
ಬೆಂಗಳೂರು (ಮೇ.06): ಪ್ರಜ್ವಲ್ ರೇವಣ್ಣ ಇನ್ನೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಂಸದರಾಗಿಯೇ ಇದ್ದಾರೆ. ಅವರು ಈ ಚುನಾವಣೆಯಲ್ಲಿ ಗೆದ್ದು ಎನ್ಡಿಎ ಅಭ್ಯರ್ಥಿಯಾದರೆ ಅವರ ವಿರುದ್ಧ ಪಕ್ಷದ ವತಿಯಿಂದ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ನಡೆಸಿದ ಮಹಿಳಾ ದೌರ್ಜನ್ಯದ ಘಟನೆಗಳು ಯಾವ ಸಮಯದಲ್ಲಿ ನಡೆದಿವೆ ಎಂದು ಇನ್ನೂ ತನಿಖಾ ತಂಡ ವರದಿ ನೀಡಬೇಕಿದೆ. ನಮ್ಮ ಹೊಂದಾಣಿಕೆಯಲ್ಲಿ ಇನ್ನೂ ಪ್ರಜ್ವಲ್ ಗೆದ್ದಿಲ್ಲ. ಈಗ ಪ್ರಜ್ವಲ್ ಸಂಸದರಾಗಿರುವುದು ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲೇ. ಜೆಡಿಎಸ್ ಪಕ್ಷ ಈಗಾಗಲೇ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಂಡಿದೆ. ಅವರು ಎನ್ಡಿಎ ಸಂಸದರಾದರೆ ನಂತರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
2 ಲಕ್ಷ ಮತಗಳಿಂದ ಗೆದ್ದು ಬರುವೆ: ಕೆ.ಎಸ್.ಈಶ್ವರಪ್ಪ ವಿಶ್ವಾಸದ ನುಡಿ
ಕಳೆದ 2019ರ ಏ.17ರಂದು ಕಡೂರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರನ್ನು ಪಕ್ಕದಲ್ಲಿ ಕೂರಿಸಿಕೊಂಡು, ಇವರನ್ನು ಗೆಲ್ಲಿಸಿಕೊಡಿ ಎಂದು ಜನರಲ್ಲಿ ಮನವಿ ಮಾಡಿದ್ದರು. ತೆನೆ ಹೊತ್ತ ಮಹಿಳೆಗೆ ಶಕ್ತಿ ನೀಡಿ ಎಂದು ಅವರೇ ಹೇಳಿದ್ದರು. ಪ್ರಜ್ವಲ್ನನ್ನು ಈಗ ರೇಪಿಸ್ಟ್ ಎಂದು ಕರೆಯುವ ಸಿದ್ದರಾಮಯ್ಯ, ಆಗ ಟ್ವೀಟ್ ಮಾಡಿ, ‘ಹಿ ಈಸ್ ಎ ಯಂಗ್ ಲೀಡರ್ ವಿತ್ ಗ್ರೇಟ್ ವಿಶನ್, ಐ ರಿಕ್ವೆಸ್ಟ್ ಎವರಿವನ್ ಟು ಕಾಸ್ಟ್ ದೇರ್ ವೋಟ್ಸ್ ಇನ್ ಹಿಸ್ ಫೇವರ್’ ಎಂದು ಮನವಿ ಮಾಡಿದ್ದರು. ಪ್ರಜ್ವಲ್ ಈಗಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಲೇ ಸಂಸದರಾಗಿ ಇದ್ದಾರೆ ಎಂದರು.
ಪೆನ್ಡ್ರೈವ್ ನಂಬಿಕೊಂಡಿರುವ ಕಾಂಗ್ರೆಸ್: ಕಾಂಗ್ರೆಸ್ನವರು ಗ್ಯಾರಂಟಿ ಯೋಜನೆಗಳಿಂದ ಆಸಕ್ತಿ ಕಳೆದುಕೊಂಡು ಹಾಸನ್ ಪೆನ್ಡ್ರೈವ್ ಹಗರಣವನ್ನೇ ನೆಚ್ಚಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವಾರದವರೆಗೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಮಾತನಾಡುತ್ತಿದ್ದರು. ಮೊದಲ ಹಂತದ ಚುನಾವಣೆಗೆ ಎರಡು ದಿನ ಮುಂಚಿತವಾಗಿ ಈ ಪೆನ್ಡ್ರೈವ್ ಬಿಡುಗಡೆ ಆಯಿತು. ಆಗಿನಿಂದ ಗ್ಯಾರಂಟಿ ಯೋಜನೆಗಳನ್ನೆಲ್ಲ ಮರೆತು ಬರೀ ಪೆನ್ಡ್ರೈವ್ ಎಂದು ಜಪ ಮಾಡುತ್ತಿದ್ದಾರೆ. ಇದೇ ತಮಗೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಕಾಂಗ್ರೆಸ್ಸಿಗರು ಎಂದು ಟೀಕಿಸಿದರು.
Lok Sabha Elections 2024: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಶೇ.50 ಮೀಸಲು ಸವಾಲ್
ಹಾಗಂತ ಪೆನ್ಡ್ರೈವ್ ಪ್ರಕರಣವನ್ನು ನಾವೇನು ಬೆಂಬಲಿಸುವುದಿಲ್ಲ. ಅದನ್ನು ನಾವಷ್ಟೇ ಅಲ್ಲ. ಯಾರೊಬ್ಬರು ಬೆಂಬಲಿಸುವಂತೆಯೇ ಇಲ್ಲ. ಈ ವಿಷಯದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಯಾರೇ ಆಗಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅತಿ ಕಠಿಣವಾದ ಶಿಕ್ಷೆಯಾಗಬೇಕು. ಈ ಸಂಬಂಧ ಸರ್ಕಾರ ಎಸ್ಐಟಿಯನ್ನು ರಚನೆ ಮಾಡಿದ್ದು ಆಗಿದೆ. ತನಿಖೆಯಾಗಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದ ಅವರು, ಪ್ರಕರಣದ ಬಗ್ಗೆ ಬಿಜೆಪಿ ನಾಯಕರಿಗಾಗಿ, ತಮಗಾಗಲಿ ಯಾವುದೇ ಪತ್ರ ಬಂದಿಲ್ಲ. ಯಾವ ಪುಣ್ಯಾತ್ಮ ಹೇಳಿದ್ದಾನೋ ಅವರನ್ನೇ ಕೇಳಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.