ಸಂಡೂರು ಉಪಚುನಾವಣೆ: ಕಾಂಗ್ರೆಸ್‌ ಕೋಟೆ ಉಳಿಯುತ್ತಾ?, ಬಿಜೆಪಿ ಬಾವುಟ ಹಾರುತ್ತಾ?

Published : Nov 09, 2024, 01:12 PM IST
ಸಂಡೂರು ಉಪಚುನಾವಣೆ: ಕಾಂಗ್ರೆಸ್‌ ಕೋಟೆ ಉಳಿಯುತ್ತಾ?, ಬಿಜೆಪಿ ಬಾವುಟ ಹಾರುತ್ತಾ?

ಸಾರಾಂಶ

ಸಂಡೂರು ವಿಧಾನಸಭಾ ಎಸ್ಟಿ ಮೀಸಲು ಕ್ಷೇತ್ರದಿಂದ ಈ ಬಾರಿ ಹಾಲಿ ಸಂಸದ ಈ.ತುಕಾರಾಂ ಪತ್ನಿ ಅನ್ನಪೂರ್ಣಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದರೆ, 2018ರ ಚುನಾವಣೆಯಲ್ಲಿ ಬಿಜೆಪಿ ಬಂಡಾಯವಾಗಿ ಕಣಕ್ಕಿಳಿದು ಕೇವಲ 7,191 ಮತಗಳನ್ನಷ್ಟೇ ಪಡೆದಿದ್ದ ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿ. 

ಮಂಜುನಾಥ ಕೆ.ಎಂ. 

ಬಳ್ಳಾರಿ(ನ.09):  ಲಗಾಯ್ತಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ಗಣಿನಾಡು ಸಂಡೂರಲ್ಲಿ ಉಪ ಚುನಾವಣಾ ಕಣ ರಂಗೇರಿದೆ. ಬಿರುಸಿನ ಪ್ರಚಾರದ ಭರಾಟೆಯಿಂದಾಗಿ ಈ ಕ್ಷೇತ್ರ ದಿನೇ ದಿನೇ ಜಿದ್ದಾಜಿದ್ದಿಯ ಅಖಾಡವಾಗಿ ಬದಲಾಗುತ್ತಿದೆ. 

ಸಂಡೂರು ವಿಧಾನಸಭಾ ಎಸ್ಟಿ ಮೀಸಲು ಕ್ಷೇತ್ರದಿಂದ ಈ ಬಾರಿ ಹಾಲಿ ಸಂಸದ ಈ.ತುಕಾರಾಂ ಪತ್ನಿ ಅನ್ನಪೂರ್ಣಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದರೆ, 2018ರ ಚುನಾವಣೆಯಲ್ಲಿ ಬಿಜೆಪಿ ಬಂಡಾಯವಾಗಿ ಕಣಕ್ಕಿಳಿದು ಕೇವಲ 7,191 ಮತಗಳನ್ನಷ್ಟೇ ಪಡೆದಿದ್ದ ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ಅವರು ಪತಿ ಈ. ತುಕಾರಾಂ ಅವರ ಪರ ಈ ಹಿಂದೆ ಪ್ರಚಾರದಲ್ಲಿ ಭಾಗಿಯಾಗಿದ್ದು ಬಿಟ್ಟರೆ ಚುನಾವಣಾ ಅಖಾಡ ಅವರ ಪಾಲಿಗೆ ಹೊಸದು. 

