30 ವರ್ಷದ ಕಾಜಲ್ ಭೋಸ್ಲೆ ಅಲಿಯಾಸ್ ಕಾಜಲ್ ಪವಾರ್ ಮತ್ತು ಆಕೆಯ ತಾಯಿ 50 ವರ್ಷದ ವೈಶಾಲಿ ಪವಾರ್ ವೈಯಕ್ತಿಕ ಕಾರಣಗಳಿಂದ ಅಂತ್ಯಕ್ರಿಯೆಯ ವಿಧಿವಿಧಾನಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ., ಇದು ಪ್ರಕರಣದ ಪ್ರಮುಖ ಆರೋಪಿ ಕೃಷ್ಣ ಪವಾರ್ (28) ಅವರನ್ನು ಕೆರಳಿಸಿತ್ತು.
ಮುಂಬೈ (ಜೂ.29): ಸಂಬಂಧಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಮಹಿಳೆಯೊಬ್ಬಳಿಗೆ ಚೂರಿ ಇರಿದು ಹತ್ಯೆ ಮಾಡಿದ್ದಲ್ಲದೆ, ಆಕೆಯ ತಾಯಿಗೆ ಚೂರಿ ಇರಿದು ಗಾಯಗೊಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಸಂಬಂಧಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿಲ್ಲ ಎನ್ನುವ ಕಾರಣಕ್ಕೆ ಮಹಿಳೆಯ ಕುಟುಂಬದೊಂದಿಗೆ ಆಕೆಯ ಕುಟುಂಬಸ್ಥರು ಗಲಾಟೆ ಮಾಡಿದ್ದರು. ಈ ವೇಳೆ ವಾಗ್ವಾದ ತೀವ್ರ ರೂಪ ತಾಳಿದ್ದರಿಂದ ಮಹಿಳೆಗೆ ಚೂರಿ ಇರಿದು ಸಾಯಿಸಲಾಗಿದೆ. ಆಕೆಯನ್ನು ರಕ್ಷಣೆ ಮಾಡಲು ಬಂದ ತಾಯಿಗೂ ಕೂಡ ಚೂರಿ ಇರಿದು ಗಾಯಗೊಳಿಸಲಾಗಿದೆ. ಮಂಗಳವಾರ ತಡರಾತ್ರಿ ಘಾಟ್ಕೋಪರ್-ಮಾನ್ಖುರ್ದ್ ಲಿಂಕ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಏಳು ದಿನಗಳ ಹಿಂದೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನ ಸಹೋದರ ಸಾವು ಕಂಡಿದ್ದಾರೆ. ಆರೋಪಿಗಳಾದ ಇಬ್ಬರು ದಂಪತಿಗಳು ಮೃತ ಸಹೋದರನಿಗೆ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಏರ್ಪಡಿಸಿದ್ದರು. ಆದರೆ, ಕಾಜಲ್ ಭೋಸ್ಲೆ ಅಲಿಯಾಸ್ ಕಾಜಲ್ ಪವಾರ್ (30) ಮತ್ತು ಆಕೆಯ ತಾಯಿ ವೈಶಾಲಿ ಪವಾರ್ (50) ಕಾರಣಾಂತರಗಳಿಂದ ಅಂತ್ಯಕ್ರಿಯೆಯ ವಿಧಿಗಳಿಗೆ ಹಾಜರಾಗಲು ವಿಫಲರಾಗಿದ್ದಾರೆ, ಇದು ಪ್ರಕರಣದ ಪ್ರಮುಖ ಆರೋಪಿ ಕೃಷ್ಣ ಪವಾರ್ (28) ಅವರನ್ನು ಕೆರಳಿಸಿದೆ.
