ಪರೀಕ್ಷೆ ಸಮಯದಲ್ಲಿ ಮೋದಿ ಈಜಿದ್ದೇಕೆ? ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ನಮೋ ಕಿವಿಮಾತು

By Suvarna Web DeskFirst Published Feb 5, 2018, 9:44 AM IST
Highlights

ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧಗೊಳ್ಳಲು ಕೆಲವೇ ವಾರಗಳಷ್ಟೇ ಬಾಕಿ ಇರುವಂತೆಯೇ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡ ದೂರ ಮಾಡುವ ನಿಟ್ಟಿನಿಂದ ‘ಎಕ್ಸಾಮ್ ವಾರಿಯರ್ಸ್‌’ ಎಂಬ ಪುಸ್ತಕ ಹೊರ ತಂದಿದ್ದಾರೆ. ಈ ಪುಸ್ತಕದಲ್ಲಿ ವಿದ್ಯಾರ್ಥಿಗಳಿಗಾಗಿ 25 ಮಂತ್ರಗಳು, ಪೋಷಕರು ಮತ್ತು ಶಿಕ್ಷಕರಿಗೆ ಸಲಹೆ ನೀಡಿದ್ದಾರೆ. 193  ಪುಟಗಳ ಈ ಪುಸ್ತಕದಲ್ಲಿರುವ ಕೆಲವು ಸಂಗತಿಗಳು ಇಲ್ಲಿವೆ.

ನವದೆಹಲಿ (ಫೆ.05): ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧಗೊಳ್ಳಲು ಕೆಲವೇ ವಾರಗಳಷ್ಟೇ ಬಾಕಿ ಇರುವಂತೆಯೇ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡ ದೂರ ಮಾಡುವ ನಿಟ್ಟಿನಿಂದ ‘ಎಕ್ಸಾಮ್ ವಾರಿಯರ್ಸ್‌’ ಎಂಬ ಪುಸ್ತಕ ಹೊರ ತಂದಿದ್ದಾರೆ. ಈ ಪುಸ್ತಕದಲ್ಲಿ ವಿದ್ಯಾರ್ಥಿಗಳಿಗಾಗಿ 25 ಮಂತ್ರಗಳು, ಪೋಷಕರು ಮತ್ತು ಶಿಕ್ಷಕರಿಗೆ ಸಲಹೆ ನೀಡಿದ್ದಾರೆ. 193  ಪುಟಗಳ ಈ ಪುಸ್ತಕದಲ್ಲಿರುವ ಕೆಲವು ಸಂಗತಿಗಳು ಇಲ್ಲಿವೆ.

ಪರೀಕ್ಷೆಗಳು ಹಬ್ಬವಿದ್ದಂತೆ, ಅವನ್ನು ಸಂಭ್ರಮಿಸಿ

ಪುಸ್ತಕದ ಮೊದಲ ಅಧ್ಯಾಯದಲ್ಲಿ ಪರೀಕ್ಷೆಗಳು ಎನ್ನುವುದು ಹಬ್ಬಗಳಿದ್ದಂತೆ. ಅವುಗಳನ್ನು ವಿದ್ಯಾರ್ಥಿಗಳು ಸಂಭ್ರಮಿಸಬೇಕು. ಪರಿಶ್ರಮದ ಮೇಲೆ ಭರವಸೆ ಇಡಿ. ನಿಮ್ಮ ಸಾಮರ್ಥ್ಯವನ್ನು ಸಂಭ್ರಮಿಸಿ ಎಂದಿದ್ದಾರೆ.

ಪ್ರಸ್ತುತಿಯೇ ಕೀಲಿಕೈ

ಉತ್ತರ ಬರೆಯುವಾಗ ಅದನ್ನು ಪ್ರಸ್ತುತಪಡಿಸುವ ಬಗೆ ಬಹಳ ಮುಖ್ಯ. ಅದನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಳ್ಳಬೇಕು. ಇದಕ್ಕೆ ತಮ್ಮ ಸಚಿವ ಸಂಪುಟದ ಸದಸ್ಯರ ಉದಾಹರಣೆ ನೀಡಿರುವ ಮೋದಿ, ‘ಪ್ರಧಾನಿಯಾಗಿ ಸಚಿವರು, ಅಧಿಕಾರಿಗಳಿಂದ ಹಲವಾರು ಪ್ರಸ್ತುತಿಗಳನ್ನು ನಾನು ಸ್ವೀಕರಿಸುತ್ತೇನೆ. ಪ್ರಸ್ತುತ ಪಡಿಸುವಿಕೆ ಒಳ್ಳೆಯದಾಗಿದ್ದರೆ ಉತ್ತಮ ಅಂಶ ತಿಳಿದು ಬರುತ್ತವೆ. ಒಳ್ಳೆಯ ಪ್ರಸ್ತುತಿ ನಿಮ್ಮ ನೆಚ್ಚಿನ ಕೇಕಿನ ಮೇಲೆ ಅಲಂಕಾರ ಮಾಡಿದಂತೆ. ಅದು ರುಚಿ ಹೆಚ್ಚಿಸುತ್ತದೆ, ಪ್ರಭಾವ ಬೀರುತ್ತದೆ.

