ಕಾಂಗ್ರೆಸ್ ಶಾಸಕರಿಗೆ ಇದೀಗ ಹೊಸ ಅನುಮಾನ ಶುರುವಾಗಿದೆ. ಈಗಾಗಲೇ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಆದರೂ ಕೂಡ ಮುಂದೂಡಲ್ಪಡಬಹುದು ಎನ್ನುವ ಡೌಟ್ ಎದುರಾಗಿದೆ.
ಬೆಂಗಳೂರು : ಸಂಪುಟ ವಿಸ್ತರಣೆಗೆ ಡಿ.22ರ ಮಹೂರ್ತ ನಿಗದಿಯಾಗಿದೆ ಎಂದು ಖುದ್ದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದರೂ, ಅದನ್ನು ನಂಬುವ ಸ್ಥಿತಿಯಲ್ಲಿ ಸಂಪುಟ ಸ್ಥಾನಾಕಾಂಕ್ಷಿ ಕಾಂಗ್ರೆಸ್ ಶಾಸಕರು ಇಲ್ಲ.
ಇದು ಅಧಿವೇಶನ ಸುಗಮವಾಗಿ ನಡೆಸಲು ಹೂಡಿರುವ ತಂತ್ರ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ, ಡಿ.16ರಿಂದ ಧನುರ್ಮಾಸ ಶುರುವಾಗಲಿದೆ. 2019ರ ಜನವರಿ 14ರವರೆಗೆ ಧನುರ್ಮಾಸ ಮುಂದುವರೆಯಲಿದ್ದು, ಧನುರ್ಮಾಸದಲ್ಲಿ ಶುಭ ಕಾರ್ಯ ಮಾಡಬಾರದು ಎಂಬ ನಂಬಿಕೆಯಿದೆ.
ಹೀಗಾಗಿ ಡಿ.22ರ ವೇಳೆಗೆ ಧನುರ್ಮಾಸದ ನೆಪವೊಡ್ಡಿ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹಾಕುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಇದಾದ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಅನಂತರದ ಬಜೆಟ್ ಅಧಿವೇಶನದ ಕಾರಣಗಳನ್ನು ನೀಡಿ ಸಂಪುಟ ವಿಸ್ತರಣೆ ಎಂಬುದನ್ನು ಮರೀಚಿಕೆಯನ್ನಾಗಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.