ಮಂಗಳವಾರ ರಾತ್ರಿ, ಕಾಜಲ್ ಮತ್ತು ವೈಶಾಲಿ ತಮ್ಮ ಗುಡಿಸಲಿನಲ್ಲಿ ಕುಳಿತಿದ್ದಾಗ, ಆರೋಪಿಗಳಾದ ಕೃಷ್ಣ ಪವಾರ್ ಮತ್ತು ಅವರ ಪತ್ನಿ ಅನಿಶಾ (25) ಮತ್ತು ಜಗಮಿತ್ರ ಭೋಸ್ಲೆ (35) ಮತ್ತು ಅವರ ಪತ್ನಿ ಅನಿತಾ (32) ಎಂಬ ಇಬ್ಬರು ದಂಪತಿಗಳು ಗಲಾಟೆ ಮಾಡಲು ಕಾಜಲ್ ಮನೆಯ ಮುಂದೆ ಬಂದಿದ್ದರು. ಈ ವೇಳೆ ಅಂತ್ಯಕ್ರಿಯೆಯ ವಿಧಿಗಳನ್ನು ತಪ್ಪಿಸಿಕೊಂಡಿದ್ದೇಕೆ ಎಂದು ಪ್ರಶ್ನೆ ಮಾಡಲಾಗಿದೆ. ವಾಗ್ವಾದದ ವೇಳೆ ಕಾಜಲ್ ಅವರ ತಲೆಯ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿದ್ದಲ್ಲದೆ, ನಂತರ ಚಾಕುವಿನಿಂದ ಆಕೆಯ ಹೊಟ್ಟೆ ಮತ್ತು ಎದೆಗೆ ಇರಿದಿದ್ದಾರೆ. ಮಗಳ ಮೇಲೆ ಆಗುತ್ತಿದ್ದ ಹಲ್ಲೆಯನ್ನು ತಡೆಯಲು ಮುಂದಾದ ವೈಶಾಲಿ ಅವರ ಹೊಟ್ಟೆ ಮತ್ತು ಬೆನ್ನಿಗೆ ಆರೋಪಿಗಳಾದ ಅನಿತಾ ಹಾಗೂ ಅನಿಶಾ ಇರಿದಿದ್ದಾರೆ.
ಮೊದಲ ರಾತ್ರಿಯಲ್ಲಿ ವಧುವಿಗೆ ಹೊಟ್ಟೆ ನೋವು, ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ಹೆಣ್ಣು ಮಗುವಿಗೆ ಜನ್ಮ!
ಕಾಜಲ್ ಭೋಸ್ಲೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಬೆನ್ನಲ್ಲಿಯೇ ಅವರೆಲ್ಲರೂ ಅಲ್ಲಿಂದ ಓಡಿಹೋಗಿದ್ದಾರೆ. ವೈಶಾಲಿಯವರ ಕಿರಿಯ ಮಗಳು 20 ವರ್ಷದ ಅಂಜಲಿ ಭೋಸ್ಲೆ ವಾಪಾಸ್ ಮನೆಗೆ ಬಂದಾಗ ಅಕ್ಕ ಹಾಗೂ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಳು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ಕಾಜಲ್ ಸಾವು ಕಂಡಿದ್ದಾರೆ ಎಂದು ಘೋಷಿಸಲಾದರೆ, ತಾಯಿಗೆ ಚಿಕಿತ್ಸೆ ನೀಡುತ್ತಿರುವುದಾಗಿ ವೈದ್ಯರು ತಿಳಿಸಿದ್ದರು. ನಂತರ ಆಕೆ ಡಿಯೋನಾರ್ ಪೊಲೀಸರನ್ನು ಸಂಪರ್ಕಿಸಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾಳೆ.
ಗಾಂಜಾ ಗುಂಗಿನಲ್ಲಿ ಸ್ನೇಹಿತರು ಪತ್ನಿಯ ಸೆರಗು ಎಳೆದ್ರೂ ಗಂಡ ಸೈಲೆಂಟ್, ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಾಳು ನರಕ!
4 ಆರೋಪಿಗಳ ಬಂಧನ: ಬುಧವಾರ ಮಧ್ಯಾಹ್ನ ಪೊಲೀಸರು ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಅಪರಾಧಕ್ಕೆ ಬಳಸಿದ್ದ ಆಯುಧ ಹಾಗೂ ಕಲ್ಲು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.