ತನಗಿಂತ 21 ವರ್ಷ ದೊಡ್ಡವನಾದ ಗಂಡನನ್ನು ಬಿಟ್ಟು ಲವರ್‌ ಜೊತೆ ಹೋಗ್ತಿನಿ ಎಂದ 19ರ ಯುವತಿ, ಒಕೆ ಎಂದ ಕೋರ್ಟ್

Published : Apr 06, 2026, 03:04 PM IST
mp high court

ಸಾರಾಂಶ

ಗ್ವಾಲಿಯರ್ ಹೈಕೋರ್ಟ್‌ನಲ್ಲಿ, 19 ವರ್ಷದ ಯುವತಿಯೊಬ್ಬಳು ತನ್ನ 40 ವರ್ಷದ ಪತಿಯನ್ನು ತೊರೆದು ಪ್ರಿಯತಮನೊಂದಿಗೆ ಬದುಕುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಳೆ. ವಯಸ್ಕರ 'ಜೀವನ ಸಂಗಾತಿಯ ಆಯ್ಕೆಯ ಹಕ್ಕನ್ನು' ಎತ್ತಿಹಿಡಿದ ನ್ಯಾಯಾಲಯವು, ಪತಿಯ ಅರ್ಜಿಯನ್ನು ವಜಾಗೊಳಿಸಿದೆ.

ಗ್ವಾಲಿಯರ್ (ಏ.6): "ನಾನು ವಯಸ್ಕಳು, ನನ್ನ ಇಚ್ಛೆಯಂತೆ ಬದುಕುತ್ತಿದ್ದೇನೆ. ನನಗೆ ಪೋಷಕರು ಅಥವಾ ಪತಿಯ ಜೊತೆ ಇರಲು ಇಷ್ಟವಿಲ್ಲ," - ಕೋರ್ಟ್ ಕಟಕಟೆಯಲ್ಲಿ ನಿಂತು 19 ವರ್ಷದ ಯುವತಿಯೊಬ್ಬಳು ನೀಡಿದ ಈ ದೃಢವಾದ ಹೇಳಿಕೆ ಅವಳ ಜೀವನದ ದಿಕ್ಕನ್ನೇ ಬದಲಿಸಿದೆ. ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಈಕೆಯ ನಿರ್ಧಾರವನ್ನು ಎತ್ತಿಹಿಡಿಯುವ ಮೂಲಕ ವಯಸ್ಕರ 'ಜೀವನ ಸಂಗಾತಿಯ ಆಯ್ಕೆಯ ಹಕ್ಕು' ಅಬಾಧಿತ ಎಂದು ಸಾರಿದೆ. ಈ ವಿವಾದವು ಹೇಬಿಯಸ್ ಕಾರ್ಪಸ್ ಅರ್ಜಿಯೊಂದಿಗೆ ಆರಂಭವಾಯಿತು. ಯುವತಿಯ ಪತಿಯು ಅರ್ಜಿಯನ್ನು ಸಲ್ಲಿಸಿ, "ನನ್ನ ಪತ್ನಿಯನ್ನು ಅನುಜ್ ಕುಮಾರ್ ಎಂಬ ವ್ಯಕ್ತಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾನೆ," ಎಂದು ಆರೋಪಿಸಿದ್ದರು. ಪೊಲೀಸರು ತನಿಖೆ ನಡೆಸಿ ಯುವತಿಯನ್ನು ಪತ್ತೆಹಚ್ಚಿ, ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು 'ಒನ್-ಸ್ಟಾಪ್ ಸೆಂಟರ್'ನಲ್ಲಿ ಇರಿಸಿದ್ದರು.

ಕೋರ್ಟ್‌ನಲ್ಲಿ ನಡೆದಿದ್ದೇನು?

ನ್ಯಾಯಾಧೀಶರು ಯುವತಿಯ ಇಚ್ಛೆಯನ್ನು ಕೇಳಿದಾಗ ಅವಳು ಕಿಂಚಿತ್ತೂ ಹಿಂಜರಿಯದೆ ತನ್ನ ನಿರ್ಧಾರವನ್ನು ಪ್ರಕಟಿಸಿದಳು. ತನ್ನ ವೈವಾಹಿಕ ಜೀವನದ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾಳೆ. ನನಗೆ 19 ವರ್ಷ, ನನ್ನ ಪತಿಗೆ 40 ವರ್ಷ. ಇಬ್ಬರ ನಡುವೆ 21 ವರ್ಷಗಳ ವಯಸ್ಸಿನ ಅಂತರವಿದೆ. ದಾಂಪತ್ಯದಲ್ಲಿ ಎಂದಿಗೂ ಹೊಂದಾಣಿಕೆ ಇರಲಿಲ್ಲ ಮತ್ತು ಪತಿ ತನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಳು.

