ಭೂತದ ಕಾಟ ಕಾಡುವ ಭಾರತದ 6 ರೈಲು ನಿಲ್ದಾಣಗಳು

By Web DeskFirst Published Sep 24, 2019, 11:18 AM IST
Highlights

ಭಾರತದ ರೈಲ್ವೆ ಸ್ಟೇಶನ್‌ಗಳಲ್ಲಿ ಕೆಲವು ಗತವೈಭವ ನೆನೆಸಿಕೊಂಡರೆ, ಮತ್ತೆ ಕೆಲವು ತಾವು ಸಾಕ್ಷಿಯಾದ ದುರಂತ ಕತೆಗಳನ್ನು ಹೇಳುತ್ತವೆ. ಇನ್ನೂ ಕೆಲವಕ್ಕೆ ವಿಶ್ವ ಪಾರಂಪರಿಕ ತಾಣವೆನಿಸಿಕೊಂಡ ಹೆಮ್ಮೆ. ಒಟ್ಟಿನಲ್ಲಿ ಅವುಗಳ ಬಗಲಲ್ಲಿ ಏನೋ ಒಂದು ಹೇಳಲಿದೆ. ಅಂಥ ಕೆಲ ರೈಲ್ವೆ ನಿಲ್ದಾಣಗಳ ಕತೆಗಳು ನಿಮಗಾಗಿ...

ನಮ್ಮದು ಎಂಥ ಅದ್ಭುತ ದೇಶ ಎಂದರೆ ಇಲ್ಲಿ ಹೆಜ್ಜೆಗೊಂದು ಕತೆ ಸಿಗುತ್ತದೆ. ದೊಡ್ಡದೋ ಸಣ್ಣದೋ ಸ್ಮಾರಕಗಳು, ದೇಗುಲಗಳು, ನಿಶಾಚರ ಸ್ಥಳಗಳು ಕಡೆಗೆ ರೈಲ್ವೆ ನಿಲ್ದಾಣಗಳು ಕೂಡಾ ಒಂದಿಷ್ಟು ಕತೆಗಳನ್ನು ತಮ್ಮ ಒಡಲಲ್ಲಿಟ್ಟುಕೊಂಡು ಪೋಷಿಸುತ್ತವೆ. ಹೊಸ ಹೊಸ ಕತೆಗಳನ್ನು ಹುಟ್ಟು ಹಾಕುತ್ತಲೂ ಇರುತ್ತವೆ. ಇಂಥ ಕತೆ ಹೇಳುವ, ಹಿನ್ನೆಲೆ ಹೊಂದಿದ, ವಿಶಿಷ್ಠ ಸುದ್ದಿಗಳನ್ನು ಹೊಂದಿದ, ಅಪ್ರತಿಮ ಸೌಂದರ್ಯದಿಂದ ಹೆಸರಾದ- ತನ್ನ ಬಗ್ಗೆ ಏನನ್ನಾದರೂ ಹೇಳಲು ಸರಕನ್ನಿಟ್ಟುಕೊಂಡ ರೈಲ್ವೆ ನಿಲ್ದಾಣಗಳ ಕತೆ ಕೇಳ್ತೀರಾ? 

ಛತ್ರಪತಿ ಶಿವಾಜಿ ಟರ್ಮಿನಸ್, ಮಹಾರಾಷ್ಟ್ರ

19, 20ನೇ ಶತಮಾನಗಳಲ್ಲಿ ವಿಕ್ಟೋರಿಯಾ ಟರ್ಮಿನಸ್ ಎಂದು ಹೆಸರಾಗಿದ್ದ ಮಹಾರಾಷ್ಟ್ರದ ಈ ರೈಲ್ವೆ ನಿಲ್ದಾಣ 1966ರಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್ ಎಂದು ಹೆಸರು ಬದಲಿಸಿಕೊಂಡಿದ್ದು ಸಿನಿಮಾ ನಟರಂತೆ ಅದೃಷ್ಟಕ್ಕಾಗಿಯಲ್ಲದಿದ್ದರೂ, ಆ ಬಳಿಕ ಇದನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಿದ್ದಂತೂ ಹೌದು.

ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಾಂಕ : 7 ವರ್ಷ ಜೈಲು ಶಿಕ್ಷೆ!

