ಜನತಾ ಕರ್ಫ್ಯೂ ಎಫೆಕ್ಟ್‌: ಮೀನುಗಾರಿಕಾ ಕ್ಷೇತ್ರ ವಿಲವಿಲ..!

By Kannadaprabha NewsFirst Published Apr 30, 2021, 1:52 PM IST
Highlights

ಮೀನು ಹಿಡಿಯುವುದಕ್ಕೂ, ಮಾರುವುದಕ್ಕೂ ನಿರ್ಬಂಧ ಇಲ್ಲ, ಆದರೂ ವ್ಯಾಪಾರ ಆಗುತ್ತಿಲ್ಲ| ಕರ್ಫ್ಯೂವಿನಿಂದ ನೇರ ಸಂಕಷ್ಟ ಆಗಿರುವುದು ಮೀನು ಮಾರುವ ಮಹಿಳೆಯರಿಗೆ| ಬಂದರಿನಲ್ಲಿಯೇ ಮೀನಿನ ಬೆಲೆ ಕುಸಿದಿದ್ದು, ಬೋಟು ಮಾಲೀಕರಿಗೆ ಲಕ್ಷಾಂತರ ರು. ನಷ್ಟ| 

ಸುಭಾಶ್ಚಂದ್ರ ಎಸ. ವಾಗ್ಳೆ

ಉಡುಪಿ(ಏ.30): ಜನತಾ ಕರ್ಫ್ಯೂವಿನ ಮೊದಲ ಹೊಡೆತ ಉಡುಪಿ ಜಿಲ್ಲೆಯ ಪ್ರಮುಖ ಆರ್ಥಿಕ ಚಟುವಟಿಕೆ ಮೀನುಗಾರಿಕೆಯ ಮೇಲೆ ಬಿದ್ದಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ ಆದರೆ ಮೀನುಗಾರಿಕೆ ಸಂಪೂರ್ಣ ಕುಸಿದು ಬೀಳಲಿದೆ.

ಸಮುದ್ರದಲ್ಲಿ ಮೀನು ಹಿಡಿಯುವುದಕ್ಕೆ ಜನತಾ ಕರ್ಫ್ಯೂ ನಿಯಮಾವಳಿಗಳಲ್ಲಿ ನಿರ್ಬಂಧ ವಿಧಿಸಿಲ್ಲ. ಆದರೆ ಸಮುದ್ರದಲ್ಲಿ 10 - 15 ದಿನಗಳ ಕಾಲ ಜೀವದ ಹಂಗು ತೊರೆದು, ಹಿಡಿದು ತಂದ ಮೀನನ್ನು ಮಾರುವುದಕ್ಕೆ ಜನತಾ ಕರ್ಫ್ಯೂವಿನ ನಿಯಮಾವಳಿಗಳಿಂದಾಗಿ ಸಾಧ್ಯವಾಗುತ್ತಿಲ್ಲ.

ಮೀನು ಕರಾವಳಿ ಜಿಲ್ಲೆಯಲ್ಲಿ ಬಹಳ ಬೇಡಿಕೆ ಇರುವ ಮುಖ್ಯ ಆಹಾರ ಪದಾರ್ಥಗಳಲ್ಲೊಂದಾಗಿದ್ದು, ಇತರ ಆಹಾರ ಪದಾರ್ಥಗಳಂತೆ ಬೆಳಗ್ಗೆ 10 ಗಂಟೆವರೆಗೆ ಮಾರಾಟ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ ಸೈಕಲ್‌ ಅಥವಾ ದ್ವಿಚಕ್ರ ವಾಹನಗಳಲ್ಲಿ ಊರೂರು ತಿರುಗಿ ಮೀನು ಮಾರುವ ಯುವಕರು ಮತ್ತು ಮಾರುಕಟ್ಟೆಯಲ್ಲಿ ಕುಳಿತು ಮೀನು ಮಾರುವ ಮಹಿಳೆಯರು ಮಲ್ಪೆ ಅಥವಾ ಇತರ ಬಂದರುಗಳಲ್ಲಿ ಮೀನನ್ನು ಹರಾಜಿನಲ್ಲಿ, ಖರೀದಿಸಿ ಮಾರುಕಟ್ಟೆಗೆ ತರವಷ್ಟರಲ್ಲಿಯೇ 10 ಗಂಟೆ ಕಳೆದಿರುತ್ತದೆ.

