ಮುಂದಿನ ತಿಂಗಳು ಪವರ್ ಸ್ಟಾರ್ ಪುನೀತ್‌ ಹೆಸರಲ್ಲಿ ಟೆಲಿ ಇಸಿಜಿ ಹಬ್‌ಗೆ ಚಾಲನೆ

By Kannadaprabha NewsFirst Published Jan 7, 2024, 7:01 AM IST
Highlights

ಕೃತಕ ಬುದ್ಧಿಮತ್ತೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಜನರ ಆರೋಗ್ಯ ಸುಧಾರಣೆಗೆ ಪರಿಣಾಮಕಾರಿಯಾಗಿ ಬಳಸಿಕೊಂಡು ಮೈಸೂರು, ಹುಬ್ಬಳ್ಳಿಯಲ್ಲಿ ಟೆಲಿ ಐಸಿಯು ಆರಂಭಿಸಲಾಗಿದೆ. ಮುಂದಿನ ತಿಂಗಳು ರಾಜ್ಯಾದ್ಯಂತ ಅಪ್ಪು ಹೃದಯ ಜ್ಯೋತಿ ಯೋಜನೆಯಡಿ ಟೆಲಿ ಇಸಿಜಿ ಹಬ್‌ಗೆ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಹುಬ್ಬಳ್ಳಿ (ಜ.7) : ಕೃತಕ ಬುದ್ಧಿಮತ್ತೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಜನರ ಆರೋಗ್ಯ ಸುಧಾರಣೆಗೆ ಪರಿಣಾಮಕಾರಿಯಾಗಿ ಬಳಸಿಕೊಂಡು ಮೈಸೂರು, ಹುಬ್ಬಳ್ಳಿಯಲ್ಲಿ ಟೆಲಿ ಐಸಿಯು ಆರಂಭಿಸಲಾಗಿದೆ. ಮುಂದಿನ ತಿಂಗಳು ರಾಜ್ಯಾದ್ಯಂತ ಅಪ್ಪು ಹೃದಯ ಜ್ಯೋತಿ ಯೋಜನೆಯಡಿ ಟೆಲಿ ಇಸಿಜಿ ಹಬ್‌ಗೆ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಇಲ್ಲಿನ ಕಿಮ್ಸ್‌ ಆವರಣದಲ್ಲಿ ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 10 ಬೆಡ್‌ ಐಸಿಯು ಹಬ್‌ ಉದ್ಘಾಟಿಸಿ ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಆದ ತಂತ್ರಜ್ಞಾನ ಬೆಳವಣಿಗೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ. ಟೆಲಿ ಐಸಿಯು ಹಬ್‌ ವೈದ್ಯಕಿಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದರು. 

 

ಬಿಎಸ್‌ವೈ ಅವಧಿಯಲ್ಲಿ 40,000 ಕೋಟಿ ರೂ. ಕೋವಿಡ್‌ ಹಗರಣ: ತನಿಖೆ ಮಾಡದೇ ಕೈತೊಳೆದುಕೊಂಡ್ರಾ ಆರೋಗ್ಯ ಸಚಿವರು!

ಗ್ರಾಮ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಐಸಿಯು ಇದ್ದರೂ ತಜ್ಞ ವೈದ್ಯರು ಇಲ್ಲದ್ದಕ್ಕೆ ಸರಿಯಾಗಿ ಬಳಕೆ ಆಗುತ್ತಿಲ್ಲ. ಈ ಟಲಿ ಐಸಿಯು ಹಬ್‌ನಿಂದ ಅವುಗಳ ಬಳಕೆ ಮಾಡಿಕೊಳ್ಳುವುದರ ಜತೆಗೆ ತಂತ್ರಜ್ಞಾನದ ಮೂಲಕ ತಜ್ಞವೈದ್ಯರು ನೇರ ಸಂಭಾಷಣೆ ನಡೆಸಿ ಅಲ್ಲಿನ ರೋಗಿಗಳಿಗೆ ಸೂಕ್ತ ರೀತಿಯ ಚಿಕಿತ್ಸಾ ಸಲಹೆ ನೀಡಲಿದ್ದಾರೆ. ಇದರಿಂದ ದೊಡ್ಡ ದೊಡ್ಡ ಆಸ್ಪತ್ರೆಗಳ ಮೇಲಾಗುವ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.

ಕಿಮ್ಸ್‌ನಲ್ಲಿ ಇರುವ ಟೆಲಿ ಐಸಿಯು ಹಬ್‌ಗೆ ಉತ್ತರ ಕರ್ನಾಟಕದ ಹಾವೇರಿ, ಶಿಗ್ಗಾಂವಿ, ಕುಂದಗೋಳ, ನರಗುಂದ, ಗೋಕಾಕ್‌, ಸವದತ್ತಿ, ಜಮಖಂಡಿ, ಬಸವನಬಾಗೇವಾಡಿ, ಭಟ್ಕಳ, ಯಲ್ಲಾಪುರದ ಆಸ್ಪತ್ರೆಗಳನ್ನು ಜೋಡಿಸಲಾಗಿದೆ. ಶೀಘ್ರದಲ್ಲೇ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಟೆಲಿ ಐಸಿಯು ಹಬ್‌ಗೆ ಚಾಲನೆ ನೀಡಲಾಗುವುದು ಎಂದರು.