ಬಿಜೆಪಿಗರಿಗೆ ಗುಡ್ಡದ ಮೇಲೆ ಪ್ರೀತಿ, ನಮಗೆ ಬಡವರ ಮೇಲೆ ಪ್ರೀತಿ: ಸಚಿವ ಸಂತೋಷ್ ಲಾಡ್

ಇನ್ನು ಬಿಜೆಪಿ ಅಭ್ಯರ್ಥಿ ಒಮ್ಮೆ ಪಕೇತರರಾಗಿ ಚುನಾವಣೆ ಎದುರಿಸಿ ಸೋಲುಂಡಿದ್ದಾರೆ. ಅಸಮಾಧಾನದ ಹೊಗೆ ಇತ್ತು: ಕಾಂಗ್ರೆಸ್‌ನಲ್ಲಿ ಹತ್ತಾರು ಹೆಸರು ಕೇಳಿಬಂದಿತ್ತಾದರೂ ಕೊನೆಗೆ ಹಾಲಿ ಸಂಸದ ತುಕಾರಾಂ ಅವರ ಪತ್ತೆ ಅನ್ನಪೂರ್ಣಾ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಪಕ್ಷದಲ್ಲಿ ಒಂದಷ್ಟು ಬಂಡಾಯದ ಸುಳಿವು ಇತ್ತು. ತುಕಾರಾಂ ಈಗಾಗಲೇ 4 ಬಾರಿ ಕ್ಷೇತ್ರದ ಶಾಸಕರಾಗಿ ಅಧಿಕಾರ ಉಂಡಿದ್ದಾರೆ. ಕಳೆದ ವರ್ಷ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೂ ಸ್ಪರ್ಧಿಸಿ ಗೆದ್ದಿದ್ದಾರೆ. ಅವರಿಂದ ತೆರವಾಗಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇದೀಗ ಮತ್ತೆ ಪತ್ನಿಗೆ ಟಿಕೆಟ್ ಕೊಟ್ಟಿರುವುದು ಎಷ್ಟು ಸರಿ? ಎಂಬ ಕೂಗು ಆರಂಭದಲ್ಲಿ ಬಲವಾಗಿಯೇ ಕೇಳಿ ಬಂದಿತ್ತು. ಆದರೆ ಸಚಿವ ಸಂತೋಷ್ ಲಾಡ್ ಆ ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿ ಯಾಗಿದ್ದಾರೆ.ಮೊದಮೊದಲು ಸಾರ್ವಜನಿಕವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದ ಕುಟುಂಬ ರಾಜಕಾರಣದ ಚರ್ಚೆ ಈಗ ಮೂಲೆಸೇರಿದೆ.

ಇನ್ನು ಕಮಲ ಪಕ್ಷದಲ್ಲೂ ಟಿಕೆಟ್ ವಿಚಾರದಲ್ಲಿ ಅಸಮಾಧಾನದ ಹೊಗೆ ಹರಡಿತ್ತು. ಕಳೆದ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸ್ಥಾಪಿತ ಕೆಆ‌ರ್ ಪಿಪಿಯಿಂದ ಸಂಡೂರಲ್ಲಿ ಕೆ.ಎಸ್.ದಿವಾಕರ್ 31,299 ಮತಗಳನ್ನು ಪಡೆದು ಗಮನ ಸೆಳೆದಿದರು. ಜನಾರ್ದನ ರೆಡ್ಡಿ ಬಿಜೆಪಿ ಗೂಡಿಗೆ ಮರಳಿ ಬಂದಿದ್ದರಿಂದ ಈ ಬಾರಿ ಟಿಕೆಟ್ ಕೆ.ಎಸ್.ದಿವಾಕರ್‌ಗೇ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಕೊನೇ ಗಳಿಗೆಯಲ್ಲಿ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಲಾಯಿತು. ಇದರಿಂದ ಕುಪಿತಗೊಂಡ ದಿವಾಕರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಘೋಷಿಸಿದ್ದರು. ಕೊನೆಗೆ ಚುನಾವಣೆ ಸಾರಥ್ಯ ವಹಿಸಿರುವ ಜನಾರ್ದನ ರೆಡ್ಡಿ ಅವರೇ ಶಿಷ್ಯನನ್ನು ಸಮಾಧಾನಪಡಿಸಿ ಪ್ರಚಾರ ಕಾರ್ಯದಲ್ಲಿ ತೊಡಗುವಂತೆ ಮಾಡಿದ್ದಾರೆ. 

