ಉತ್ತರ ಕರ್ನಾಟಕದಲ್ಲೂ ಟ್ರೆಂಡ್ ಆಯ್ತು ದಸರಾ ಗೊಂಬೆ ಸಂಪ್ರದಾಯ: ಜತ್ತಿ ಕುಟುಂಬದಿಂದ ವಿಭಿನ್ನ ಆಚರಣೆ

First Published Oct 23, 2023, 7:20 PM IST

ವರದಿ- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಅ.23) : ಮೈಸೂರು ಭಾಗದಲ್ಲಿ, ದಕ್ಷಿಣ ಕರ್ನಾಟಕ ಭಾಗದಲ್ಲಿ ನವರಾತ್ರಿ ಸಮಯದಲ್ಲಿ ಗೊಂಬೆಗಳನ್ನ ಕೂರಿಸೋದು ಕಾಮನ್. ಉತ್ತರ ಕರ್ನಾಟಕ ಭಾಗದಲ್ಲಿ ದಸರಾ ಸಂದರ್ಭದಲ್ಲಿ ಗೊಂಬೆಗಳನ್ನ ಕೂರಿಸೋ ಸಂಪ್ರದಾಯವಿಲ್ಲ. ಆದ್ರೀಗ ಉತ್ತರ ಕರ್ನಾಟಕ ಭಾಗದಲ್ಲು ನವರಾತ್ರಿ ಸಂದರ್ಭದಲ್ಲಿ ಗೊಂಬೆ ಕೂರಿಸುವ ಟ್ರೆಂಡ್ ಶುರುವಾದಂತೆ ಕಾಣ್ತಿದೆ. ಗುಮ್ಮಟನಗರಿ ವಿಜಯಪುದಲ್ಲಿ ದಸರಾಗೊಂಬೆಗಳನ್ನ ಕೂರಿಸಿದ್ದು, ಪುಟಾಣಿಗೊಂಬೆಗಳು ಜನರನ್ನ ಆಕರ್ಷಿಸುತ್ತಿವೆ.

ನವರಾತ್ರಿ ಅಥವಾ ದಸರಾ ಹಬ್ಬದ ವೇಳೆ ಮನೆಯಲ್ಲಿ ಗೊಂಬೆ ಕೂರಿಸುವ ಪದ್ದತಿ ಇದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಈ ಸಂಪ್ರದಾಯ ಹೆಚ್ಚು ಜನಪ್ರಿಯ. ಅದ್ರೆ ಇಂತಹ ಆಚರಣೆ ಬಸವನಾಡು ವಿಜಯಪುರ ನಗರದಲ್ಲಿ ಆಚರಿಸಲಾಗುತ್ತಿದೆ.  ಮೈಸೂರಿನ ಚಾಮುಂಡಿ ಬೆಟ್ಟ, ಮಹಿಷಾಸುರ, ಜಂಬೂ ಸವಾರಿ ಸೇರಿದಂತೆ ಮೈಸೂರು ಅರಮನೆ, ರಾಮಾಯಣ, ದೇವಲೋಕ, ಸತ್ಪುರುಷರ ಕುರಿತು ಕಥೆ ಹೇಳುತ್ತಿವೆ. ಅಷ್ಟೇ ಅಲ್ಲದೇ ಆಧುನಿಕ ಲೋಕವನ್ನು ಬಿಂಬಿಸುತ್ತಿವೆ.

ವಿಜಯಪುರ ನಗರದ ಸಂಗಮೇಶ್ವರ ಕಾಲನಿಯಲ್ಲಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ಮಹಾಲಿಂಗಪ್ಪ ಜತ್ತಿಯವರ ಮನೆಯಲ್ಲಿ ನವರಾತ್ರಿ ಹಬ್ಬದ ನಿಮಿತ್ತವಾಗಿ 300 ಕ್ಕೂ ಹೆಚ್ಚು ಗೊಂಬೆಗಳನ್ನ ಕೂರಿಸಲಾಗಿದೆ. ನವರಾತ್ರಿ ಅಂಗವಾಗಿ  ಮೈಸೂರು ದಸರಾ ವೈಭವ, ರಾಮಾಯಣ, 5 ಸ್ಥರಗಳ ದೇವಲೋಕ, ಸತ್ಪುರುಷರ ಗೊಂಬೆ, ಹಳ್ಳಿ ಸೊಗಡು ಹೀಗೆ ಹಲವು ಆಯಾಮಗಳಲ್ಲಿ ಗೊಂಬೆಗಳನ್ನ ಕೂರಿಸಲಾಗಿದೆ. 

