ಸಾವರ್ಕರ್ ಶಿಷ್ಯನ ಕ್ರಾಂತಿ: ಬ್ರಾಹ್ಮಣೇತರ ಅರ್ಚಕಿಯರದ್ದೇ ಅಗ್ರಪಂಕ್ತಿ!

By Web DeskFirst Published Sep 16, 2018, 1:05 PM IST
Highlights

ಧಾರ್ಮಿಕ ವಿಧಿ ವಿಧಾನದಲ್ಲಿ ಮಂತ್ರ ಪಠಿಸುವ ಬ್ರಾಹ್ಮಣೇತರ ಅರ್ಚಕಿಯರು! ಮಹಾರಾಷ್ಟ್ರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಸಾಮಾಜಿಕ ಕ್ರಾಂತಿ! ವೀರ ಸಾರ್ವಕರ್ ಶಿಷ್ಯನ ಅಸಾಧಾರಣ ಸಾಧನೆ! 150ಕ್ಕೂ ಹೆಚ್ಚು ಬ್ರಾಹ್ಮಣೇತರ ಅರ್ಚಕಿಯರನ್ನು ಸೃಷ್ಟಿಸಿದ ಸಾಧಕ! ಯುವ ಪೀಳಿಗೆಗೆ ಮಾದರಿಯಾದ 101 ವರ್ಷದ ರಾಮೇಶ್ವರ್‌ ಕರ್ವೆ 

ಮುಂಬೈ(ಸೆ.16): ಸಾಮಾಜಿಕ ಪೂರ್ವಾಗ್ರಹಗಳನ್ನು ಮೀರುವುದು ಇಂದಿನ ಕ್ರಾಂತಿಕಾರಿ ಸಮಾಜದ ಮೂಲ ಗುಣ. ಹಳೆಯ ಕಟ್ಟುಪಾಡುಗಳನ್ನು ಮುರಿದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವುದು ಈ ಪೀಳಿಗೆಯ ಸಮಾಜದ ಗಟ್ಟಿ ನಿರ್ಧಾರ. 

ಅದರಂತೆ ರಾಯ್‌ಗಢದ ಮೊಹೊಪಾಡ ಗ್ರಾಮದ ಸುತ್ತಮುತ್ತ ಈಗ 150 ಬ್ರಾಹ್ಮಣೇತರ ಅರ್ಚಕಿಯರಿದ್ದು ಮುಂಬಯಿ, ಥಾಣೆ, ನವಿ ಮುಂಬಯಿಗಳಲ್ಲಿ ಅವರಿಗೆ ಭಾರಿ ಬೇಡಿಕೆಯಿದೆ. ಹುಟ್ಟು, ಸಾವು, ಮದುವೆ, ಗಣೇಶೋತ್ಸವ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಈ ಅರ್ಚಕಿಯರು ನೆರವೇರಿಸುತ್ತಾರೆ.

ಸಮಾಜ ಬದಲಾವಣೆಗೆ 101 ವರ್ಷದ ಅಜ್ಜನ ತುಡಿತ:

ಇಂಥದ್ದೊಂದು ಕ್ರಾಂತಿಕಾರಕ ಬೆಳವಣಿಗೆಗೆ ಕಾರಣ ಅಲಿಬಾಗ್‌ನ 101 ವರ್ಷದ ರಾಮೇಶ್ವರ್‌ ಕರ್ವೆ ಅವರ 18 ವರ್ಷಗಳ ನಿರಂತರ ಹೋರಾಟ. ಶಿಕ್ಷಿತ ಬ್ರಾಹ್ಮಣೇತರ ಮಹಿಳೆಯರು ಅರ್ಚಕ ವೃತ್ತಿಯ ತರಬೇತಿ ಪಡೆಯುವಂತೆ ಮಾಡಿ ಪದವಿಗೆ ಸರಿ ಸಮಾನವಾದ ಪ್ರಮಾಣ ಪತ್ರ ಕೂಡ ಸಿಕ್ಕಿದೆ. ಆರಂಭದಲ್ಲಿ ಈ ಅರ್ಚಕಿಯರು ತಮ್ಮ ಮನೆಗಳಲ್ಲಿ ಗಣೇಶೋತ್ಸವ ಪೂಜೆ ನೆರವೇರಿಸುತ್ತಿದ್ದರು. 

