ಋತುಮತಿಯಾಗೋ ದೇವಿ, ಮಾತೃತ್ವಕ್ಕಿಲ್ಲಿ ವಿಶೇಷ ಪೂಜೆ..

By Suvarna NewsFirst Published Dec 17, 2018, 12:00 PM IST
Highlights

ಹೆಣ್ಣನ್ನು ದೇವಿ ಸ್ಥಾನದಲ್ಲಿಡುವ ಭಾರತೀಯರು ಆಕೆಗೆ ಪಿರಿಯಡ್ಸ್ ಆದಾಗ ಮಾತ್ರ ದೂರವಿಡುವುದು ಇನ್ನೂ ತಪ್ಪಿಲ್ಲ. ಆದರೆ, ಇದಕ್ಕೆಲ್ಲ ಅಪವಾದವೆಂಬಂತೆ ಈ ದೇವಸ್ಥಾನದಲ್ಲಿ ಋತುಮತಿಯಾಗೋ ದೇವಿಯನ್ನೇ ಆರಾಧಿಸಲಾಗುತ್ತದೆ. ಎಲ್ಲಿದೆ ಈ ದೇವಸ್ಥಾನ?

ಶಬರಿಮಲೆಯಂಥ ದೇವಸ್ಥಾನಗಳಲ್ಲಿ ಋತುಮತಿಯಾಗೋ 10-50 ವರ್ಷದ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿಕೊಡಬೇಕೆಂಬ ಹೋರಾಟ ನಡೆಯುತ್ತಿದೆ. ಅಲ್ಲದೇ, ದೇಶದ ಬಹುತೇಕ ದೇವಸ್ಥಾನಗಳಲ್ಲಿ ಪಿರಿಯಡ್ಸ್ ಟೈಮಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿರುತ್ತದೆ. ಆದರೆ ಅಸ್ಸಾಮ್‌ನಲ್ಲೊಂದು ದೇವಾಲಯವಿದೆ. ಇಲ್ಲಿ ಋತುಮತಿಯಾದ ದೇವಿಯ ಹಬ್ಬ ಆಚರಿಸುತ್ತಾರೆ.

ಈ ಕಾಮಖ್ಯ ದೇವಿ ದೇವಾಲಯ ಗುವಾಹಟಿಯ ನೀಲಾಚಲ್ ಪರ್ವತದ ಮೇಲಿದೆ. ಈ ದೇವಿಯನ್ನು ರಕ್ತಸ್ರಾವದ ದೇವತೆ ಎಂದೇ ಕರೆಯಲಾಗುತ್ತದೆ. ಈ ದೇವಾಲಯದಲ್ಲಿರುವ ಗರ್ಭಗುಡಿಯಲ್ಲಿ ದೇವಿ ಗರ್ಭ ಮತ್ತು ಯೋನಿಯನ್ನೇ ಪೂಜಿಸಲಾಗುತ್ತದೆ.

ದೇವರೆದುರು ಕಿವಿ ಹಿಡಿದು ಬಸ್ಕಿ ಹೊಡೆಯೋದೇಕೆ?

ದೇವಿ ಋತುಮತಿಯಾಗುತ್ತಾಳೆ ಎಂಬ ಮಾತಿಗೆ ಪುಷ್ಟಿ ನೀಡುವಂತೆ ಪ್ರತಿವರ್ಷ ಆಷಾಢ ಮಾಸದಲ್ಲಿ ಅಂದರೆ ಜೂನ್‌ನಲ್ಲಿ ಈ ದೇವಾಲಯದ ಬಳಿ ಇರುವ ಬ್ರಹ್ಮಪುತ್ರ ನದಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಸಮಯದಲ್ಲಿ ದೇವಿಗೆ ಋತುಸ್ರಾವವಾಗುತ್ತದೆ ಎಂದೇ ಜನರು ನಂಬುತ್ತಾರೆ.