ಅಹಿಂದ ಮತಗಳೇ ಸವಾಲು

ಸಂಡೂರು ಕ್ಷೇತ್ರ ಗೆಲ್ಲಲೇಬೇಕು ಎಂದು ಹಠತೊಟ್ಟಿರುವ ಬಿಜೆಪಿಗೆ ಅಹಿಂದ ಮತಗಳನ್ನು ಒಗ್ಗೂಡಿಸುವುದೇ ದೊಡ್ಡ ಸವಾಲು. ಕಾಂಗ್ರೆಸ್ ಪಕ್ಷಕ್ಕಿರುವ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಮೇಲೆ ದೃಷ್ಟಿ ನೆಟರುವ ಬಿಜೆಪಿ ನಾಯಕರು, ನಿರ್ಣಾಯಕ ಮತಗಳಾದ ದಲಿತ, ಮುಸ್ಲಿಂ, ಕುರುಬ, ಇತರೆ ಹಿಂದುಳಿದ ಸಮಾಜದವರ ಮನವೊಲಿಕೆಗೆ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.  

2 ಬಾರಿಯಷ್ಟೇ ಕೈಗೆ ಸೋಲು; 

ಕ್ಷೇತ್ರದ ಇತಿಹಾಸದಲ್ಲಾದ 17 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದು ಎರಡೇ ಬಾರಿ. 15 ಬಾರಿ ಗೆದ್ದು ಬೀಗಿರುವ ಕಾಂಗ್ರೆಸ್ ಈ ಉಪ ಚುನಾವಣೆಯಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ. ಬಿಜೆಪಿ ನಾಯಕರು ಅದೇನೇ ಚುನಾವಣೆ ತಂತ್ರ ರೂಪಿಸಿದರೂ ರಾಜ, ಸರ್ಕಾರದ ಪಂಚ ಗ್ರಾರಂಟಿಗಳಿಂದಾಗಿ ನಮ ಮತದಾರ ಪ್ರಭು ಕೈಬಿಡಲ್ಲ ಎಂಬ ಕಾಂಗ್ರೆಸಿಗರದ್ದು. ವಿಶ್ವಾಸ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡು ಬಳಿಕ ಸಂಸದರಾಗಿಯೂ ಚುನಾಯಿತಗೊಂಡಿರುವ ಈ.ತುಕಾರಾಂ ಕ್ಷೇತ್ರದ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲವರು. ಕ್ಷೇತ್ರದಲ್ಲಿ ಬಿಗಿಹಿಡಿತ ಹೊಂದಿರುವ ಸಚಿವ ಸಂತೋಷ್ ಲಾಡ್ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಲಿದೆ ಎಂಬ ಲೆಕ್ಕಾಚಾರ ಪಕ್ಷದ ಕಾರ್ಯಕರ್ತರಲ್ಲಿದೆ. ತುಕಾರಾಂ ಸತತ ನಾಲ್ಕು ಬಾರಿ ಶಾಸಕರಾಗಿದ್ದರೂ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಸಂಡೂರಿನ ಬಸ್ ನಿಲ್ದಾಣ ನೋಡಿದರೆ ಸಾಕು. ಈ ಊರು ಎಷ್ಟರ ಮಟ್ಟಿಗೆ ಉದ್ಧಾರವಾಗಿದೆ ಎಂಬುದು ಗೊತ್ತಾಗುತ್ತದೆ. 

