Kannada Sahitya Sammelana: ಅಕ್ಷರ ಜಾತ್ರೆಗೆ ಹೋಗ್ತಿದ್ದೀರಾ ? ಹಾಗಿದ್ರೆ ಮಿಸ್‌ ಮಾಡ್ದೆ ಈ ಪ್ಲೇಸ್‌ಗೆ ಹೋಗಿ

First Published Jan 6, 2023, 11:56 AM IST

ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಆರಂಭವಾಗಿದೆ. ಕನ್ನಡದ ಸಾಹಿತ್ಯ ಹಬ್ಬವನ್ನು ಕಣ್ತುಂಬಿಕೊಳ್ಳಲು ಜನರು ತಂಡೋಪತಂಡವಾಗಿ ಜಿಲ್ಲೆಯತ್ತ ಧಾವಿಸುತ್ತಿದ್ದಾರೆ. ನೀವೂ ಅಕ್ಷರ ಜಾತ್ರೆಯಲ್ಲಿ ಭಾಗವಹಿಸಲು ಹೋಗುತ್ತಿದ್ದರೆ, ಸಮೀಪವಿರುವ ಈ ಪ್ರವಾಸಿ ತಾಣಗಳಿಗೆ ಮಿಸ್ ಮಾಡ್ದೆ ವಿಸಿಟ್ ಮಾಡಿ. 

ಗಳಗನಾಥದ ಗಳಗೇಶ್ವರ ದೇವಸ್ಥಾನ
ಹಾವೇರಿ ತಾಲೂಕಿನ ಗಳಗನಾಥ ವರದಾ ಹಾಗೂ ತುಂಗಭದ್ರಾ ನದಿಗಳ ಸಂಗಮ ಸ್ಥಳವಾಗಿದೆ. ನದಿಯ ದಂಡೆಯ ಶ್ರೀ ಗಳಗನಾಥೇಶ್ವರ ದೇವಸ್ಥಾನ ವಿಶಾಲವಾಗಿದ್ದು, ಸುಂದರ ಶಿಲಾ ವೈಭವದಿಂದ ಕೂಡಿದೆ. ನದಿಯ ಮಹಾಪೂರದಿಂದ ಹಾನಿಯಾಗದಂತೆ ಗಳಗೇಶ್ವರ ದೇವಸ್ಥಾನದಲ್ಲಿ ಎತ್ತರವಾದ ಅಧಿಷ್ಟಾನವನ್ನು ನಿರ್ಮಿಸಲಾಗಿದೆ. ಅಧಿಷ್ಟಾನವು ನಕ್ಷತ್ರಾಕಾರವಾಗಿದ್ದು ತಳಹದಿಯಲ್ಲಿ ವಿಶಾಲವಾಗಿದ್ದು ಮೇಲಕ್ಕೆ ಹೊದಂತೆ ಕಿರಿದಾಗುತ್ತಾ ಹೋಗಿದೆ. ಗರ್ಭಗುಡಿಯ ಭಾಗಿಲವಾಡವು 12 ಅಡಿ ಎತ್ತರವಾಗಿದ್ದು, ಸುಂದರವಾದ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ. ಒಳಗೆ ಎತ್ತರವಾದ ಶಿವಲಿಂಗವನ್ನು  ಪ್ರತಿಷ್ಠಾಪಿಸಲಾಗಿದೆ. ನವರಂಗದ ಮಧ್ಯದಲ್ಲಿ ನಾಲ್ಕು ಭಾರಿ ಗಾತ್ರದ ಚಾಲುಕ್ಯ ಕಂಬಗಳಿದ್ದು ಇವುಗಳ ನಡುವೆ ಬೃಹದಾಕಾರದ ನಂದಿಯ ಶಿಲಾಮೂರ್ತಿ ಇದೆ. ಗಳಗನಾಥ ನವಗ್ರಾಮದಿಂದ ಸುಮಾರು ಒಂದು ಕಿಮೀ ದೂರದಲ್ಲಿ ನದಿಯ ನಡುಗಡ್ಡೆಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನವಿದ್ದು, ಒಂದೇ ಪೀಠದ ಮೇಲೆ ಐದು ಲಿಂಗಗಳಿವೆ. ಮಕರ ಸಂಕ್ರಾಂತಿಗೆ ಗಳಗೇಶ್ವರ ಹಾಗೂ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯೂ ನಡೆಯುತ್ತದೆ. ಹಾವೇರಿಯಿಂದ 40 ಕಿಮೀ ದೂರದಲ್ಲಿದ್ದು, ಹಾವೇರಿ ಮತ್ತು ಗುತ್ತಲದಿಂದ ಬಸ್ ಸೌಲಭ್ಯವಿದೆ. 