ಟೆಲಿ ಐಸಿಯು ಹಬ್‌ಗೆ ರಾಜ್ಯದ 41 ಆಸ್ಪತ್ರೆಗಳನ್ನು ಜೋಡಿಸಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ತಾಲೂಕು, ಜಿಲ್ಲಾ ಆಸ್ಪತ್ರೆಗಳ ಜೋಡಿಸುವ ಚಿಂತನೆಯಿದೆ ಎಂದ ಅವರು, ಬೆಂಗಳೂರು ಹಾಗೂ ಬಳ್ಳಾರಿಯಲ್ಲೂ ಟೆಲಿ ಐಸಿಯು ಹಬ್‌ ಮಾಡಲಾಗುವುದು. ಇವುಗಳನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದರು.

ಪುನೀತ ಹೆಸರಲ್ಲಿ ಯೋಜನೆ:

ಮುಂದಿನ ತಿಂಗಳಲ್ಲಿ ಪುನೀತ್‌ ರಾಜಕುಮಾರ "ಹೃದಯ ಜ್ಯೋತಿ ಯೋಜನೆ" ಆರಂಭಿಸಲಾಗುತ್ತದೆ. ಮೊದಲ ಹಂತದಲ್ಲಿ 48 ಆಸ್ಪತ್ರೆಯಲ್ಲಿ ಜಾರಿಯಾಗಲಿದೆ. ಹೃದ್ರೋಗ ಕಂಡು ಬಂದ ತಕ್ಷಣ ಚಿಕಿತ್ಸೆ ನೀಡುವ ವ್ಯವಸ್ಥೆ ಎಲ್ಲ ತಾಲೂಕಾಸ್ಪತ್ರೆಗಳಲ್ಲಿ ಮಾಡಲಾಗುವುದು. ತಕ್ಷಣ ನೀಡುವ ಚುಚ್ಚುಮದ್ದು, ಮಾತ್ರೆಗಳನ್ನು ನೀಡಲಾಗುವುದು ಇದರಿಂದ ಹೃದ್ರೋಗದಿಂದ ಸಾವಿನ ಪ್ರಮಾಣ ಕಡಿಮೆಯಾಗಲಿದೆ ಎಂದರು. ತಕ್ಷಣವೇ ಡಯಾಲಿಸಿಸ್‌ ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ವಿವಿಧ ಯೋಜನೆ ರೂಪಿಸಲಾಗುತ್ತಿದೆ ಎಂದರು.

10 ಬೆಡ್‌ ಐಸಿಯು ಮುಖ್ಯಸ್ಥ ಶ್ರೀಕಾಂತ ನಾದಮುನಿ ಮಾತನಾಡಿ, ಕೇರ್‌ ಸಾಫ್ಟ್‌ವೇರ್‌ನಿಂದ ರೋಗಿಗಳ ಸ್ಥಿತಿಗತಿಗಳ ಹಾಗೂ ಚಿಕಿತ್ಸೆ ನೀಡುವುದನ್ನು ಮಾಡಬಹುದಾಗಿದೆ. ವಾಟ್ಸ್‌ಆ್ಯಪ್‌ ಮೂಲಕ ರೋಗಿಗಳು ಹಾಗೂ ವೈದ್ಯರ ಜೊತೆ ನೇರವಾಗಿ ಸಂಭಾಷಣೆ ನಡೆಸಬಹುದಾಗಿದೆ. ಈಗಾಗಲೇ 10 ಸಾವಿರಕ್ಕೂ ಅಧಿಕ ರೋಗಿಗಳಿಗೆ ಮಾಹಿತಿ ನೀಡಲಾಗಿದೆ. ದೇಶದ 9 ರಾಜ್ಯದ 209 ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ಹಬ್‌ ಆರಂಭಿಸಲಾಗಿದೆ ಎಂದು ವಿವರಿಸಿದರು. 

 

ಕರ್ನಾಟಕದಲ್ಲಿಯೇ 35 ಕೋವಿಡ್ ಉಪತಳಿ ಜೆಎನ್1 ಕೇಸ್‌ಗಳು ಪತ್ತೆ: ಬೆಂಗಳೂರು ಮತ್ತೆ ಕೊರೊನಾ ಹಾಟ್‌ಸ್ಪಾಟ್!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಪುಷ್ಪಲತಾ ಬಿ.ಎಸ್‌. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್‌ ಸದಸ್ಯ ಜಗದೀಶ್‌ ಶೆಟ್ಟರ್‌, ಶಾಸಕರಾದ ಎನ್‌.ಎಚ್‌. ಕೋನರೆಡ್ಡಿ, ಪ್ರಸಾದ್‌ ಅಬ್ಬಯ್ಯ, ಮಹೇಶ್‌ ಟೆಂಗಿನಕಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಂದೀಪ್‌ ಡಿ., ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಕಿಮ್ಸ್‌ ನಿರ್ದೇಶಕ ಎಸ್‌.ಎಫ್‌. ಕಮ್ಮಾರ, ಕಿಮ್ಸ್‌ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಾ. ರಾಮಲಿಂಗಪ್ಪ ಅಂಟರತಾನಿ, ರಾಜಶೇಖರ ದ್ಯಾಬೇರಿ, ವೈದ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

click me!