ಉತ್ತರ ಪ್ರದೇಶ(ಮಾ.27): ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಿದೆ. 52 ಮಂತ್ರಿಗಳು ಸಂಪುಟ ಸೇರಿಕೊಂಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಇನ್ನೂ ಸಂಭ್ರಮಾಚರಣೆ ನಡೆಯುತ್ತಲೇ ಇದೆ. ಇದರ ನಡುವೆ ಬಿಜೆಪಿ(BJP) ಗೆಲುವನ್ನು ಸಂಭ್ರಮಿಸಿದ ಮುಸ್ಲಿಮ್ ಯುವಕ ಬಾಬರ್ನನ್ನು ತನ್ನದೇ ಸಮುದಾಯದ ಕೆಲ ಕಿಡಿಗೇಡಿಗಳು ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ನಡೆಸಿದ್ದಾರೆ.
ಕುಶಿನಗರದಲ್ಲಿ ವ್ಯಾಪಾರಿಯಾಗಿರುವ ಬಾಬರ್ ಸಣ್ಣ ಅಂಗಡಿಯೊಂದನ್ನು ಇಟ್ಟಿದ್ದಾನೆ. ಮಾರ್ಚ್ 20 ರಂದು ತನ್ನ ಅಂಗಡಿಯಿಂದ ಮನಗೆ ಮರಳುತ್ತಿದ್ದ ವೇಳೆ ಕೆಲ ಮುಸ್ಲಿಮ್ ಯುವಕರು ಬಾಬರ್ನನ್ನು ತಡೆದಿದ್ದಾರೆ. ಬಿಜೆಪಿ ಜೊತೆ ಗುರುತಿಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಬಾಬರ್ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾನೆ.
ಕೆರಳಿದ ಮುಸ್ಲಿಮ್ ಕಿಡಿಗೇಡಿಗಳು ಬಾಬರ್ ಮೇಲೆ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಂಡು ಓಡಿ ಹೋದ ಬಾಬರ್ ಪಕ್ಕದಲ್ಲಿದ್ದ ಅಂಗಡಿಯ ಮೇಲೆ ಹತ್ತಿದ್ದಾನೆ. ಆದರೆ ಕಿಡಿಗೇಡಿಗಳು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಕಿಡಿಗೇಡಿಗಳ ಮಚ್ಚಿನಿಂದ ತಪ್ಪಿಸಿಕೊಳ್ಳಲು ಅಂಗಡಿ ಮೇಲಿನಿಂದ ಕೆಳಕ್ಕೆ ಹಾರಿದ್ದಾನೆ. ತೀವ್ರವಾಗಿ ಗಾಯಗೊಂಡ ಬಾಬರ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಬಾಬರ್ನನ್ನು ರಾಮಕೊಲಾ ಜಿಲ್ಲಾಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಲಖನೌಗೆ ಸ್ಥಳಾಂತರಿಸಲಾಗಿತ್ತು. ಲಖನೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಬರ್ ಇಂದು(ಮಾ.27) ಸಾವನ್ನಪ್ಪಿದ್ದಾನೆ.
ಬಾಬರ್ ಕಳೆದ ಕೆಲ ವರ್ಷಗಳಿಂದ ಬಿಜೆಪಿ ಬೆಂಬಲಿಸುತ್ತಿದ್ದ. ತನ್ನ ಕುಟುಂಬಕ್ಕೆ ಬಿಜೆಪಿ ನೆರವು ನೀಡಿದೆ. ಯೋಗಿ ಸರ್ಕಾರ ಉತ್ತಮ ಕೆಲಸ ಮಾಡಿದೆ. ಕೇಂದ್ರ ಹಾಗೂ ರಾಜ್ಯದ ಯೋಜನೆಗಳಿಂದ ಸಾಲ ಪಡೆದು ವ್ಯಾಪರ ನಡೆಸುತ್ತಿದ್ದೇನೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಜೀವನ ಸುಧಾರಿಸಿದೆ. ಹೀಗಾಗಿ ಬಿಜೆಪಿ ನನ್ನ ಸಂಪೂರ್ಣ ಬೆಂಬಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ. ಇದು ಮುಸ್ಲಿಮ್ ನಾಯಕರು ಹಾಗೂ ಸಮುದಾಯದ ಕಣ್ಣು ಕೆಂಪಾಗಿಸಿತ್ತು.
ತನ್ನ ಅಂಗಡಿಯಲ್ಲಿ ಬಿಜೆಪಿ ಬಾವುಟ ಹಾರಿಸಿ ಬಿಜೆಪಿ ಗೆಲುವನ್ನು ಸಂಭ್ರಮಿಸಿದ್ದ. ಕಳೆದ ಕೆಲ ತಿಂಗಳ ಹಿಂದಯೇ ಬಾಬರ್ಗೆ ಮುಸ್ಲಿಮ್ ನಾಯಕರು, ಕಿಡಿಗೇಡಿಗಳು ಎಚ್ಚರಿಕೆ ನೀಡಿದ್ದರು. ಈ ವೇಳೆ ಪೊಲೀಸ್ ಠಾಣೆಯಲ್ಲಿ ತನಗೆ ರಕ್ಷಣೆ ನೀಡಲು ಮನವಿ ಮಾಡಿದ್ದ. ಮುಸ್ಲಿಮ್ ಯುವಕರು, ನಾಯಕರಿಂದ ಕೊಲೆ ಬೆದರಿಕೆ ಇದೆ ಎಂದು 2 ತಿಂಗಳ ಹಿಂದೆಯೇ ಪೊಲೀಸರಲ್ಲಿ ಹೇಳಿಕೊಂಡಿದ್ದ.
ಇದೀಗ ಬಾಬರ್ ಬಿಜೆಪಿಯನ್ನು ಬೆಂಬಲಿಸಿದ ಕಾರಣಕ್ಕೆ ಕೊಲೆಯಾಗಿದ್ದಾನೆ. ಬಾಬರ್ ಕುಟುಂಬಸ್ಥರು ಅಳಲು ಮುಗಿಲು ಮುಟ್ಟಿದೆ. ಮಗನ ವ್ಯಾಪಾರದಿಂದ ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದ ಕುಟುಂಬಕ್ಕೆ ಇದೀಗ ಆಧಾರವೇ ಇಲ್ಲದಾಗಿದೆ. ಮಗನ ಹತ್ಯೆಗೈದವರನ್ನು ಬಂಧಿಸಿ ಶಿಕ್ಷೆ ನೀಡುವ ವರೆಗೂ ಮಗನ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯ ಹಾಗೂ ಇತರ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಮಾರ್ಚ್ 25 ರಂದು ಯೋಗಿ ಆದಿತ್ಯನಾಥ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬಾರಿ ಬಿಜೆಪಿ 403 ಸ್ಥಾನಗಳ ಪೈಕಿ 255 ಸ್ಥಾನ ಗೆದ್ದು ಸರ್ಕಾರ ರಚಿಸಿದೆ. ಇನ್ನು ಸಮಾಜವಾದಿ ಪಾರ್ಟಿ 111 ಸ್ಥಾನ ಗೆದ್ದರೆ, ಕಾಂಗ್ರೆಸ್ 2 ಹಾಗೂ ಬಹುಜನ ಸಮಾಜ್ ಪಾರ್ಟಿ 2 ಸ್ಥಾನಗಳನ್ನು ಗೆದ್ದುಕೊಂಡಿದೆ.