ಕದರಮಂಡಲಗಿ ಆಂಜನೇಯ ದೇವಸ್ಥಾನ
ಬ್ಯಾಡಗಿ ತಾಲೂಕಿನ ಕದರಮಂಡಲಗಿಯೂ ಪ್ರಸಿದ್ಧ ಆಂಜನೇಯನ ಕ್ಷೇತ್ರವಾಗಿದೆ. ಕದರಮಂಡಲಗಿಯೂ ಕಾಂತೇಶ ಎಂದೇ ಪ್ರಸಿದ್ಧವಾಗಿರುವ ಇಲ್ಲಿನ ಶ್ರೀ ಆಂಜನೇಯ ಭಕ್ತಾದಿಗಳ ಇಷ್ಟಾರ್ಥ ಪೂರೈಸುವ ದೇವನಾಗಿದ್ದಾನೆ. ಪ್ರತಿಶನಿವಾರ ಭಕ್ತರ ದಂಡೆ ಇಲ್ಲಿಗೆ ಹರಿದು ಬರುತ್ತದೆ. ದೇವಸ್ಥಾನ ಸಂಪೂರ್ಣವಾಗಿ ಜೀರ್ಣೊದ್ಧಾರಗೊಂಡಿದ್ದು ದೇವಾಲಯದ ಆವರಣದಲ್ಲಿ ಅನೇಕ ಹಳೆಯ ಅವಶೇಷಗಳು ಅಲ್ಲಲ್ಲಿ ಕಂಡು ಬರುತ್ತವೆ. ಹತ್ತಿರದಲ್ಲಿಯೇ ತಿಮ್ಮಪ್ಪನ ದೇವಸ್ಥಾನವಿದ್ದು, ಕನಕದಾಸರು ಈ ದೇವಸ್ಥಾನದಲ್ಲಿದ್ದು, ಮೋಹನ ತರಂಗಿಣಿ ಕಾವ್ಯ ರಚಿಸಿದರು ಎಂಬ ಪ್ರತೀತಿಯಿದೆ. ಈ ಸ್ಥಳ ರಾಬೆನ್ನೂರಿಂದ 12 ಕಿಮೀ ಅಂತರದಲ್ಲಿದೆ. ರಾಣೆಬೆನ್ನೂರಿನಿಂದ ಬಸ್ ಸೌಲಭ್ಯವಿದೆ.

ಕಾಗಿನೆಲೆ
ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮ ದಾಸಶ್ರೇಷ್ಠ ಶ್ರೀ ಕನಕದಾಸ ಕರ್ಮಭೂಮಿಯಾಗಿದ್ದು, ಕನಕದಾಸರ ಇಷ್ಟದೈವವಾದ ಶ್ರೀ ಆದಿಕೇಶವನ ಗ್ರಾಮವಾಗಿದೆ. ಕಾಗಿನೆಲೆ ಕನಕದಾಸರ ಬೃಂದಾವನ ಹಾಗೂ ಶ್ರೀ ಕನಕಗುರುಪೀಠವಲ್ಲದೇ ಆದಿಕೇಶವ ದೇವಸ್ಥಾನ ಸೇರಿದಂತೆ ಅನೇಕ ಪ್ರಾಚೀನ ದೇವಾಲಯಗಳಿಗೆ ಸಾಕ್ಷಿಯಾಗಿದೆ. 1989ರಲ್ಲಿ ಕನಕಗುರುಪೀಠದ ಭೂಮಿಪೂಜೆ ನೆರವೇರಿತು. 1992ರಲ್ಲಿ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮಿಗಳು ಗುರುಪೀಠವನ್ನು ವಿದ್ಯುಕ್ತವಾಗಿ ಅಲಂಕರಿಸಿದರು. ಶ್ರೀಗುರುಪೀಠ ಅನೇಕ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ರಾಣೇಬೆನ್ನೂರಿನಿಂದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 3 ಕಿ.ಮೀ ಪ್ರಯಾಣಿಸಿ ಮುಖ್ಯರಸ್ತೆಯಿಂದ ಬ್ಯಾಡಗಿ- ಕಾಗಿನೆಲೆಗೆ ಹೋಗುವ ಒಳರಸ್ತೆಯಲ್ಲಿ (ಉತ್ತಮ ರಸ್ತೆ ಸಂಪರ್ಕವಿದೆ) 9 ಕಿ.ಮೀ. ಹೋದರೆ ಕದರಮಂಡಲಗಿ ಸಿಗುತ್ತದೆ. 