ಕರ್ಫ್ಯೂ ವೇಳೆ ಊಟ ತಯಾರಿಸಿ ಸದ್ದಿಲ್ಲದೆ ಹಸಿದವರ ಹೊಟ್ಟೆ ತುಂಬಿಸಿದ ಮಹಿಳೆ

ಒಂದೆಡೆ ಮೀನು ಖರೀದಿ ಮಾಡುವುದಕ್ಕೆ 10 ಗಂಟೆಯೊಳಗೆ ಮಾರುಕಟ್ಟೆಗೆ ಬಂದ ಗ್ರಾಹಕರಿಗೆ ತಾಜಾ ಮೀನು ಸಿಕ್ಕುತ್ತಿಲ್ಲ, ಇನ್ನೊಂದೆಡೆ ಮೀನು ಮಾರುವವರಿಗೆ 10 ಗಂಟೆಯ ನಂತರ ಮಾರುವುದಕ್ಕೆ ಅವಕಾಶ ಇಲ್ಲ. ಇದರಿಂದ ಮೀನು ಮಾರಿ ಹೊಟ್ಟೆ ಹೊರೆಯುವ ಉಡುಪಿ ಜಿಲ್ಲೆಯ ಸಾವಿರಾರು ಮಂದಿಯ ನಿತ್ಯದ ಸಂಪಾದನೆಗೆ ಕಲ್ಲು ಬಿದ್ದಿದೆ.

ಹೊಟೇಲ್‌ಗಳಲ್ಲೂ ಗ್ರಾಹಕರಿಲ್ಲ:

ಜೊತೆಗೆ ಎಲ್ಲ ಮೀನಿನ ಹೊಟೇಲುಗಳು ಮತ್ತು ಬಾರುಗಳು ಮುಚ್ಚಿದ್ದರಿಂದಲೂ, ಮೀನು ವ್ಯವಹಾರದ ಮೇಲೆ ಬಲವಾದ ಹೊಡೆತ ಬಿದ್ದಿದೆ. ಪ್ರತಿದಿನ ಉಡುಪಿ ಜಿಲ್ಲೆಯ ಹೊಟೇಲು, ಬಾರುಗಳವರು ಮಲ್ಪೆ ಬಂದರಿನಲ್ಲಿ ಲಕ್ಷಾಂತರ ರು.ಗಳ ಮೀನು ಖರೀದಿಸುತ್ತಿದ್ದರು. ಕಳೆದೆರಡು ದಿನಗಳಿಂದ ಹೊಟೇಲು ಬಾರ್‌ನವರೂ ಮೀನು ಖರೀದಿಸುತ್ತಿಲ್ಲ. ಪ್ರತಿದಿನ ಸಾಕಷ್ಟುಜನರು ಆಟೋ ಮತ್ತಿತರ ವಾಹನಗಳಲ್ಲಿ ಬಂದು ಮೀನು ಖರೀದಿಸುತಿತುದ್ದರು, ಈಗ ಅದೂ ನಿಂತಿದೆ. ಇದರಿಂದ ಬಂದರಿನಲ್ಲಿಯೇ ಮೀನಿನ ಬೆಲೆ ಕುಸಿದಿದ್ದು, ಬೋಟು ಮಾಲೀಕರಿಗೆ ಲಕ್ಷಾಂತರ ರು. ನಷ್ಟವಾಗುತ್ತಿದೆ.

ಆದರೂ ಆಶಾಭಾವನೆ...

ಈಗ ಘೋಷಿಸಿರುವುದು 14 ದಿನಗಳ ಜನತಾ ಕರ್ಫ್ಯೂ, ಅಷ್ಟರಲ್ಲಿ ಕೊರೋನಾ ಹತೋಟಿಗೆ ಬರುತ್ತದೆ, ಲಾಕ್‌ಡೌನ್‌ನ ಅವಶ್ಯಕತೆ ಬರುವುದಿಲ್ಲ ಎಂದು ಮೀನುಗಾರರು ನಷ್ಟದ ನಡುವೆಯೂ ಆಶಾಭಾವನೆಯಲ್ಲಿದ್ದಾರೆ.
ಡೀಸೆಲ್‌ ಬೆಲೆ ಏರಿದ ನಂತರ ಒಂದು ಬೋಟು ಸಮುದ್ರದಲ್ಲಿ 10 ದಿನಗಳ ಕಾಲ ಮೀನು ಹಿಡುದು ಬಂದರಿಗೆ ಬಂದರೆ ಅವರಿಗೆ ಕನಿಷ್ಠ 6 ಲಕ್ಷ ರು. ಬೆಲೆ ಸಿಗಬೇಕು, ಈಗ ಸಿಗದೆ ನಷ್ಟವಾಗುತ್ತಿದೆ. ಆದರೆ ಸರ್ಕಾರ ನಮ್ಮೆಲ್ಲರ ಒಳಿತಿಗಾಗಿ ಜನತಾ ಕಫä್ರ್ಯ ವಿಧಿಸಿದೆ, ಅದ್ದರಿಂದ ಅದನ್ನು ಪಾಲಿಸುವುದು ನಮ್ಮ ಕರ್ತವ್ಯ, ಆದರೆ ಕರಾವಳಿಯಲ್ಲಿ ಲಾಕ್‌ಡೌನ್‌ ಘೋಷಿಸಲೇಬಾರದು, ಘೋಷಿಸಿದರೆ ಮೀನುಗಾರಿಕೆ ಸಂಪೂರ್ಣ ಕುಸಿಯುತ್ತದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದ್ದಾರೆ.

