ಈ ಪಾಯಿಂಟ್ಸ್‌ ಫಾಲೋ ಮಾಡಿ, ನಿಮ್ಮ ಲೈಫ್‌ ಬದಲಾಗುತ್ತೆ!

By Suvarna NewsFirst Published Dec 24, 2019, 12:53 PM IST
Highlights

ನಂಗೆ ಮಾತ್ರ ಯಾಕೆ ಈ ಕಷ್ಟ ಅಂತ ಕೊರಗೋ ಲೀಸ್ಟ್‌ ನಲ್ಲಿದ್ದೀರಾ, ಚೆಕ್‌ ಮಾಡಿ. ಹಾಗಿದ್ರೆ ಇಲ್ಲಿರೋ ಕೆಲವು ಪಾಯಿಂಟ್ಸ್‌ ನಿಮ್ಮ ಲೈಫ್‌ಅನ್ನು ಬದಲಾಯಿಸಬಲ್ಲದು.
 

‘ನಾನ್ಯಾಕೆ ಹೀಗೆ?’,‘ಜಗತ್ತೆಲ್ಲ ಖುಷಿ ಖುಷಿಯಾಗಿರುವಾಗ ನಂಗೆ ಮಾತ್ರ ಯಾಕೆ ಈ ಶಿಕ್ಷೆ?’ ಹೀಗಂತ ಕೊರಗುವವರು ನಮ್ಮಲ್ಲಿ ಬಹಳ ಜನ ಇದ್ದಾರೆ. ಯಾಕೆ ಕೆಲವೊಬ್ಬರಿಗೆ ಅದ್ಭುತ ಖುಷಿ ನೀಡೋ ಲೈಪು ಕೆಲವರಿಗೆ ಮಾತ್ರ ಕಷ್ಟ ನೀಡುತ್ತೆ, ಕೆಲವರು ನಿತ್ಯ ಖುಷಿಯಿಂದ ಎನ್‌ಜಾಯ್‌ ಮಾಡ್ತಿದ್ರೆ ಉಳಿದವರು ಚಿಂತೆ, ವಿಷಾದದಲ್ಲಿರುತ್ತಾರೆ. ನೀವು ಲೈಫ್‌ಅನ್ನು ಎನ್‌ಜಾಯ್‌ ಮಾಡ್ಕೊಂಡು ಖುಷಿ ಖುಷಿಯಾಗಿರುವ ಕೆಟಗರಿಯಲ್ಲಿದ್ದೀರಾ ಅಥವಾ ನಂಗೆ ಮಾತ್ರ ಯಾಕೆ ಈ ಕಷ್ಟ ಅಂತ ಕೊರಗೋ ಲೀಸ್ಟ್‌ ನಲ್ಲಿದ್ದೀರಾ, ಚೆಕ್‌ ಮಾಡಿ. ಹಾಗಿದ್ರೆ ಇಲ್ಲಿರೋ ಕೆಲವು ಪಾಯಿಂಟ್ಸ್‌ ನಿಮ್ಮ ಲೈಫ್‌ಅನ್ನು ಬದಲಾಯಿಸಬಲ್ಲದು. ಆದ್ರೆ ಒಂದು ಮಾತು, ಹಾಗೆ ಚೇಂಜ್‌ ಆಗ್ಬೇಕು ಅನ್ನೋ ಮನಸ್ಸಿದ್ರೆ ಈಗಿಂದೀಗ್ಲೇ ಕೆಳಗೆ ಕೊಟ್ಟಿರೋ ಪಾಯಿಂಟ್‌ಗಳನ್ನು ಫಾಲೋ ಮಾಡ್ತೀನಿ ಅಂತ ನಿಮಗೆ ನೀವೇ ಪ್ರಾಮಿಸ್‌ ಮಾಡ್ಬೇಕು. ಏನದು ಪಾಯಿಂಟ್ಸ್‌, ಅದು ಹೇಗೆ ನಿಮ್ಮನ್ನು ಚೇಂಜ್‌ ಮಾಡುತ್ತೆ..