ಸರ್ವಜ್ಞನ ಅಬಲೂರು:
ಹಿರೇಕೆರೂರು ತಾಲೂಕಿನ ಸರ್ವಜ್ಞನ ಅಬಲೂರು ಗ್ರಾಮ ತ್ರಿಪದಿ ಕವಿ ಸರ್ವಜ್ಞ ಜನಿಸಿದ ಗ್ರಾಮವಾಗಿದೆ. ಕ್ರಿ.ಶ 16ನೇ ಶತಮಾನದಲ್ಲಿ ಜೀವಿಸಿದ್ದ ಈ ಕವಿಯು 2 ಸಾವಿರಕ್ಕೂ ಹೆಚ್ಚಿನ ತ್ರಿಪದಿಗಳನ್ನು ಸರಳ ಭಾಷೆಯಲ್ಲಿ ರಚಿಸಿ ಅಗಾಧ ಜ್ಞಾನವನ್ನು ಜನರಿಗೆ ತಲುಪಿಸಿದ್ದಾನೆ. ಇಲ್ಲಿನ ಸೋಮೇಶ್ವರ, ಬ್ರಹ್ಮೇಶ್ವರ, ಸರಸ್ವತಿ ದೇವಾಲಗಳು ಸುಂದರವಾಗಿದ್ದು, ಅಬಲೂರು ಪ್ರಾಚೀನ ಕಾಲದಲ್ಲಿ ಶೈವ ಹಾಗೂ ಜೈನರ ಪ್ರಮುಖ ಕೇಂದ್ರವಾಗಿತ್ತು. ಸದ್ಯ ರಾಜ್ಯ ಸರ್ಕಾರ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು, ಮುಂದಿನ ದಿನಗಳಲ್ಲಿ ಸರ್ವಜ್ಞನ ಕುರುಹುಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವ ಕಾರ್ಯ ನಡೆಸಲಿದೆ. ಹಾವೇರಿಯಿಂದ 37 ಕಿಮೀ ಅಂತರದಲ್ಲಿದೆ. ಇಲ್ಲಿಗೆ ಹಾವೇರಿ-ಕಾಗಿನೆಲೆ-ಹಂಸಬಾವಿ ಮಾರ್ಗವಾಗಿ ತಲುಪಬಹುದು.

ಮದಗ ಮಾಸೂರ ಕೆರೆ
ರಟ್ಟೀಹಳ್ಳಿ ತಾಲೂಕಿನಲ್ಲಿರುವ ಮದಗ ಮಾಸೂರ ಕೆರೆ ಆಕರ್ಷಕ ನಿಸರ್ಗ ಪ್ರವಾಸಿ ತಾಣವಾಗಿದೆ. ಮಾಸೂರ ಕೆರೆ, ಕೆಂಚಮ್ಮನ ಕೆರೆ ಮುಂತಾದ ಹೆಸರಿನಲ್ಲಿ ಕರೆಯಲ್ಪಡುವ ಈ ಕೆರೆ ಸುಮಾರು ೧೦ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತಿದೆ. ಕುಮುದ್ವತಿ ನದಿಯಿಂದ ರೂಪಗೊಂಡಿರುವ ಈ ಕೆರೆ ಮಳೆಗಾಲದಲ್ಲಿ ಮೈದುಂಬಿ ಜಲಪಾತ ಮಾದರಿಯಲ್ಲಿ ಬೀಳುವಾಗ ಅದರ ವೈಭವ ನೋಡಲು ರಮೀಯವಾಗಿರುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಸಾವಿರಾರು ಜನರು ಈ ಸ್ಥಳಕ್ಕೆ ಭೇಟಿ ನೀಡಿ ನಿಸರ್ಗದ ಸವಿಯನ್ನು ಆಹ್ಲಾದಿಸುತ್ತಾರೆ. ಜಿಲ್ಲೆಯ ಪ್ರಮುಖ ಪ್ರೇಕ್ಷೀಯ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ. ತಾಲೂಕು ಕೇಂದ್ರ ರಟ್ಟೀಹಳ್ಳಿಯಿಂದ ಸುಮಾರು 15 ಕಿಮೀ ಅಂತರದಲ್ಲಿದೆ. ರಟ್ಟೀಹಳ್ಳಿಯಿಂದ ಮಾಸೂರು ವರೆಗೆ ಬಸ್ ಸೌಲಭ್ಯವಿದ್ದು, ಅಲ್ಲಿಂದ ಕೆರೆಗೆ ಖಾಸಗಿ ವಾಹನಗಳ ಸೌಕರ್ಯವಿದೆ.

