ಇಂದು ಒಂದೇ ದಿನ ರಾಜ್ಯದ 4 ಕಡೆ ಮೋದಿ ಸಮಾವೇಶ: ಭರ್ಜರಿ ಪ್ರಚಾರ

By Kannadaprabha NewsFirst Published Apr 28, 2024, 4:23 AM IST
Highlights

ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನ ಮುಗಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸಲಿದ್ದಾರೆ. 

ಬೆಂಗಳೂರು (ಏ.28): ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನ ಮುಗಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸಲಿದ್ದಾರೆ. ಭಾನುವಾರ ಇಡೀ ದಿನ ರಾಜ್ಯದಲ್ಲೇ ಉಳಿಯಲಿರುವ ಅವರು ಬೆಳಗಾವಿ ಸೇರಿ ನಾಲ್ಕು ಕಡೆ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಶಿವಮೊಗ್ಗ, ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಮೋದಿ ಅವರು ಪ್ರಚಾರ ಸಭೆ, ರೋಡ್‌ ಶೋ ನಡೆಸಿದ್ದರು. 

ಇದೀಗ ಬೆಳಗಾವಿ, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅವರು ಮತಯಾಚಿಸಲಿದ್ದಾರೆ. ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಶ್ರೀರಾಮುಲು, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರ ಅಭ್ಯರ್ಥಿಗಳ ಪರ ಅವರು ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಮೋದಿ ಸಮಾವೇಶಕ್ಕಾಗಿ ನಾಲ್ಕೂ ಕಡೆ ಬೃಹತ್‌ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಪ್ರತಿ ಸಮಾವೇಶದಲ್ಲೂ ಲಕ್ಷಕ್ಕೂ ಮೀರಿ ಜನರನ್ನು ಸೇರಿಸಲು ಕ್ರಮ ಕೈಗೊಳ್ಳಲಾಗಿದೆ.

ಒಬಿಸಿ ಮೀಸಲು ಕಸಿಯಲು ಬಿಡಲ್ಲ: ಪ್ರಧಾನಿ ಮೋದಿ ಗ್ಯಾರಂಟಿ

ಬೆಳಗಾವಿಯಲ್ಲಿ ವಾಸ್ತವ್ಯ: ಗೋವಾ ಪ್ರಚಾರ ಮುಗಿಸಿ ಶನಿವಾರ ರಾತ್ರಿಯೇ ಬೆಳಗಾವಿಗೆ ಆಗಮಿಸಿದ್ದ ಮೋದಿ ಅವರು ರಾತ್ರಿ ನಗರದ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ಭಾನುವಾರ ಬೆಳಗ್ಗೆ 9 ಗಂಟೆಗೆ ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ಬೃಹತ್‌ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿರುವ ಅವರು, ಬಳಿಕ ನೇರವಾಗಿ ಉತ್ತರ ಕರ್ನಾಟಕಕ್ಕೆ ತೆರಳಲಿದ್ದು, ಅಲ್ಲಿ ಮಧ್ಯಾಹ್ನ 12ಕ್ಕೆ ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 

ಶಿರಸಿ ಕಾರ್ಯಕ್ರಮ ಮುಗಿಸಿ ದಾವಣಗೆರೆಗೆ 2 ಗಂಟೆಗೆ ಆಗಮಿಸಲಿರುವ ಅವರು ನಗರದ ಹೈಸ್ಕೂಲ್ ಮೈದಾನದಲ್ಲಿ ಹಾವೇರಿ ಮತ್ತು ದಾವಣಗೆರೆ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಲಿದ್ದಾರೆ. ತರುವಾಯ ನಾಲ್ಕು ಗಂಟೆಗೆ ಹೊಸಪೇಟೆಯ ಡಾ.ಪುನೀತ್‌ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗದಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳ ಪರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಮೈಸೂರಿನ ಮೋದಿ ಸಭೆಯಲ್ಲಿ ಸುಮಲತಾರನ್ನು ನಾನೇ ಕರೆದಿದ್ದೇನೆ, ಆರ್.ಅಶೋಕ್ ಅವರೇ ಸಾಕ್ಷಿ: ಎಚ್‌ಡಿಕೆ

ನಾಳೆ ಬಾಗಲಕೋಟೆಗೆ ಭೇಟಿ: ಹೊಸಪೇಟೆ ಸಮಾವೇಶದ ಬಳಿಕ ಮೋದಿ ಅವರು ನಗರದ ರಾಯಲ್‌ ಆರ್ಕಿಡ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದು, ಸೋಮವಾರ ಬೆಳಗ್ಗೆ ನೇರವಾಗಿ ಬಾಗಲಕೋಟೆಗೆ ತೆರಳಲಿದ್ದಾರೆ. ಅಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

click me!