ಭಾರತ ಪ್ರವಾಸದಲ್ಲಿರುವ ಅಫ್ಘಾನ್ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರು ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿತ್ತು. ಇದು 'ತಾಂತ್ರಿಕ ಸಮಸ್ಯೆ'ಯಿಂದ ಆದ ಪ್ರಮಾದವೇ ಹೊರತು ಉದ್ದೇಶಪೂರ್ವಕವಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ: ಅಫ್ಘಾನ್ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಕಿ ಅವರು ಭಾರತದ ಪ್ರವಾಸದಲ್ಲಿದ್ದು ನಿನ್ನೆ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಈ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರು ಇಲ್ಲದೇ ಇರುವುದು ಬಹಳ ವಿವಾದಕ್ಕೆ ಕಾರಣವಾಗಿತ್ತು. ವಿಪಕ್ಷಗಳು ಸೇರಿದಂತೆ ಕೆಲವರು ಇದರ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಚಿವ ಆಮೀರ್​ ಖಾನ್​ ಮುತ್ತಕಿ ಇಂದು ಮಹಿಳೆಯರಿಗಾಗಿಯೇ ವಿಶೇಷ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ. ಇದೇ ವೇಳೆ ನಿನ್ನೆ ನಡೆದಿರುವ ಘಟನೆಯ ಬಗ್ಗೆ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ.

ತಾಂತ್ರಿಕ ಸಮಸ್ಯೆ ಕಾರಣ

ಪತ್ರಿಕಾಗೋಷ್ಠಿಗೆ ಯಾವುದೇ ಮಹಿಳಾ ಪತ್ರಕರ್ತರನ್ನು ಉದ್ದೇಶಪೂರ್ವಕವಾಗಿ ನಾವು ತಡೆಯಲಿಲ್ಲ. ಅಷ್ಟೇ ಅಲ್ಲದೇ ಈ ಪತ್ರಿಕಾಗೋಷ್ಠಿ ನಾವು ಕರೆದಿರುವುದರಿಂದ ಇದರಲ್ಲಿ ಭಾರತದ ಪಾತ್ರವಿಲ್ಲ ಎಂದಿದ್ದಾರೆ. ಪತ್ರಕರ್ತೆಯರು ಇಲ್ಲಿಗೆ ಬರದೇ ಇರುವುದು "ತಾಂತ್ರಿಕ ಸಮಸ್ಯೆ"ಯೇ ಹೊರತು ಉದ್ದೇಶಪೂರ್ವಕವಲ್ಲ. ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಇದು ಅಲ್ಪಾವಧಿಯ ಸೂಚನೆಯಾಗಿತ್ತು. ಇನ್ನು ಪತ್ರಕರ್ತರ ಸಣ್ಣ ಪಟ್ಟಿಯನ್ನು ನಿರ್ಧರಿಸಲಾಗಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರಿಗೆ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ ಎಂದು ಮುತ್ತಕಿ ಸ್ಪಷ್ಟಪಡಿಸಿದ್ದಾರೆ.

ಸಮಯ ಕಡಿಮೆಯಿತ್ತು

"ನಮಗೆ ಸಮಯ ಬಹಳ ಕಡಿಮೆಯಿತ್ತು. ಆದ್ದರಿಂದ ನಾವು ಕೆಲವು ಪತ್ರಕರ್ತರನ್ನು ಮಾತ್ರ ಆಹ್ವಾನಿಸಿದ್ದೇವೆ. ನಾವು ಯಾರ ಹಕ್ಕುಗಳನ್ನೂ ನಿರಾಕರಿಸುತ್ತಿಲ್ಲ. ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತೇವೆ ಎಂದಿದ್ದಾರೆ. 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ತಮ್ಮ ಮೊದಲ ಅಧಿಕೃತ ಭೇಟಿಗಾಗಿ ಹಿರಿಯ ತಾಲಿಬಾನ್ ನಾಯಕ ಮುತ್ತಕಿ ಮೊನ್ನೆ ಗುರುವಾರ ದೆಹಲಿಗೆ ಆಗಮಿಸಿದ್ದಾರೆ. ದ್ವಿಪಕ್ಷೀಯ ವ್ಯಾಪಾರ, ಮಾನವೀಯ ನೆರವು ಮತ್ತು ಭದ್ರತಾ ಸಹಕಾರದ ಬಗ್ಗೆ ಚರ್ಚಿಸಲು ಅವರು ಶುಕ್ರವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾದರು.