ಚಿಂತೆ ಬೇಡ

ಒಮ್ಮೆ ಉತ್ತರ ಪತ್ರಿಕೆ ಸಲ್ಲಿಸಿದ ಬಳಿಕ ಅದರ ಬಗ್ಗೆ ಚಿಂತೆ ಬೇಡ. ನೀವು ಸರಿಯಾಗಿ ಉತ್ತರ ಬರೆದಿದ್ದರೆ ಚಿಂತಿಸುವ ಅಗತ್ಯವೇ ಇಲ್ಲ. ಉತ್ತರ ಸರಿಯಾಗಿರದೇ ಇದ್ದರೂ ಚಿಂತಿಸಬೇಕಿಲ್ಲ. ಉತ್ತರ ಪತ್ರಿಕೆ ಎನ್ನುವುದು ಒಮ್ಮುಖ ಪ್ರಯಾಣದ ಟಿಕೆಟ್ ಇದ್ದಂತೆ. ಉತ್ತರ ಪತ್ರಿಕೆ ಸಲ್ಲಿಸಿದ ಬಳಿಕ ಅದನ್ನು ಬದಲಾಯಿಸಲು ಆಗದು.

ಈಜುವ ಹವ್ಯಾಸ

ಪರೀಕ್ಷಾ ಸಿದ್ಧತೆ ಮಧ್ಯೆ ಸೂಕ್ತ ವಿಶ್ರಾಂತಿಯೂ ಅಗತ್ಯವಿದೆ. ‘ನಾನು ಯುವಕನಾಗಿದ್ದಾಗ ನನ್ನ ಹಳ್ಳಿಯ ಕೆರೆಯೊಂದರಲ್ಲಿ ಈಜಾಡುವ ಹವ್ಯಾಸ ಬೆಳೆಸಿಕೊಂಡಿದ್ದೆ. ನಿಸರ್ಗದ ಜೊತೆ ಬೆರೆವುದು ನಿಮ್ಮಲ್ಲಿ ಹೊಸತನ ತುಂಬುತ್ತದೆ. ಒತ್ತಡಕ್ಕೆ ಒಳಗಾಗದೇ ನಗುನಗುತ್ತಾ ಹೋಗಿ ಪರೀಕ್ಷೆ ಬರೆಯಿರಿ. ಪರೀಕ್ಷೆಯ ಸಂತೋಷ ಅನುಭವಿಸಿ.

ಇದು ಸಮಯ:

ಪರೀಕ್ಷೆ ಸಮಯದಲ್ಲಿ ನಿಮ್ಮದೇ ಆದ ಟೈಮ್‌ಟೇಬಲ್ ಸಿದ್ಧಪಡಿಸಿಕೊಳ್ಳ ಬೇಕು. ದಿನದ 24 ಗಂಟೆ ಹೇಗೆ ಕಳೀಬೇಕು ಎನ್ನುವುದರ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಂದ ನಿರೀಕ್ಷೆ ಮಾಡುವ ಬದಲು ಹೇಗಿದ್ದಾರೆಯೂ ಹಾಗೆಯೇ ಅವರನ್ನು ಸ್ವೀಕರಿಸಬೇಕು. ವಿದ್ಯಾರ್ಥಿಗಳು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೋ ಅದರಲ್ಲಿ ತೊಡಗಲು ಪ್ರೋತ್ಸಾಹಿಸಬೇಕು.

ಆಕಾಂಕ್ಷೆ ಇರಲಿಲ್ಲ; ಆದರೆ ಪ್ರಧಾನಿಯಾದೆ!:

ನೀವು ಚಿಕ್ಕಂದಿನಲ್ಲಿ ಪ್ರಧಾನಿಯಾಗುವ ಕನಸು ಕಂಡಿದ್ದರೇ ಇಂದು ಜನರು ಪದೇ ಪದೆ ನನ್ನನ್ನು ಕೇಳುತ್ತಾರೆ. ಆದರೆ, ನಾನು ಪ್ರಧಾನಿ ಆಗುವ ಕನಸು ಕಾಣವುದಿರಲಿ, ಕ್ಲಾಸ್ ಮಾನಿಟರ್ ಆಗುವ ಆಕಾಂಕ್ಷೆಯೂ ಇರಲಿಲ್ಲ.

 

click me!