ಮೊದಲಿಗೆ ಸಾರ್ವಜನಿಕರು ಈ ಮಹಿಳಾ ಅರ್ಚಕಿಯರನ್ನು ವಿರೋಧಿಸಿ ಸ್ವೀಕರಿಸಲು ಹಿಂಜರಿದರೂ ಬಳಿಕ ಗಣೇಶೋತ್ಸವ ಸೇರಿದಂತೆ ನಾನಾ ಪೂಜೆಗಳನ್ನು ನೆರವೇರಿಸಲು ಆಹ್ವಾನಿಸಲಾರಂಭಿಸಿದರು. ಹೀಗಾಗಿ ಮಹಿಳಾ ಅರ್ಚಕಿಯರು ಈಗ ಮದುವೆ , ಉಪನಯನ, ಶನಿ ಶಾಂತಿ, ಉತ್ತರಕ್ರಿಯೆ ಸೇರಿದಂತೆ ಎಲ್ಲ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಿದ್ದಾರೆ. 

ವೀರ ಸಾರ್ವಕರ್ ಪ್ರೇರಣೆ:

ಕರ್ವೆ 1920ರಲ್ಲಿ ರತ್ನಗಿರಿಯಲ್ಲಿ ಗೃಹಬಂಧನದಲ್ಲಿದ್ದ ವಿ.ಡಿ.ಸಾವರ್ಕರ್‌ ಅವರನ್ನು ಭೇಟಿಯಾಗಿದ್ದರು. ಅವರು ಸಂಸ್ಕೃತ ಪ್ರಸಾರ ಮಾಡುವಂತೆ ಹೇಳಿದ್ದರು. ಹೀಗಾಗಿ ಇವರು ಯಾವಾಗಲೂ ಬ್ರಾಹ್ಮಣೇತರರಿಗೆ ಸಂಸ್ಕೃತ ಶಿಕ್ಷಣ ನೀಡುವುದಕ್ಕೆ ಕಂಕಣಬದ್ಧರಾದವರು. ರಾಯ್‌ಗಢದಲ್ಲು ಐದಕ್ಕಿಂತಲೂ ಹೆಚ್ಚು ಶಾಲೆಗಳನ್ನು ಆರಂಭಿಸಿದ್ದಾರೆ ಎಂದು ಕರ್ವೆ ಅವರ ಮಗಳು ವಸಂತಿ ಹೇಳಿದ್ದಾರೆ. ಲಲಿತಾ ದಲ್ವಿ ಮೊಹೊಪಡಾದಲ್ಲಿ ಕರ್ವೆ ಅವರ ಮೊದಲ ವಿದ್ಯಾರ್ಥಿನಿಯಾಗಿದ್ದು, ಆಕೆಯ ಪತಿ ಕೂಡ ಕಲಿಕೆಗೆ ಸಹಕರಿಸಿದ್ದರು. 

ಈ ಮಹಿಳೆಯರಿಗೆ ಆರಂಭದಲ್ಲಿ ಸಮಾಜದಿಂದ ನಾನಾ ಬೆದರಿಕೆಗಳು ಬಂದಿದ್ದವು. ಋತುಸ್ರಾವದ ದಿನಗಳಲ್ಲಿ ಶ್ಲೋಕ ಪಠಿಸಿದರೆ ಮುಂದೆ ಕಠಿಣ ಶಿಕ್ಷೆಯಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದರು. ಆದರೆ ಈಗ ಎಲ್ಲವೂ ಒಪ್ಪಿತವೇ ಆಗಿದೆ ಎಂದು ಈ ಮಹಿಳಾ ಅರ್ಚಕಿಯರು ಹೇಳುತ್ತಾರೆ.

click me!