ದೇಶದ ಇತರೆ ಭಾಗಗಳಲ್ಲಿ ಋತುಸ್ರಾವವನ್ನು ಕೆಟ್ಟದಾಗಿ ಹಾಗೂ ಅಪವಿತ್ರ ಎಂದು ನೋಡಿದರೆ, ಈ ದೇವಾಲಯದಲ್ಲಿ ಮಹಿಳೆಯ ಈ ವಿಶೇಷತೆಯನ್ನು ತಾಯಿಯಾಗುವ ಪ್ರಕ್ರಿಯೆಗೆ ಹೋಲಿಸುತ್ತಾರೆ. ಈ ದೇವಾಲಯದಲ್ಲಿ ದೇವಿ ಶಕ್ತಿ ರೂಪದಲ್ಲಿದ್ದಾಳೆಂದು ಭಕ್ತರು ನಂಬಿದ್ದಾರೆ.

 

ಪೌರಾಣಿಕ ಹಿನ್ನೆಲೆ:

ದೇವಸ್ಥಾನದಲ್ಲಿ ಆಚರಿಸುವ ಈ ಪದ್ಧತಿಗೆ ಪೌರಾಣಿಕ ಹಿನ್ನೆಲೆಯೂ ಇದೆ. ದಕ್ಷ ಒಮ್ಮೆ ಒಂದು ಬಾರಿ ಬೃಹತ್ ಯಜ್ಞ ಮಾಡುತ್ತಾನೆ. ಆದರೆ ಅದಕ್ಕೆ ಶಿವ ಮತ್ತು ಸತಿಯನ್ನು ಆಹ್ವಾನಿಸಿರುವುದಿಲ್ಲ. ಆದರೂ ಸತಿ ಶಿವನ ಅನುಮತಿ ಇಲ್ಲದೆ ಅಲ್ಲಿಗೆ ತೆರಳುತ್ತಾಳೆ. ಅಲ್ಲಿ ದಕ್ಷ ಶಿವನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ಇದರಿಂದ ಅವಮಾನವಾದ ಸತಿ, ಯಜ್ಞ ಕುಂಡಕ್ಕೆ ಹಾರಿ ತನ್ನ ಜೀವವನ್ನು ತ್ಯಾಗ ಮಾಡುತ್ತಾಳೆ.

ನಂಬಿದವರೆಂದೂ ಕೈ ಬಿಡದ ಶೃಂಗೇರಿ ಶಾರದಾಂಬೆ

ಈ ವಿಷಯ ತಿಳಿದ ಶಿವ ಕೋಪೋದ್ರಿಕ್ತನಾಗಿ ಅಲ್ಲಿಗೆ ತೆರಳಿ ಸತಿಯ ದೇಹವನ್ನು ಹಿಡಿದುಕೊಂಡು ತಾಂಡವ ನೃತ್ಯವಾಡಲು ತೊಡಗುತ್ತಾನೆ. ಆತನ ಕೋಪವನ್ನು ಕಡಿಮೆ ಮಾಡಲು ವಿಷ್ಣು ತನ್ನ ಚಕ್ರವನ್ನು ಕಳುಹಿಸಿ, ಸತಿಯ ದೇಹವನ್ನು ಛಿದ್ರ ಮಾಡುತ್ತಾನೆ. ಅದು 108 ಭಾಗಗಳಲ್ಲಿ ಬಿದ್ದವು. ಅವುಗಳೇ ಎಲ್ಲೆಡೆ ಶಕ್ತಿ ಪೀಠವಾಗಿ ಪೂಜಿಸಲಾಗುತ್ತಿದೆ. ಹೀಗೆ ಛಿದ್ರವಾದ ದೇಹದ ಭಾಗಗಳಲ್ಲಿ ದೇವಿಯ ಯೋನಿ ಭಾಗವು ಈ ಪ್ರದೇಶದಲ್ಲಿ ಬಿದ್ದಿದ್ದರಿಂದ, ಇಲ್ಲಿ ದೇವಿಯ ಈ ಭಾಗವನ್ನೇ ಪೂಜಿಸಲಾಗುತ್ತದೆ, ಎಂಬ ಪ್ರತೀತಿ ಇದೆ.

video courtesy: The Best Of India 

click me!