ನವ ವಿವಾಹಿತನ ಹಿಟ್‌& ರನ್ ಪ್ರಕರಣಕ್ಕೆ ಟ್ವಿಸ್ಟ್‌: ಬಾಯ್‌ಫ್ರೆಂಡ್ ಜೊತೆ ಸೇರಿ ಗಂಡನ ಕತೆ ಮುಗಿಸಿದ ಹೆಂಡ್ತಿ

Published : Feb 05, 2026, 09:55 PM IST

ರಾಜಸ್ಥಾನದಲ್ಲಿ, ಹಿಟ್ & ರನ್‌ನಂತೆ ಕಂಡುಬಂದ ನವವಿವಾಹಿತ ಅಶೀಶ್ ಸಾವಿನ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದೆ. ಪೊಲೀಸರ ತನಿಖೆಯು ಇದು ಅಪಘಾತವಲ್ಲ, ಬದಲಿಗೆ ಆತನ ಪತ್ನಿ ಅಂಜು ತನ್ನ ಪ್ರಿಯಕರ ಸಂಜು ಮತ್ತು ಇತರರೊಂದಿಗೆ ಸೇರಿ ಮಾಡಿದ ಪೂರ್ವನಿಯೋಜಿತ ಕೊಲೆ ಎಂದು ಬಹಿರಂಗಪಡಿಸಿದೆ.

PREV
15
ಮೇಘಾಲಯ ಹನಿಮೂನ್ ಮರ್ಡರ್ ನೆನಪಿಸಿದ ಪ್ರಕರಣ

ಶ್ರೀಗಂಗಾನಗರ: ಕಳೆದ ವರ್ಷ ನಡೆದ ಮಧ್ಯಪ್ರದೇಶದ ರಾಜ ರಘುವಂಶಿಯನ್ನು ಮೇಘಾಲಯದಲ್ಲಿ ಹನಿಮೂನ್ ಸಮಯದಲ್ಲೇ ಪತ್ನಿ ಸೋನಂ ಕೊಲೆ ಮಾಡಿಸಿದ ಪ್ರಕರಣ ಇನ್ನೂ ಜನಮಾನಸದಿಂದ ಮಾಸಿಲ್ಲ, ಅಷ್ಟರಲ್ಲೇ ರಾಜಸ್ಥಾನದಲ್ಲಿ ಮತ್ತೊಂದು ಇದೇ ರೀತಿಯ ಕೊಲೆ ಪ್ರಕರಣ ನಡೆದಿದೆ. ಹನಿಮೂನ್ ಸಮಯದಲ್ಲೇ ನವ ವರನನ್ನು ವಧುವೊಬ್ಬಳು ಕೊಲೆ ಮಾಡಿಸಿದ್ದಾಳೆ. ಈ ದೇಶವನ್ನೇ ಬೆಚ್ಚಿ ಬೀಳಿಸಿದ ಮತ್ತೊಂದು ಕೊಲೆ ಪ್ರಕರಣದ ಡಿಟೇಲ್ ಸ್ಟೋರಿ ಇಲ್ಲಿದೆ.

ಅದು ಶುಕ್ರವಾರ ಸಂಜೆ ರಾಜಸ್ಥಾನದ ಆಗಷ್ಟೇ ಮದುವೆಯಾಗಿದ್ದ ನವಜೋಡಿ ಅಶೀಶ್ ಹಾಗೂ ಅಂಜು ವಾಕ್ ಹೋಗುತ್ತಿದ್ದಾಗ ಅವರಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು ಘಟನೆಯಲ್ಲಿ ಅಶೀಶ್ ಸ್ಥಳದಲ್ಲೇ ಮೃತಪಟ್ಟಿದ್ದ ಇತ್ತ ಅಂಜುವಿನ ಚಿನ್ನಾಭರಣಗಳು ದರೋಡೆಯಾಗಿದ್ದು ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಪತ್ತೆಯಾಗಿದ್ದಳು. ಹಿಟ್ & ರನ್ ಪ್ರಕರಣದಂತೆ ಕಂಡು ಬಂದ ಈ ಪ್ರಕರಣಕ್ಕೀಗ ರೋಚಕ ತಿರುವು ಸಿಕ್ಕಿದ್ದು, ಈ ಘಟನೆಯೂ ಪೊಲೀಸರಿಗೆ ಮೇಘಾಲಯ ಹನಿಮೂನ್ ಕೊಲೆ ಪ್ರಕರಣವನ್ನು ನೆನಪು ಮಾಡಿದೆ.