ಮುಂಬಯಿಯ ಅತಿ ದುಬಾರಿ ಕಟ್ಟಡ ಎನಿಸಿಕೊಂಡಿರುವ ಈ ನಿಲ್ದಾಣವನ್ನು ಕಟ್ಟಲು ಬರೋಬ್ಬರಿ 10 ವರ್ಷಗಳು ತೆಗೆದುಕೊಂಡಿದೆ. ಇದು ಇಷ್ಟು ವರ್ಷ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಈ ನಗರದ ಕಟ್ಟಡಗಳಲ್ಲಿ ಏಕೈಕವಾದುದು. ನಿಲ್ದಾಣವು ವಿಕ್ಟೋರಿಯನ್ ಗೋತಿಕ್ ಹಾಗೂ ಭಾರತೀಯ ಸಾಂಪ್ರದಾಯಿಕ ವಾಸ್ತುವಿನ್ಯಾಸವನ್ನು ಹೊಂದಿದ್ದು, ಬಹಳ ಜನಪ್ರಿಯವಾದ ಕಟ್ಟಡ ಎನಿಸಿಕೊಂಡಿದೆ. 

ಬಾರೋಗ್ ನಿಲ್ದಾಣ, ಹಿಮಾಚಲ ಪ್ರದೇಶ

ಕಲ್ಕಾ-ಶಿಮ್ಲಾ ನಡುವೆ ಇರುವ ಬಾರೋಗ್ ಬಹಳ ಚಿಕ್ಕ ರೈಲ್ವೆ ನಿಲ್ದಾಣ. ಇದರ ಚೆಂದದ ವಾಸ್ತುವಿನ್ಯಾಸ ಹಾಗೂ ಸುಂದರ ಪರ್ವತಗಳಿಗೆ ಮುಖ ಮಾಡಿ ನಿಂತಿರುವುದರಿಂದಾಗಿ ಚಿಕ್ಕದಾದರೂ ಹೆಸರು ಮಾಡಿದೆ ಬಾರೋಗ್. ಆದರೆ, ಇದಷ್ಟೇ ಅಲ್ಲ, ಇಲ್ಲೊಂದು ದೆವ್ವದ ಕತೆಯೂ ಇದ್ದು, ನಿಲ್ದಾಣಕ್ಕೆ ಭಯಾನಕ ಆಯಾಮವನ್ನೂ ನೀಡಿದೆ. 1898ರಲ್ಲಿ ಕರ್ನಲ್ ಬಾರೋಗ್ ಅವರಿಗೆ ಕಲ್ಕಾ-ಶಿಮ್ಲಾ ಸುರಂಗ ನಿರ್ಮಾಣ ಯೋಜನೆಯ ಭಾರವನ್ನು ವಹಿಸಲಾಗಿತ್ತು. ಒಂದು ಹಂತದವರೆಗೆ ಎಲ್ಲವೂ ಸರಿಯಾಗಿಯೇ ಇತ್ತು.

ಓಡ್ಹೋಗಿ ಮದ್ವೆಯಾಗೋದು ಸಂಪ್ರದಾಯವಿಲ್ಲಿ!

ಆದರೆ, ನಂತರದಲ್ಲಿ ಬ್ರಿಟಿಷ್ ಸರಕಾರ ಬಾರೋಗ್ ವಿರುದ್ಧ ತಿರುಗಿಬಿದ್ದು, ನಿರ್ಮಾಣ ಕಾರ್ಯದಲ್ಲಿ ತಪ್ಪೆಸಗಿದ್ದಾಗಿ ಆರೋಪಿಸಿ ಆತನಿಗೆ ಫೈನ್ ವಿಧಿಸಿತು. ಈ ಘಟನೆಯಿಂದ ಬಾರೋಗ್ ಅದೆಷ್ಟು ಹತಾಶರಾದರೆಂದರೆ, ತಮ್ಮ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡರು. ಅಷ್ಟೇ ಅಲ್ಲ, ಒಂದು ದಿನ ಅಚಾನಕ್ಕಾಗಿ ಆತ್ಮಹತ್ಯೆ ಮಾಡಿಕೊಂಡೇ ಬಿಟ್ಟರು. ಇಂದಿನಿಂದ ಇಂದಿನವರೆಗೂ ಈ ಸಂಖ್ಯೆ 33ರ ಸುರಂಗದಲ್ಲಿ ಬಾರೋಗ್ ಆತ್ಮವಿದೆ, ಅದು ಕೆಲವರಿಗೆ ಹೆದರಿಸುತ್ತದೆ ಎಂದೇ ನಂಬಲಾಗುತ್ತಿದ್ದು, ಸ್ಥಳೀಯರ ಬಳಿ ಹೋದರೆ ಈ ಸಂಬಂಧ ಹತ್ತು ಹಲವು ರೋಚಕ ಕತೆಗಳು ಸಿಗುತ್ತವೆ. 

