ಈ ನಾಲ್ವರ ಮೇಲಿದೆ ಕೇಂದ್ರ- ರೈತರ ನಡುವಿನ ತಿಕ್ಕಾಟ ಶಮನಗೊಳಿಸುವ ಜವಾಬ್ದಾರಿ!

By Suvarna NewsFirst Published Jan 12, 2021, 4:51 PM IST
Highlights

ಕೃಷಿ ಕಾಯ್ದೆ ಜಾರಿಗೆ ಸುಪ್ರಿಂ ಕೋರ್ಟ್ ತಾತ್ಕಾಲಿಕ ಬ್ರೇಕ್| ಕೇಂದ್ರ, ರೈತರ ನಡುವಿನ ಸಂಘರ್ಷ ಶಮನಗೊಳಿಸಲು ನಾಲ್ವರು ಸದಸ್ಯರ ಸಮಿತಿ| ಸಮಿತಿ ಸದಸ್ಯರಾರು? ಕಾಯ್ದೆ ಬಗ್ಗೆ ಇವರ ಅಭಿಪ್ರಾಯವೇನು? ಇಲ್ಲಿದೆ ವಿವರ

ನವದೆಹಲಿ(ಜ.12): ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ನಡುವೆಯೇ ಸುಪ್ರಿಂ ಕೋರ್ಟ್ ಮಹತ್ವದ ನಿರ್ಧಾರ ಪ್ರಕಟಿಸಿದೆ. ಕೋರ್ಟ್ ಕೃಷಿ ಕಾನೂನು ಜಾರಿಗೊಳಿಸುವ ಹಾಗೂ ರೈತರ ದೂರುಗಳನ್ನು ಗಮನಿಸಲು ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಸಮಿತಿ ಸದಸ್ಯರಲ್ಲಿ ಭಾರತೀಯ ರೈತ ಯೂನಿಯನ್‌ನ ಅಧ್ಯಕ್ಷ ಭೂಪೇಂದ್ರ ಸಿಂಗ್ ಮಾನ್, ಶೆತ್ಕಾರಿ ಸಂಘಟನೆಯ ಅನಿಲ್ ಘನ್ವಂತ್, ಕೃಷಿ ವಿಜ್ಞಾನಿ ಅಶೋಕ್ ಗುಲಾಟಿ ಹಾಗೂ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಪ್ರಮೋದ್ ಜೋಶಿ ಇದ್ದಾರೆ. ಹಾಗಾದ್ರೆ ಈ ನಾಲ್ವರ ಹಿನ್ನೆಲೆ ಏನು? ಕೃಷಿ ಕಾಯ್ದೆ ಬಗ್ಗೆ ಇವರ ಅಭಿಪ್ರಾಯವೇನು? ಇಲ್ಲಿದೆ ವಿವರ

1. ಭೂಪೇಂದ್ರ ಸಿಂಗ್ ಮಾನ್ 

15 ಸಪ್ಟೆಂಬರ್ 1939ರಲ್ಲಿ ಗುಜರಾಂವಾಲಾ(ಇಂದು ಪಾಕಿಸ್ತಾನ)ದಲ್ಲಿ ಜನಿಸಿದ ಸರ್ದಾರ್ ಭೂಪಿಂದರ್ ಸಿಂಗ್ ಮಾನ್‌ರವರಿಗೆ ರೈತರ ಹೋರಾಟಕ್ಕೆ ನೀಡಿದ ಕೊಡುಗೆಗಾಗಿ ಭಾರತದ ಅಂದಿನ ರಾಷ್ಟ್ರಪತಿಗಳು ಅವರ ಹೆಸರನ್ನು 1990 ರಲ್ಲಿ ಅವರ ಹೆಸರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ್ದರು. ಹೀಗಾಗಿ ಅವರು 1990-1996 ರವರೆಗೆ ಜನರ ಸೇವೆ ಸಲ್ಲಿಸಿದರು. ಅವರ ತಂದೆ ಎಸ್.ಅನೂಪ್ ಸಿಂಗ್ ಓರ್ವ ಜಮೀನ್ದಾರರಾಗಿದ್ದರು.