ಡಿಎಂಎಫ್, ಸಿಎಸಾರ್, ಕೆಎಂಆರ್‌ಇಸಿ ಅನುದಾನ ಸಮರ್ಪಕವಾಗಿ ಬಳಕೆ ಮಾಡುವಲ್ಲಿ ತುಕಾರಾಂ ವಿಫಲರಾಗಿದ್ದಾರೆ. ಗಣಿಗಾರಿಕೆ ಯಿಂದ ಹೆಚ್ಚಿನ ತೆರಿಗೆ ಸರ್ಕಾರಕ್ಕೆ ಸಂದಾಯವಾದರೂ ಇಲ್ಲಿನ ಕಾರ್ಮಿಕರ ಬದುಕು ಬದಲಾಗಿಲ್ಲ ಎಂದು ಆರೋಪಿಸುತ್ತಿರುವ ಬಿಜೆಪಿ, ತುಕಾರಾಂ ವಿರೋಧಿ ಮತಗಳು ಈ ಬಾರಿ ಕಮಲ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿವೆ ಎಂಬ ವಿಶ್ವಾಸದಲ್ಲಿದೆ. 

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ವಾಪಸ್ ಬಿಜೆಪಿ ಬಂದಿರುವುದು ಬಿಜೆಪಿ ಪಾಲಿಗೆ ಪ್ಲಸ್, ಹೆಚ್ಚಿದ ಪ್ರಚಾರದ ಕಾವು: ಈಗಾಗಲೇ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರದ ಕಾವು ಜೋರಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಘಟಾನುಘಟಿ ನಾಯಕರು ಈಗಾಗಲೇ ಮತದಾರರ ಮನವೊಲಿಕೆಗೆ ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಾದಿಯಾಗಿ ಸಚಿವರು, ಶಾಸಕರು ಕಾಂಗ್ರೆಸ್ ಪರ ಪ್ರಚಾರ ಕಾರ್ಯ ನಡೆಸಿದ್ದಾರೆ. 

ಕಾಂಗ್ರೆಸ್‌ನ ಅನೇಕ ನಾಯಕರು ಸಂಡೂರಿನಲ್ಲಿಯೇ ವಾಸ್ತವ್ಯ ಹೂಡಿದ್ದು, ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಸಚಿವರಿಗೆ ಜಿಪಂ ಕ್ಷೇತ್ರವಾರು, ಶಾಸಕರಿಗೆ ಹೋಬಳಿ, ಗ್ರಾಪಂವಾರು ಜವಾಬ್ದಾರಿ ನೀಡಲಾಗಿದೆ. ಇದೇ ವೇಳೆ ಜಾತಿವಾರು ಸಮೀಕರಣ ಕಾರ್ಯವೂ ನಡೆದಿದೆ. ಆಯಾ ಜಾತಿ ನಾಯಕರನ್ನು ಪ್ರಚಾರಕ್ಕೆ ಬಳಸಿಕೊಂಡು ಮತಗಳ ಕ್ರೋಢೀಕರಿಸುವ ತಂತ್ರ ನಡೆದಿದೆ. ಈ ವಿಚಾರದಲ್ಲಿ ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್ ಪಡೆಯ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿರುವ ಕಮಲ ಪಾಳಯವೂ ಭರ್ಜರಿ ಮತಬೇಟೆ ನಡೆಸುತ್ತಿದೆ. ವೀರಶೈವ ಲಿಂಗಾಯತ, ವಾಲ್ಮೀಕಿ, ಬ್ರಾಹ್ಮಣ, ವೈಶ್ಯ, ಜೈನ ಸಮುದಾಯದ ಮತಗಳ ಮೇಲೆ ಕಣ್ಣಟ್ಟಿರುವ ಬಿಜೆಪಿ, ಕಾಂಗ್ರೆಸ್‌ನ ಸಂಪ್ರದಾಯಿಕ ಮತಗಳನ್ನೂ ಸೆಳೆಯಲು ಕಸರತ್ತು ತುರು ಮಾಡಿದೆ. ಮಹಿಳಾ ಮತಗಳನ್ನು ಸೆಳೆಯಲು ಎರಡೂ ಪಕ್ಷಗಳು ಪ್ರತ್ಯೇಕ ಮಹಿಳಾ ತಂಡಗಳನ್ನು ರಚಿಸಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. 

ಸಂಡೂರು ಉಪಚುನಾವಣೆ: ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ!