ಬೇಗುಂಕೊಡೂರ್ ನಿಲ್ದಾಣ, ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿರುವ ಬೇಗುಂಕೊಡೋರ್ ರೈಲ್ವೆ ನಿಲ್ದಾಣವು ಸುಮಾರು ನಾಲ್ಕು ದಶಕಗಳ ಕಾಲ ಪಾಳು ಬಿದ್ದಿತ್ತು. 1967ರಲ್ಲಿ ಇಲ್ಲಿ ಓರ್ವ ಮಹಿಳೆಯ ಭೂತ ಬಿಳಿ ಸೀರೆ ಉಟ್ಟುಕೊಂಡು ಓಡಾಡುವುದನ್ನು ನೋಡಿದ್ದರಿಂದ ಹೆದರಿ ರೈಲ್ವೆ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದ. ಆತ ಇದಕ್ಕೇ ಸಾವಿಗೀಡಾದ ಎಂದು ಯಾರು ಹೇಗೆ ತಿಳಿದರೋ ಗೊತ್ತಿಲ್ಲ.

ದುರ್ಗಾ ಮಾತೆಗಾಗಿ ಸಂಸದೆಯರ ಡಾನ್ಸ್: ವೈರಲ್ ಆಯ್ತು ವಿಡಿಯೋ!

ಆದರೆ, ಈ ಕತೆಯಂತೂ ಜನಜನಿತವಾಗಿ ಎಷ್ಟರ ಮಟ್ಟಿಗೆ ಇಲ್ಲಿನ ರೈಲ್ವೆ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ಭಯ ಹುಟ್ಟಿಸಿತೆಂದರೆ ನಲವತ್ತು ವರ್ಷಗಳ ಕಾಲ ಇಲ್ಲಿ ರೈಲಿನ ನಿಲುಗಡೆಯನ್ನೇ ನಿಲ್ಲಿಸಲಾಗಿತ್ತು. ಆದರೆ, 2017ರಲ್ಲಿ ವದಂತಿಗಳಿಗೆ ತಿಲಾಂಜಲಿ ಇಡಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದ ಬಳಿಕ ರೈಲ್ವೆ ಇಲಾಖೆ ಕೂಡಾ ಅದಕ್ಕೆ ಕೈಜೋಡಿಸಿ ಈ ನಿಲ್ದಾಣವನ್ನು ಪುನಾಃ ಕಾರ್ಯಾರಂಭ ಮಾಡಿತು.

ರಶೀದ‌್‌ಪುರ ಖೋರಿ ರೈಲ್ವೆ ನಿಲ್ದಾಣ, ರಾಜಸ್ಥಾನ

ರಶೀದ್‌ಪುರ ಖೋರಿಯ ವಿಶೇಷ ಎಂದರೆ ಇದನ್ನು ಸ್ಥಳೀಯರೇ ಸೇರಿ ನಡೆಸುತ್ತಿರುವುದು. ಆದಾಯ ಸಂಗ್ರಹ ಸಾಲುತ್ತಿಲ್ಲ ಎಂಬ ಕಾರಣದಿಂದ 2005ರಲ್ಲಿ ಈ ನಿಲ್ದಾಣವನ್ನು ಮುಚ್ಚಲಾಗಿತ್ತು. 2009ರಲ್ಲಿ ಸ್ಥಳೀಯ ಹಳ್ಳಿಗರು ಹೋರಾಟ ಮಾಡಿ ಈ ನಿಲ್ದಾಣವನ್ನು ಪುನಾರಂಭ ಮಾಡಿದ್ದು, ಅವರೇ ಈಗ ಇದನ್ನು ನಿಭಾಯಿಸುತ್ತಿದ್ದಾರೆ. 