ಕೃಷಿ ಕಾಯ್ದೆ ಬಗ್ಗೆ ಅಭಿಪ್ರಾಯವೇನು?: ಭೂಪೀಂದರ್ ಸಿಂಗ್ ಹಾಗೂ ಅವರ ತಂಡ ಕೃಷಿ ಕಾನೂನನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದೆ. ಕೃಷಿ ಕಾಯ್ದೆ ಹಿಂಪಡೆಯಬೇಕೆಂಬುವುದು ಅವರ ಮನವಿಯಾಗಿದೆ.

"

2. ಅಶೋಕ್ ಗುಲಾಟಿ:

ಪ್ರಸಿದ್ಧ ಕೃಷಿ ಅರ್ಥ ಶಾಸ್ತಜ್ಞ ಅಶೋಕ್ ಗುಲಾಟಿ 1999 ರಿಂದ 2001ರವರೆಗೆ ಪ್ರಧಾನ ಮಂತ್ರಿಯ ಆರ್ಥಿಕ ಸಲಹೆಗಾರ ಸಮಿತಿಯ ಸದಸ್ಯರಾಗಿದ್ದವರು. ಅವರು ಭಾರತೀಯ ಕೃಷಿ ಆರ್ಥ ಶಾಸ್ತ್ರಜ್ಞ ಹಾಗೂ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (CACP)ದ ಮಾಜಿ ಅಧ್ಯಕ್ಷರೂ ಹೌದು. ಸಿಎಸಿಪಿ ಆಹಾರ ಪೂರೈಕೆ ಮತ್ತು ಬೆಲೆ ನೀತಿಗಳ ಕುರಿತು ಭಾರತ ಸರ್ಕಾರದ ಸಲಹಾ ಸಂಸ್ಥೆಯಾಗಿದೆ. ಅನೇಕ ಆಹಾರ ಧಾನ್ಯಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವಲ್ಲಿ ಗುಲಾಟಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಅವರು ಇಂಡಿಯನ್ ಕೌನ್ಸಿಲ್ ಆಫ್ ರಿಸರ್ಚ್ ಆನ್ ಇಂಟರ್ನ್ಯಾಷನಲ್ ಎಕನಾಮಿಕ್ ರಿಲೇಶನ್ಸ್ನಲ್ಲಿ ಕೃಷಿ ವಿಭಾಗದ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ನೀತಿ ಆಯೋಗದಡಿಯಲ್ಲಿ ಪ್ರಧಾನಿ ನಿಗದಿಪಡಿಸಿದ ಕೃಷಿ ಕಾರ್ಯಗಳ ಕಾರ್ಯಪಡೆಯ ಸದಸ್ಯ ಮತ್ತು ಕೃಷಿ ಮಾರುಕಟ್ಟೆ ಸುಧಾರಣೆಗಳ (2015) ತಜ್ಞರ ತಂಡದ ಅಧ್ಯಕ್ಷರೂ ಆಗಿದ್ದಾರೆ.

ಕೃಷಿ ಕಾಯ್ದೆ ಬಗ್ಗೆ ಅಭಿಪ್ರಾಯವೇನು?: ಅಶೋಕ್ ಗುಲಾಟಿ ಟೈಮ್ಸ್ ಆಫ್ ಇಂಡಿಯಾಗೆ ನಿಡಿದ ಸಂದರ್ಶನವೊಂದರಲ್ಲಿ ಕೃಷಿ ಕಾನೂನಿನಿಂದ ರೈತರಿಗೆ ಲಾಭವಿದೆ. ಆದರೆ ಸರ್ಕಾರಕ್ಕೆ ಈ ವಿಚಾರವನ್ನು ರೈತರಿಗೆ ಅರ್ಥೈಸಲಾಗಲಿಲ್ಲ ಎಂದಿದ್ದರು.

3. ಡಾಕ್ಟರ್ ಪ್ರಮೋದ್ ಜೋಶಿ: 

ಜೋಶಿಯವರು ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಇದಕ್ಕೂ ಮುನ್ನ ಅವರು ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡೆಮಿಯ ನಿರ್ದೇಶಕರ ಹುದ್ದೆಯನ್ನು ಅಲಂಕರಿಸಿದ್ದರು. ಅವರ ಸಂಶೋಧನಾ ಕ್ಷೇತ್ರಗಳಲ್ಲಿ ತಂತ್ರಜ್ಞಾನ ನೀತಿ, ಮಾರುಕಟ್ಟೆಗಳು ಮತ್ತು ಸಾಂಸ್ಥಿಕ ಅರ್ಥಶಾಸ್ತ್ರ ಸೇರಿವೆ. ಅವರು ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಮತ್ತು ಇಂಡಿಯನ್ ಸೊಸೈಟಿ ಆಫ್ ಅಗ್ರಿಕಲ್ಚರಲ್ ಎಕನಾಮಿಕ್ಸ್‌ನ ಸದಸ್ಯರೂ ಆಗಿದ್ದಾರೆ. ಅಲ್ಲದೇ ಜೋಶಿಯವರು ಬಾಂಗ್ಲಾದ ಡಾಕಾದಲ್ಲಿ ಸಾರ್ಕ್ ಕೃಷಿ ಕೇಂದ್ರದ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕೃಷಿ ಕಾಯ್ದೆ ಬಗ್ಗೆ ಅಭಿಪ್ರಾಯವೇನು?: ನಾವು MSP ಹೊರತುಪಡಿಸಿ ಹೊಸ ಹೊಸ ಬೆಲೆ ನೀತಿಯನ್ನು ಪರಿಗಣಿಸುವ ಅಗತ್ಯವಿದೆ. ಇದು ರೈತರು, ಗ್ರಾಹಕರು ಮತ್ತು ಸರ್ಕಾರದ ಗೆಲುವು ಆಗಿರಬೇಕು. MSP ಕೊರತೆಯ ಅವಧಿಯಲ್ಲಿ ಜಾರಿಗೆ ಬಂದಿತು. ಈಗ ನಾವು ಅದನ್ನು ದಾಟಿ ಮುಂದೆ ಬಂದಿದ್ದೇವೆ ಎಂಬುವುದು ಜೋಶಿ ಮಾತಾಗಿದೆ.

4. ಅನಿಲ್ ಘನ್ವಂತ್:

ಅನಿಲ್ ಘನ್ವಂತ್ ಶೆತ್ಕಾರಿ ಸಂಘಟನೆಯವರಾಗಿದ್ದಾರೆ. ರೈತ ಸಂಘಟನೆಯಾಗಿರುವ ಈ ಶೆತ್ಕಾರಿ ಸಂಘಟನೆಯನ್ನು ದಿವಂಗತ ಶರದ್ ಜೋಶಿ ಆರಂಭಿಸಿದ್ದರು. ಇನ್ನು ಅನಿಲ್‌ರವರು ಸರ್ಕಾರ ರೈತರೊಂದಿಗೆ ವಿಚಾರ ವಿಮರ್ಶೆ ನಡೆಸಿದ ಬಳಿಕ ಈ ಕೃಷಿ ಕಾನೂನು ಜಾರಿಗೊಳಿಸಿ ಬದಲಾವಣೆ ತರಬಹುದು ಎಂದಿದ್ದರು.

ಕೃಷಿ ಕಾಯ್ದೆ ಬಗ್ಗೆ ಅಭಿಪ್ರಾಯವೇನು?: ಕೃಷಿ ಕಾನೂನು ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಅನಿಲ್ ಘನ್ವಂತ್ ಈ ಕೃಷಿ ಕಾಯ್ದೆ ಹಿಂಪಡೆಯುವ ಅವಶ್ಯಕತೆ ಇಲ್ಲ. ಇದು ರೈತರಿಗೆ ಅನೇಕ ಅವಕಾಶವನ್ನು ತೆರೆದಿಡಲಿದೆ ಎಂದಿದ್ದರು. 

click me!