ಘೋರ್ಪಡೆ ಮುನಿಸು, ಬಿಜೆಪಿಗೆ ಇರಿಸು ಮುರುಸು: 

ಬಿಜೆಪಿ ಸ್ಥಳೀಯ ಪ್ರಭಾವಿ ನಾಯಕ ಕಾರ್ತೀಕ್ ಘೋರ್ಪಡೆ ಚುನಾವಣಾ ಪ್ರಚಾರದಿಂದ ದೂರ ಉಳಿದಿರುವುದು ಕಮಲ ಪಾಳಯಕ್ಕೆ ಆತಂಕ ಮೂಡಿಸಿದೆ. ಘೋರ್ಪಡೆ ಒಡೆತನದ ಸ್ಮಯೋರ್‌ಕಂಪನಿಯಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರಿದ್ದು, ಅವರೆಲ್ಲ ಬಹುತೇಕ ಸಂಡೂರು ವ್ಯಾಪ್ತಿಯವರೇ ಆಗಿದ್ದಾರೆ. ಒಂದು ವೇಳೆ ಘೋರ್ಪಣೆ ಮುನಿಸಿನ ಪರಿಣಾಮ ಈ 10 ಸಾವಿರ ಮತಗಳು ಬಿಜೆಪಿ ಕೈತಪ್ಪುವ ಆತಂಕ ಒಳಗೊಳಗೆ ಶುರುವಾಗಿದೆ. ಹೊರಗಿನವರು-ಸ್ಥಳೀಯರು ಚರ್ಚೆ: ಬಿಜೆಪಿ ಅಭ್ಯರ್ಥಿ ಹೊರಗಿನವರು, ನಮ್ಮ ಅಭ್ಯರ್ಥಿ ಅನ್ನಪೂರ್ಣಾ ಸ್ಥಳೀಯರು ಎಂಬ ವಾದವನ್ನು ಕಾಂಗ್ರೆಸ್ ಮುಖಂಡರು ಪ್ರಚಾರದ ವೇಳೆ ಜನರ ಮುಂದಿಡುತ್ತಿದ್ದಾರೆ. ಇದು ಮತದಾರರ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಹೊರಗಿನವರು-ಸ್ಥಳೀಯರು ವಾದ ಮುಂದಿಟ್ಟುಕೊಡು ಲಾಭ ಪಡೆಯಲು ಕಾಂಗ್ರೆಸ್ ಮಾತ್ರ ಸಾಧ್ಯವಾದ ಎಲ್ಲ ಪ್ರಯತ್ನ ಮಾಡುತ್ತಿದೆ. 

ರೆಡ್ಡಿ-ಲಾಡ್ ಪ್ರತಿಷ್ಠೆ: 

ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಅನ್ನಪೂರ್ಣ ಮತ್ತು ಬಂಗಾರು ಹನುಮಂತು ಎದುರಾಳಿಗಳು, ಆದರೆ ಪರೋಕವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ನಡುವಿನ ಪ್ರತಿಷ್ಠೆಯ ಕದನವಾಗಿ ಈ ಚುನಾವಣೆ ಮಾರ್ಪಟ್ಟಿದೆ. ಸಂತೋಷ್ ಲಾಡ್ ಮತ್ತು ರೆಡ್ಡಿ ಇಬ್ಬರೂ ಈ ಕ್ಷೇತ್ರಕ್ಕೆ ಚಿರಪರಿಚಿತರು. ಜತೆಗೆ ಇಲ್ಲಿನ ಮತದಾರರ ಮೇಲೆ ತಮ್ಮದೇ ಆದ ಹಿಡಿತವನ್ನೂ ಹೊಂದಿದ್ದಾರೆ. ಹೀಗಾಗಿ ಲಾಡ್ ಸಂಡೂರಲ್ಲೇ ಉಳಿದು ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದರೆ, ಜನಾರ್ದನ ರೆಡ್ಡಿ ಕೂಡ ಇಲ್ಲೇ ಮನೆ ಮಾಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