ತನ್ನ ಅಜ್ಜನಿಂದ ಬಂದ 1.2 ಕೋಟಿ ರೂ. ಆಸ್ತಿಯನ್ನು, ಪ್ರೇಯಸಿಯ ತಂದೆಯ ಹೃದಯ ಶಸ್ತ್ರಚಿಕಿತ್ಸೆಗೆ ನೀಡಲು ಯುವಕನೊಬ್ಬ ನಿರಾಕರಿಸಿದ್ದಾನೆ. ತನ್ನ ಭವಿಷ್ಯದ ಕುಟುಂಬದ ಭದ್ರತೆಗಾಗಿ ಈ ಹಣವನ್ನು ಮೀಸಲಿಟ್ಟಿರುವುದಾಗಿ ಹೇಳಿದ್ದು, ಈ ನಿರ್ಧಾರವು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ತನ್ನ ಅಜ್ಜನಿಂದ ಬಂದ ಆಸ್ತಿಯನ್ನು ಬಳಸಿ, ಪ್ರೇಯಸಿಯ ತಂದೆಯ ಹೃದಯ ಶಸ್ತ್ರಚಿಕಿತ್ಸೆಗೆ ಹಣ ಕೊಡಲು ನಿರಾಕರಿಸಿದ ಯುವಕನೊಬ್ಬನ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಲ್ಲಿದೆ. ತನ್ನ ಭವಿಷ್ಯದ ಕುಟುಂಬದ ಹಿತದೃಷ್ಟಿಯಿಂದ ಈ ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಯುವಕ ಹೇಳಿದ್ದಾನೆ. ಈತ ರೆಡ್ಡಿಟ್ನಲ್ಲಿ (Reddit) ತನ್ನ ಸಮಸ್ಯೆಯನ್ನು ಹಂಚಿಕೊಂಡಿದ್ದಾನೆ.
27
1.2 ಕೋಟಿ ರೂಪಾಯಿ ಆಸ್ತಿ
30 ವರ್ಷದ ಈ ಯುವಕ, ತನಗೆ ಸಿಕ್ಕ ಹಣವನ್ನು ಭಾವಿ ಮಾವನ ಚಿಕಿತ್ಸೆಗೆ ಯಾಕೆ ಕೊಡಲು ಆಗುವುದಿಲ್ಲ ಎಂದು ವಿವರಿಸಿದ್ದಾನೆ. ಇತ್ತೀಚೆಗೆ ಆತನ ಅಜ್ಜ ತೀರಿಕೊಂಡಿದ್ದರು. ಅವರು ತಮ್ಮ ಮೊಮ್ಮಗನಿಗೆ 1,40,000 ಡಾಲರ್ಗಿಂತ ಹೆಚ್ಚು (ಅಂದಾಜು 1.2 ಕೋಟಿ ರೂಪಾಯಿ) ಹಣವನ್ನು ಆಸ್ತಿಯಾಗಿ ಬಿಟ್ಟು ಹೋಗಿದ್ದರು.
37
ಯುವಕನ ಪ್ಲಾನ್ ಏನು?
ಭವಿಷ್ಯದಲ್ಲಿ ಮನೆ ಖರೀದಿಸಲು, ಸ್ವಂತ ಬಿಸಿನೆಸ್ ಶುರು ಮಾಡಲು ಮತ್ತು ಉತ್ತಮ ಕುಟುಂಬ ಜೀವನವನ್ನು ರೂಪಿಸಿಕೊಳ್ಳಲು ಮಾತ್ರ ಈ ಹಣವನ್ನು ಬಳಸಬೇಕು ಎಂಬುದು ತನ್ನ ಅಜ್ಜನ ಆಸೆಯಾಗಿತ್ತು ಎಂದು ಯುವಕ ಹೇಳಿಕೊಂಡಿದ್ದಾನೆ. ಈತ ಕಳೆದ ನಾಲ್ಕು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಕಳೆದ ವರ್ಷ ಇಬ್ಬರ ನಿಶ್ಚಿತಾರ್ಥವೂ ನಡೆದಿತ್ತು.
ಇತ್ತೀಚೆಗೆ ಆತನ ಪ್ರೇಯಸಿಯ ತಂದೆಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅವರ ಬಳಿ ಯಾವುದೇ ಇನ್ಶೂರೆನ್ಸ್ ಇಲ್ಲದ ಕಾರಣ, ಸರ್ಜರಿಗೆ 60,000 ದಿಂದ 70,000 ಡಾಲರ್ (ಅಂದಾಜು 57 ಲಕ್ಷದಿಂದ 66 ಲಕ್ಷ ರೂಪಾಯಿ) ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಣವನ್ನು ನೀಡುವಂತೆ ಪ್ರೇಯಸಿ ತನ್ನ ಬಳಿ ಕೇಳಿದ್ದಾಳೆ. ಆದರೆ, ಯುವಕ ಇದಕ್ಕೆ ಒಪ್ಪಿಲ್ಲ.
