ಸುದ್ದಿ ಪ್ರಸಾರ ನಿರ್ಬಂಧ ; ಸ್ಪಷ್ಟನೆ ನೀಡಿದ ಏಷ್ಯಾನೆಟ್ ಮಲೆಯಾಳಂ ಸಂಪಾದಕ!

By Suvarna NewsFirst Published Mar 7, 2020, 10:02 PM IST
Highlights

 ಏಷ್ಯಾನೆಟ್ ಮಲೆಯಾಳಂ ನ್ಯೂಸ್‌ಗೆ 48 ಗಂಟೆಗಳ ಪ್ರಸಾರ ನಿರ್ಬಂಧ, ತಪ್ಪು ನಿರ್ಧಾರ ಎಂಬುದನ್ನು  ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಒಪ್ಪಿಕೊಂಡಿದೆ. ಇತ್ತ ನಿರ್ಬಂಧ ನಿರ್ಧಾರದ ಕುರಿತು ಏಷ್ಯಾನೆಟ್ ಮಲೆಯಾಳಂ ಸಂಪಾದಕ  ಸ್ಪಷ್ಟನೆ ನೀಡಿದ್ದಾರೆ. 

ಕೊಚ್ಚಿ(ಮಾ.07): ದೆಹಲಿ ಗಲಭೆಯಲ್ಲಿ ತಪ್ಪಾಗಿ ವರದಿ ಪ್ರಸಾರ ಮಾಡಲಾಗಿದೆ ಎಂದು  ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಏಷ್ಯಾನೆಟ್ ಮಲೆಯಾಳಂ ನ್ಯೂಸ್‌ಗೆ 48 ಗಂಟೆಗಳ ಕಾಲ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು. ಇದೀಗ  ಈ ಕುರಿತು ಸಂಪಾದಕ ಎಂ.ಜಿ ರಾಧಾಕೃಷ್ಣ ಸ್ಪಷ್ಟನೆ ನೀಡಿದ್ದಾರೆ. 

ಕಳೆದ 25 ವರ್ಷಗಳಿಂದ ಏಷ್ಯಾನೆಟ್ (ಮಳೆಯಾಳಂ) ನ್ಯೂಸ್ ಪತ್ರಿಕೋದ್ಯಮದಲ್ಲಿ ಅತ್ಯಂತ ಗುಣಮಟ್ಟದ ಸುದ್ದಿಗಳನ್ನು ನೀಡಿ ಜನರ ವಿಶ್ವಾಸವನ್ನು ಗಳಿಸಿದ್ದೇವೆ. ಆದರೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಏಷ್ಯಾನೆಟ್ ಮಲೆಯಾಳಂ ನ್ಯೂಸ್‌ಗೆ 48 ಗಂಟೆಗಳ ಪ್ರಸಾರ ನಿರ್ಬಂಧ ಹೇರಿತ್ತು. ಇದು ನಮ್ಮ 25 ವರ್ಷಗಳ ಪತ್ರಿಕೋದ್ಯಮದಲ್ಲಿ ಮೊದಲು. ನಿರ್ಬಂಧದಿಂದ ಏಷ್ಯಾನೆಟ್ (ಮಲೆಯಾಳಂ) ಪ್ರಸಾರವನ್ನು ನಿಲ್ಲಿಸಿತ್ತು.

