಎಂದು ಹೇಳಿಕೊಂಡು, ವೈದ್ಯಕೀಯ ಚಿಕಿತ್ಸೆ (Treatment) ಪಡೆಯುವ ನೆಪದಲ್ಲಿ ಮನೆಯಿಂದ ಗುಜರಾತ್‌ಗೆ ಹೋಗಿದ್ದಳು, ಆದರೆ ಜುಲೈ 13ರ ವರೆಗೂ ಹಿಂತಿರುಗಲಿಲ್ಲ, ಬದಲಿಗೆ ತನ್ನ ಪತಿಗೆ ವಾಟ್ಸಾಪ್ ಕರೆ ಮಾಡಿ, ಅವನೊಂದಿಗೆ ಅಸಮಾಧಾನಗೊಂಡಿದ್ದು, ದೂರ ಹೋಗುವುದಾಗಿ ಹೇಳಿದರು" ಎಂದು ಪೊಲೀಸರು ತಿಳಿಸಿದ್ದಾರೆ. ಮುಖೇಶ್ ರಾಜಸ್ಥಾನದಲ್ಲಿರುವ ತನ್ನ ಮನೆಗೆ ಬಂದು ನೋಡಿದಾಗ ಲಕ್ಷಗಟ್ಟಲೆ ಮೌಲ್ಯದ ನಗದು (Money) ಮತ್ತು ಚಿನ್ನಾಭರಣ ಕಾಣೆಯಾಗಿರುವುದು ತಿಳಿದುಬಂದಿದೆ.

ಹೈದರ್ ತನ್ನ ಪತ್ನಿಯ ಬ್ರೈನ್ ವಾಶ್ ಮಾಡಿ ಆಕೆಯನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದಾನೆ ಎಂದು ಮುಖೇಶ್ ಪಾಟಿದಾರ್ ಆರೋಪಿಸಿದ್ದಾಳೆ. ಹೈದರ್‌ನನ್ನು ಭೇಟಿಯಾಗಲು ಮಹಿಳೆ ಆಗಾಗ ಗುಜರಾತ್‌ನ ಸಬರ್ ಕಾಂತದಲ್ಲಿರುವ ಖೇಡ್ ಬ್ರಹ್ಮಕ್ಕೆ ಭೇಟಿ ನೀಡುತ್ತಿದ್ದಳು. ಬಳಿಕ ಆಕೆಯನ್ನು ಕುವೈತ್‌ಗೆ ಕರೆದೊಯ್ದಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆಕೆ ಹೈದರ್‌ನನ್ನು ಹೇಗೆ ಭೇಟಿಯಾದಳು ಮತ್ತು ವೀಸಾ ಪಡೆದುಕೊಂಡಳು ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

click me!