
ನವದೆಹಲಿ(ನ.26): ಜನಸಂಖ್ಯಾ ಸ್ಫೋಟ (Overpopulation) ತಡೆಗೆ ಸರ್ಕಾರಗಳು ಕೈಗೊಂಡ ಕ್ರಮಗಳು ಸಾಕಷ್ಟು ಫಲ ನೀಡಿದ್ದು, ದೇಶದ ಒಟ್ಟು ಫಲವತ್ತತೆ ದರ (Total Fertility Rate- TFR) 2ಕ್ಕೆ ಕುಸಿದಿರುವ ಸಂಗತಿ ಕೇಂದ್ರ ಸರ್ಕಾರ ನಡೆಸಿರುವ ಸಮೀಕ್ಷೆಯಿಂದ ಪತ್ತೆಯಾಗಿದೆ. ಇದರರ್ಥ, ಭಾರತ ತನ್ನ ಜನಸಂಖ್ಯೆಯ ಗರಿಷ್ಠ ಮಟ್ಟವನ್ನು ಈಗಾಗಲೇ ಮುಟ್ಟಿದ್ದು, ಹಲವು ದಶಕಗಳಿಂದ ಗುಮ್ಮನ ರೀತಿ ಕಾಡುತ್ತಿದ್ದ ಜನಸಂಖ್ಯಾ ಸ್ಫೋಟದ ಭೀತಿಯಿಂದ ಬಹುತೇಕ ಪಾರಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸರಾಸರಿ ಹೆರುವ ಮಕ್ಕಳ ಸಂಖ್ಯೆಯನ್ನು ಒಟ್ಟು ಫಲವತ್ತತೆ ದರ ಎಂದು ಕರೆಯಲಾಗುತ್ತದೆ. ದೇಶದ ಫಲವತ್ತತೆ ದರ 2.1ರಷ್ಟುಇರಬೇಕು ಎಂದು ಕೇಂದ್ರ ಸರ್ಕಾರ ಬಹಳ ಹಿಂದೆ ಗುರಿ ನಿಗದಿಪಡಿಸಿತ್ತು. ದಕ್ಷಿಣದ ರಾಜ್ಯಗಳು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರಿಂದ ಅಲ್ಲೆಲ್ಲಾ ಫಲವತ್ತತೆ ದರ 2ಕ್ಕಿಂತ ಕೆಳಗಿದೆ. ಉತ್ತರ ಭಾರತದ ರಾಜ್ಯಗಳು ಈ ಗುರಿಯನ್ನು ಪಾಲಿಸಿರಲಿಲ್ಲ. ಆದರೆ ಈಗ ದೇಶದ ಸರಾಸರಿ ಫಲವತ್ತತೆ ದರ 2ಕ್ಕೆ ಕುಸಿದಿದೆ. ಅಂದರೆ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ಗುರಿಗಿಂತ ಕೆಳಕ್ಕೆ ಇಳಿದಿದೆ. ಕರ್ನಾಟಕದಲ್ಲಿ ಇದು 1.7ರಷ್ಟಿದೆ.
ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ-ಭಾಗ 5ರಲ್ಲಿ (National Family Health Survey) ಈ ಅಂಶ ಇದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತಾದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ ದೇಶದ ಜನಸಂಖ್ಯೆ ಸ್ಥಿರೀಕರಣವಾಗುತ್ತಿರುವುದು ಕಾಣಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2016ರಲ್ಲಿ ನಡೆದ ನಾಲ್ಕನೇ ಸುತ್ತಿನ ಸಮೀಕ್ಷೆ ವೇಳೆ ದೇಶದ ಒಟ್ಟು ಫಲವತ್ತತೆ ದರ 2.2ರಷ್ಟಿತ್ತು. 2019ರಿಂದ 2021ರವರೆಗೆ ನಡೆದ ಸಮೀಕ್ಷೆಯಲ್ಲಿ ಇದು 2ಕ್ಕೆ ಇಳಿದಿದೆ. 2.1 ದರವನ್ನು ಜನಸಂಖ್ಯಾ ಬದಲಿ ದರ ಎಂದು ಪರಿಗಣಿಸಲಾಗುತ್ತದೆ. ಹೇಗೆಂದರೆ, ತಾಯಿ ಹಾಗೂ ಆಕೆಯ ಸಂಗಾತಿಯ ಮರಣಾನಂತರವೂ ಅಷ್ಟೇ ಜನಸಂಖ್ಯೆ ಮುಂದುವರಿಯುತ್ತದೆ. ಏರಿಕೆ, ಇಳಿಕೆಯಾಗುವುದಿಲ್ಲ. ಆದರೆ ಈಗ ಸರಾಸರಿಗಿಂತ ಟಿಎಫ್ಆರ್ ಇಳಿದಿದೆ.