ಭಾರತದ ಪ್ರತಿಯೊಬ್ಬ ನಾಗರೀಕ ಹಾಗೂ ಸಂಸ್ಥೆಗಳಂತೆ ಏಷ್ಯಾನೆಟ್ ಮಲೆಯಾಳಂ ನ್ಯೂಸ್ ಕಾನೂನನ್ನು ಗೌರವಿಸುತ್ತದೆ ಹಾಗೂ ಪಾಲಿಸುತ್ತದೆ. ಸುದ್ದಿಯನ್ನು ತಿರುಚಿ ಪ್ರಸಾರ ಮಾಡುವುದಿಲ್ಲ.  ಗೊತ್ತಿದ್ದು, ಗೊತ್ತಿಲ್ಲದೆ ತಪ್ಪಾಗಿ ಸುದ್ದಿ ಪ್ರಸಾರ ಮಾಡಿದ್ದರೆ, ತಪ್ಪನ್ನು ಒಪ್ಪಿಕೊಳ್ಳಲು ಹಾಗೂ ತಪ್ಪನ್ನು ತಿದ್ದಿಕೊಳ್ಳಲು ಏಷ್ಯಾನೆಟ್ ಮಲೆಯಾಳಂ ಹಿಂಜರಿಯುವುದಿಲ್ಲ. ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅನ್ನೋದನ್ನು ನಂಬಿಕೊಂಡಿರುವ ಸಂಸ್ಥೆ ಏಷ್ಯಾನೆಟ್ (ಮಲೆಯಾಳಂ). 

ದೆಹಲಿ ದಂಗೆ ಕುರಿತು ಅನುಚಿತ ವರದಿ ಪ್ರಸಾರ ಮಾಡಿದೆ ಎಂಬ ಆರೋಪಡಿ 48 ಗಂಟೆಗಳ ನಿರ್ಬಂಧವನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ವಿಧಿಸಿತ್ತು. ಏಷ್ಯಾನೆಟ್ ತನ್ನ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡಿದೆ. ಆದರೆ ಆತುರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಏಷ್ಯಾನೆಟ್(ಮಲೆಯಾಳಂ) ಮೇಲೆ ನಿರ್ಬಂಧ ಹೇರಿದೆ. 

ಪ್ರಸಾರ ನಿರ್ಬಂಧ ಹೇರಿಕೆಯಲ್ಲಿ ತಪ್ಪಾಗಿದೆ. ಸಚಿವಾಲಯದಿಂದ ಆಗಿರುವ ಆತುರದ ನಿರ್ಧಾರ ಹಾಗೂ ತಪ್ಪಿನ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಕಾಶ್ ಜಾವೇಡೇಕರ್ ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ ಮಾಧ್ಯಮ ಸ್ವಾತಂತ್ರತ್ಯಕ್ಕೆ ಧಕ್ಕೆ ತರುವುದಿಲ್ಲ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ  ಘಟನೆ ಕುರಿತು ಗಮನಹರಿಸಿದ್ದಾರೆ. 

ಕಠಿಣ ಹಾಗೂ ಅತ್ಯಂತ ಸವಾಲಿನ ಸಂದರ್ಭದಲ್ಲೂ ಏಷ್ಯಾನೆಟ್ ನ್ಯೂಸ್ ಜೊತೆಗಿದ್ದ ಎಲ್ಲಾ ವೀಕ್ಷಕರಿಗೆ ಏಷ್ಯಾನೆಟ್ ಚಿರಋಣಿಯಾಗಿದೆ.  ಜವಾಬ್ದಾರಿ ಅರಿತು, ಸ್ಪಷ್ಟ, ನಿರ್ದಿಷ್ಟ,  ವಸ್ತುನಿಷ್ಠ ಹಾಗೂ ಸತ್ಯ ವರದಿಯನ್ನು ನೀಡುವುದನ್ನು ಮುಂದುವರಿಸುತ್ತದೆ ಅನ್ನೋದನ್ನು ಏಷ್ಯಾನೆಟ್ ನ್ಯೂಸ್ ವೀಕ್ಷಕರಿಗೆ, ಓದುಗರಿಗೆ ಹಾಗೂ ಸರ್ಕಾರಕ್ಕೆ ಪುನರುಚ್ಚರಿಸುತ್ತಿದೆ ಎಂದು ಏಷ್ಯಾನೆಟ್ ಮಲೆಯಾಳಂಸಂಪಾದಕ ಎಂ.ಜಿ ರಾಧಾಕೃಷ್ಣ ಪ್ರಕಟಣೆಯಲ್ಲಿ ಹೇಳಿದ್ದಾರೆ. 

click me!