
ನವದೆಹಲಿ [ಮೇ.13]: ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಸಂಸದ ಶತ್ರುಘ್ನಾ ಸಿನ್ಹಾ, ಮೋದಿ ವಿರುದ್ಧ ಟ್ವೀಟ್ಗಳ ಸುರಿಮಳೆಗೈದಿದ್ದಾರೆ.
130 ಕೋಟಿ ಭಾರತೀಯರ ಪ್ರಧಾನಿಯಾಗುವುದೆಂದರೆ, ಇತರ ಪಕ್ಷಗಳ ಹೆಸರುಗಳನ್ನು ಟೀಕಿಸುವುದಲ್ಲ. ಪ್ರಧಾನಿ ಮಾತನಾಡುವಾಗ ನರ್ಸರಿ ಮಕ್ಕಳಿಗೆ ಅಕ್ಷರಮಾಲೆ ಹೇಳಿಕೊಟ್ಟಂತೆ ಭಾಸವಾಗುತ್ತದೆ. ಪ್ರಧಾನಿಯವರೇ, ಇದು ದೇಶ, ಶಾಲೆಯಲ್ಲ, ಎಂದು ಸಿನ್ಹಾ ಹೇಳಿದ್ದಾರೆ.
PPP [ಪಂಜಾಬ್, ಪಾಂಡಿಚೇರಿ ಮತ್ತು ಪರಿವಾರ] ಗಳಂತಹ ಹೇಳಿಕೆಗಳು ಕ್ಷುಲ್ಲಕ ರಾಜಕಾರಣದ ಸಂಕೇತ, ಹಾಗೂ ವೈಫಲ್ಯ ಮತ್ತು ಭಯದ ಲಕ್ಷಣ. ಚುನಾವಣೆಗಳನ್ನು ಇಂತಹ ಕಲೆಯಿಂದ [Art] ಗೆಲ್ಲಲು ಸಾಧ್ಯವಿಲ್ಲ, ಅದಕ್ಕೆ ಜನರ ಹೃದಯಗಳನ್ನು [Hearts] ಗೆಲ್ಲಬೇಕು, ಎಂದು ಸಿನ್ಹಾ ಟ್ವೀಟಿಸಿದ್ದಾರೆ.
ಜನರು ನಿಮ್ಮಿಂದ ಪ್ರಬುದ್ಧ ಭಾಷಣಗಳನ್ನು ಬಯಸುತ್ತಾರೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಧಾನಿಯಾಗಲು ಬಯಸಿದ್ದರಲ್ಲಿ ತಪ್ಪೇನಿದೆ? ಜನರು ಅವರನ್ನು ಇಷ್ಟಪಡುತ್ತಾರೆ. ಪ್ರಧಾನಿಯಾಗಲು ವಿಶೇಷವಾದ ಮಾನದಂಡಗಳೇನೂ ಇಲ್ಲ, ಪ್ರಜಾತಂತ್ರದಲ್ಲಿ ಯಾರೂ ಕೂಡಾ ಪ್ರಧಾನಿಯಾಗಬಹುದು. ಅವರ ಆಂತರಿಕ ವಿಚಾರಗಳ ಬಗ್ಗೆ ನೀವ್ಯಾಕೆ ಅಷ್ಟೊಂದು ಬೊಬ್ಬೆ ಹೊಡೆಯುತ್ತಿರುವಿರಿ? ಎಂದು ಸಂಸದ ಸಿನ್ಹಾ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಬಹಳ ಪ್ರಬುದ್ಧರಾಗಿದ್ದಾರೆ. ಅವರು ಮಹತ್ವದ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ, ನಾವು ಅವುಗಳಿಗೆ ಉತ್ತರಿಸುತ್ತಿಲ್ಲ. ಬದಲಾಗಿ, ನಾವು ಕರಗತ ಮಾಡಿಕೊಂಡಿರುವ ‘ವಿಷಯಾಂತರದ ಕಲೆ’ಯನ್ನು ಬಳಸಿ ಜನರ ಗಮನವನ್ನು ಬೇರಡೆ ಸೆಳೆಯುತ್ತಿದ್ದೇವೆ, ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಲಹಾಗಾರರ ಬಗ್ಗೆ ನನಗೆ ಸೋಜಿಗವೆನಿಸುತ್ತಿದೆ. ಅವರಲಲ್ಲಿ ಅರಿವು ಮತ್ತು ತಿಳುವಳಿಕೆಯ ಕೊರತೆಯಿರುವುದರಿಂದ ಗೊಂದಲಕ್ಕೊಳಗಾಗಿದ್ದಾರೆ. ಪರಿಣಾಮವಾಗಿ, ಸುಳ್ಳುಗಳನ್ನು ಹರಡುವುದರಲ್ಲಿ ನಿಪುಣರಾಗಿದ್ದಾರೆ, ಎಂದು ಸಿನ್ಹಾ ಹರಿಹಾಯ್ದಿದ್ದಾರೆ. ಪ್ರಧಾನಿಗಳೇ, ನಿಮ್ಮ ಬಗ್ಗೆ ಗೌರವವಿದೆ, ಜನಗಳಿಗೆ ವಿಶ್ವಾಸವಿದೆ. ಈಗಲಾದರೂ ತಿದ್ದಿಕೊಳ್ಳಿ, ಎಂದು ಸಿನ್ಹಾ ಪ್ರಧಾನಿಗೆ ಕಿವಿಮಾತು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.