ಪಾಯಿಂಟ್ಸ್‌ ಹೇಳೋ ಮುಂಚೆ ಒಂದು ಕಥೆ ಹೇಳತೀನಿ...

ಒಬ್ಬ ಮನುಷ್ಯ ಕಾಡಲ್ಲಿ ಓಡಾಡ್ತಾ ಇದ್ದ. ಅವನಿಗೊಂದು ಅದ್ಭುತವಾದ ಹಕ್ಕಿ ಕಾಣಿಸ್ತು. ಅವನು ಆವರೆಗೂ ಅಂಥಾ ಸುಂದರವಾದ ಹಕ್ಕಿ ನೋಡಿರಲೇ ಇಲ್ಲ. ಆ ಪಕ್ಷಿ ನೋಡ್ತಿದ್ದ ಹಾಗೆ ಅವನಿಗೆ ಅದರಿಂದ ಕಣ್ಣು ಕೀಳಲಿಕ್ಕಾಗಲಿಲ್ಲ. ಮನಸ್ಸು ಆ ಹಕ್ಕಿ ನಂಗೆ ಬೇಕು, ಅದು ನನ್ನ ಪ್ರೀತಿಯ ಪ್ರಾಣಿ ಆಗ್ಬೇಕು ಅಂತ ರಚ್ಚೆ ಹಿಡಿಯಿತು. ವ್ಯಕ್ತಿಗೆ ತಡೆಯಲಾಗಲಿಲ್ಲ. ಬಲೆ ಬೀಸಿ ಹಕ್ಕಿ ಹಿಡಿದೇ ಬಿಟ್ಟ.

ಆಶ್ಚರ್ಯ ಅಂದರೆ ಆ ಹಕ್ಕಿ ಮನುಷ್ಯರ ಹಾಗೆ ಮಾತನಾಡಲಾರಂಭಿಸಿತು. ‘ದಯವಿಟ್ಟು ನನ್ನ ಬಿಟ್ಟುಬಿಡು. ನೀನೀಗ ನನ್ನ ಬಿಟ್ರೆ ನಿನಗೆ ಲೈಫ್‌ನಲ್ಲಿ ಬಹಳ ಪ್ರಯೋಜನಕ್ಕೆ ಬರುವ ಮೂರು ಮಾತುಗಳನ್ನು ಹೇಳ್ತೀನಿ. ಆ ಮಾತುಗಳನ್ನು ನೀನು ಸೀರಿಯಸ್‌ ಆಗಿ ಫಾಲೋ ಮಾಡಿದರೆ ನೀನು ಬಹಳ ಎತ್ತರಕ್ಕೆ ಹೋಗ್ತೀಯಾ..’ ಅಂದಿತು.

ಮನುಷ್ಯನಿಗೆ ಆಶ್ಚರ್ಯ. ಈ ಹಕ್ಕಿ ಮಾತೂ ಆಡುತ್ತಲ್ಲಾ ಅಂತ. ಜೊತೆಗೆ ಗೊಂದಲ. ಇದನ್ನೀಗ ಬಿಟ್ಟುಬಿಡುವುದಾ ಅಥವಾ ಇಟ್ಕೊಳ್ಳೋದಾ ಅಂತ. ಕೊನೆಗೊಂದು ನಿರ್ಧಾರಕ್ಕೆ ಬಂದ. ‘ಆಯ್ತು ಹಕ್ಕಿ. ನಿನ್ನ ಬಿಟ್ಟುಬಿಡ್ತೀನಿ. ಅದೇನು ಹೇಳ್ತೀಯೋ ಹೇಳು..’ ಅಂದ.

ಈ ಸ್ವಭಾವಗಳಿದ್ರೆ ಇವರಿನ್ನೂ ಭಾವನಾತ್ಮಕವಾಗಿ ಬೆಳೆದಿಲ್ಲ ಎಂದರ್ಥ!