ಸಮೀಕ್ಷೆಯ ಇನ್ನಷ್ಟು ಪ್ರಮುಖ ಅಂಶಗಳು
- ದೇಶದಲ್ಲಿ ಗರ್ಭನಿರೋಧಕ (Birth Control) ಲಭ್ಯತೆಯ ಪ್ರಮಾಣ ಶೇ.54ರಿಂದ ಶೇ.67ಕ್ಕೆ ಏರಿಕೆ
- 12-23 ತಿಂಗಳ ಮಕ್ಕಳು ಲಸಿಕೆ ಪಡೆಯುವ ಪ್ರಮಾಣ ಶೇ.62ರಿಂದ ಶೇ.76ಕ್ಕೇರಿಕೆ
- ಆಸ್ಪತ್ರೆಯಲ್ಲಿ ಹೆರಿಗೆ (Delivery In Hospitals) ಮಾಡಿಸಿಕೊಳ್ಳುವವರ ಪ್ರಮಾಣ ಶೇ.79ರಿಂದ ಶೇ.89ಕ್ಕೆ ಹೆಚ್ಚಳ
- ದೇಶದಲ್ಲಿ ಕಡಿಮೆ ತೂಕದ ಅಪೌಷ್ಟಿಕ ಮಕ್ಕಳ ಸಂಖ್ಯೆ ಶೇ.36ರಿಂದ ಶೇ.32ಕ್ಕೆ ಕುಸಿತ
- 6 ತಿಂಗಳೊಳಗಿನ ಮಕ್ಕಳಿಗೆ ಎದೆಹಾಲುಣಿಸುವವರ (Breast Feeding) ಪ್ರಮಾಣ ಶೇ.55ರಿಂದ ಶೇ.64ಕ್ಕೇರಿಕೆ
ಟಿಎಫ್ಆರ್ ಇಳಿಕೆ ಏಕೆ?
ಜನಸಂಖ್ಯಾ ಸ್ಫೋಟ ತಡೆಗೆ ದೇಶದಲ್ಲಿ ಕುಟುಂಬ ಕಲ್ಯಾಣ ಯೋಜನೆ 1952ರಿಂದಲೂ ಜಾರಿಯಲ್ಲಿದೆ. ಈ ನಡುವೆ, 2016ರಲ್ಲಿ ಕೇಂದ್ರ ಸರ್ಕಾರ ಮಿಷನ್ ಪರಿವಾರ್ ವಿಕಾಸ್ ಎಂಬ ಯೋಜನೆ ರೂಪಿಸಿ, ಗರ್ಭನಿರೋಧಕ ಹಾಗೂ ಕುಟುಂಬ ಕಲ್ಯಾಣ ಸೇವೆಗಳು ಹೆಚ್ಚುಹೆಚ್ಚು ಲಭ್ಯವಾಗುವಂತೆ ನೋಡಿಕೊಂಡಿತು. ಹೆಚ್ಚು ಫಲವತ್ತತೆ ದರ ಹೊಂದಿರುವ ಬಿಹಾರ (Bihar), ಉತ್ತರಪ್ರದೇಶ (Uttar Pradesh), ಅಸ್ಸಾಂ, ಛತ್ತೀಸ್ಗಢ, ಮಧ್ಯಪ್ರದೇಶ (Madhya Pradesh), ರಾಜಸ್ಥಾನ ಹಾಗೂ ಜಾರ್ಖಂಡ್ಗಳಿಗೆ ಒತ್ತು ನೀಡಲಾಯಿತು. ಎಲ್ಲ ಹಂತದಲ್ಲೂ ಗರ್ಭನಿರೋಧಕ ಸಿಗುವಂತೆ ಮಾಡಲಾಯಿತು. ಇದೆಲ್ಲಾ ಈಗ ಫಲ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