57
ಇದು ನನ್ನ ಪಿತ್ರಾರ್ಜಿತ ಆಸ್ತಿ
ತನ್ನ ಅಜ್ಜನ ಕಷ್ಟದ ದುಡಿಮೆಯ ಈ ಹಣವನ್ನು ತನ್ನ ಭವಿಷ್ಯದ ಕುಟುಂಬದ ಅಗತ್ಯಗಳನ್ನು ಬಿಟ್ಟು ಬೇರೆ ಯಾವುದಕ್ಕೂ ಬಳಸಲು ಸಾಧ್ಯವಿಲ್ಲ ಎಂದು ಯುವಕ ಸ್ಪಷ್ಟಪಡಿಸಿದ್ದಾನೆ. ಬಂದ ಹಣದಲ್ಲಿ ಅರ್ಧದಷ್ಟು ಚಿಕಿತ್ಸೆಗೆ ಖರ್ಚು ಮಾಡಿದರೆ, ತಾವು ಮೊದಲೇ ಯೋಜಿಸಿದ್ದ ಎಲ್ಲಾ ಯೋಜನೆಗಳು ಹಾಳಾಗುತ್ತವೆ ಎಂದು ಆತ ಆತಂಕ ವ್ಯಕ್ತಪಡಿಸಿದ್ದಾನೆ.
67
ಹಣ ನೀಡುವ ಬಗ್ಗೆ ಯುವಕನ ವಾದ ಏನು?
ಯುವಕನ ಈ ನಿರ್ಧಾರದಿಂದ ಅವನ ಪ್ರೇಯಸಿಗೆ ತೀವ್ರ ನಿರಾಸೆಯಾಗಿದೆ. 'ಸತ್ತವರ ಆಸೆಗಿಂತ ಬದುಕಿರುವವರ ಜೀವ ಮುಖ್ಯ ಅಲ್ವಾ?' ಎಂದು ಆಕೆ ತನ್ನನ್ನು ದೂಷಿಸಿದ್ದು, ಇದು ತನಗೆ ತುಂಬಾ ನೋವು ಕೊಟ್ಟಿದೆ ಎಂದು ಯುವಕ ಹೇಳಿದ್ದಾನೆ. ಆದರೆ, ಇದು ಹಣಕ್ಕೆ ಜೀವಕ್ಕಿಂತ ಹೆಚ್ಚು ಬೆಲೆ ಕೊಡುವುದಲ್ಲ. ಭವಿಷ್ಯವನ್ನು ಭದ್ರಪಡಿಸಲು ಅಜ್ಜ ಕೊಟ್ಟ ಹಣವನ್ನು ಇಂತಹ ಅನಿರೀಕ್ಷಿತ ಸಮಸ್ಯೆಗಳಿಗೆ ಖರ್ಚು ಮಾಡಿದರೆ, ಅದು ನಮ್ಮ ಜೀವನವನ್ನೇ ಅಪಾಯಕ್ಕೆ ತಳ್ಳುತ್ತದೆ ಎಂಬುದು ಯುವಕನ ವಾದ.
77
ಮಿಶ್ರ ಪ್ರತಿಕ್ರಿಯೆ
ಈ ಪೋಸ್ಟ್ಗೆ ಜನರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು, ಹಣವನ್ನು ಮತ್ತೆ ಸಂಪಾದಿಸಬಹುದು, ಸದ್ಯಕ್ಕೆ ಚಿಕಿತ್ಸೆಗೆ ಹಣ ನೀಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು, ನಿನ್ನ ಭವಿಷ್ಯವನ್ನು ಮೊದಲು ನೋಡು, ಅದಕ್ಕಾಗಿಯೇ ನಿನ್ನ ಅಜ್ಜ ಹಣ ಕೊಟ್ಟಿದ್ದು ಎಂದು ಯುವಕನನ್ನು ಬೆಂಬಲಿಸಿದ್ದಾರೆ. ಅದೇ ಸಮಯದಲ್ಲಿ, ಪ್ರೇಯಸಿಯ ತಂದೆಗೆ ಯಾಕೆ ಹೆಲ್ತ್ ಇನ್ಶೂರೆನ್ಸ್ ಇರಲಿಲ್ಲ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.