ಶಿಶುನಾಳ ಶರೀಫಗಿರಿ 
ಶಿಗ್ಗಾಂವಿ ತಾಲೂಕಿನ ಶಿಶುನಾಳ ಭಾವೈಕ್ತೆೆತೆ ಸಾರುವ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಕರ್ನಾಟಕದ ಕಬೀರನೆಂದೇ ಖ್ಯಾತರಾದ ಸಂತ ಶಿಶುನಾಳ ಶರೀಫರ ಗ್ರಾಮವಾಗಿದ್ದು, ಅವರ ಮನೆ ಹಾಗೂ ಸಮಾದಿ ಇಲ್ಲಿವೆ. ಶರೀಫರ ಸಮಾದಿ ಹಾಗೂ ಅವರ ಗುರುಗಳಾದ ಕಳಸದ ಗೋವಿಂದಭಟ್ಟರ ಚಿತಾಭಸ್ಮ ಅಕ್ಕಪಕ್ಕದಲ್ಲಿದ್ದು, ನಿತ್ಯ ನೂರಾರು ಭಕ್ತರು ಇಲ್ಲಿಗೆ ಆಗಮಿಸಿ ಈ ಶ್ರೇಷ್ಠ ಗುರುಶಿಷ್ಯರಿಗೆ ಶಿರಬಾಗಿ ನಮಿಸುತ್ತಾರೆ. ಪಾಲ್ಗುಣ ಮಾಸದ ದಶಮಿಯಂತೆ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಶಿಗ್ಗಾಂವಿಯಿಂದ 17.5 ಕಿಮೀ ಅಂತರದಲ್ಲಿದೆ. ಇಲ್ಲಿಗೆ ಹುಬ್ಬಳ್ಳಿ ಮತ್ತು ಶಿಗ್ಗಾಂವಿಯಿಂದ ಬಸ್ ಸೌಕರ್ಯವಿದೆ.

ಬಂಕಾಪುರದ ನವಿಲು ಧಾಮ
ದೇಶದಲ್ಲಿಯೇ ವಿರಳ ಎನ್ನಬಹುದಾದ ರಾಷ್ಟ್ರಪಕ್ಷಿ ನವಿಲು ಸಂರಕ್ಷಿತ ಧಾಮ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿದೆ. ಇಲ್ಲಿ ನಿತ್ಯ ನೂರಾರು ನವಿಗಳು ಸ್ವಚ್ಛಂದವಾಗಿ ನಲಿದಾಡುವ ದೃಶ್ಯವನ್ನು ನಾವು ಯಾವಾಗಲೂ ನೋಡಬಹುದಾಗಿದೆ. ಇದೇ ಆವರಣದಲ್ಲಿರುವ ಸರ್ಕಾರಿ ಗೋರಕ್ಷಣಾ ಕೇಂದ್ರ ಕಿಲಾರಿ ಹಸುಗಳ ಸಂವರ್ಧನೆಯ ಪ್ರಮುಖ ಕೇಂದ್ರವಾಗಿದ್ದು, ಗೋವು ಹಾಗೂ ಕೃಷಿ ಆಸಕ್ತರು ನೋಡಲೇಬಾಕಾದ ಕೇಂದ್ರವಾಗಿದೆ. ಶಿಗ್ಗಾಂವಿಯಿಂದ 9.9 ಕಿಮೀ ಅಂತರದಲ್ಲಿದ್ದು, ಹುಬ್ಬಳ್ಳಿ, ಶಿಗ್ಗಾಂವಿ ಮೂಲಕ ಬಾಡ ತಲುಪಬಹುದು.

click me!