ಮಹಿಳೆಯರ ಹಕ್ಕುಗಳು, ಶಿಕ್ಷಣ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯನ್ನು ನಿರ್ಬಂಧಿಸುವ ನೀತಿಗಳ ಬಗ್ಗೆ ನಿರಂತರ ಟೀಕೆಗಳ ಹೊರತಾಗಿಯೂ ಪ್ರಾದೇಶಿಕ ದೇಶಗಳೊಂದಿಗೆ ಮತ್ತೆ ತೊಡಗಿಸಿಕೊಳ್ಳಲು ತಾಲಿಬಾನ್ ಸರ್ಕಾರವು ಮಾಡುತ್ತಿರುವ ಪ್ರಯತ್ನಗಳ ಮಧ್ಯೆ ಅವರ ಭೇಟಿ ಬಂದಿದೆ.

ಭಾರತದ ಪಾತ್ರವಿಲ್ಲ...

ಅದೇ ಇನ್ನೊಂದೆಡೆ, ಮಹಿಳೆಯರನ್ನು ಹೊರಕ್ಕೆ ಇಟ್ಟಿರುವ ಕುರಿತು ಟೀಕೆ ಎದುರಿಸುತ್ತಿರುವ ಭಾರತ ಸರ್ಕಾರವು ಹಿಂದಿನ ಪತ್ರಿಕಾಗೋಷ್ಠಿಯನ್ನು ಆಯೋಜಿಸುವಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. "ನಿನ್ನೆ ದೆಹಲಿಯಲ್ಲಿ ಅಫ್ಘಾನ್ ವಿದೇಶಾಂಗ ಸಚಿವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯವು ಯಾವುದೇ ಪಾತ್ರವನ್ನು ವಹಿಸಿಲ್ಲ" ಎಂದು ಹೇಳಿದೆ. ಹಲವಾರು ವಿರೋಧ ಪಕ್ಷದ ನಾಯಕರು ಸರ್ಕಾರವು ಭಾರತೀಯ ನೆಲದಲ್ಲಿ ತಾರತಮ್ಯದ ಕಾರ್ಯಕ್ರಮವನ್ನು ನಡೆಸಲು ಅವಕಾಶ ನೀಡಿದೆ ಎಂದು ಆರೋಪಿಸಿದ ನಂತರ ಈ ಸ್ಪಷ್ಟೀಕರಣ ಬಂದಿದೆ.

ಟೀಕೆಗೆ ಗುರಿಯಾದ ತಾಲಿಬಾನ್​

2021 ರಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನ್, ಮಹಿಳೆಯರ ಹಕ್ಕುಗಳ ಮೇಲಿನ ಕಠಿಣ ನಿರ್ಬಂಧಗಳಿಗಾಗಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ. ಅಧಿಕಾರಕ್ಕೆ ಮರಳಿದ ನಂತರ, ಅದು ಆರನೇ ತರಗತಿಯ ನಂತರ ಮಹಿಳೆಯರಿಗೆ ಶಿಕ್ಷಣ ನೀಡುವುದನ್ನು ನಿರ್ಬಂಧಿಸಿದೆ, ಹೆಚ್ಚಿನ ಕೆಲಸಗಳಿಂದ ಅವರನ್ನು ನಿಷೇಧಿಸಿದೆ ಮತ್ತು ಉದ್ಯಾನವನಗಳು, ಜಿಮ್‌ಗಳು ಮತ್ತು ಬ್ಯೂಟಿ ಸಲೂನ್‌ಗಳಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿದೆ. ಜುಲೈನಲ್ಲಿ, ವಿಶ್ವಸಂಸ್ಥೆಯು ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲಿನ "ಗಂಭೀರ, ಹದಗೆಡುತ್ತಿರುವ, ವ್ಯಾಪಕ ಮತ್ತು ವ್ಯವಸ್ಥಿತ ದಬ್ಬಾಳಿಕೆ"ಯ ಬಗ್ಗೆ ಎಚ್ಚರಿಸಿತು, ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಜೀವನದಿಂದ ಅವರನ್ನು ಹೊರಗಿಡುವ ನೀತಿಗಳನ್ನು ಹಿಮ್ಮೆಟ್ಟಿಸುವಂತೆ ತಾಲಿಬಾನ್‌ಗೆ ಒತ್ತಾಯಿಸಿತು.

ಇದನ್ನೂ ಓದಿ: ಜಾನ್ಸನ್ & ಜಾನ್ಸನ್ ಪೌಡರ್‌ನಿಂದ ಕ್ಯಾನ್ಸರ್‌: ಮತ್ತೊಂದು ಕೇಸ್‌- 80 ಬಿಲಿಯನ್‌ ರೂ. ದಂಡಕ್ಕೆ ಕೋರ್ಟ್ ಆದೇಶ