ಹಕ್ಕಿ ಹೇಳಿತು. ‘ನನ್ನ ಮೊದಲ ಮಾತು ನೀನು ನನ್ನನ್ನು ಬಿಟ್ಟ ಕೂಡಲೇ ಹೇಳ್ತೀನಿ. ಎರಡನೆ ಮಾತು ಅದೋ ನಿನ್ನೆದುರು ಒಂದು ಮರ ಇದೆಯಲ್ಲಾ, ಆ ಮರದ ಮೇಲೆ ಕೂತು ಹೇಳ್ತೀನಿ. ಮೂರನೇ ಹಾಗೂ ಕೊನೆಯ ಮಾತು ಎತ್ತರದ ಆಕಾಶದಲ್ಲಿ ನಿಂತು ಹೇಳ್ತೀನಿ..’

ಮನುಷ್ಯ ಹಕ್ಕಿಯನ್ನು ಹಿಡಿದಿದ್ದ ಕೈಯನ್ನು ಸಡಿಲಿಸಿದ. ಹಕ್ಕಿ ಅವನಿಂದ ಸ್ವತಂತ್ರವಾಯಿತು. ಅವಕಾಶದಲ್ಲಿ ರೆಕ್ಕೆಗಳನ್ನು ಬಡಿಯತೊಡಗಿತು. ಆಗ ಅದರ ಮೊದಲ ಮಾತು ಹೊರಬಿತ್ತು.
‘ನನ್ನ ಮೊದಲ ಮಾತು- ಹಳೆಯ ತಪ್ಪುಗಳನ್ನು, ನೋವುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ನೋಯಬೇಡ, ನಿನಗೆ ನೀನೇ ಹಿಂಸಿಸಿಕೊಳ್ಳಬೇಡ. ಛೇ, ನಾನು ಹಾಗೆ ಮಾಡಬಾರದಿತ್ತು ಅಂತ ಕೊರಗಿ ಕೊರಗಿ ಒದ್ದಾಡಬೇಡ.’

ಮನುಷ್ಯ ತಾನು ಕೇಳಿದ್ದನ್ನು ಮತ್ತೊಮ್ಮೆ ನೆನಪಿಸಿಕೊಂಡು ಮನನ ಮಾಡುತ್ತಿರುವಾಗಲೇ ಹಕ್ಕಿ ಅಲ್ಲಿಂದ ತುಸು ಎತ್ತರಕ್ಕೆ ಹಾರಿತು. ಮೊದಲೇ ತೋರಿಸಿದ ಮರದ ರೆಂಬೆಯ ಮೇಲೆ ಹೋಗಿ ಕುಳಿತುಕೊಂಡಿತು. ಅಲ್ಲಿಂದ ಅದರ ಎರಡನೇ ಮಾತು ಹೊರಬಿತ್ತು

‘ಎಲೈ ವ್ಯಕ್ತಿಯೇ, ನೀನು ಯಾವುದನ್ನು ಕಣ್ಣಾರೆ ಕಾಣದೇ ಹೋಗುತ್ತೀಯೋ, ಅದರ ಬಗ್ಗೆ ತಪ್ಪು ನಂಬಿಕೆಗಳನ್ನು ಬೆಳೆಸಿಕೊಳ್ಳಬೇಡ.’
ಮನುಷ್ಯ ನೋಡು ನೋಡುತ್ತಿರುವಂತೇ ಹಕ್ಕಿ ಕೊಂಬೆ ಬಿಟ್ಟು ಮತ್ತೂ ಎತ್ತರಕ್ಕೆ ವಿಶಾಲ ಆಗಸಕ್ಕೆ ಹಾರಿತು. ಮತ್ತೆ ಅಲ್ಲಿಂದ ಹೇಳಿತು-‘ ನೀನೊಬ್ಬ ಮೂರ್ಖ. ನನ್ನ ದೇಹದಲ್ಲಿ ಅನೇಕ ಬೆಲೆಗಟ್ಟಲಾಗದ ಹರಳುಗಳಿವೆ. ನನ್ನನ್ನು ಹಾರಲು ಬಿಡದೇ ಕೊಂದು ನನ್ನ ದೇಹವನ್ನು ಸೀಳಿ ಆ ಆಭರಣಗಳನ್ನು ಪಡೆದಿದ್ದರೆ ನೀನು ಬುದ್ಧಿವಂತ ಆಗುತ್ತಿದ್ದೆ. ಜೊತೆಗೆ ಅತೀ ಶ್ರೀಮಂತನೂ ಆಗುತ್ತಿದ್ದೆ’

