ಮನೆ ಬಾಗಿಲಿಗೆ ಬಂದು ಹೃದ್ರೋಗ ಚಿಕಿತ್ಸೆ ನೀಡುವ ಡಾಕ್ಟ್ರು!

Published : Sep 16, 2019, 09:55 AM IST
ಮನೆ ಬಾಗಿಲಿಗೆ ಬಂದು ಹೃದ್ರೋಗ ಚಿಕಿತ್ಸೆ ನೀಡುವ ಡಾಕ್ಟ್ರು!

ಸಾರಾಂಶ

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಎಷ್ಟುಹೊತ್ತಿಗಾದರೂ ಮಾಹಿತಿ ಕೇಳಿದರೂ ಕೂಡಲೇ ಪರಿಶೀಲಿಸಿ ಉತ್ತರಿಸುತ್ತಾರೆ. ಹಾಗೆಂದು ಡಾ.ಪದ್ಮನಾಭ ಕಾಮತ್‌ ಸುಮ್ಮನೆ ಕೂರುವವರೂ ಅಲ್ಲ. ಕೆಎಂಸಿ ಆಸ್ಪತ್ರೆಯಲ್ಲಿ ಬಿಡುವಿಲ್ಲದ ಕೆಲಸದಲ್ಲಿರುತ್ತಾರೆ. ಅನೇಕ ಮಂದಿ ಹೃದ್ರೋಗಿಗಳ ತಪಾಸಣೆ ನಡೆಸುತ್ತಾ, ಜೊತೆಗೆ ಸರ್ಜರಿ ಮಾಡುತ್ತಾ ಸ್ವಲ್ಪವೂ ಸಂಯಮ ಕಳೆದುಕೊಳ್ಳದೆ, ವಿಚಲಿತರಾಗದೆ ಸದಾ ಹಸನ್ಮುಖದಲ್ಲಿ ಎಲ್ಲರೊಂದಿಗೂ ಬೆರೆಯುತ್ತಾರೆ.

ಆತ್ಮಭೂಷಣ್‌, ಮಂಗಳೂರು

ಒಮ್ಮೆ ಚಿಕ್ಕಮಗಳೂರಿನ ಬಣಕಲ್‌ ಸಮೀಪ ತೀರಾ ಹಿಂದುಳಿದ ಹಳ್ಳಿ ಪ್ರದೇಶದ ಆಟೋ ಚಾಲಕನೊಬ್ಬ ಹೃದಯಾಘಾತಕ್ಕೆ ಒಳಗಾಗಿದ್ದರು. ಹೃದ್ರೋಗದ ಪ್ರಮಾಣವನ್ನು ಅಂದಾಜಿಸಲು, ವೈದ್ಯಕೀಯ ಸವಲತ್ತು ಯಾವುದೂ ಅಲ್ಲಿನ ಆಸ್ಪತ್ರೆಯಲ್ಲಿ ಇರಲಿಲ್ಲ. ಇದರಿಂದ ಗಾಬರಿಗೊಂಡಿದ್ದ ಆತನ ಮನೆಯವರು ಆ್ಯಂಬುಲೆನ್ಸ್‌ನಲ್ಲಿ ಮಂಗಳೂರಿಗೆ ಕರೆತಂದರು. ಮೊದಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಯು ಮಾರ್ಗ ಮಧ್ಯದಲ್ಲಿಯೇ ಅಸುನೀಗಿದ್ದ.

ಬೇಕೋ, ಬೇಡ್ವೋ, ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗೋ ಮುನ್ನ ಓದ್ಕಂಡಿರಿ..

ಈ ಮನಕಲಕುವ ದೃಶ್ಯ ದೃಢ ನಿರ್ಧಾರವೊಂದಕ್ಕೆ ದಾರಿ ಮಾಡಿಕೊಟ್ಟಿತು. ಗ್ರಾಮೀಣ ಪ್ರದೇಶದಲ್ಲಿ ವೈದ್ಯರಿದ್ದೂರ ವೈದ್ಯಕೀಯ ಸೌಲಭ್ಯಗಳು ಇರುವುದಿಲ್ಲ. ಒಂದು ವೇಳೆ ವೈದ್ಯಕೀಯ ಸೌಲಭ್ಯಗಳಿದ್ದಿದ್ದರೆ, ಇಂತಹ ಅನೇಕ ಹೃದ್ರೋಗ ರೋಗಿಗಳು ಬದುಕುವ ಸಾಧ್ಯತೆ ಇತ್ತು. ಅದಕ್ಕಾಗಿ ಹಳ್ಳಿ ಪ್ರದೇಶಕ್ಕೆ ಹೃದ್ರೋಗದ ವೈದ್ಯಕೀಯ ಉಪಕರಣ ಕೊಡಿಸಲು ಅಂದೇ ತೀರ್ಮಾನಿಸಿದರು. ಹೀಗೆ ತೀರ್ಮಾನಿಸಿದವರು ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌.