25
ಕೊಲೆ ಮಾಡಿ ಹಿಟ್ &ರನ್ ಕೇಸ್‌ನಂತೆ ಬಿಂಬಿಸಲು ಯತ್ನ

ಪೊಲೀಸರ ತನಿಖೆಯಲ್ಲಿ ಪತ್ನಿ ಅಂಜುವೇ ಅಶೀಶ್‌ನನ್ನು ತನ್ನ ಬಾಯ್‌ಫ್ರೆಂಡ್ ಸಂಜು ಹಾಗೂ ಇನ್ನಿಬ್ಬರ ಸಹಾಯದಿಂದ ಕೊ ಮಾಡಿಸಿದ್ದಳು. ಹಾಗೂ ಇದನ್ನು ಕೊಲೆ ಪ್ರಕರಣವೆಂದು ಬಿಂಬಿಸಲು ಯತ್ನಿಸಿದ್ದಳು. ಈ ಪ್ರಕರಣವೀಗ ರಾಜಸ್ಥಾನ ಹನಿಮೂನ್ ಮರ್ಡರ್ ಎಂದು ಕುಖ್ಯಾತಿ ಗಳಿಸಿದ್ದು, ಅನೇಕರಿಗೆ ಆಘಾತವನ್ನುಂಟು ಮಾಡಿದೆ. 

ಶ್ರೀಗಂಗಾನಗರದ ಎಸ್‌ಪಿ ಅಮೃತಾ ದುಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತಾ, ಜನವರಿ 30ರಂದು ರಾತ್ರಿ 9 ಗಂಟೆ ಸುಮಾರಿಗೆ ಪೊಲೀಸರಿಗೆ ಜೋಡಿಯೊಂದು ರಸ್ತೆಯಲ್ಲಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ನಂತರ ಜೋಡಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ವೈದ್ಯರು ಅಶೀಶ್ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದರು.

35
ಪ್ರಕರಣಕ್ಕೆ ತಿರುವು ನೀಡಿತು ಪತ್ನಿಯ ಅನುಮಾನಾಸ್ಪದ ಹೇಳಿಕೆ

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತು. ನಾವು ಅಪಘಾತದ ಸ್ಥಳವನ್ನು ಪರಿಶೀಲಿಸಿದೆವು ಮತ್ತು ತಾಂತ್ರಿಕ ದೃಷ್ಟಿಕೋನದಿಂದ ತನಿಖೆ ನಡೆಸಲು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ (FSL) ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದೆವು ಎಂದು ಎಸ್‌ಪಿ ಅಮೃತಾ ದುಹಾನ್ ಮಾಹಿತಿ ನೀಡಿದರು.

23 ವರ್ಷದ ನವವಿವಾಹಿತೆ ಅಂಜು, ತಾನು ಮತ್ತು ತನ್ನ ಪತಿ ಸಂಜೆ ವಾಕಿಂಗ್‌ಗೆ ಹೊರಗೆ ಹೋದಾಗ ಆಶಿಶ್ ಮತ್ತು ತನ್ನ ಮೇಲೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರಿಗೆ ತಿಳಿಸಿದ್ದಳು. ತಾನು ಧರಿಸಿದ್ದ ಚಿನ್ನಾಭರಣಗಳನ್ನು ದೋಚಲಾಗಿದೆ ಎಂದೂ ಆಕೆ ಹೇಳಿದ್ದಳು. ತನಿಖೆಯ ಸಮಯದಲ್ಲಿ ಪೊಲೀಸರು ಅಂಜು ಅವರ ಮಾತು, ಸಾಕ್ಷ್ಯ ಮತ್ತು ವಾಸ್ತವದ ನಡುವೆ ವ್ಯತ್ಯಾಸವ ಕಂಡ ಹಿನ್ನೆಲೆ ಅನುಮಾನಗೊಂಡಿದ್ದಾರೆ. ಇತ್ತ ಆಶಿಶ್‌ನ ದೇಹದ ಮೇಲೆ ಗಾಯದ ಗುರುತುಗಳಿದ್ದವು, ಮತ್ತು ವೈದ್ಯಕೀಯ ವರದಿಯ ಪ್ರಕಾರ ಆತನನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ತೋರುತ್ತದೆ. ಮತ್ತೊಂದೆಡೆ, ಅಂಜು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಳು.