ವ್ಯಕ್ತಿ ಹಲುಬಿದ. ‘ದೇವರೇ, ನಾನೇನು ಮಾಡಿದೆ..ಬದುಕಿನಲ್ಲಿ ಇನ್ಯಾವುತ್ತೂ ಈ ಮೂರ್ಖತನವನ್ನು ಮರೆಯಲಾರೆ. ಓ ಹಕ್ಕಿಯೇ, ನೀನು ನನಗೆ ಇನ್ನೊಂದು ಮಾತು ಹೇಳುವೆಯಾ ದಯವಿಟ್ಟು. ಅದಾದರೂ ನನಗೊಂದು ನೆಮ್ಮದಿ ಕೊಡಬಲ್ಲದೋ ಏನೋ..’

ಹಕ್ಕಿ ಜೋರಾಗಿ ನಗುತ್ತಾ ಹೇಳಿತು, ‘ನಾನು ನಿನ್ನನ್ನು ಪರೀಕ್ಷಿಸುತ್ತಿದ್ದೆ. ನಾನು ಕೊಟ್ಟ ಮೊದಲ ಮಾತನ್ನ ನೀನೆಷ್ಟು ಅಳವಡಿಸಿಕೊಂಡಿರುವೆ ಅಂತ. ಆದರೆ ಒಂದೇ ಕ್ಷಣದಲ್ಲೇ ನೀನದನ್ನು ಮರೆತುಬಿಟ್ಟೆ. ಮೊದಲು ನಾನು ಹೇಳಿದ್ದು ಹಳೆಯ ತಪ್ಪುಗಳನ್ನು ನೆನೆದು ಕೊರಗಬೇಡ ಅಂತ. ನೀನು ಕೊರಗಿದೆ. ಎರಡನೇ ಮಾತು, ಯಾವತ್ತೂ ಕಣ್ಣಾರೆ ನೋಡದೇ, ಆತ್ಮಕ್ಕೆ ನಿಜ ಅನಿಸದ್ದನ್ನು ನಂಬಬೇಡ ಅಂತ. ಆದರೆ ನೀನು ನಂಬಿದೆ. ನನ್ನ ಇಷ್ಟು ಚಿಕ್ಕ ದೇಹದೊಳಗೆ ಅದೆಂಥಾ ಹರಳುಗಳಿರಬಲ್ಲದು..ಕೊನೆಯ ಮಾತನ್ನು ಹೇಳಿಯೇ ತೀರುತ್ತೇನೆ. ನೀನೀಗಾಗಲೇ ತಿಳಿದುಕೊಂಡದ್ದನ್ನು ಅಳವಡಿಸಿಲ್ಲ ಅಂದ ಮೇಲೆ ಇನ್ನೂ ಹೆಚ್ಚೆಚ್ಚು ತಿಳಿಯುವ ಹಪಿಹಪಿ ಯಾಕೆ ಪಡುತ್ತೀಯಾ.. ಅದು ನಿನಗೆ ಏನನ್ನೂ ನೀಡದು. ಈ ಅಮೂಲ್ಯ ಮಾತನ್ನು ಹೇಳಿ ಹಕ್ಕಿ ವಿಶಾಲ ಆಗಸದಲ್ಲಿ ಲೀನವಾಯ್ತು.

ಆಗ ಹೇಳಬೇಕೆಂದಿದ್ದ ಮೂರು ಪಾಯಿಂಟ್‌ಗಳೂ ಇವೇ. ಅಳವಡಿಸಿಕೊಂಡರೆ ಲೈಫ್‌ ಬದಲಾಗೋದು ಗ್ಯಾರೆಂಟಿ.

click me!