ವೈದ್ಯರ ತಂಡವುಳ್ಳ ವಾಟ್ಸ್‌ಆ್ಯಪ್‌ ಗ್ರೂಪ್‌ ಮತ್ತು ಇಸಿಜಿ ಯಂತ್ರ ಆಪತ್‌ಕಾಲದಲ್ಲಿ ಹೃದ್ರೋಗಿಯ ಜೀವ ಉಳಿಸುವಲ್ಲಿ ಸಹಕಾರಿಯಾಗುತ್ತಿದೆ. ಪ್ರಮೂಖವಾಗಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸೌಲಭ್ಯ ಉಪಯುಕ್ತವಾಗಿದೆ. ಇದನ್ನು ಇನ್ನಷ್ಟುಕಡೆಗಳಿಗೆ ವಿಸ್ತರಿಸುವ ಯೋಚನೆ ಇದೆ. -ಡಾ.ಪದ್ಮನಾಭ ಕಾಮತ್‌, ಹೃದ್ರೋಗ ತಜ್ಞ, ಕೆಎಂಸಿ ಆಸ್ಪತ್ರೆ, ಮಂಗಳೂರು

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲೇ ತುರ್ತು ಸ್ಪಂದನ:

ನಿಮಗೆ ಹೈ ಬಿಪಿ ಇದ್ಯೋ, ಇಲ್ವೋ ಗೊತ್ತಿಲ್ಲ, ಆದ್ರೂ ಇದನ್ನೊಮ್ಮೆ ಓದ್ಬಿಡಿ

ಆ ಘಟನೆಯಿಂದ ಮೊದಲು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಯಿತು. ಈ ಗ್ರೂಪಿನಲ್ಲಿ ವೈದ್ಯರು ಹಾಗೂ ಆ್ಯಂಬ್ಯುಲೆನ್ಸ್‌ ಚಾಲಕರೂ ಇದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಮಾತ್ರವಲ್ಲ ಕ್ಲಿನಿಕಲ್‌ ವೈದ್ಯರೂ ಈ ಗುಂಪಿನಲ್ಲಿದ್ದಾರೆ. ತಮ್ಮಲ್ಲಿಗೆ ಬರುವ ಹೃದ್ರೋಗಿಯ ತಪಾಸಣೆ ನಡೆಸಿ ಇಸಿಜಿ ವರದಿಯನ್ನು ಫೋಟೋ ತೆಗೆದು ಈ ಗ್ರೂಪ್‌ಗೆ ಅಪ್‌ಲೋಡ್‌ ಮಾಡಿದರೆ ಸಾಕು. ಕ್ಷಣಮಾತ್ರದಲ್ಲಿ ಡಾ.ಪದ್ಮನಾಭ ಕಾಮತ್‌ ಅವರು ವರದಿಯನ್ನು ಪರಿಶೀಲಿಸಿ ಸಲಹೆ ನೀಡುತ್ತಾರೆ. ಇದರಿಂದಾಗಿ ನೂರಾರು ಹೃದ್ರೋಗಿಗಳ ಪ್ರಾಣ ಉಳಿಯುವಂತಾಗಿದೆ. ಪ್ರಸ್ತುತ ಡಾ.ಪದ್ಮನಾಭ ಕಾಮತ್‌ ಅವರ ಬಳಿ ನಾಲ್ಕು ವಾಟ್ಸ್‌ಆ್ಯಪ್‌ ಗ್ರೂಪ್‌ ಇದ್ದು, ಮೂರು ಗ್ರೂಪ್‌ಗಳಲ್ಲಿ ರಾಜ್ಯಾವ್ಯಾಪಿ ವೈದ್ಯರಿದ್ದರೆ. ನಾಲ್ಕನೆಯದರಲ್ಲಿ ದೇಶಾದ್ಯಂತದ ವೈದ್ಯರಿದ್ದಾರೆ.