45
ಮಾಜಿ ಗೆಳೆಯನ ಜೊತೆ ಸೇರಿ ಕೃತ್ಯ

ಪೊಲೀಸ್ ತನಿಖೆಯ ಪ್ರಕಾರ, ಅಂಜುಳ ಫೋನ್ ದಾಖಲೆಗಳು ಅವಳು ತನ್ನ ಮನೆಯ ಸಮೀಪ ವಾಸಿಸುತ್ತಿದ್ದ ಸಂಜು ಎಂಬ ವ್ಯಕ್ತಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಳು ಎಂಬುದನ್ನ ದೃಢಪಡಿಸಿದ್ದವು ಇದು ಆಕೆಯ ಮೇಲೆಯೇ ಪೊಲೀಸರಿಗೆ ಅನುಮಾನ ಹುಟ್ಟುವುದಕ್ಕೆ ಕಾರಣವಾಗಿತ್ತು.

ಅಂಜು ಮತ್ತು ಆಶಿಶ್ ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು, ಆದರೆ ಅಂಜುಗೆ ಈ ಮದುವೆಯಲ್ಲಿ ಇಷ್ಟವಿರಲಿಲ್ಲ  ಊರಿಗೆ ಬಂದಿದ್ದ ಆಕೆಗೆ ಆಕೆಯ ಮಾಜಿ ಗೆಳೆಯ ಸಂಜು ಜೊತೆ ಮರು ಸಂಪರ್ಕವಾಗಿದ್ದು, ನಂತರ ಇಬ್ಬರು ಸೇರಿ ಅಶೀಶ್‌ನ ಕೊಲೆಗೆ ಸಂಚು ರೂಪಿಸಿದ್ದಾರೆ. ಜನವರಿ 30ರಂದು ಪತಿ ಅಶೀಶ್‌ನನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದ ಅಂಜು ಅಲ್ಲಿ ಸಂಜು ಹಾಗೂ ಆತನ ಸಹಾಯಕರಾದ ರೋಹಿತ್, ಬಾದಲ್ ಅಲಿಯಾಸ್ ಸಿದ್ಧಾರ್ಥ್ ಪೊದೆಗಳ ಮಧ್ಯೆ ಅಡಗಿ ಕುಳಿತು ಅಶೀಶ್‌ನ ಮೇಲೆ ಹಲ್ಲೆ ಮಾಡಿ, ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ನಂತರ ರಸ್ತೆ ಅಪಘಾತ ಎಂದು ಬಿಂಬಿಸುವುದಕ್ಕೆ ಯತ್ನಿಸಿದ್ದಾರೆ.

55
ಆರೋಪಿ ಸಂಜು ಹಾಗೂ ಸಹಚರರ ಬಂಧಿಸಿದ ಪೊಲೀಸರು

ತನ್ನನ್ನು ದರೋಡೆ ಮಾಡಲಾಗಿದೆ ಎಂದು ಬಿಂಬಿಸಲು ಅಂಜು ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಆರೋಪಿಗೆ ನೀಡಿದ್ದಳು. ದಾಳಿಯ ನಂತರ ಅವಳು ಪ್ರಜ್ಞಾಹೀನಳಾದಂತೆ ನಟಿಸಿದಳು, ಆದರೆ ಆಶಿಶ್ ದೇಹದ ಮೇಲಿದ್ದ ಗಾಯದ ಗುರುತುಗಳು ಸಂಚು ಬಯಲಾಗಲು ಕಾರಣವಾಯಿತು. ಅಂಜು ತನ್ನ ಹೇಳಿಕೆಯನ್ನು ಬದಲಾಯಿಸುತ್ತಲೇ ಇದ್ದುದರಿಂದ ಅನುಮಾನಗೊಂಡ ಪೊಲೀಸರು ತಮ್ಮದೇ ರೀತಿಯಲ್ಲಿ ಬೆಂಡೆತ್ತಿದಾಗ ಆಕೆ ತಾನೇ ಈ ಕೃತ್ಯದ ಹಿಂದಿರುವುದಾಗಿ ಬಾಯ್ಬಿಟ್ಟಿದ್ದಾಳೆ. ನಂತರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories