
ದೆಹಲಿ: ಪೆಹಲ್ಗಾಮ್ನಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಧರ್ಮ ಕೇಳಿ ಹಿಂದೂಗಳ ಮಾರಣ ಹೋಮ ಮಾಡಿದ ಬಳಿಕ, ಅದಕ್ಕೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದು, ಅದರ ಹೆಡೆಮುರಿಯನ್ನು ಕಟ್ಟಿಹಾಕಿದ್ದು, ಇನ್ನು ಭಾರತದ ಸಹವಾಸಕ್ಕೆ ಬರಬಾರದು ಎನ್ನುವ ಪಾಠ ಕಲಿಸಿರೋದು ಈಗ ಇತಿಹಾಸದ ಪುಟ ಸೇರಿದೆ. ಈ ಕಾರ್ಯಾಚರಣೆಯ ಬಳಿಕ ಇದೇ ಮೊದಲ ಬಾರಿಗೆ 150 ಪಾಕಿಸ್ತಾನದ ಯುವತಿಯರು ಮದುವೆಯಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. 300 ಮಂದಿ ಇನ್ನೂ ಲೈನ್ನಲ್ಲಿ ಇದ್ದು, ಬರಲು ಕಾಯುತ್ತಿದ್ದಾರೆ.
ಅಷ್ಟಕ್ಕೂ, ಭಾರತ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜನರ ನಡುವೆ ವೈವಾಹಿಕ ಸಂಬಂಧ ಸರ್ವೇ ಸಾಮಾನ್ಯ. ಎರಡೂ ದೇಶಗಳ ನಡುವೆ ಇದಾಗಲೇ ಸಾಕಷ್ಟು ಮದುವೆಗಳಾಗಿವೆ. ಆದರೆ ಸುಮಾರು 450 ಮಂದಿಯ ಮದುವೆ ಫಿಕ್ಸ್ ಆಗಿತ್ತು. ಆದರೆ, ಇದಕ್ಕೆ 'ಆಪರೇಷನ್ ಸಿಂದೂರ್' ಅಡ್ಡಿಯಾಗಿತ್ತು. ಈ ಕಾರ್ಯಾಚರಣೆಯ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಪರ್ಕ ಕಡಿತಗೊಂಡಿತ್ತು. ವೀಸಾ ಮತ್ತು ಗಡಿ ಮಾರ್ಗಗಳು ಬಂದ್ ಆಗಿದ್ದವು.ಆದರೆ, ಇದೀಗ ಈ ಜೋಡಿಗಳಿಗೆ ಜೀವ ಕೊಟ್ಟಿದೆ ಭಾರತ. ಪಾಕಿಸ್ತಾನಿಗಳನ್ನು ಭಾರತಕ್ಕೆ ಬರಲು ಅನುವು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಯುವತಿಯರು ಭಾರತದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸದ್ಯ, ವಾಘಾ-ಅಟ್ಟಾರಿ ಗಡಿ ಬಂದ್ ಆಗಿರುವುದರಿಂದ ವಧುಗಳು ಮತ್ತು ಅವರ ಸಂಬಂಧಿಕರು ಮಸ್ಕತ್, ದುಬೈ ಮತ್ತು ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಂದ ಭಾರತ ಪ್ರವೇಶಿಸಲು ಅವಕಾಶ ನೀಡಲಾಗಿದೆ. 150 ಯುವತಿಯರು ಈ ಮಾರ್ಗಗಳ ಮೂಲಕ ಭಾರತಕ್ಕೆ ಬಂದಿದ್ದಾರೆ ಎಂದು ಪಾಕಿಸ್ತಾನದ ಸಿಂಧಿ ವಲಸಿಗರ ಪರವಾಗಿ ಕೆಲಸ ಮಾಡುವ ನಾಗ್ಪುರದ ಸಮುದಾಯದ ಮುಖಂಡ ರಾಜೇಶ್ ಝಂಬಿಯಾ ಮಾಹಿತಿ ನೀಡಿದ್ದಾರೆ. "ಹಲವು ಪ್ರಯತ್ನಗಳ ನಂತರ ವಧುಗಳು ಮತ್ತು ಅವರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ವೀಸಾ ಮಂಜೂರು ಮಾಡಿದೆ. ಅವರು ಭಾರತಕ್ಕೆ ಬಂದಿದ್ದಾರೆ. ಇದರಲ್ಲಿ 15 ಮಂದಿ ನಾಗ್ಪುರದಲ್ಲಿ ವಿವಾಹವಾಗಲಿದ್ದಾರೆ" ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಪ್ರಸಿದ್ಧ ಹಿಂದೂ ಧಾರ್ಮಿಕ ಕ್ಷೇತ್ರ 'ಶಾದಾನಿ ದರ್ಬಾರ್' ಈ ವಿವಾಹ ಕಾರ್ಯಕ್ರಮಗಳಿಗೆ ಮರುಜೀವ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಾಘಾ ಗಡಿ ಬಂದ್ ಆದ ನಂತರ ಉಂಟಾಗಿದ್ದ ಬಿಕ್ಕಟ್ಟನ್ನು ಪರಿಹರಿಸಲು ಶಾದಾನಿ ದರ್ಬಾರ್ ಭಾರತ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಸದ್ಯ 150 ವಧುಗಳು ಅವರ ಕುಟುಂಬಸ್ಥರಿಗೆ ವೀಸಾ ಕೊಡಿಸಿದೆ.ನಾಗ್ಪುರ, ರಾಯ್ಪುರ, ಜೋಧ್ಪುರ, ಪುಣೆ ಸೇರಿದಂತೆ ಭಾರತದ ವಿವಿಧ ನಗರಗಳ ಯುವಕರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪಾಕಿಸ್ತಾನಿ ಯುವತಿಯರ ಪಟ್ಟಿಯನ್ನು ಶಾದಾನಿ ದರ್ಬಾರ್ ಸಿದ್ಧಪಡಿಸಿತ್ತು. ಇದನ್ನು ಭಾರತದ ಗೃಹ ಸಚಿವಾಲಯಕ್ಕೆ ರವಾನಿಸಿ, ಇವರೆಲ್ಲರಿಗೂ ವೀಸಾ ನೀಡುವಂತೆ ಮನವಿ ಮಾಡಿತ್ತು.
ಇದನ್ನು ಭಾರತ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಹೇಳಿ ಕೇಳಿ ಕುತಂತ್ರಿ ಪಾಕಿಸ್ತಾನದವರನ್ನು ನಂಬುವುದಾದರೂ ಹೇಗೆ? ಉಗ್ರರಿಗೆ ನೆಲೆ ಕೊಟ್ಟು, ತಾನು ಬೀದಿಗೆ ಬಂದಿದ್ದರೂ ಭಾರತದ ಮೇಲೆ ಕಣ್ಣು ನೆಟ್ಟಿರುವ ಪಾಕಿಗಳನ್ನು ಅಷ್ಟು ಸುಲಭದಲ್ಲಿ ನಂಬುವಂತೆಯೇ ಇಲ್ಲ. ಆದ್ದರಿಂದ ಭಾರತ ಸರ್ಕಾರವು, ಭದ್ರತಾ ದೃಷ್ಟಿಯಿಂದ ಕೇವಲ ವಿಮಾನದ ಮೂಲಕ ಬೇರೆ ದೇಶಗಳಿಂದ ಬರಬೇಕು ಎಂಬ ಷರತ್ತು ವಿಧಿಸಿತ್ತು. ಅದರಂತೆ 150 ವಧುಗಳು ಮತ್ತು ಅವರ ಕುಟುಂಬಸ್ಥರು ದುಬೈ, ಒಮಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ಮೂಲಕ ಭಾರತಕ್ಕೆ ಬಂದಿಳಿದಿದ್ದಾರೆ. ಇನ್ನೂ 300 ವಧುಗಳು ಬಾಕಿ: ಪಾಕಿಸ್ತಾನದಲ್ಲಿ ಇನ್ನೂ ಸುಮಾರು 300ಕ್ಕೂ ಹೆಚ್ಚು ಯುವತಿಯರು ಭಾರತದ ಯುವಕರನ್ನು ವರಿಸಲು ಕಾಯುತ್ತಿದ್ದಾರೆ. ಅವರಿಗೆ ಆದಷ್ಟು ಬೇಗ ವೀಸಾ ಮಂಜೂರು ಮಾಡುವಂತೆ ಶಾದಾನಿ ದರ್ಬಾರ್ ಮತ್ತು ಸಿಂಧಿ ವಲಸಿಗರ ಸಂಘಟನೆಗಳು ಭಾರತ ಸರ್ಕಾರಕ್ಕೆ ಮನವಿ ಮಾಡಿವೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.