ಹಾಲ್‌ಮಾರ್ಕ್ ನೀತಿ ವಿರುದ್ಧ ಆಭರಣ ವರ್ತಕರ ಪ್ರತಿಭಟನೆ!

By Suvarna NewsFirst Published Aug 24, 2021, 2:38 PM IST
Highlights

* 350ಕ್ಕೂ ಹೆಚ್ಚು ಆಭರಣ ಸಂಘಟನೆಗಳು ಮುಷ್ಕರದಲ್ಲಿ ಭಾಗಿ

* ವರ್ತಕರ ಮೇಲೆ ನಿಗಾ ಇಡಲು ಈ ನೀತಿ: ಆರೋಪ

* ಹಾಲ್‌ಮಾರ್ಕ್ ನೀತಿ ವಿರುದ್ಧ ಆಭರಣ ವರ್ತಕರ ಪ್ರತಿಭಟನೆ

ನವದೆಹಲಿ(ಆ.24): ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ ವಿಶಿಷ್ಟಗುರುತಿನ ಸಂಖ್ಯೆ (ಎಚ್‌ಯುಐಡಿ) ಅಳವಡಿಕೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನೂತನ ನೀತಿಯನ್ನು ವಿರೋಧಿಸಿ ಸೋಮವಾರ ದೇಶಾದ್ಯಂತ ಚಿನ್ನಾಭರಣ ವರ್ತಕರು ಮುಷ್ಕರ ನಡೆಸಿದ್ದಾರೆ. ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳ ಮಳಿಗೆಗಳನ್ನು ಹೊರತುಪಡಿಸಿ ಬಹುತೇಕ ಚಿನ್ನಾಭರಣ ಅಂಗಡಿಗಳು ಬಾಗಿಲು ಮುಚ್ಚಿದ್ದವು. 350ಕ್ಕೂ ಹೆಚ್ಚು ಆಭರಣ ಸಂಘಟನೆಗಳು ಮುಷ್ಕರದಲ್ಲಿ ಭಾಗಿಯಾಗಿವೆ.

ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ ಶುದ್ಧತೆಯ ಪ್ರಮಾಣಪತ್ರವನ್ನು ನೀಡಬೇಕು ಎಂಬ ನಿಯಮ ಜು.16ರಿಂದ 28 ರಾಜ್ಯಗಳ 256 ಜಿಲ್ಲೆಗಳಲ್ಲಿ ಹಂತ ಹಂತವಾಗಿ ಜಾರಿಗೆ ಬಂದಿದೆ. ಆದರೆ, ಹಾಲ್‌ಮಾರ್ಕ್ ವಿಶಿಷ್ಠ ಗುರುತಿನ ಸಂಖ್ಯೆ ಅಳವಡಿಕೆಗೂ ಚಿನ್ನದ ಶುದ್ಧತೆಗೂ ಯಾವುದೇ ಸಂಬಂಧ ಇಲ್ಲ. ವರ್ತಕರ ಮೇಲೆ ನಿಗಾ ಇಡುವ ಸಲುವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಹೊಸ ವ್ಯವಸ್ಥೆಯಿಂದ ವ್ಯಾಪಾರ ವಹಿವಾಟಿಕೆ ಅಡ್ಡಿಯಾಗಿದೆ ಎಂದು ಆಭರಣ ಮಾರಾಟ ಸಂಘಟನೆಗಳು ಆರೋಪಿಸಿವೆ. ಆದರೆ, ಕಾರ್ಪೊರೇಟ್‌ ಚಿನ್ನಭರಣ ಮಳಿಗೆಗಳು ಮುಷ್ಕರದಲ್ಲಿ ಭಾಗಿ ಆಗಿಲ್ಲ.

