ಶುದ್ಧರಾರು, ಅಶುದ್ಧರಾರು? ತಿಳಿಯೋಣವೇ?

By Suvarna Web DeskFirst Published Oct 24, 2017, 8:44 PM IST
Highlights

ಬಡವರೆನಿಸಿಕೊಂಡ ಹೊಲಮನೆ, ಹುಲ್ಲುಮನೆ, ಸಣ್ಣ ಮನೆಗಳ್ಯಾರೂ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ, ಹರಿಜನ ಕೇರಿಗಳಿಗಂತೂ ಹೊರಡಲು ಸಮಿತಿಯವರೂ ಯಾರೂ ತಯಾರೂ ಇರಲಿಲ್ಲ, ಆದರೆ ಗಾಂಧೀಜಿಯವರು ಮಾತ್ರ ಹರಿಜನರ ಆ ಮನೆಗಳಿಗೆ ಬೇಟಿ ನೀಡುತ್ತಾರೆ,

ಹೊಲಸಾದ ಅರಮನೆಗಿಂತ ಹುಲುಸಾದ ಹೊಲಮನೆ ಲೇಸು, ಗಾಂಧೀ ಮಹಾತ್ಮರು ತಮ್ಮ ಆತ್ಮಕಥೆಯಲ್ಲಿ ಹೇಳುವ ಒಂದು ಪ್ರಸಂಗ ಇದಕ್ಕೆ ಪೂರಕವಾಗಿದೆ. ಭಾರತದಲ್ಲಿ ಪ್ಲೇಗ್ ಹಾವಳಿ ಇದ್ದ ದಿನಗಳು ಅವು. ಮುಂಬೈಯನ್ನಾಕ್ರಮಿಸಿದ ಪ್ಲೇಗ್ಮಾರಿ ದೇಶವೆಲ್ಲ ಹರಡುವ ಶಂಕೆ ಕಾಡಿತು, ರಾಜಕೋಟೆ ಯಲ್ಲಿದ್ದ ಮಹಾತ್ಮರು ಸರಕಾರಕ್ಕೆ ಪತ್ರ ಬರೆದು ಸ್ವಚ್ಚತೆ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ಲೇಗ್ ರೋಗ ಬರದಂತೆ ತಡೆಗಟ್ಟಲು ರಾಜಕೋಟೆಯ ನೈರ್ಮಲ್ಯದ ಜವಾಬ್ದಾರಿ ಪಡೆಯುತ್ತಾರೆ, ಅದಕ್ಕೆ ಸಲುವಾಗಿ ಜನರ ಮನೆಗಳಿಗೆ ಹೋಗಿ ಪಾಯಖಾನೆಗಳ ವೀಕ್ಷಿಸಿ ಅದರ ಸ್ವಚ್ಚತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುತ್ತಾರೆ, ಆಗ ಪಾಯಖಾನೆಗಳ ಪರೀಕ್ಷೆಗೆಂದು ಇವರ ಜೊತೆಗೆ ಅನೇಕ ಸ್ವಯಂ ಸೇವಕರು ಬರುತ್ತಾರೆ ಆ ಮುಖೇನ ಅವರೆಲ್ಲ, ಐಶ್ವರ್ಯವಂತರ ಅರಮನೆ, ಪೂಜಾ ಹವೇಲಿ, ಸಿರಿವಂತರ ಮಹಡೀ ಮನೆಗಳು ನೋಡಬಹುದೆಂಬ ಇಚ್ಛೆಯೂ ಹೊತ್ತಿರುತ್ತಾರೆ.

ಆದರೆ ಅಲ್ಲಿ ಇವರಿಗೆ ಎಲ್ಲರೂ ಒಳಗೆ ಸೇರಿಸಲೂ ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ, ಆದರೂ ಇವರು ಸರಕಾರದ ವತಿಯಿಂದ ಬಲವಂತವಾಗಿ ಒಳ ನುಗ್ಗಿ ಅವರ ಪಾಯಖಾನೆಗಳ ನೋಡೋಣವೆಂದರೆ ಹೋದವರೆಲ್ಲರೂ ಅಲ್ಲಿನ ಪರಿಸ್ಥಿತಿ ನೋಡಿ ಗಾಬರಿಯಾಗುತ್ತಾರೆ, ಆ ದುರ್ಗಂಧಕ್ಕೆ ಎಲ್ಲರೂ ಮೂಗು ಮುಚ್ಚಿಕೊಂಡೇ ಪರೀಕ್ಷೆ ಮುಂದುವರೆಸಿ ಹೇಗೋ ನಿಭಾಯಿಸುತ್ತಾರೆ. ಅಲ್ಲಿನ ಕೋಣೆ ಕೋಣೆಗೂ ಒಂದೊಂದು ಬಚ್ಚಲಿದ್ದೂ ಅವುಗಳು ತೊಳೆದು ಎಷ್ಟೋ ವರ್ಷಗಳಾಗಿದ್ದ ಕುರುಹು ಕಾಣುತ್ತದೆ.

ಇದ್ದವರ ಮನೆಗಳೇ ಹೀಗಾದಾಗ ಇಲ್ಲದವರ ಮನೆಗಳ ಗತಿ ಏನಿರಬಹುದು ಎಂದು ಆ ಸ್ವಯಂ ಸೇವಕರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ. ಬಡವರೆನಿಸಿಕೊಂಡ ಹೊಲಮನೆ, ಹುಲ್ಲುಮನೆ, ಸಣ್ಣ ಮನೆಗಳ್ಯಾರೂ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ, ಹರಿಜನ ಕೇರಿಗಳಿಗಂತೂ ಹೊರಡಲು ಸಮಿತಿಯವರೂ ಯಾರೂ ತಯಾರೂ ಇರಲಿಲ್ಲ, ಆದರೆ ಗಾಂಧೀಜಿಯವರು ಮಾತ್ರ ಹರಿಜನರ ಆ ಮನೆಗಳಿಗೆ ಬೇಟಿ ನೀಡುತ್ತಾರೆ, ಆದರೆ ಅವರಿಗೆ ಅಚ್ಚರಿ ಕಾದಿತ್ತು, ಅಲ್ಲಿ ಎಲ್ಲರ ಮನೆಗಳೂ ಸಗಣಿ ಯಿಂದ ಸಾರಿಸಲಾಗಿತ್ತು, ಇವರಿಗೆ ಗೌರವ ಸ್ವಾಗತ ಕೊಟ್ಟು ಇವರ ಸ್ವಚ್ಛತೆಯ ಪಾಠವನ್ನು ಶ್ರದ್ಧೆಯಿಂದ ಕೇಳುತ್ತಾರೆ. ಅವರ ಗುಡಿಸಲುಗಳು ಯಾವುದೇ ದುರ್ಗಂಧವಿಲ್ಲದೇ ಸ್ವಚ್ಚವಾಗಿದ್ದವು, ಪಾಯಖಾನೆಗಾಗಿ ಅವರು ಬಟಾಬಯಲನ್ನು ಬಳಸುತ್ತಿದ್ದರು, ಆದಕಾರಣ ಅವರಿಗೆ ಸಮಿತಿಯ ವತಿಯಿಂದ ಯಾವುದೆ ನಿರ್ದೇಶನ ಅಗತ್ಯವಿರಲಿಲ್ಲ.

-ಒಳಗನ್ನಡಿ, ಅಹೋರಾತ್ರ  

click me!