ಬೇರೆ ಜಿಲ್ಲೆಯಿಂದ ಬಂದರೆ 10 ದಿನ ಕ್ವಾರಂಟೈನ್‌

ಈ ಕರ್ಫ್ಯೂವಿನಿಂದ ನೇರ ಸಂಕಷ್ಟ ಆಗಿರುವುದು ಮೀನು ಮಾರುವ ಮಹಿಳೆಯರಿಗೆ, ಬೆಳಗ್ಗೆ 6 ಗಂಟೆಗೆ ಬಂದರಿಗೆ ಹೋಗಿ 7 ಗಂಟೆಯೊಳಗೆ ಮಾರುಕಟ್ಟೆಗೆ ಬಂದು 10 ಗಂಟೆಯೊಳಗೆ ಮೀನು ಮಾರಿ ಮನೆಗೆ ಹೋಗ್ಬೇಕಾಗಿದೆ. ಸಂಜೆ 4 - 5 ಗಂಟೆಯವರೆಗೆ ಮೀನು ಮಾರ್ತಿದ್ದ ನಮ್ಗೆ ಈಗ ಅರ್ಧದಷ್ಟು ಕೂಡ ಸಂಪಾದನೆ ಇಲ್ಲ. ಬಸ್ಸಿಲ್ಲ, ವಾಹನಗಳಿಲ್ಲ ಆದ್ದರಿಂದ ಗ್ರಾಹಕರೂ ಬರುತ್ತಿಲ್ಲ. 12 ಗಂಟೆವರೆಗೆ ವ್ಯಾಪಾರಕ್ಕೆ ಅನುಮತಿ ನೀಡಿದ್ರೆ ಒಳ್ಳೆದಿತ್ತು ಎಂದು ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್‌ ಹೇಳಿದ್ದಾರೆ.

ನುಗಾರಿಕೆಗೆ ಕೂಡ ಕೋವಿಡ್‌ ನಿಯಮ ಅನ್ವಯಿಸುತ್ತದೆ. ಕರ್ಫ್ಯೂ ಸಡಿಲಿಕೆ ಅವಧಿಯಲ್ಲಿ ಮಾತ್ರ ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಉಳಿದ ಅವಧಿಯಲ್ಲಿ ಮೀನುಗಾರಿಕೆ ಹಾಗೂ ಮೀನು ಮಾರಾಟ ಮಾಡುವಂತಿಲ್ಲ. ಕಡಲಲ್ಲಿ ಮೀನಿನ ಪ್ರಮಾಣ ಕೂಡ ಕಡಿಮೆಯಾಗಿದ್ದು, ಈಗ ಶೇ.50ರಷ್ಟು ಬೋಟ್‌ಗಳು ಕೂಡ ಮೀನುಗಾರಿಕೆಗೆ ತೆರಳುತ್ತಿಲ್ಲ. ಒಮ್ಮೆ ಆಳಸಮುದ್ರ ಮೀನುಗಾರಿಕೆ ಮುಗಿಸಿ ಬಂದವರು ಮತ್ತೆ ಮೀನುಗಾರಿಕೆಗೆ ತೆರಳುತ್ತಿಲ್ಲ. ಹಾಗಾಗಿ ಕಳೆದ ಎರಡು ದಿನಗಳಿಂದ ಮಂಗಳೂರಿನಲ್ಲಿ ಮೀನು ಮಾರಾಟಕ್ಕೆ ಕರ್ಫ್ಯೂವಿನಿಂದ ಅಷ್ಟಾಗಿ ತೊಂದರೆಯಾಗಿಲ್ಲ ಎಂದು ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌ ತಿಳಿಸಿದ್ದಾರೆ.

click me!