ಗೋ ಹತ್ಯೆ ನಿಷೇಧ: ಜೆಡಿಎಸ್ ನಿಲುವೇನು.? ಗೊಂದಲಕ್ಕೀಡಾದ ದಳಪತಿಗಳು

By Suvarna NewsFirst Published Dec 9, 2020, 10:57 PM IST
Highlights

ಈಗಾಗಲೇ ಭೂ ಸುಧಾರಣೆ ಕಾಯ್ದೆಗೆ ಬೆಂಬಲಿಸಿ ಟೀಕಿಗೆ ಗುರಿಯಾಗಿರುವ ಜೆಡಿಎಸ್, ಇದೀಗ ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ಯಾವ ನಿಲುವು ತಾಳಬೇಕೆನ್ನುವ ಗೊಂದಲಕ್ಕೀಡಾಗಿದೆ.

ಬೆಂಗಳೂರು, (ಡಿ.09): ಗೋಹತ್ಯೆ ನಿಷೇಧ ಮಸೂದೆಗೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಈ ಮಸೂದೆ ಯಾವುದೇ ಚರ್ಚೆಯಿಲ್ಲದೇ ಇಂದು (ಬುಧವಾರ) ಅಂಗೀಕಾರಗೊಂಡಿದೆ.

ಇದೀಗ ಉದ್ಭವಿಸಿರುವ ಪ್ರಶ್ನೆ ಏನಂದ್ರೆ ಜೆಡಿಎಸ್ ಮುಂದಿನ ನಿಲುವೇನು.? ಎನ್ನುವುದು. ಯಾಕಂದ್ರೆ ಈಗಾಗಲೇ ದಳಪತಿಗಳು ಭೂ ಸುಧಾರಣಾ  ಕಾಯಿದೆ ವಿಚಾರದಲ್ಲಿ ಬಿಜೆಪಿ ಪರ ನಿಂತಿದ್ದ ರಾಜ್ಯದಾದ್ಯಂತ ತೀವ್ರ ಟೀಕೆ ಗೊಳಗಾಗಿದೆ.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅಂಗೀಕಾರ: ಜೆಡಿಎಸ್-ಬಿಜೆಪಿ ಮೈತ್ರಿಗೆ ನಾಂದಿ...! 

ರೈತಸಂಘಟನೆಗಳೂ ಸೇರಿದಂತೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಮೇಲೆ ಟೀಕಾ ಪ್ರಹಾರವಾಗುತ್ತಿದ್ದು, ರೈತವಿರೋಧಿ ಜೆಡಿಎಸ್ ಎಂಬ ರೀತಿಯಲ್ಲಿ ಕುಮಾರಸ್ವಾಮಿ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಹಾಗಾಗಿ ಎಚ್ಚೆತ್ತುಕೊಂಡಿರುವ ಜೆಡಿಎಸ್ ನಾಯಕರು, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೋ ಹತ್ಯೆ ನಿಷೇಧ ಕಾಯಿದೆ ವಿಚಾರದಲ್ಲಿ ಭಿನ್ನ ನಿಲುವು ತಳೆಯುವ ಸಾದ್ಯತೆ ಇದೆ.

ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾಗುತ್ತಿದ್ದಂತೆಯೇ ಸದನದಲ್ಲಿ ಮೊಳಗಿದ ಜೈ ಶ್ರೀರಾಮ್ ಘೋಷಣೆ! 

ನಾಳೆ (ಶುಕ್ರವಾರ) ಕಲಾಪದಲ್ಲಿ  ಗೋಹತ್ಯೆ ನಿಷೇಧ ಕಾಯಿದೆ ಚರ್ಚೆಗೆ ಬರಲಿದೆ. ಒಂದು ವೇಳೆ ಕಾಯಿದೆಗೆ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಸರ್ಕಾರದ ನಿಂತರೆ ಬಿಜೆಪಿಗೆ ಅನುಕೂಲ. ಆದರೆ ಕಾಯಿದೆಯನ್ನು ವಿರೋಧಿಸಿ ಕಾಂಗ್ರೆಸ್ ಜೊತೆ ಕೈ ಜೊಡಿಸಿದರೆ ಅತ್ತ ಪರಿಷತ್‌ನಲ್ಲೂ ಕಾಯಿದೆಗೆ ಹಿನ್ನಡೆಯಾಗಲಿದೆ. ಹೀಗಾಗಿ ಜೆಡಿಎಸ್ ಏನ್ಮಾಡಬೇಕು ಎನ್ನುವ ಗೊಂದಲಕ್ಕೆ ಬಿದ್ದಿದೆ.

ಈಗಾಗಲೇ ದಳಪತಿಗಳು ಬೆಳಿಗ್ಗೆ ಒಂದು ಪಕ್ಷ ಸಂಜೆ ಮತ್ತೊಂದು ಪಕ್ಷಕ್ಕೆ ಬೆಂಬಲ ಅಂತಾ ಟೀಕೆಗೆ ಒಳಗಾಗಿದೆ. ಮತ್ತೆ ಈ ಕಾಯಿದೆ ಬೆಂಬಲಿಸಿ ಬಿಜೆಪಿ ಪರ ನಿಂತರೂ ಟೀಕೆ ಎದುರಿಸುವ ಭಯವೂ ಸಹ ಜೆಡಿಎಸ್‌ಗೆ ಇದೆ. ಮತ್ತೊಂದೆಡೆ ಕಾಯಿದೆ ವಿರೊಧಿಸಿ ಕಾಂಗ್ರೆಸ್ ಪರ ನಿಂತರೂ ಟೀಕೆಗೊಳಗಾಗುವ ಸಂಭವ ಇದೆ. ಇದರಿಂದ ಗೋ ಹತ್ಯಾ ನಿಷೇಧ ಪರ ಇರಬೇಕಾ? ಅಥವಾ ವಿರೋಧಿಸಬೇಕಾ ಎನ್ನುವ ಅಡ್ಡಕತ್ತರಿಯಲ್ಲಿ ಸಿಲುಕಿಕೊಂಡಿದೆ.

ಒಟ್ಟಿನಲ್ಲಿ ಭೂ ಸುಧಾರಣೆ ಕಾಯ್ದೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ಜೆಡಿಎಸ್ ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ಯಾವ ನಿಲುವು ತಾಳುತ್ತೇ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದ ಕಲಾಪ ರಂಗೇರಲಿದೆ.

click me!