ಈ ಮಳೆಯಲ್ಲಿ ರಾಜಸ್ಥಾನದ ರಾಜವೈಭೋಗ ಸವಿದು ಬನ್ನಿ!

ಚಾರ್ಬಾಗ್ ನಿಲ್ದಾಣ, ಉತ್ತರ ಪ್ರದೇಶ

ನೀವೇನಾದರೂ ಈ ನಿಲ್ದಾಣಕ್ಕೆ ಹೋದರೆ, ಅಯ್ಯೋ ದಾರಿ ತಪ್ಪಿ ಯಾವುದೋ ಅರಮನೆಗೆ ಬಂದಿದ್ದೀನೆಂದು ಕನ್ಫ್ಯೂಸ್ ಆಗೋದ್ರಲ್ಲಿ ಡೌಟೇ ಇಲ್ಲ. ಏಕೆಂದರೆ ಇದು ಇರುವುದೇ ಹಾಗೆ. ಇದರ ವಾಸ್ತುವಿನ್ಯಾಸ ನಿಬ್ಬೆರಗಾಗಿಸುವಷ್ಟು ಶ್ರೀಮಂತವಾಗಿದ್ದು, ಬುರುಜುಗಳು, ಮಿನಾರ್‌ಗಳು, ಕುಪೋಲಾಗಳು ಇದಕ್ಕೆ ರಾಯಲ್ ಲುಕ್ ನೀಡಿವೆ.

ಮದ್ಯ ನೇವೇದ್ಯದೊಂದಿಗೆ ಸತ್ತವರ ಬೂದಿಯಿಂದಲೇ ಜ್ಯೋತಿರ್ಲಿಂಗಕ್ಕೆ ಅಭಿಷೇಕ...

ಮೊಘಲ್ ಹಾಗೂ ರಾಜಸ್ಥಾನಿ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದ ಇನ್ನೊಂದು ವಿಶೇಷವೆಂದರೆ ಇದರ ಪೋರ್ಟಿಕೋದಲ್ಲಿ ನಿಂತರೆ, ರೈಲುಗಳು ಬರುವ ಹೋಗುವ ಯಾವ ಸದ್ದೂ ಕೇಳುವುದಿಲ್ಲ! ಈ ನಿಲ್ದಾಣದ ಇನ್ನೂ ಆಸಕ್ತಿಕರ ವಿಷಯವೆಂದರೆ ಮಹಾತ್ಮಾ ಗಾಂಧೀಜಿ ಹಾಗೂ ಜವಾಹರ್ ಲಾಲ್ ನೆಹರು 1916ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದೇ ಇಲ್ಲಿ!

ಕಚಿಗುಡ ಸ್ಟೇಶನ್, ತೆಲಂಗಾಣ

ನಿಜಾಮ್ ಓಸ್ಮಾನ್ ಅಲಿ ಖಾನ್ ಆಳ್ವಿಕೆಯಲ್ಲಿ ಮುಂಬೈ ಹಾಗೂ ಇತರೆ ನಗರಗಳೊಂದಿಗೆ ಸಂಪರ್ಕ ಸಾದಿಸಲು ನಿರ್ಮಾಣವಾಗಿದ್ದೇ ಕಚಿಗುಡ ರೈಲ್ವೆ ಸ್ಟೇಶನ್. ಇದರ ವಾಸ್ತುಕಲೆ ಕಣ್ಣಿಗೆ ಹಬ್ಬ. 100 ವರ್ಷ ಹಳೆಯ ಮರದ ಮೆಟ್ಟಿಲುಗಳು ಈ ನಿಲ್ದಾಣದ ಬೆಲೆ ಕಟ್ಟಲಾಗದ ಆಸ್ತಿ. ನಿಜಾಮರು ಬಹಳ ಕಾಲ ಆಳ್ವಿಕೆ ಮಾಡಿದ ಈ ರಾಜ್ಯದ ಕುರಿತ ಇತಿಹಾಸ ಹೇಳುವ ಮ್ಯೂಸಿಯಂವೊಂದು ಇದೇ ನಿಲ್ದಾಣದಲ್ಲಿದೆ. ಇಲ್ಲಿ ಮಹಿಳೆಯರು ರೈಲು ಏರಲು ಪ್ರತ್ಯೇಕ ಸ್ಥಳವಿದೆ. 
 

click me!