ಒಟ್ಟು 300 ಗೊಂಬೆಗಳ ಮೂಲಕ ಜತ್ತಿಯವರ ಮನೆಯಲ್ಲಿ ಗೊಂಬೆಗಳ ಲೋಕವೇ ಸೃಷ್ಟಿಯಾಗಿದೆ. ಅಷ್ಟಕ್ಕು ಈ ಗೊಂಬೆ ಐಡಿಯಾ ನಿವೃತ್ತಿ ಬ್ಯಾಂಕ್ ನೌಕರ  ಮಹಾಲಿಂಗಪ್ಪ ಅವರ ತಲೆಯಲ್ಲಿ ಹೇಗೆ ಬಂತು ಅಂತಾ ನೋಡಿದ್ರೆ, ಇದರ ಹಿಂದಿರೋದು ಅವರ ಪತ್ನಿ ವಿಜಯಾ.  ವಿಜಯಾ ಅವರಿಗೆ ಮೈಸೂರು ಭಾಗದ ಜನರು ಕೂರಿಸುವಂತೆ ನವರಾತ್ರಿಯಲ್ಲಿ ಗೊಂಬೆ ಕೂರಿಸುವ ಆಸೆ ಆಯ್ತಂತೆ. ಹೀಗಾಗಿ ಅವರು ಮೈಸೂರು, ಚನ್ನಪಟ್ಟಣ, ಬೆಂಗಳೂರು ಭಾಗಗಳಲ್ಲಿ ಅಡ್ಡಾಡೋವಾಗ ಗೊಂಬೆಗಳನ್ನ ಖರೀದಿ ಮಾಡಿ ತಂದಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ ಭಾಗದಲ್ಲು ದಸರಾ ಗೊಂಬೆ ಟ್ರೆಂಡ್ ಆಗಿ ಮಾರ್ಪಟ್ಟಿವೆ.

ವಿಜಯಾ ಅವರು ರಾಮಾಯಣ, ಮಹಾಭಾರತ, ಪುರಾಣ-ಪುಣ್ಯ ಕಥೆಗಳನ್ನ ಹೇಳುವ ಗೊಂಬೆಗಳನ್ನ ತಂದು ಪೌರಾಣಿಕ ಕಥೆಗಳ ಸಿಕ್ವೆನ್ಸ್‌ಗೆ ತಕ್ಕಂತೆ ಮನೆಯಲ್ಲಿ ಜೋಡಿಸಿಟ್ಟಿದ್ದಾರೆ. ಮನೆಗೆ ಹಬ್ಬದಂದು ಗೊಂಬೆ ನೋಡಲು ಬರುವವರಿಗೆ ಈ ಗೊಂಬೆಗಳು ಪೌರಾಣಿಕ ಕಥೆಯನ್ನ ಸಾರಿಸಾರಿ ಹೇಳುವಂತಿವೆ. ಅದ್ರಲ್ಲು ದಸರಾ ಗೊಂಬೆ ಕೂರಿಸಿರುವ ವಿಷಯ ತಿಳಿದು ನೋಡಲು ಜತ್ತಿ ಅವರ ಮನೆಗೆ ಬರ್ತಿರೋರಿಗೆ, ಗೊಂಬೆ ಪ್ರೀಯರಿಗೆ ಗೊಂಬೆಗಳೇ ಸ್ವತಃ ಮನ ಮುಟ್ಟುವಂತೆ ಕಥೆ ಹೇಳ್ತಿವೆ ಏನೋ ಎಂದೆನಿಸುತ್ತಿದೆಯಂತೆ.  ಸೀತಾರಾಮರ ಕಲ್ಯಾಣ, ಬಿಂಬಿಸುವ ಥೀಮ್, ಲವಕುಶರ ತೊಟ್ಟಿಲು ಶಾಸ್ತ್ರ, ರಾವಣ, ಕುಂಭಕರ್ಣ  ಕಥೆಯನ್ನು ಗೊಂಬೆಗಳ ಮೂಲಕ ಹೊರತಂದಿದ್ದಾರೆ. 

ನವರಾತ್ರಿಯ 9 ದಿನಗಳ ಕಾಲ ಗೊಂಬೆಗಳ ಅಲಂಕಾರವಲ್ಲದೇ ಘಟಸ್ಥಾಪನೆಯಿಂದ ವಿಜಯದಶಮಿಯ ವರೆಗೆ ದೇವಿಯ ಪಾರಾಯಣ ನಡೆಯುತ್ತದೆ. ಇನ್ನೂ ಗೊಂಬೆಗಳ ಅಲಂಕಾರ ವೀಕ್ಷಿಸಲು ಅಗಮಿಸುವ ಮಹಿಳೆಯರು ವಿಜಯಾ ಇವರು ಸಂಯೋಜಿಸಿ ರುವ ಗೊಂಬೆಗಳನ್ನು ಕಣ್ತುಂಬಿ ಕೊಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ.  ಇನ್ನು ಈ ಭಾಗದಲ್ಲಿ ದಸರಾ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಗೊಂಬೆ ಕೂರಿಸೋದು ಅಪರೂಪ. ಹೀಗಾಗಿ ವಿಜಯಪುರ ನಗರದ ಹಲವು ಕಡೆಗಳಿಂದ ಜನರು ಗೊಂಬೆ ನೋಡಲು ಜತ್ತಿಯವರ ಮನೆಗೆ ಹೋಗ್ತಿದ್ದಾರೆ‌. ಮುಂದಿನ ವರ್ಷ ದಸರಾ ಹಬ್ಬಕ್ಕೆ ತಮ್ಮ ಮನೆಗಳಲ್ಲು ಗೊಂಬೆ ಕೂರಿಸುವುದಾಗಿ ಹೇಳ್ತಿದ್ದಾರೆ.

click me!