ಈ ನಡುವೆ, ಹೊಸ ನೀತಿಯಿಂದ ಆಭರಣ ವರ್ತಕರಿಗೆ ಯಾವುದೇ ತೊಂದರೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಏನಿದು ನೂತನ ನೀತಿ?:

ಸರ್ಕಾರವು ಆಭರಣ ವ್ಯಾಪಾರಿಗಳಿಗೆ ಬ್ಯೂರೋ ಆಫ್‌ ಇಂಡಿಯನ್‌ ಸ್ಟಾ್ಯಡರ್ಡ್ಸ್ (ಬಿಐಎಸ್‌)ನ ಹಾಲ್‌ಮಾರ್ಕ್ ಆಭರಣಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸಿದೆ. ಹೊಸ ನಿಯಮಗಳ ಪ್ರಕಾರ, ಆಭರಣ ವ್ಯಾಪಾರಿಗಳು 14, 18 ಮತ್ತು 22 ಕ್ಯಾರೆಟ್‌ಗಳಲ್ಲಿ ಮಾತ್ರ ಚಿನ್ನದ ವಸ್ತು ಅಥವಾ ಆಭರಣಗಳನ್ನು ಮಾರಾಟ ಮಾಡಬಹುದು. ಆಭರಣ ಅಥವಾ ಕಲಾಕೃತಿಗಳನ್ನು ಮಾರುವಾಗ ಆಭರಣ ವ್ಯಾಪಾರಿ ನಿಯಮಗಳನ್ನು ಉಲ್ಲಂಘಿಸಿದರೆ, ಆಭರಣದ ಬೆಲೆಯ 5 ಪಟ್ಟದಂಡ ಇಲ್ಲವೆ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸುವುದಕ್ಕೆ ಅವಕಾಶ ಇದೆ. ಅಲ್ಲದೇ ಆಭರಣ ವ್ಯಾಪಾರಿಗಳು ಗ್ರಾಹಕರಿಗೆ ಮೋಸ ಮೋಸಗೊಳಿಸದಂತೆ ರಕ್ಷಿಸಲು ಮತ್ತು ಆಭರಣಗಳನ್ನು ಪತ್ತೆ ಮಾಡಲು ಹಾಲ್‌ಮಾರ್ಕ್ ಮಾಡಿದ ಆಭರಣಗಳಿಗೆ ವಿಶಿಷ್ಟಗುರುತಿನ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಮಾರಾಟಗಾರರ ವಿರೋಧ ಏಕೆ?

ನೂತನ ಹಾಲ್‌ ಮಾರ್ಕಿಂಗ್‌ ವ್ಯವಸ್ಥೆ ಮಾರಾಟ ಮಾಡಲು ಉದ್ದೇಶಿಸಿರುವ ಆಭರಣಗಳನ್ನು ಕತ್ತರಿಸುವುದು, ಸ್ಕ್ರಾಪ್‌ ಮಾಡುವ ಪ್ರಕ್ರಿಯೆಯನ್ನು ಒಳಗೊಂಡಿದೆ. ಒಂದು ವೇಳೆ ಈ ಪ್ರಕ್ರಿಯೆಯ ಆಭರಣಗಳಿಗೆ ಹಾನಿ ಆದರೆ, ಹಾಲ್‌ ಮಾರ್ಕಿಂಗ್‌ನ ಸಂಪೂರ್ಣ ಪ್ರಕ್ರಿಯೆ ವಿಫಲಗೊಳ್ಳುತ್ತದೆ. ಆಭರಣ ವ್ಯಾಪಾರಿ ಪ್ರತಿಯೊಂದು ಆಭರಣದ ತೂಕ ಮತ್ತು ವಿವರವನ್ನು ಪೋರ್ಟಲ್‌ನಲ್ಲಿ ನಮೂದಿಸಿದ ನಂತರ ಹಾಲ್‌ಮಾರ್ಕ್ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಇದರಲ್ಲಿ ವರ್ತಕರು ಹಾಗೂ ಗ್ರಾಹಕರ ದತ್ತಾಂಶಗಳೆರಡೂ ನಮೂದಾಗಲಿದೆ. ವರ್ತಕರ ಮೇಲೆ ನಿಗಾ ಇಡುವ ಸಲುವಾಗಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಒಂದು ವೇಳೆ ದತ್ತಾಂಶ ಹ್ಯಾಕ್‌ ಆದರೆ ಗ್ರಾಹಕರು ಹಾಗೂ ವರ್ತಕರಿಗಿಬ್ಬರಿಗೂ ತೊಂದರೆ. ಜತೆಗೆ ಈ ಪ್ರಕ್ರಿಯೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ವ್ಯಾಪಾರಕ್ಕೆ ತೊಡಕಾಗಿದೆ ಎಂದು ವರ್ತಕರು ಆರೋಪಿಸಿದ್ದಾರೆ.

click me!