ಹಳ್ಳಿಗೆ ತಲುಪಿದ ಇಸಿಜಿ:

ಸಕಾಲಕ್ಕೆ ಚಿಕಿತ್ಸೆ ದೊರಕದೆ ರೋಗಿ ಮೃತಪಡಬಾರದು ಎಂದು ಪದ್ಮನಾಭ ಕಾಮತ್‌ ಅವರು ಹಳ್ಳಿಗಳಿಗೆ ಹೃದ್ರೋಗ ತಪಾಸಣೆ ನಡೆಸುವ ಇಸಿಜಿ ಯಂತ್ರವನ್ನು ಉಚಿತವಾಗಿ ನೀಡುತ್ತಿದ್ದಾರೆ. ಸುಮಾರು 20 ಸಾವಿರ ರು. ಬೆಲೆಯ ಈ ಯಂತ್ರ ದ.ಕ, ಉಡುಪಿ ಮಾತ್ರವಲ್ಲ ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಕಾಸರಗೋಡು ಸೇರಿ 14 ಜಿಲ್ಲೆಗಳಿಗೆ ಈವರೆಗೂ 200ಕ್ಕೂ ಹೆಚ್ಚು ಯಂತ್ರಗಳನ್ನು ಉಚಿತವಾಗಿ ನೀಡಿದ್ದಾರೆ. ಸುಮಾರು 20 ಲಕ್ಷಕ್ಕೂ ಅಧಿಕ ಮಂದಿಗೆ ಇದರ ಉಪಯೋಗ ಸಿಗಲಿದೆ. ಜನೌಷಧ ಕೇಂದ್ರ, ಸರ್ಕಾರಿ ಆಸ್ಪತ್ರೆ, ಖಾಸಗಿ ಕ್ಲಿನಿಕ್‌ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಯಂತ್ರವನ್ನು ನೀಡಲಾಗಿದೆ. ಈಗ ಇಸಿಜಿ ಯಂತ್ರದ ಜೊತೆಗೆ ಹೃದ್ರೋಗ ಕಂಡುಬಂದರೆ ನೀಡುವ ಪ್ರಾಥಮಿಕ ಚಿಕಿತ್ಸೆಯ ಉಪಕರಣಗಳ ಕಿಟ್‌ ಕೂಡ ನೀಡಲಾಗುತ್ತಿದೆ. ಅಲ್ಲದೆ ಅನ್ವೇಷಣಾ ಹೆಸರಿನಲ್ಲಿ ಕಾರ್ಯಾಗಾರ ನಡೆಸಿ ವೈದ್ಯಕೀಯ ಸಿಬ್ಬಂದಿಯನ್ನೂ ಉಪಕರಣ ಬಳಕೆಗೆ ತರಬೇತಿ ನೀಡಲಾಗುತ್ತಿದೆ.

ಕೋಪದಲ್ಲಿ ನೀವು ಜಮದಗ್ನಿಯೇ? ಬುದ್ಧನಾಗಲು ಹೀಗೆ ಮಾಡಿ

ಮನೆ ಬಾಗಿಲಿಗೆ ಹೃದ್ರೋಗ ಚಿಕಿತ್ಸೆ!