ಕೌನ್ಸೆಲಿಂಗ್ ಕೂಡ ವಿಫಲ

ಯುವತಿಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ನ್ಯಾಯಾಲಯವು ಕೌನ್ಸೆಲಿಂಗ್‌ಗೆ ಆದೇಶಿಸಿತ್ತು. ಆದರೆ ಕೌನ್ಸೆಲಿಂಗ್ ನಂತರವೂ ಅವಳು ತನ್ನ ನಿಲುವನ್ನು ಬದಲಿಸಲಿಲ್ಲ. ಇದೇ ವೇಳೆ ಅವಳ ಪ್ರಿಯತಮ ಅನುಜ್ ಕೂಡ ನ್ಯಾಯಾಲಯಕ್ಕೆ ಹಾಜರಾಗಿ, ಆಕೆಯನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ.

ನ್ಯಾಯಾಲಯದ ಮಹತ್ವದ ತೀರ್ಪು

ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರಿದ್ದ ವಿಭಾಗೀಯ ಪೀಠವು ಯುವತಿಯ ಧ್ವನಿಯೇ ಇಲ್ಲಿ ಮುಖ್ಯ ಎಂದು ತೀರ್ಪು ನೀಡಿತು. ಆಕೆ ಯಾವುದೇ ಒತ್ತಡಕ್ಕೆ ಮಣಿದಿಲ್ಲ ಅಥವಾ ಯಾರ ಅಕ್ರಮ ಬಂಧನದಲ್ಲಿಯೂ ಇಲ್ಲ ಎಂಬುದು ಸ್ಪಷ್ಟವಾದ ಮೇಲೆ, ಪತಿಯ ಅರ್ಜಿಯನ್ನು ವಜಾಗೊಳಿಸಲಾಯಿತು. ಒಬ್ಬ ವಯಸ್ಕ ವ್ಯಕ್ತಿಗೆ ತಾನು ಯಾರ ಜೊತೆ ಮತ್ತು ಎಲ್ಲಿ ಬದುಕಬೇಕು ಎಂದು ನಿರ್ಧರಿಸುವ ಪೂರ್ಣ ಹಕ್ಕಿದೆ ಎಂದು ನ್ಯಾಯಾಲಯ ಪುನರುಚ್ಚರಿಸಿತು.

ಯುವತಿ ತನ್ನ ಪ್ರಿಯತಮನ ಜೊತೆ ಹೋಗಲು ಅನುಮತಿ ನೀಡಿದ ನ್ಯಾಯಾಲಯವು, ಅವಳ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿದೆ. ಮುಂದಿನ ಆರು ತಿಂಗಳ ಕಾಲ 'ಶೌರ್ಯ ದೀದಿ' ಎಂಬ ಹೆಸರಿನ ನಿಯೋಜಿತ ಅಧಿಕಾರಿಗಳು ಯುವತಿಯ ಸಂಪರ್ಕದಲ್ಲಿದ್ದು, ಅವಳ ಕ್ಷೇಮ ಸಮಾಚಾರ ಮತ್ತು ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.

ಈ ಪ್ರಕರಣವು ಕೇವಲ ಒಂದು ಕಾನೂನು ವಿವಾದವಾಗಿ ಉಳಿಯದೆ, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಸಂಕೇತವಾಗಿ ಹೊರಹೊಮ್ಮಿದೆ. ವಯಸ್ಕರ ಜೀವನದಲ್ಲಿ ಅಂತಿಮ ತೀರ್ಮಾನವು ಆ ವ್ಯಕ್ತಿಯದ್ದೇ ಆಗಿರುತ್ತದೆ ಎಂಬ ಸಾಂವಿಧಾನಿಕ ಹಕ್ಕನ್ನು ನ್ಯಾಯಾಲಯ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Amruthadhaare Serial: ಅಕ್ರಮ ಸಂಬಂಧ ಸಾಕು, ಹೆಂಗಸ್ರೆಲ್ಲಾ ಕುಡುಕರಾಗಿ ಎಂದು ಸಾರುತಿವೆ ಸೀರಿಯಲ್​ಗಳು?
ವಿಚ್ಛೇದಿತ ಮಗಳನ್ನು ಅದ್ಧೂರಿಯ ಸ್ವಾಗತ ಮಾಡಿಕೊಂಡ ನಿವೃತ್ತ ನ್ಯಾಯಾಧೀಶ: ವಿಡಿಯೋ ನೋಡಿ