ಡಾ.ಪದ್ಮನಾಭ ಕಾಮತ್‌ ಅವರು ಕಾರ್ಡಿಯಾಲಜಿ ಎಟ್‌ ಡೋರ್‌ ಸ್ಟೆಪ್‌(ಸಿಎಡಿ)ಹೆಸರಿನಲ್ಲಿ ಇಸಿಜಿ ಯಂತ್ರಗಳನ್ನು ವಿತರಿಸುತ್ತಿದ್ದಾರೆ. ಈ ಮೂಲಕ ಹಳ್ಳಿಗಳಿಗೆ ಮನೆ ಬಾಗಿಲಿಗೆ ಹೃದ್ರೋಗ ಚಿಕಿತ್ಸೆ ನೀಡುತ್ತಿದ್ದಾರೆ. ನೆರೆಯ ಕೇರಳ, ಉತ್ತರ ಭಾರತದ ಹರಿದ್ವಾರ ಸೇರಿ ರಾಜ್ಯದ ಇತರೆ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಉಚಿತ ಇಸಿಜಿ ಯಂತ್ರ ನೀಡುವ ಗುರಿ ಹೊಂದಿದ್ದಾರೆ. ಇವರು ರಚಿಸಿರುವ ವೈದ್ಯರ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಖಾಸಗಿ ವ್ಯಕ್ತಿಗಳೂ ತುರ್ತು ಸಂದೇಶ ಕಳುಹಿಸಿ ವೈದ್ಯಕೀಯ ಸಲಹೆ ಪಡೆಯಬಹುದು. ವೈದ್ಯರ ವಾಟ್ಸ್‌ಆ್ಯಪ್‌ ಗುಂಪಿನ ಸಂಖ್ಯೆ ಹೆಲ್‌್ಫಲೈನ್‌ (9743287599)ಕಾರ್ಯ ನಿರ್ವಹಿಸುತ್ತಿದೆ. ಈ ಸಂಖ್ಯೆಗೆ ಕರೆ ಹೋಗುವುದಿಲ್ಲ. ಆದರೆ ಹೃದ್ರೋಗಕ್ಕೆ ಸಂಬಂಧಿಸಿ ಯಾವುದೇ ವೈದ್ಯಕೀಯ ಸಲಹೆಗಳನ್ನು ಇವರು ನೀಡುತ್ತಾರೆ. ಯಾವುದೇ ಹೊತ್ತಿನಲ್ಲಿ ಸಮಸ್ಯೆ ಬಂದಲ್ಲಿ ಅದಕ್ಕೆ ತಕ್ಷಣ ಸ್ಪಂದಿಸುವುದು ಇವರ ಹೆಚ್ಚುಗಾರಿಕೆ.

ಪದೆ ಪದೇ ನೀರು ಕುಡೀಬೇಕೆನಿಸುತಿದ್ಯಾ? ನಿಮ್ಮಗಿರ ಬಹುದು ದೊಡ್ಡ ರೋಗ

ಯಕ್ಷ ಬದುಕಿಗೆ ಯಕ್ಷಪ್ರೇಮಿ ನೆರವು

ಡಾ.ಪದ್ಮನಾಭ ಕಾಮತ್‌ ಅಪ್ಪಟ ಯಕ್ಷಗಾನ ಪ್ರೇಮಿ. ಬಿಡುವಿಲ್ಲದ ಕಾರ್ಯಚಟುವಟಿಕೆಯ ನಡುವೆಯೂ ಯಕ್ಷಗಾನ ವೀಕ್ಷಿಸುವ ಅಭಿರುಚಿ ಬೆಳೆಸಿಕೊಂಡಿದ್ದಾರೆ. ಹಲವಾರು ಯಕ್ಷಗಾನ ಕಲಾವಿದರ ಯಕ್ಷ ಬದುಕಿಗೆ ಇವರ ಸಕಾಲದ ಚಿಕಿತ್ಸೆ ದಾರಿದೀಪವಾಗಿದೆ. ಯಕ್ಷಗಾನ ಕಲಾವಿದರೂ ಹೃದ್ರೋಗದಿಂದ ಬಳಲುತ್ತಿರುವುದನ್ನು ಮನಗಂಡ ಇವರು ಕಲಾವಿದರ ನೆರವಿಗೂ ಧಾವಿಸುತ್ತಾರೆ. ಈ ವಿದ್ಯಮಾನ ಕೂಡ ಉಚಿತ ಇಸಿಜಿ ಯಂತ್ರ ಕೊಡುಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವ್ ಮ್ಯಾರೇಜ್ ಆದ ಮೇಲೆ.. ಪ್ರೇಮ ವಿವಾಹದಲ್ಲಿ ಕಾಡುವ ಕಹಿ ಸತ್ಯಗಳು ಇವು..
BGC Hospitals Kannada YouTube ಚಾನೆಲ್‌ಗೆ 1 ಲಕ್ಷ ಸಬ್‌ಸ್ಕ್ರೈಬರ್ಸ್‌; ಜೀರ್ಣಾಂಗ ಆರೋಗ್ಯ ಶಿಕ್ಷಣದಲ್ಲಿ ಐತಿಹಾಸಿಕ ಸಾಧನೆ